Tuesday, December 30, 2014

'ನಮ್ಮ ಯಜಮಾನರ ಚೊಣ್ಣಾ ಕಳೀರಿ ಅಂದ್ರ ನನ್ನ ಚಡ್ಡಿ ಕಳದಿರಲ್ಲರೀ!' - ರೂಪಾ ವೈನಿ ಅನಾಹುತ ಉವಾಚ

ಮಂಗಳವಾರ. ಧಾರವಾಡ ಪ್ಯಾಟ್ಯಾಗ ಸಂತಿ. ಕೆಲಸ ಇರ್ಲಿ ಬಿಡಲಿ ಒಂದು ರೌಂಡ್ ಹಾಕಿ ಬಂದುಬಿಡೋದು ನೋಡ್ರೀ. ಹಾಂಗಂತ ಹೇಳಿ ಆವತ್ತೂ ಸಹಿತ ಪ್ಯಾಟಿ ಕಡೆ ಹೋಗಿದ್ದೆ. ಏನೂ ಕೆಲಸ ಇರಲಿಲ್ಲ. ಆದರೂ ಹೋಗಿದ್ದೆ. ಸುಮ್ಮನೆ ಒಂದು ಹಾಪ್ ಚಹಾ ಕುಡದು, ಒಂದು 420 (300 ರತ್ನಾ + 120 ಬಾಬಾ) ಜರ್ದಾ ಪಾನ್ ಹಾಕಿಕೊಂಡು, ಊರ ತುಂಬಾ ಉಗಳ್ಯಾಡಿ, ಅಡ್ಯಾಡಿ, ಓಡ್ಯಾಡಿ ಬಂದರಾತು ಅಂತ ಪ್ಯಾಟಿಗೆ ಹೋಗಿದ್ದೆ.

ಮೊದಲಾಗಿದ್ರ, "ನಾ ಸಂತೀಗಿ ಹೋಗಿದ್ನೀ. ಅಕಿ ತಂದಿದ್ದಳೋ ಬೆಣ್ಣಿ" ಅಂತ ಹಾಡ್ಕೋತ್ತ ಹೋಗಿ, ಧಾರವಾಡದ ಪುರಾತನ ಗೌಳ್ಯಾರ ಸುಂದರಿ ಒಬ್ಬಾಕಿ ತಂದು ಮಾರುತ್ತಿದ್ದ ಬೆಣ್ಣಿ ಖರೀದಿ ಮಾಡ್ತಿದ್ದೆ. ತುಪ್ಪ ಮಾಡ್ಲಿಕ್ಕೆ. ಕದ್ದಾದರೂ ತುಪ್ಪ ತಿನಬೇಕು ನೋಡ್ರೀ. ಅದಕ್ಕೆ. "ಇನ್ನೂ ಯಾಕ ಬರಲಿಲ್ಲವಾ ಮಾಳಮಡ್ಡಿಯವಾ. ಬಂದ ಕೂಡಲೇ ಬೆಣ್ಣಿ ತೊಗೊಂಡು ಓಡಿ ಹೋಗವಾ," ಅಂತ ಹಾಡಿ ಅಕಿನೂ ನನ್ನ ಜೋಡಿ ಭಾಳ ಮಷ್ಕಿರಿ ಮಾಡಾಕಿ. ಆದ್ರ ಈಗ ಏನ್ಯಾಗ್ಯದ ಅಂದ್ರ - ನಾವು ರಿಟೇಲ್ ಒಳಗ ಬೆಣ್ಣಿ ತೊಗೊಳ್ಳವರು. ಎಲ್ಲೋ ಪಾವ್ ಕಿಲೋ ಅಷ್ಟು ಇಷ್ಟು. ನಮ್ಮ ಕಡೆ ಇರೋ ರೊಕ್ಕಕ್ಕೆ ಅಷ್ಟೇ ಸಾಧ್ಯ. ಅಕಿ ಗೌಳ್ಯಾರ ಸುಂದರಿ ನಾ  ಹೋದಾಗೊಮ್ಮೆ 'ಸಾಹೇಬ್ರಾ, ಅಷ್ಟೂ ಬೆಣ್ಣಿ ತೆಗೊಂಡು ಬಿಡರಲ್ಲಾ. ಏನು ಪಾವ್ ಪಾವ್ ಕಿಲೋ ಹಚ್ಚೀರಿ?' ಅಂತ ಕೆಣಕಾಕಿ. 'ಬೇಕಾದ್ರ ನನ್ನು ನಾಕ ಎಮ್ಮಿನೂ ಹೊಡಕೊಂಡು ಬಂದು ನಿಮ್ಮ ಜೋಡಿ ಸೆಟಲ್ ಆಗಿ ಬಿಡ್ಲೇನ್ರೀ???' ಅಂತ ಮ್ಯಾಲಿಂದ ಇಲ್ಲದ ಉಪದ್ವಾಪಿತನ ಬ್ಯಾರೆ. 'ಏ, ಬ್ಯಾಡ ಮಾರಾಳ. ತಿನ್ನೋ ಪಾವ್ ಸೇರ್ ತುಪ್ಪಕ್ಕ ಎಮ್ಮಿ ಕಟ್ಟಿ ನಾ ಕ್ವಾಣ ಆಗವ ಅಲ್ಲ,' ಅಂತ ಹೇಳಿ ಓಡಿ ಬರ್ತಿದ್ದೆ. ಅಕಿ ಆಮ್ಯಾಲೆ ಯಾರೋ ಕ್ವಾಣದಂತ ಆದಮೀ ಜೋಡಿ ಲಗ್ನಾ ಮಾಡಿಕೊಂಡು ಹೋದಳು. ಊರು ಬಿಟ್ಟಾಳ ಅಂತ ತಿಳೀತು. ಅದಾದಗಿಂದ ಪ್ಯಾಟಿ ಒಳಗ, ಸಂತಿ ಒಳಗ ಮಜಾನೇ ಇಲ್ಲ. ನಾಸ್ತಿ.

ಸುಮಾರು ಸಂಜಿ ಏಳು ಆಗಿತ್ತು ನೋಡ್ರೀ. ನಾನು ಇನ್ನು ರಾಯರ ಮಠದ ಸಿಟಿ ಬಸ್ ಹಿಡಿದು ಮನಿ ಸೇರಿಕೊಳ್ಳೋಣ ಅಂತ ಸಿಟಿ ಬಸ್ ಸ್ಟಾಂಡ್ ಕಡೆ ಬರ್ಲಿಕತ್ತಿದ್ದೆ. ಅಲ್ಲೇ 'ಧಾರವಾಡ ಕ್ಯಾಪ್ ಮಾರ್ಟ್' ಅನ್ನೋ ರೆಡಿಮೇಡ್ ಅರವಿ ಅಂಗಡಿ ಮುಂದ ನಮ್ಮ ಗೆಳೆಯಾ ಚೀಪ್ಯಾ, ಅವನ ಹೆಂಡತಿ ರೂಪಾ ವೈನಿ, ಹೆಣ್ಣು ಮಕ್ಕಳಾದ ಕುಂತಿ, ನಿಂತಿ (ಉರ್ಫ್ ನಿಯತಿ) ಎಲ್ಲ ಭೆಟ್ಟಿಯಾದರು.

ಮೊದಲು 'ಧಾರವಾಡ ಕ್ಯಾಪ್ ಮಾರ್ಟ್' ಬಗ್ಗೆ ಸ್ವಲ್ವ ವಿವರಣೆ ಕೊಟ್ಟೇ ಬಿಡ್ತೇನಿ. ನಮ್ಮ ಕಾಲದಾಗ ಧಾರವಾಡದ ಪ್ರೀಮಿಯರ್ ರೆಡಿಮೇಡ್ ಅರವಿ (ಬಟ್ಟೆ) ಅಂಗಡಿ ಅದಾಗಿತ್ತು. ಮುಂಜವಿ (ಉಪನಯನ) ಕ್ಯಾಪಿನಿಂದ ಹಿಡಿದು ಮಂಕಿ ಕ್ಯಾಪ್ ತನಕಾ ಸರ್ವ ತರಹದ ಕ್ಯಾಪ್ ಅಲ್ಲೇ ಸಿಗ್ತಾವ. ಹೆಸರಲ್ಲೇ 'ಕ್ಯಾಪ್ ಮಾರ್ಟ್' ಅಂತದ ನೋಡ್ರೀ. ಒಂದು ಕಾಲದಾಗ ಬರೇ ಟೊಪಿಗಿ ಮಾರೋ ಅಂಗಡಿ ಆಗಿತ್ತು ಅಂತ ಕಾಣ್ತದ. ಅದಕ್ಕೇ ಕ್ಯಾಪ್ ಮಾರ್ಟ್ ಅಂತ ಹೆಸರು. ಬರೇ ಟೊಪಿಗಿ ಮಾರಿದ್ರ ಸಾಕಾಗಂಗಿಲ್ಲ, ಬ್ಯಾರೆ ಬ್ಯಾರೆ ಅರವಿನೂ ಮಾರಿ, ಅದ್ರಾಗೂ ಮಂದಿಗೆ ಟೊಪಿಗಿ ಹಾಕಿದರೆ ಮತ್ತೂ ಜಾಸ್ತಿ ಲಾಭ ಅಂತ ಹೇಳಿ, ಈಗ ಟೊಪಿಗಿ ಜೋಡಿ ಬಾಕಿ ಎಲ್ಲಾ ಅರವಿನೂ ಮಾರ್ತಾರ. ಆದ್ರ ಹೆಸರು ಮಾತ್ರ ಕ್ಯಾಪ್ ಮಾರ್ಟ್ ಅಂತನೇ ಉಳಕೊಂಡು ಬಂದದ.

ಧಾರವಾಡ ಕ್ಯಾಪ್ ಮಾರ್ಟ್ ಫೇಮಸ್ ಆಗಿದ್ದೇ ಮುಂಜವಿ ಟೊಪಿಗಿಯಿಂದ ಅಂತ ನನ್ನ ಭಾವನಾ. ಮುಂಜವ್ಯಾಗ ತಲಿ ಬೋಳಿಸ್ಕೊಂಡು, ಚಂಡ್ಕಿ ಬಿಟ್ಟ ನಂತರ ಮತ್ತ ಕೂದಲ ಬೆಳೆದು ಬರೋ ತನಕಾ ತಲಿ ಕಾಪಾಡಿಕೊಳ್ಳಲಿಕ್ಕೆ ಒಂದು ಟೊಪಿಗಿ ಅಥವಾ ಕ್ಯಾಪ್ ಬೇಕು ನೋಡ್ರೀ. ಅಂತಾ ಟೊಪಿಗಿ ಆ ಅಂಗಡಿ ಒರಿಜಿನಲ್ ಸ್ಪೆಷಾಲಿಟಿ ಆಗಿತ್ತಂತ. ಎಲ್ಲಾರೂ ಬಡ ಬ್ರಾಹ್ಮಂಡರು. ರೊಕ್ಕಾ ಮೊದಲೇ ಇರೋದಿಲ್ಲ. ಇದ್ದ ಬಿದ್ದ ಚೂರು ಪಾರು ರೊಕ್ಕಾ ಮುಂಜವಿ ಮಾಡಿ ಢಂ ಅನ್ನಿಸಿ ಬಿಟ್ಟಿರ್ತಾರ. as an after thought ಮುಂಜವಿ ಹುಡುಗಗ ಒಂದು ಟೊಪಿಗಿ ಕೊಡಿಸಬೇಕು ಬೇಕು ಅಂತ ನೆನಪಾಗ್ತದ. ಇಲ್ಲಂದ್ರ ಕಂಡಕಂಡವರು ಕಂಡಕಂಡಲ್ಲೆ ಬೋಳು ತಲಿ ತಬಲಾದ ಗತೆ ತಟ್ಟತಾರ. ಹಾಂಗ ನೆನಪಾದಾಗ, ಆವಾಗ last resort ಅನ್ನೋ ಹಾಂಗ ಧಾರವಾಡ ಕ್ಯಾಪ್ ಮಾರ್ಟ್ ಕಡೆ ಓಡ್ತಾರ. ಬಡ ಬ್ರಾಮಂಡರ ಅತಿ ಸಣ್ಣ ಬಜೆಟ್ಟಿಗೆ ತಕ್ಕ ಟೊಪಿಗಿ ಅಲ್ಲೆ ಸಿಗ್ತಾವ. ಆದ್ರ ಅಂಗಡಿಯವ ಒಂದು ಮಾತು ಹೇಳೇ ಕೊಡ್ತಾನ - 'ನೀರಿಗೆ ಹಾಕ ಬ್ಯಾಡ್ರಾ ಮತ್ತ!' ಯಾಕ ಅಂತ ನನಗೂ ಗೊತ್ತಿದ್ದಿಲ್ಲ. ಆದ್ರ ನನ್ನ ಮುಂಜವಿ ಟೊಪಿಗಿ ಒಮ್ಮೆ ಮಳ್ಯಾಗ ತೊಯ್ದು ಬಿಡ್ತು. ಮರುದಿನ ನೋಡಿದರ ಟೊಪಿಗಿ ಫುಲ್ ಶ್ರಿಂಕ್ ಆಗಿ, ಅರ್ಧಾ ಗಿರ್ಧಾ ಆಗಿ, ಪೂರ್ತಿ ಬೋಳು ತಲಿ ಮುಚ್ಚೋ ಬದಲಿ ಬರೇ ಚಂಡ್ಕಿ ಅಷ್ಟೇ ಮುಚ್ಚೋ ಹಾಂಗ ಆಗಿಬಿಟ್ಟಿತ್ತು. ಅವನೌನ್! ಆ ಶ್ರಿಂಕ್ ಆಗಿದ್ದ ಟೊಪಿಗಿ ಹಾಕ್ಕೊಂಡ್ರ ಮುಂಜುವಿ ಮಾಡ್ಕೊಂಡ ಬ್ರಾಹ್ಮಣ ಕಮ್ಮಿ, ಸುಂತಿ ಮಾಡಿಸ್ಕೊಂಡ ಸಾಬಾ (ಮುಸ್ಲಿಂ) ಜಾಸ್ತಿ ಕಾಣಬೇಕು. ಹಾಂಗಾಗಿತ್ತು. ಟೊಪಿಗಿ ಅಷ್ಟು ಸಣ್ಣಾಗಿ, ಸಾಬರು, ಯಹೂದಿಗಳು ಹಾಕ್ಕೊಳೋ ಸಣ್ಣ ಸ್ಕಲ್ ಕ್ಯಾಪ್ ಸೈಜಿಗೆ ಬಂದು ಬಿಟ್ಟಿತ್ತು. ಆವಾಗ ಗೊತ್ತಾತು ಆ ಟೊಪಿಗಿ ಕ್ವಾಲಿಟಿ ಭಾಳ ಖರಾಬ್ ಇರ್ತದ ಅಂತ. ಮತ್ತ ಅಷ್ಟು ಕಮ್ಮಿ ರೇಟಿಗೆ ಇನ್ನೆಂತಾ ಟೊಪಿಗಿ ಸಿಗಬೇಕು? ಮತ್ತ ಹ್ಯಾಂಗೂ ಒಂದು ತಿಂಗಳ ಮಟ್ಟಿಗೆ ತಾಳಿಕೆ ಬಾಳಿಕೆ ಬಂದ್ರ ಸಾಕು ನೋಡ್ರೀ. ಅದಕ್ಕೆ ಮಂದಿ ಸಹಿತ ಅದನ್ನ ಒಂದು ತಿಂಗಳ ತೊಳಿಲಿಕ್ಕೆ ಹೋಗೋದಿಲ್ಲ. ಆದ್ರ ಮಳಿ ಗಿಳಿಯೊಳಗ ಸಿಕ್ಕರೆ ಮಾತ್ರ ಗೋವಿಂದಾ! ಗೋssssವಿಂದಾ!

ಈಗ ಮೊದಲಿನ ವಿಷಯಕ್ಕೆ ಬರ್ತೇನಿ. ಎಲ್ಲಿದ್ದೆ? ಹಾಂ! ಧಾರವಾಡ ಕ್ಯಾಪ್ ಮಾರ್ಟ್ ಮುಂದೇ ಇದ್ದೆ. ಅಲ್ಲೇ ಚೀಪ್ಯಾ, ರೂಪಾ ವೈನಿ ಅಂಡ್ ಫ್ಯಾಮಿಲಿ ಭೆಟ್ಟಿ ಆದರು.

'ಬಾರಲೇ ಮಂಗೇಶ್! ನೀನೂ ನಮ್ಮ ಜೋಡಿ ಬಾ. ಏನರೆ ಅರವಿ ಖರೀದಿ ಮಾಡೋದಿದ್ದರ ಮಾಡಿಯಂತ ಬಾ. ಆಮೇಲೆ ಎಲ್ಲಾರೂ ಕೂಡೆ ಮನಿ ಕಡೆ ಹೋಗೋಣಂತ,' ಅಂದಾ ಚೀಪ್ಯಾ.

ಆವಾ ಹಾಂಗ ಹೇಳಿದ ಕೂಡಲೇ ನಾ ಮೊದಲು ರೂಪಾ ವೈನಿ ಮುಖಾ ನೋಡಿದೆ. ಗಂಡ ಪ್ರಾಣಿ ಏನೇ ಹೇಳಿದರು ಅದಕ್ಕೆ ತಡೆಯಾಜ್ಞೆ ಹೆಂಡತಿಯಿಂದ ಬರೋ ಎಲ್ಲಾ ಸಾಧ್ಯತೆಗಳು ಇರ್ತಾವ ನೋಡ್ರೀ.

'ಸೂಡ್ಲೀ! ಅವನ್ಯಾಕ ಕರೀಲಿಕತ್ತೀರಿ? ನಿಮ್ಮ ಗೆಳೆಯಾ ಅಂದ್ರ ದೊಡ್ಡ ಪೀಡಾ!' ಅನ್ನೋ ಲುಕ್ ರೂಪಾ ವೈನಿ ಮಾರಿ ಮ್ಯಾಲೆ ಇತ್ತು. ಚೀಪ್ಯಾ ದಡ್ಡ ಸೂಳಿಮಗ. ಅವಂಗೆಲ್ಲೆ ಅವೆಲ್ಲಾ ಗೊತ್ತಾಗಬೇಕು?

'ಬಾರಲೇ, ಬಾರಲೇ, ನೀನೂ ಬಾರಲೇ,' ಅಂತ ಚೀಪ್ಯಾ ಭಾಳ ಜುಲ್ಮಿ ಮಾಡಿದ.

'ನನದೇನೂ ಖರೀದಿ ಇಲ್ಲ ಮಾರಾಯ. ಮತ್ತ ನಮ್ಮಮಹಾ ದೊಡ್ಡ  XXXL ಸೈಜಿನ ಅಂಗಿ ಆವಾ ಇಡೋದೇ ಇಲ್ಲ. ಕೇಳಿದರ, 'ನಾವು ಸರ್ಕಸ್ ಟೆಂಟ್ ಮಾರಂಗಿಲ್ಲರೀ ಸರ್ರಾ,' ಅಂದು ಅಪಮಾನ ಬ್ಯಾರೆ ಮಾಡ್ತಾನ. ಅದಕ ಬ್ಯಾಡಲೇ,' ಅಂದೆ.

ಆದ್ರ ಚೀಪ್ಯಾ ಕೇಳೋ ಮೂಡಿನ್ಯಾಗ ಇರಲಿಲ್ಲ. 'ಇರ್ಲಿ ಬಾರಲೇ. ನಾ ನಿನಗ ಒಂದು ಗಿಫ್ಟ್ ಕೊಡಸ್ತೇನಿ. ಬಾರಲೇ,' ಅಂತ ಗಿಫ್ಟಿನ ಆಶಾ ಹಚ್ಚಿಬಿಟ್ಟ. ಹಡಬಿಟ್ಟಿ ಮನಸ್ಸು. ಬಿಟ್ಟಿ ಸಿಗ್ತದ ಅಂದ್ರ ನನಗೊಂದು ಇರ್ಲಿ, ನಮ್ಮಪ್ಪಗೂ ಒಂದು ಇರಲಿ ಅಂತದ.

'ಏನು ಗಿಫ್ಟ್ ಕೊಡಸ್ತೀ?' ಅಂತ ಕೇಳಿದೆ.

'ಬಾರಲೇ. ನಿನಗೊಂದು ಚಂದನೆ ಮಂಕಿ ಕ್ಯಾಪ್ ಕೊಡಸ್ತೇನಿ ಬಾ. ಹೆಸರಂತೂ ಮಂಗೇಶ್ ಅಂತ ಅದ. ಹಾಂಗಾಗಿ ನೀ ಯಾವ ಕ್ಯಾಪ್ ಹಾಕ್ಕೊಂಡ್ರೂ ಅದು ಆಟೋಮ್ಯಾಟಿಕ್ ಆಗಿ ಮಂಕಿ ಕ್ಯಾಪ್ ಆಗಿಬಿಡ್ತದ. ಜೀವನಪೂರ್ತಿ ಮುಂಜವಿ ಟೊಪಗಿಯನ್ನೇ ಮಂಕಿ ಕ್ಯಾಪ್ ಮಾಡಿ ಹಾಕಿಕೊಂಡು ಅರ್ಧಾ ಜೀವನಾ ಕಳೆದುಬಿಟ್ಟಿ. ಈಗರೆ ಒಂದು ಖರೆ ಮಂಕಿ ಕ್ಯಾಪ್ ಹಾಕ್ಕೊಂಡು, ನಿನ್ನ ಹೆಸರಿಗೆ ತಕ್ಕಂತೆ ಫುಲ್ ಮಂಗ್ಯಾನ ಗತೆ ಉಳಿದ ಜೀವನ ಕಳದಿಯಂತ. ಬಾ ಬಾ. ಫ್ರೀ ಗಿಫ್ಟಲೇ. ಯಾರಿಗದ ಯಾರಿಗಿಲ್ಲ. ಬಾರೋಪಾ!' ಅಂತ ಹೇಳಿ ಭಯಂಕರ ಆಶಾ ಹಚ್ಚಿಬಿಟ್ಟ.

ಹ್ಯಾಂಗೂ ಸಿಕ್ಕಾಪಟ್ಟೆ ಥಂಡಿ ಬ್ಯಾರೆ ಅದ. ಒಂದು ಮಂಕಿ ಕ್ಯಾಪ್ ಇದ್ದರೇ ಚೊಲೊ ಅಂತ ಅನ್ನಿಸ್ತು. ಅದು ನಮ್ಮ ಅಜ್ಜಾ ಸತ್ತ ಮ್ಯಾಲೆ ನನಗ ಆಸ್ತಿ ಅಂತ ಬಿಟ್ಟು ಹೋದ ಒಂದು ಮಂಕಿ ಕ್ಯಾಪ್ ಇತ್ತು. ನಮ್ಮಜ್ಜಾ ಖಾಯಂ ಅಮೃತಾಂಜನ ಗಿರಾಕಿ ನೋಡ್ರೀ. ಹಾಂಗಾಗಿ ಅದು ಭಾಳ ಅಮೃತಾಂಜನ ವಾಸನಿ ವಾಸನಿ ಆಗಿಬಿಟ್ಟದ. ತೊಳೆಯೋಣ ಅಂದ್ರ ಮತ್ತ ಇದೇ ಧಾರವಾಡ ಕ್ಯಾಪ್ ಮಾರ್ಟ್ ಕ್ವಾಲಿಟಿ. ಶ್ರಿಂಕ್ ಆಗಿ ಬಿಡ್ತದ. ಹಾಂಗಾಗಿ ನನಗ ಒಂದು ಹೊಸಾ ಮಂಕಿ ಕ್ಯಾಪ್ ಖರೆನೇ ಬೇಕಾಗ್ಯದ.

ಸರಿ ಅಂತ ಹೇಳಿ, ನಾನೂ ಸಹ ಚೀಪ್ಯಾ ಅಂಡ್ ಕಂಪನಿ ಜೋಡಿ ಧಾರವಾಡ ಕ್ಯಾಪ್ ಮಾರ್ಟ್ ಒಳಗ ಹೊಕ್ಕೆ.

'ಕೊನಿಗೂ ಈ ಪೀಡಾನ್ನ ಕರಕೊಂಡೇ ಬಂದ್ರೀ. ಹೌದಿಲ್ಲೋ? ಅದ ನಿಮಗ ಇವತ್ತು ಮನಿಗೆ ಹೋದ ಮ್ಯಾಲೆ ಪೂಜಿ' ಅನ್ನೋ ಲುಕ್ ರೂಪಾ ವೈನಿ ಚೀಪ್ಯಾಗ ಕೊಟ್ಟರು. ನಮಗೇನಾಗಬೇಕು? ನಮಗ ಒಟ್ಟ ಬಿಟ್ಟಿ ಮಂಕಿ ಕ್ಯಾಪ್ ಸಿಕ್ಕರೆ ಸಾಕು. ಈ ರೂಪಾ ವೈನಿ ಮನಿಗೆ ಹೋಗಿ ಚೀಪ್ಯಾಗ ಪೂಜಿನಾರ ಮಾಡ್ಲೀ ಇಲ್ಲಾ ಪುನಸ್ಕಾರಾರ ಮಾಡ್ಲೀ. ಹಮ್ಕೋ ಕ್ಯಾ?????

ಆವತ್ತು ಧಾರವಾಡ ಕ್ಯಾಪ್ ಮಾರ್ಟ್ ಒಳಗ ಅಷ್ಟೇನೂ ರಶ್ ಇರಲಿಲ್ಲ. ಹಾಂಗಾಗಿ ಇದ್ದ ಬಿದ್ದ ಕೆಲಸದವರೆಲ್ಲ ನಮ್ಮ ಖಾತಿರ್ದಾರಿಗೇ ನಿಂತರು. ಪೂರ್ತ ರಾಯಲ್ ಟ್ರೀಟ್ಮೆಂಟ್.

'ಏನು ತೋರಿಸಲಿರೀ ಸಾಹೇಬ್ರಾ? ಏನು ತೋರಿಸಲಿರೀ ಬಾಯಾರ? ಸರ್ ನಿಮಗ್ರೀ?' ಅಂತ ಚೀಪ್ಯಾನ್ನ, ರೂಪಾ ವೈನಿನ, ನನ್ನ ಕೇಳ್ಕೊತ್ತ ಅಲ್ಲಿ ಕೆಲಸದ ಮಂದಿ ಬಂದರು. ಒಂದಿಬ್ಬರು ಕೆಲಸದವರು ಹುಡುಗಿಯರಾದ ಕುಂತಿ, ನಿಂತಿಯನ್ನ ಗಮನಸಿಕೊಳ್ಳಲು ಹೋದರು. ರೂಪಾ ವೈನಿ ಅವರನ್ನ ತಡೆದರು. ಇಲ್ಲಂದ್ರ ಆ ಯಬಡ ಕುಂತಿ, ನಿಂತಿ ಏನೇನೋ ಬೇಕು  ಅಂತಾವ. ಅಂಗಡಿಯವರಿಗೆ ಏನು. ಅವರು ತಂದು ತಂದು ಸುರಿತಾರ. ನಂತರ ಸಣ್ಣ ಮಕ್ಕಳು ಬೇಕೇ ಬೇಕು ಅಂತ ಹಟಾ ಹಿಡಿತಾವ. ಅಂಗಡಿಯವರಿಗೆ ಅದೇ ಬೇಕು. ಮಕ್ಕಳ ಹಟಾ ತಡಕೊಳ್ಳಲಿಕ್ಕೆ ಆಗದೇ, ರೊಕ್ಕ ಇಲ್ಲದಿದ್ದರೂ ಮುದ್ರಿ ಒತ್ತಿಯಿಟ್ಟು ಉದ್ರಿ ಹಚ್ಚಿ ಹ್ಯಾಂಗೋ ಮಾಡಿ ಕೊಡಿಸ್ಕೊಂಡು ಬರ್ತಾರ. ಅವೆಲ್ಲಾ ಜಂಜಡ ಬ್ಯಾಡೇ ಬ್ಯಾಡ ಅಂತ ಹೇಳಿ, 'ಆ ಸಣ್ಣು ಹುಡುಗ್ಯಾರಿಗೆ ಏನೂ ತಂದು ತೋರ್ಸೋದು ಬ್ಯಾಡ. ನಾ ಏನು ಬೇಕು ಅಂತ ಹೇಳತೇನಿ. ಅವಿಷ್ಟು ತೋರಿಸರಿ ಸಾಕು. ತಿಳೀತಾ????' ಅಂತ ಅಂಗಡಿ ಮಂದಿಗೆ ವಾರ್ನಿಂಗ್ ಕೊಟ್ಟು, 'ಕುಂತಿ! ಏ ನಿಂತಿ! ಗಪ್ಪ್ ಇರಬೇಕಾ ಮತ್ತ. ಇಲ್ಲಂದ್ರ ಏನೂ ಕೊಡಸಂಗಿಲ್ಲ ನೋಡ್ರೀ!' ಅಂತ ಖಡಕ್ ಆವಾಜ್ ಹಾಕಿದರು ಮಾತಾಶ್ರಿ ರೂಪಾ ವೈನಿ. ಕುಂತಿ, ನಿಂತಿ ಸುಮ್ಮನಾಗಿ ಒಬ್ಬರಿಗೊಬ್ಬರು ಚೂಟಿಗೋತ್ತ, ಪರಿಚಿಗೋತ್ತ, ಬೈಕೋತ್ತ, ಜಗಳ ಮಾಡಿಕೋತ್ತ ಟೈಮ್ ಪಾಸ್ ಮಾಡ್ಲಿಕತ್ತವು.

'ನನಗ ಬರ್ಮುಡಾ ಚೊಣ್ಣಾ (ಚಣ್ಣ) ತೋರಸ್ರೀ. ಮತ್ತ ಇವಾ ನಮ್ಮ ದೋಸ್ತಗ ಮಂಕಿ ಕ್ಯಾಪ್ ತೋರಸ್ರೀ,' ಅಂದ ಚೀಪ್ಯಾ.

'ಯಾಕ್ರೀ ಅವು ಬರ್ಮುಡಾ ಚೊಣ್ಣಾ? ಸುಮ್ಮನ ರೊಕ್ಕ ದಂಡ. ನಿಮ್ಮ ಪಟ್ಟಾ ಪಟ್ಟಿ ಪೈಜಾಮಾನೇ ಮೊಣಕಾಲ ಹತ್ತಿರ ಕತ್ತರಿಸಿ ಕೊಡತೇನಿ. ಒಂದು ಕೈ ಹೊಲಿಗಿ ಹಾಕಿಸಿ ಕೊಡತೇನಿ. ಅದನ್ನ ಹಾಕ್ಕೋರಿ. ಬರ್ಮುಡಾ ಚೊಣ್ಣಾ ಅಂತ ಬರ್ಮುಡಾ. ಅವೆಲ್ಲಾ  ಬ್ಯಾಡ, ' ಅಂತ ರೂಪಾ ವೈನಿ ಚೀಪ್ಯಾಗ ಹೇಳಿದರು. ಬೈದರು. request denied.

'ಏ ರೂಪಾ! ನನಗ ಬೇಕೇ ಬೇಕು. ಪೈಜಾಮಾ ಬ್ಯಾರೆ ಮತ್ತ ಬರ್ಮುಡಾ ಚೊಣ್ಣಾ ಬ್ಯಾರೆ. ಹಿಂದ ಗೋವಾದಾಗ ಬೀಚ್ ಮ್ಯಾಲೆ ಪಟ್ಟಾಪಟ್ಟಿ ಪೈಜಾಮಾ ಹಾಕ್ಕೊಂಡು ಅಡ್ಯಾಡಿದ್ದಕ್ಕ ಎಲ್ಲಾರೂ ನನ್ನ ನೋಡಿ ನಕ್ಕಿದ್ದರು. ಮುಂದಿನ ಸರೆ ಗೋವಾಕ್ಕ ಹೋದಾಗರೆ ಬೇಕು ಅಂತ ಹೇಳ್ಯಾರೆ ಕೊಡಸ, ಕೊಡಸ, ಪ್ಲೀಸ್ ಕೊಡಸ,' ಅಂತ ಚೀಪ್ಯಾ ಗೋಗೆರೆದ.

ನೋಡಿ ಪಾಪ ಅನ್ನಿಸ್ತು. ದುಡಿಯವಾ ಅವಾ. ಆದ್ರ ನೋಡ್ರೀ,  ಒಂದು ಚೊಣ್ಣಾ ತೊಗೋ ಬೇಕು ಅಂದ್ರೂ ಹೆಂಡತಿಗೆ ದುವಾ ಸಲಾಂ ಮಾಡ್ಬೇಕು. ತಿಂಗಳ ಪಗಾರ್ ಪೂರ್ತಿ ಹೆಂಡ್ತಿ ಕೈಯಾಗ ಕೊಟ್ಟು ಕೂಡಬ್ಯಾಡಲೇ, ಅಂತ ಬಡಕೊಂಡರೂ ಕೇಳೋದಿಲ್ಲ. ಮತ್ತ ರೂಪಾ ವೈನಿ ಭಾಳ ಜಾಬಾದ್. payslip ನೋಡಿಕೊಂಡೇ ಇರ್ತಾರ. ಕರೆಕ್ಟ್ ಲೆಕ್ಕಾ ಇಟ್ಟಿರ್ತಾರ. ಅವರದ್ದೂ ಪಾಯಿಂಟ್ ಅದ ಬಿಡ್ರೀ. ಮನಿ ನಡಿಸ್ಕೊಂಡು ಹೋಗವರು ಹೆಂಗಸೂರು. ಗಂಡಸೂರೇ ಪಗಾರ್ ಇಟ್ಟುಗೊಂಡರು ಅಂದ್ರ ಮನಿಯಾಗಿನ ಎಲ್ಲಾರಿಗೆ ನಾಕ್ನಾಕು ಬರ್ಮುಡಾ ಚೊಣ್ಣಾನೇ ಖರೀದಿ ಮಾಡಿ, ಅಷ್ಟೂ ರೊಕ್ಕಾ ಖರ್ಚು ಮಾಡಿಕೊಂಡು ಕೂಡ್ತಾರ. ಆಮೇಲೆ ಊಟಕ್ಕ ಏನ್ರೀ? ಅಂತ ಕೇಳಿದರೆ, ಹೊಟ್ಟಿ ಮ್ಯಾಲೆ ತಣ್ಣೀರ ಬಟ್ಟಿ ಹಾಕ್ಕೊಂಡು ಮಲ್ಕೊರೀ ಅನ್ನೋ ಪೈಕಿ  ಈ ಗಂಡು ಮುಂಡೇವು. ಬೇಕಾದ್ರ ಬರ್ಮುಡಾ ಚೊಣ್ಣಾನೆ ಒದ್ದಿ ಮಾಡಿ ಹೊಟ್ಟಿ ಮ್ಯಾಲೆ ಹಾಕ್ಕೊಂಡು ಮಲ್ಕೊಬೇಕು. ಅದಕ್ಕೆ ಭಾಳ ಮಂದಿ ಮಧ್ಯಮ ವರ್ಗದ ಗಂಡಸರು ತಿಂಗಳ ಪಗಾರ್ ಫುಲ್ ಹೆಂಡ್ತಿ ಕೈಯಾಗ ಕೊಟ್ಟು, ಕೃಷ್ಣಾರ್ಪಣಮಸ್ತು, ಅಂದು ಬಿಡ್ತಾರ. ಏನು ಮಸ್ತೋ ಏನು ಸುಡುಗಾಡೋ!?

ಚೀಪ್ಯಾ ಆ ಪರಿ ಕಾಡೋದು ನೋಡಿ, ಪಾಪ ಅನ್ನಿಸ್ತು ಅಂತ ಕಾಣಸ್ತದ ರೂಪಾ ವೈನಿಗೆ. 'ಹೂಂ! ಒಂದೇ ಬರ್ಮುಡಾ ತೊಗೋರಿ. ಒಂದೇನಾ ಮತ್ತ. ಒಂದೇ ಒಂದು. ಭಾಳ ತುಟ್ಟಿದು ಬ್ಯಾಡ ಮತ್ತ. ಆ ನಿಮ್ಮ ಹೊಟ್ಟಿಯಂತೂ ಮುಂದ ಬಂದ್ಕೊತ್ತss ಹೊಂಟದ. ಆ ಹೊಟ್ಟಿ ಬೆಳೆಯೋ ರೇಟ್ ನೋಡಿದ್ರ ತೊಗೊಂಡು ಮನಿಗೆ ಹೋಗಿ ಮುಟ್ಟೋದ್ರಾಗ ಆ ಬರ್ಮುಡಾನೋ ಗಿರ್ಮುಡಾನೋ ಟೈಟ್ ಆದರೂ ಆತು. ಟೈಟ್ ಆತು ಅಂದ್ರ ಅಸಡ್ಡಾಳ ಟೈಟ್ ಬರ್ಮುಡಾ ಹಾಕ್ಕೊಂಡು ಅಡ್ಯಾಡ್ಬೇಕಾಗ್ತದ. ಒಂದು ನೋಡಿ ತೊಗೋರಿ. ಸ್ವಲ್ಪ ರಬ್ಬನೇ ಬಣ್ಣದ್ದೇ ತೊಗೋರಿ. ಹೊಲಸಾದ್ರೂ ಕಾಣಬಾರದು ನೋಡ್ರೀ,' ಅಂತ ಹೇಳಿದರು.

ಶಿವನೆ! ಒಂದು ಬರ್ಮುಡಾ ಚೊಣ್ಣಾ ತೊಗೊಳ್ಳಿಕ್ಕೆ ತ್ರೀ ಪೀಸ್ ಸೂಟ್ ಹೊಲಿಸಿದ್ದರಿಕಿಂತ ಹೆಚ್ಚಿನ ಮಾತು. ಒಂದು ಬರ್ಮುಡಾ ಚೊಣ್ಣದ ಕಥೆ.

ನಮಗ ತೋರಿಸಲಿಕ್ಕೆ ಅಂತ ಬರ್ಮುಡಾ ಚೊಣ್ಣಾ, ಮಂಕಿ ಕ್ಯಾಪ್ ತರಲಿಕ್ಕೆ ಒಳಗ ಹೋದಾ ಅಂಗಡಿ ಕೆಲಸದವ.

ಮತ್ತೊಬ್ಬ ಕೆಲಸದವ, 'ನಿಮಗೇನು ಕೊಡ್ಲಿರೀ ಬಾಯಾರ?' ಅಂತ ರೂಪಾ ವೈನಿನ ಕೇಳಿದ.

ಅವರಿಗೆ ಏನು ಬೇಕು ಅಂತ ಹೇಳಲಿಕ್ಕೆ ರೂಪಾ ವೈನಿ ಯಾಕೋ ಸ್ವಲ್ಪ ಹಿಂದ ಮುಂದ ನೋಡಿದರು. ನಾ ಇದ್ದೆ ಅಂತನೋ ಏನೋ. ಗೊತ್ತಿಲ್ಲ. ಸಣ್ಣ ದನಿಯೊಳಗ ಏನೋ ಹೇಳಿದರು. ಕುಸು ಪುಸು. ನನಗ ಕೇಳಲಿಲ್ಲ.

'ಪ್ಯಾಂತೀಸ್ (ಪೈಂತೀಸ್) ಸೈಜ್ ಶರ್ಟ್ ಲೇಕೆ ಆಬಾ' ಅಂತ ಒಬ್ಬ ಕೆಲಸದವ ಇನ್ನೊಬ್ಬಗ ಧಾರವಾಡ ಉರ್ದು ಒಳಗ ಹೇಳಿದ. ಒಂದಿಷ್ಟು ಡಬ್ಬಿ ಬಂದವು. ಅವನ್ನು ತಂದು ವೈನಿ ಮುಂದ ಸುರಿದರು. ವೈನಿ ಫುಲ್ ಘಾಬರಿಯಾದ್ರು. ಅವರಿಗೆ ಒಟ್ಟ ತಿಳಿವಲ್ತು ಯಾಕ ಅವರ ಮುಂದ ಗಂಡಸೂರ ಶರ್ಟ್ ತಂದು ಸುರಿಲಿಕತ್ತಾರ ಅಂತ.

'ಏನು ಇವು? ಇವನ್ಯಾಕ ತಂದ್ರಿ? ಈ ಗಂಡಸೂರ ಅಂಗಿ ತೊಗೊಂಡು ಹೋಗಿ ನಾ ಏನ ಮಾಡ್ಲೀ? ಅದೂ ಯಾವ ಸೈಜಿನ ಅಂಗಿ ಇವು? ಎಷ್ಟು ಸಣ್ಣು ಅವ. ನಾ ಏನು ಮಂಗ್ಯಾ ಸಾಕೇನಿ ಅಂತ ಮಾಡಿರೇನು? ನಾ ಹೇಳಿದ್ದು ಏನು ನೀವು ತಂದು ತೋರಸ್ಲಿಕತ್ತಿದ್ದು ಏನು? ಹಾಂ?' ಅಂತ ಅವಂಗ ಬೈದರು. ಮಂಕಿ ಕ್ಯಾಪ್ ಇಲ್ಲದೇ ಮಂಗ್ಯಾನ ಮಾರಿ ಆತು ಅವಂದು.

'ನೀವೇ ಹೇಳಿದರಲ್ಲರೀ ಪೈಂತೀಸ್ ಅಂತ. ಅದಕ್ಕೆ 35 ಸೈಜಿನ ಶರ್ಟ್ ತರಿಸಿದೆ. ಏನು ಹೇಳಿದಿರಿ ನೀವು?' ಅಂತ ಕೇಳಿದ.

'ಅಯ್ಯೋ! ರಾಮಾ! ನಾ ಹೇಳಿದ್ದು ಅದಲ್ಲಾ,' ಅಂದ್ರು ರೂಪಾ ವೈನಿ.

'ಮತ್ತರೀ? ಏನು??????' ಅಂತ ವಾಪಸ್ ಪ್ರಶ್ನೆ ಒಗದಾ ಆವಾ.

ರೂಪಾ ವೈನಿ ಮತ್ತ ಒಂದು ತರಹದ ಸಂಕೋಚ ಮಾಡಿಕೊಂಡರು. ಮತ್ತ ಸಣ್ಣ ದನಿಲೆ ಏನೋ ಕುಸು ಪುಸು ಅಂದ್ರು. ಭಾಳ ಸಣ್ಣ ದನಿಲೆ ಅಂದ್ರು.

'ಇವೆಲ್ಲಾ ಪ್ಯಾಂತೀಸ್ ನಂಬರ್ ಸೈಜಿನವೇ ಅವರೀ ಬಾಯಾರ. ಬೇಕಾದ್ರ ಹಾಕಿಸಿ ನೋಡ್ರೀ. ಇಲ್ಲಾ ಮನಿಗೆ ಹೋಗಿ ನೋಡಿ, ಸರಿಯಾಗಿಲ್ಲಾ ಅಂದ್ರ ವಾಪಸ್ ತಂದು ಕೊಡ್ರೀ. ಪ್ಯಾಂತೀಸ್ ಪ್ಯಾಂತೀಸ್ ಅನ್ನಲಿಕತ್ತೀರಿ. ಪ್ಯಾಂತೀಸ್ ಸೈಜಿನ ಶರ್ಟ್ ತೊರಿಸಿದರ ಬ್ಯಾಡ ಅಂತೀರಿ. ಏನು ಬೇಕು ಅಂದ್ರ ಮತ್ತ ಪ್ಯಾಂತೀಸ್ ಅಂತೀರಿ. ಸ್ವಲ್ಪ ಜೋರಾಗಿ ಹೇಳ್ರೀ. ನನಗ ಸರಿ ಕೇಳದಿದ್ದರೂ ನಮ್ಮ ಸಾವಕಾರ್ರಿಗೆ ಸರಿ ಕೇಳಲಿ.  ಆವಾಗರೆ ನಿಮಗ ಏನು ಬೇಕು ಅಂತ ನಮಗ ಗೊತ್ತಾದೀತು,' ಅಂತ ಹೇಳಿ, ಶಿವಾಯ ನಮಃ ಅನ್ನೋ ಹಾಂಗ ಅಂಗಡಿಯವ ಕೈ ಚಲ್ಲಿಬಿಟ್ಟ.

ಶಿವನೇ ಶಂಭುಲಿಂಗ!

ಇಷ್ಟೆಲ್ಲಾ ಆಗೋ ತನಕಾ ಆ ಅಂಗಡಿ ಮಾಲೀಕ ಬಂದ. ಅವನೇ ಮುದ್ದಾಂ ಕೇಳಿದ, 'ಏನು ಬೇಕ್ರೀ ಬಾಯಾರ? ನನಗ ಹೇಳ್ರೀ,' ಅಂತ ಭಾಳ ವಿನಮ್ರತೆಯಿಂದ ಕೇಳಿದ.

ರೂಪಾ ವೈನಿ ಮತ್ತ ಸಣ್ಣ ದನಿಲೆ ಏನೋ ಕುಸು ಪುಸು ಅಂದ್ರೂ. ಯಾಕೋ ಏನೋ? ಎಲ್ಲದನ್ನೂ ಏರು ದನಿಯೊಳಗ ಮಾತಾಡೋ ಇವರು ಈಗ್ಯಾಕ ಸಣ್ಣ ದನಿಲೆ ಕುಸು ಪುಸು ಅನಲಿಕತ್ತಾರೋ ಏನೋ. ಅವರಿಗೇ ಗೊತ್ತು.

ಅವರು ಕುಸು ಪುಸು ಅಂದಿದ್ದು ಮಾಲೀಕನಿಗೆ ತಿಳೀತು ಅಂತ ಅನ್ನಸ್ತದ. ಆವಾ ದೊಡ್ಡ ದನಿಯೊಳಗ, ನಗರೇಶ್ವರ ಗುಡಿ ತನಕಾ ಕೇಳೋವಾಂಗ, 'ಚಡ್ಡಿ  ರೀ??? ಹೆಂಗಸೂರ ಚಡ್ಡಿಗೆ ಪ್ಯಾಂತೀಸ್ ಅಂತಾರೇನ್ರೀ? ನಮಗ ಗೊತ್ತಿಲ್ಲ ಬಿಡ್ರೀ. ಆವಾ ನಮ್ಮ ಹುಡುಗ ನೀವು ಪ್ಯಾಂತೀಸ್ ಅಂದ್ರ ಪೈಂತೀಸ್ ಸೈಜಿನ ಶರ್ಟ್ ತೋರಿಸಿಬಿಟ್ಟ. ಗೊತ್ತಾಗಲಿಲ್ಲ ಅವಂಗ. ಈಗ ತರಿಸಿಬಿಡ್ತೇನಿ . ಒಂದ ನಿಮಿಷ. ನಿಮ್ಮ ಚಡ್ಡಿ ಬಂದ ಬಿಡ್ತಾವು. ಚಡ್ಡಿ ನಿಮಗೊಂದನೋ ಅಥವಾ ಸಾಹೇಬರಿಗೆ, ನಿಮ್ಮ ಹುಡುಗ್ಯಾರಿಗೆ ಎಲ್ಲರಿಗೂ  ತರಿಸಿಬಿಡಲೋ?' ಅಂತ ಜೋರ್ ಹೋಯ್ಕೊಂಡ. ಹಾಕ್ಕ! ಶಿವನೇ!

ಹೋಗ್ಗೋ! ಇದೇ ಆಗಬಾರದು ಅಂತ ಹೇಳಿ ರೂಪಾ ವೈನಿ ಕುಸು ಪುಸು ಅಂತ ಸಣ್ಣ ದನಿಯೊಳಗ ಮಾತಾಡ್ಲಿಕತ್ತಿದ್ದರ ಈ ಪುಣ್ಯಾತ್ಮ ಊರಿಗೆಲ್ಲ ಕೇಳೋ ಹಾಂಗ ಜಾಗಟಿ ಬಾರಿಸಿಬಿಟ್ಟ. ಹಾಕ್ಕ! ಈ ವೈನಿಗಾದ್ರೂ ಬುದ್ಧಿ ಬ್ಯಾಡ? ಹ್ಯಾಂ? ಸಣ್ಣ ದನಿಯಾಗ ಹೇಳಿದರೂ, ಸಿಂಪಲ್ ಆಗಿ ಚಡ್ಡಿ ಅಂತನೋ, ಕಾಚಾ ಚಡ್ಡಿ ಅಂತನೋ ಸಿಂಪಲ್ಲಾಗಿ ಹೇಳಿದ್ರ ಅವಂಗ ತಿಳಿತಿತ್ತು. ಹೋಗಿ ಇಲ್ಲದ ಇಂಗ್ಲೀಷ್ ಡೌಲ್ ಬಡಿಲಿಕ್ಕೆ ಹೋಗ್ಯಾರ. ಇವರು panties ಅಂದಿದ್ದು ಅವಂಗ ಪ್ಯಾಂತೀಸ್ ಅಂದಾಂಗ ಕೇಳಿ, ಆವಾ ಹುಚ್ಚಾ 35 (ಪ್ಯಾಂತೀಸ್ / ಪೈಂತೀಸ್ ) ಸೈಜಿನ ಶರ್ಟ್ ತೋರಿಸಿ, ಏನೇನೋ ಆಗಿ, ಮಾಲೀಕ ದೊಡ್ಡ ದನಿಯೊಳಗ 'ಚಡ್ಡೆ ರೇ??????' ಅಂತ ಕೇಳಿ, ರಾಮಾ ರಂಪಾ. ಅದಕ್ಕೆ ಹೇಳೋದು - Keep it simple and stupid ಅಂತ. ಚಡ್ಡಿ ಕೋ ಚಡ್ಡಿ ಹೀ ರಹನೇ ದೋ ಕೋಯಿ ನಾಮ ನ ದೋ. ಹಮನೇ ದೇಖಿ ಹೈ.....ಅಂತ ಹಾಡು ನೆನಪಾತು.

ಹೆಂಗಸೂರ ವಸ್ತ್ರಗಳು ಬಂದವು. ರೂಪಾ ವೈನಿ, ಕುಂತಿ, ನಿಂತಿ ಎಲ್ಲಾ ಆಕಡೆ ಹೋದವು. ಅಷ್ಟರಾಗ ನನ್ನ ಮಂಕಿ ಕ್ಯಾಪೂ ಸಹ ಬಂತು. ಹಾಂಗೆ ಚೀಪ್ಯಾನ ಬರ್ಮುಡಾ ಚೊಣ್ಣ ಸಹಿತ ಬಂದವು. ಧೇಡ್ ಸಾರೆ ತಂದು ತಂದು ಗುಡ್ಡೆ ಹಾಕಿದ. ಮಂಕಿ ಕ್ಯಾಪ್ ಸಹಿತ ಭಾಳ ತಂದ. ಆದರೆ ಮಂಕಿ ಕ್ಯಾಪ್ ತೊಗೊಂಡ್ರ ಒಂದು ಕರೇ ಬಣ್ಣದ ಬ್ಲಾಕ್ ಮಂಕಿ ಕ್ಯಾಪ್ ತೊಗೋಬೇಕು ಇಲ್ಲ ಅಂದ್ರ ಸ್ವಲ್ಪ ಬ್ರೌನ್ ಇರೋದು ತೊಗೋಬೇಕು. ಇವೆರೆಡು ಕಲರ್  ಬಿಟ್ಟು ಬ್ಯಾರೆ ಯಾವದೇ ಬಣ್ಣದ ಮಂಕಿ ಕ್ಯಾಪ್ ತೊಗೊಳ್ಳೇಬಾರದು.  ಯಾಕಂದ್ರ ಹಾಕ್ಕೊಂಡ ಮ್ಯಾಲೆ ಪರ್ಫೆಕ್ಟ್ ಮಂಗ್ಯಾ ಕಂಡಂಗ ಕಾಣಬೇಕು ನೋಡ್ರೀ. ಖರ್ರನೆ ಕರೆ ಮಂಗ್ಯಾ ಅಥವಾ ಕೆಂಪ ಮುಶ್ಯಾ ಕಂಡಂಗ ಕಾಣಬೇಕು. ಎಲ್ಲರೆ ಬ್ಯಾರೆ ಬಣ್ಣದ್ದು ಮಂಗ್ಯಾ ನೋಡೀರಿ ಏನು? ಹಳದಿ ಬಣ್ಣದ್ದು? ಜಾಂಬಳಿ ಬಣ್ಣದ್ದು???? ತಲಿ ಇಲ್ಲದ ಮಂದಿ ಮಾತ್ರ ಯಾವ್ಯಾವದೋ ಬಣ್ಣದ ಮಂಕಿ ಕ್ಯಾಪ್ ಹಾಕ್ಕೊಂಡು genetically mutated ಮಂಗ್ಯಾಗಳ ಗತೆ ಅವತಾರ ಮಾಡಿಕೊಂಡು ಅಡ್ಯಾಡ್ತಿರ್ತಾರ. ಹುಚ್ಚ ಖೋಡಿಗಳು! ಅದಕ್ಕೆ ನಾ ಸುಮ್ಮನೆ ಒಂದು ಬ್ಲಾಕ್ ಕಲರ್ ಮಂಕಿ ಕ್ಯಾಪ್ ಆರಿಸಿಕೊಂಡೆ.

ಚೀಪ್ಯಾ ಬಣ್ಣ ಬಣ್ಣದ ಬರ್ಮುಡಾ ಚೊಣ್ಣ ನೋಡಿ ಖುಷ್ ಆಗಿಬಿಟ್ಟ. ಅವಂಗ ಯಾವದು ತೊಗೋಬೇಕು ಯಾವದನ್ನ ಬಿಡಬೇಕು ಅಂತ ತಿಳಿವಲ್ದಾಗಿತ್ತು. ಹೆಂಡ್ತಿ ಬ್ಯಾರೆ ಒಂದೇ ಒಂದು ಬರ್ಮುಡಾ ತೊಗೊಳ್ಳಿಕ್ಕೆ ಪರ್ಮಿಷನ್ ಕೊಟ್ಟಾಳ. ಒಳ್ಳೆ ಧರ್ಮ ಸಂಕಟ ಅವಂಗ. ಆದರೂ ನೋಡೋಣ ಅಂತ ಹೇಳಿ ಹಾಪ್ ಚೀಪ್ಯಾ ಒಂದು ನಾಲ್ಕು ಬರ್ಮುಡಾ ಆರಿಸಿಬಿಟ್ಟ.

ಇಷ್ಟು ಆಗೋ ತನಕಾ ಆಕಡೆ ಹೆಂಗಸೂರದ್ದೂ ಚಿತ್ರ ವಿಚಿತ್ರ ಅರಿವಿಗಳ ಖರೀದಿ ಮುಗೀತು ಅಂತ ಅನ್ನಸ್ತದ. ಅವರೂ ಸಹಿತ ಎಲ್ಲರೂ ಈಕಡೆ ಬಂದರು. ಆಕಡೆ ಅವರ ಅರಿವಿ ಬಿಲ್ಲಿಂಗ್, ಪ್ಯಾಕಿಂಗ್ ಎಲ್ಲಾ ನಡೆದಿತ್ತು. ಚೀಪ್ಯಾನ ನಾಕು ಬರ್ಮುಡಾ, ನಂದು ಒಂದು ಮಂಕಿ ಕ್ಯಾಪ್ ಸಹಿತ ಎಲ್ಲಾ ಆಕಡೆನೇ ತೊಗೊಂಡು ಹೋದ. ಎಲ್ಲಾ ಒಂದೇ ಬಿಲ್ ಒಳಗ ಬರಬೇಕು ನೋಡ್ರೀ.

ಎಲ್ಲಾದನ್ನೂ ಬಿಲ್ ಮಾಡಿ, ಬಿಲ್ ಎಲ್ಲಾ ಬರೆದು, ಟೋಟಲ್ ಮಾಡಿ, ಎಷ್ಟು ಅಂತ ಹೇಳಿದ. ಜಗ್ಗೆ ಆಗಿತ್ತು ಬಿಲ್. ರೂಪಾ ವೈನಿನೇ ಹೋಂ ಮಿನಿಸ್ಟರ್. ಅವರೇ ಫೈನಾನ್ಸ್ ಮಿನಿಸ್ಟರ್. ರೊಕ್ಕಾ ಕೊಟ್ಟು ಬಿಲ್ ಚುಕ್ತಾ ಮಾಡವರು ಅವರೇ. ಹಾಂಗಾಗಿ ಅವರು ಡೀಟೇಲ್ ಆಗಿ ಬಿಲ್ ಚೆಕ್ ಮಾಡೇ ರೊಕ್ಕಾ ಕೊಡವರು. ಹಾಂಗಾಗಿ ಬಿಲ್ ಇಸ್ಕೊಂಡು, ಒಂದೊಂದೇ ಲೈನ್ ಐಟಂ ನೋಡ್ಕೋತ್ತ, ಖರೆನೇ ಆ ಸಾಮಾನು ತೊಗೋಂಡೇವೋ ಇಲ್ಲೋ ಅಂತ ನೋಡಿಕೋತ್ತ ಹೊಂಟರು. ಬಿತ್ತಲ್ಲ ಕಣ್ಣಿಗೆ ಚೀಪ್ಯಾನ ನಾಕು, ನಾಕ್ನಾಕು, ಬರ್ಮುಡಾ ಚೊಣ್ಣ. ವೈನಿ ಚಿಟ್ ಅಂತ ಚೀರಿಕೊಂಡರು.

'ಶ್ರೀಪಾದ್ ರಾವ್! ನಾ ನಿಮಗ ಏನು ಹೇಳಿದ್ದೆ? ಹಾಂ? ಒಂದೇ ಒಂದು ಬರ್ಮುಡಾ ಚೊಣ್ಣ ಅಂತ. ಇದ್ಯಾಕ ನಾಕ್ನಾಕು ಚೊಣ್ಣ ತೊಗೊಂಡೀರಿ? ಏನು ಇನ್ನು ಮುಂದೆ ಬರೇ ಚೊಣ್ಣಾನೇ ಹಾಕ್ಕೊಂಡು ಇರವರು ಏನು? ಆವಾ ಅಣ್ಣಾ ಹಜಾರೆ ಅವತಾರ ಮುಗೀತು. ಈಗ ನೀವು ಚೊಣ್ಣಾ ಹಜಾರೆ ಆಗವರು ಏನು? ಏ.....ನಿಮ.... ನಿಮ ತಂದು. ಯಾವದಾರ ಒಂದೇ ಒಂದು ಬರ್ಮುಡಾ ಆರಿಸ್ಕೊಂಡು, ಬಾಕಿದು ಬ್ಯಾಡ ಅನ್ನರೀ,' ಅಂತ ರೂಪಾ ವೈನಿ ಗಂಡಗ ಜಬರಿಸಿದರು.

'ಈ ಬಿಲ್ ಒಳಗಿಂದ ಮೂರು ಬರ್ಮುಡಾ ಚೊಣ್ಣಾ ಕಮ್ಮಿ ಮಾಡಿ ಹೊಸಾ ಬಿಲ್ ಮಾಡಪಾ. ಆಮ್ಯಾಲೆ ಮತ್ತೊಮ್ಮೆ ಟೋಟಲ್ ಹೇಳು,' ಅಂದ್ರು. ಅಂಗಡಿ ಮಂದಿ ಕೆಟ್ಟ ಮಾರಿ ಮಾಡಿದರು. ಚೀಪ್ಯಾ ಮೂರು ಬರ್ಮುಡಾ ಹಿಂದೆ ಕೊಡಬೇಕಾಗಿ ಬಂತಲ್ಲಾ ಅಂತ ಮತ್ತೂ ಕೆಟ್ಟ ಮಾರಿ ಮಾಡಿದ. ಕೇವಲ ಅಮೇರಿಕಾ ಧ್ವಜದ ಪ್ಯಾಟರ್ನ್ ಇದ್ದ ಬರ್ಮುಡಾ ಒಂದನ್ನೇ ಇಟ್ಟುಕೊಂಡು, ಬಾಕೀದು ಮೂರು ಬ್ಯಾಡ ಅಂದ. ಅಂಗಡಿಯವ ಅವನ್ನ ತೆಗೆದು, ಬಿಲ್ ಅಡ್ಜಸ್ಟ್ ಮಾಡಲಿಕ್ಕೆ ಶುರು ಮಾಡಿದ. ನಾವು ವೇಟ್ ಮಾಡಿಕೋತ್ತ ನಿಂತವಿ. ವೈನಿ ತಮ್ಮ ಮೊಳಕೈ ತೊಗೊಂಡು ಚೀಪ್ಯಾನ ಪಕ್ಕೆಲೆಬಿನ್ಯಾಗ ಹೆಟ್ಟಿ ಹೆಟ್ಟಿ ಸುಮಡಿ ಒಳಗ ಬೈಲಿಕತ್ತಿದ್ದರು - ಯಾಕ ನಾಕ್ನಾಕ ಬರ್ಮುಡಾ ತೊಗೊಂಡಿದ್ದಿರಿ ಅಂತ. ಪಾಪ ಚೀಪ್ಯಾ. ಬರ್ಮುಡಾ ಚೊಣ್ಣ ಅಂತೂ ಹೋಗಿಬಿಟ್ಟವು. ಮ್ಯಾಲಿಂದ ಪಕ್ಯಾಗ ತಿವಿಸಿಕೊಳ್ಳೋ ಚಿತ್ರಹಿಂಸೆ. ಹೈರಾಣ ಆಗಿದ್ದ ಗಂಡ ಪ್ರಾಣಿ.

ಮತ್ತ ಹೊಸಾ ಬಿಲ್ ಬಂತು. ರೂಪಾ ವೈನಿ ಮತ್ತ ಒಂದೊಂದಾಗಿ ಚೆಕ್ ಮಾಡಲು ಶುರು ಮಾಡಿದರು. ನಡು ಮತ್ತ ಒಮ್ಮೆಲೇ ಚೀರಿಕೊಂಡರು. ಬೋಂಗಾ ಸೌಂಡ್ ಮಾಡೇ ಬಿಟ್ಟರು. ಹಾಕ್ಕ!

ಅಂಗಡಿಯವ ಘಾಬ್ರಿಯಾಗಿ, 'ಈಗ ಮತ್ತೇನಾತ್ರೀ ಬಾಯಾರ?' ಅಂತ ಭಾಳ anxiety ಯಿಂದ ಕೇಳಿದ.

'ಬಿಲ್ ತಪ್ಪು ಮಾಡಿರಲ್ಲರೀ? ಹೀಂಗ ಮಾಡೋದು? ನಾ ಹೇಳಿದ್ದು ತಿಳಿಲಿಲ್ಲ ನಿಮಗ? ಹಾಂ?' ಅಂತ ರೂಪಾ ವೈನಿ ಅಂಗಡಿ ಕಾರಕೂನಗ ಹೇಳಿದರು. ಕಾಡಕೋಣದಂತಹ ಕಾರಕೂನ. ಅದೂ ರಾತ್ರಿ ಎಂಟೂವರಿ ಟೈಮ್. ಅಂಗಡಿ ಮುಚ್ಚೋ ಹೊತ್ತು. ಆವಾ ಬಿಲ್ಲಿನ್ಯಾಗ ಏನು ಭಾನಗಡಿ ಮಾಡಿ ಕೂತಿದ್ದನೋ ಏನೋ.

'ಬಿಲ್ಲಿನ್ಯಾಗ ಏನು ತಪ್ಪಾತ್ರೀ ಬಾಯಾರ? ಕೊಡ್ರೀ ಇಲ್ಲೆ,' ಅಂತ ಹೇಳಿ ಕಾರಕೂನ ಬಿಲ್ ಇಸ್ಕೊಂಡು, ಚಸ್ಮಾ ಮ್ಯಾಲೆ ಏರಿಸಿಕೊಂಡು ಅವನೂ ಚೆಕ್ ಮಾಡಿದ. ಮೊದಲೇ ಹೇಳಿದಂಗ ಕಾಡಕೋಣ ಸೂಳಿಮಗಾ. ತಲಿ ಎಲ್ಲೆ ಇರಬೇಕು? ಇಲ್ಲ.

'ಎಲ್ಲಾ ಬರೋಬ್ಬರಿ ಅದಲ್ಲರೀ. ನೀವು ಹೇಳಿದಂಗ ಯಾವದನ್ನು ತೆಗಿಬೇಕೋ ಅವನ್ನು ತೆಗೆದು, ಹೊಸಾ ಬಿಲ್ ಮಾಡಿ, ಹೊಸದಾಗಿ ಟೋಟಲ್ ಮಾಡೆನಲ್ಲರೀ! ಏನು ತಪ್ಪದರೀ?' ಅಂತ ಹೇಳಿ ಬಿಲ್ ವಾಪಸ್ ಕೊಟ್ಟ. ಈ ಹೌಸ್ ವೈಫ್ ಹೆಂಗಸಿಗೆ ಏನು ಗೊತ್ತದ ಅನ್ನೋ ಕಿಂಡಲ್ ಲುಕ್ ಕೊಟ್ಟ ಕಾರಕೂನ.

ನಮ್ಮ ರೂಪಾ ವೈನಿ ಎಮ್ಮಿಕೇರಿ ಸಾಲಿಗೇ ಹೋಗಿರಬಹುದು. SSLC ಭಾಳ ಸಲೆ ಡುಮ್ಕಿ ಹೊಡೆದ ಮ್ಯಾಲೇ ಪಾಸ್ ಆಗಿರಬಹುದು. ಆದ್ರ ಕಿರಾಣಾ ಲೆಕ್ಕಾ, ಅರವಿ ಅಂಗಡಿ ಲೆಕ್ಕದೊಳಗ ಮಾತ್ರ ಅವರು ಗಣಿತದಾಗ ಮಾಸ್ಟರ್ ಡಿಗ್ರಿ ಮಾಡಿದವರಿಗಿಂತ ಮುಂದು. ಅದರಾಗ ಸಂಶಯ ಬ್ಯಾಡೇ ಬ್ಯಾಡ.

ಕಾಡಕೋಣ ಕಾರಕೂನನ ಮಾತಿನಿಂದ ಅವರಿಗೆ ಸರ್ರ್ ಅಂತ ಸಿಟ್ಟು ಬಂತು. ಸಿಟ್ಟು ಬಂದಿದ್ದೊಂದೇ ಅಲ್ಲ. ಅದು ಸೀದಾ ನೆತ್ತಿಗೇ ಏರಿಬಿಡ್ತು. ಆವಾಗ ಆತು ಅನಾಹುತ!

'ಏ! ನಿಮ್ಮ! ಏನು ಸರಿ ಅದರೀ??? ನಾ ಏನು ಹೇಳಿದೆ ನಿಮಗ??? ಹಾಂ???? ನಮ್ಮ ಯಜಮಾನರ ಚೊಣ್ಣಾ ಕಳೀರಿ ಅಂತ ಹೇಳಿದೆ. ನೀವು ಏನು ಮಾಡಿದಿರಿ? ಹಾಂ? ನನ್ನ ಚಡ್ಡಿ ಕಳೆದುಬಿಟ್ಟೀರಿ. ಹ್ಯಾಂ? ಥೂ ನಿಮ್ಮ!' ಅಂತ ಒದರಿಬಿಟ್ಟರು.

ಅಕಟಕಟಾ!!!!!!

ಅದನ್ನು ಕೇಳಿ ಅಲ್ಲಿದ್ದ ಎಲ್ಲರೂ ಒಂದು ಕ್ಷಣ ಸ್ಥಂಭೀಭೂತರೂ, ಚಂಬೀಭೂತರೂ ಆಗಿಬಿಟ್ಟರು. Frozen!!!!

ಯಜಮಾನರ ಚೊಣ್ಣಾ ಕಳಿ ಅಂದಿದ್ದರಂತ ಆವಾ ಇವರ ಚಡ್ಡಿ ಕಳೆದು ಬಿಟ್ಟನಂತ!!!!!!!!!!!!!!!!!!!!!!!!!!!!!

Out of context ಒಳಗ ಫುಲ್ ಡಬಲ್ ಮೀನಿಂಗ್. ಡಬಲ್ 'ಮೀನ್' ಇಂಗ್  ಅಲ್ಲ ಇದು ಡಬಲ್ 'ತಿಮಿಂಗಲ' ಇಂಗ್!!!!!!!! ಆ ಮಟ್ಟದ ಅನಾಹುತ!

ಎಲ್ಲರೂ pin drop ಸೈಲೆನ್ಸ್ ಒಳಗ ನಿಂತಿದ್ದು ನೋಡಿದ ರೂಪಾ ವೈನಿ ಅವರು ಹೇಳಿದ್ದು ಯಾರಿಗೂ ತಿಳಿಲಿಲ್ಲ ಅಂತ ತಿಳಕೊಂಡು ಮತ್ತ ಅದನ್ನೇ ಒದರಿದರು. ಜೋರಾಗೇ ಒದರಿದರು. ಈಗ ಬಾಜೂಕಿನ ಕಠಾರೆ ಅಂಗಡಿಯವ ಸಹಿತ ಹಣಿಕಿ ನೋಡಿದ. ಆ ಮಟ್ಟಿನ ಎಫೆಕ್ಟ್ ಇತ್ತು. ಜೋರ್ದಾರ್ ಬಾಯಿ ಅದ. ಅದಕ್ಕೆ ಅವರಿಗೆ ರೂಪಾ ಬಾಯಿ ಅನ್ನೋದು ಒಪ್ತದ.

ಕಾರಕೂನ ದೊಡ್ಡ ಬಾಯಿ ಬಿಟ್ಟುಕೊಂಡು ಹ್ಯಾಂ???????? ಅನ್ನೋ ಲುಕ್ ಕೊಟ್ಟು ಕೂತಿದ್ದ. ಅವನ ಗಲ್ಲಾ ಅನ್ನೋದು ಮುಂದಿದ್ದ ಗಲ್ಲಾದ (cash box) ಮೇಲೆ ಹೋಗಿ ಕೂತುಬಿಟ್ಟಿತ್ತು.

'ಏ!!! ಥೂ ನಿಮ್ಮ! ನಮ್ಮ ಯಜಮಾನರ ಮೂರು ಬರ್ಮುಡಾ ಚೊಣ್ಣಾ ಬಿಲ್ಲಿನಾಗಿಂದ ಕಳೆದು ಹೊಸಾ ಬಿಲ್ ಮಾಡ್ರೀ ಅಂದ್ರ ನೀವು ನನ್ನು ಮೂರು ಚಡ್ಡಿ ಬಿಲ್ಲಿನಾಗಿಂದ ಕಳೆದು ಬಿಲ್ ಮಾಡಿರೀ ನೋಡ್ರೀ. ಅದು ತಪ್ಪು. ತಿಳೀತಾ?' ಅಂತ ಫುಲ್ ವಿವರಣೆ ಕೊಟ್ಟರು.

ಆಗ ಎಲ್ಲರೂ ದೊಡ್ಡ ಹುಸ್! ಅಂತ ಶ್ವಾಸ ಮತ್ತೊಂದು ಬಿಟ್ಟರು. ಇಲ್ಲಂದ್ರ ಧಾರವಾಡ ಕ್ಯಾಪ್ ಮಾರ್ಟ್ ಮಂದಿ ಕೇವಲ ದ್ರೌಪದಿ ವಸ್ತ್ರಾಪಹರಣ ಕೇಳಿದ್ದರು. ಈಗ ಈ ರೂಪಾ ಬಾಯಿದು, ಚೀಪ್ಯಾಂದು ವಸ್ತ್ರಾಪಹರಣ ಮಾಡಿದ ಆರೋಪಕ್ಕ ಒಳಗಾಗಿದ್ದರು. ಅದೂ ಬರೆ ವಸ್ತ್ರಾಪಹರಣ ಅಲ್ಲ. ಒಳವಸ್ತ್ರಾಪಹರಣ. ದ್ವಾಪರಯುಗದಾಗ ಇನ್ನೂ decency ಉಳಿದಿತ್ತು ಅದಕ್ಕೇ ಬರೆ ವಸ್ತ್ರಾಪಹರಣ ಮಾಡಲಿಕ್ಕೆ ನೋಡಿದರು. ಈಗ ಕಲಿಯುಗ, ಸೀದಾ ಒಳವಸ್ತ್ರಾಪಹರಣ.

ರೂಪಾ ವೈನಿ ಕೊಟ್ಟ ಭೀಕರ ಆಘಾತದಿಂದ ಕಾರಕೂನ ಹ್ಯಾಂಗೋ ಸುಧಾರಿಕೊಂಡು ಈ ಸಲ ಚೀಪ್ಯಾನ ಚೊಣ್ಣಗಳನ್ನೇ  ಕಳೆದ. ಅಂದ್ರ ಬಿಲ್ಲಿಂದ ಕಳೆದ ಅಂತ. ಯಾರ ಚಡ್ಡಿ ಕಳಿಯುವ ಅಥವಾ ಕೂಡುವ ಸುದ್ದಿಗೂ ಹೋಗಲಿಲ್ಲ. ಹೊಸಾ ಬಿಲ್ ಮಾಡಿ ಕೊಟ್ಟ. ಮೂರನೇ ಬಿಲ್ಲಿಗೆ ಮುಕ್ತಾಯ. ರೂಪಾ ವೈನಿ ಮತ್ತ ಚೌಕಾಶಿ ಮಾಡಿದರು. ಅವರ ಕಾಟ ತಡಿಲಾಗದೇ, ಈ ಹುಚ್ಚ ಹೆಂಗಸು ಹೋದ್ರ ಸಾಕು ಅಂತ ಹೇಳಿ ಮತ್ತೊಂದಿಷ್ಟು ಡಿಸ್ಕೌಂಟ್ ಸಹಿತ ಕೊಟ್ಟಾ. ರೂಪಾ ವೈನಿ ಬೈಕೊತ್ತನೇ ಬಿಲ್ ಚುಕ್ತಾ ಮಾಡಿದರು.

ಹೊರಗ ಬರೋವಾಗ ಕೇಳಿದೆ, 'ಲೇ! ಚೀಪ್ಯಾ, ಮಂಗ್ಯಾನ ಟೊಪ್ಪಿಗಿ ರೊಕ್ಕಾ ಆಮ್ಯಾಲೆ ಕೊಡ್ತೀನಿ. ಓಕೆ?'. ಆವಾ ಏನೋ ಗಿಫ್ಟ್ ಅಂದಿದ್ದಾ. ಆದರೂ ಕೇಳಬೇಕಲ್ಲ, at least for formality. ಮುಂದ ಕೊಡೋದು ಬಿಡೋದು ಬ್ಯಾರೆ ಮಾತು. ಹೇಳಿ ಕೇಳಿ ನಾವು ಹೊಯ್ಸಳ ವಂಶಸ್ಥ ಬಿಟ್ಟಿದೇವನ ವಂಶಜರು.

'ಏ! ಸುಮ್ಮಿರೋ ಮಾರಾಯ. ಮಂಕಿ ಕ್ಯಾಪ್ ಫ್ರೀ ಸ್ಕೀಮ್ ಇತ್ತು. ಅದರಾಗ ಫ್ರೀ ಬಂತು. ಅದಕ್ಕೇ ನಿನ್ನ ಜುಲ್ಮೀ ಮಾಡಿ ಕರ್ಕೊಂಡು ಹೋಗಿದ್ದೆ,' ಅಂದು ಬಿಟ್ಟ ಚೀಪ್ಯಾ! ಭಾರಿ ಶಾಣ್ಯಾ ಸೂಳಿಮಗ.

moral of the story: ನೀವು ಕಳೆಯೋವಾಗ ಹ್ಯಾಂಗ ಕಳೆದರೂ, ಕಳೀರಿ ಅಂತ ಮತ್ತೊಬ್ಬರಿಗೆ ಹೇಳೋವಾಗ ಭಾಳ careful ಆಗಿ ಏನು ಕಳಿಬೇಕು ಅಂತ ಕ್ಲಿಯರ್ ಆಗಿ ಹೇಳಬೇಕು. ಇಲ್ಲಂದ್ರ ದೊಡ್ಡ misunderstanding ಆಗೋ ಚಾನ್ಸ್ ಭಾಳ ಇರ್ತಾವ.

* ಧಾರವಾಡ ಭಾಷೆಯಲ್ಲಿ ಕಳೆಯೋದು / ಕಳಿಯೋದು ಅಂದ್ರೆ ಬಿಚ್ಚೋದು ಅಂತ ಸಹಿತ ಅರ್ಥ ಇದೆ.

ಬರ್ಮುಡಾ ಚೊಣ್ಣಾ. ಚಡ್ಡಿ ಅಲ್ಲ ಮತ್ತ!

Sunday, December 28, 2014

ನೀವು ಯಾವ ಸಬ್ಜೆಕ್ಟ್ ಕಲಿಸ್ತಿದ್ದಿರಿ ಸರ್!?

ಮೊನ್ನೆ ಯಾವದೋ ಸಮಾರಂಭಕ್ಕೆ ಹೋಗಿದ್ದೆ. ಮೊದಲು ಸ್ವಾಗತ ಗೀತೆ ಅಂದರು. ಯಾರಿಂದ ಅಂತನೂ ಹೇಳಿದರು. ಯಾರೋ ಸೀಮಾ ಕುಲಕರ್ಣಿ ಅಂತ. ಅದೂ ಧಾರವಾಡದವರು ಅಂದ ಕೂಡಲೇ ಕಿವಿ ನಾಯಿ ಕಿವಿ ಗತೆ ನಿಮಿರಿ ನಿಂತವು.

ಈ ಸೀಮಾ ಕುಲಕರ್ಣಿ ಎಲ್ಲೆರೆ ನಮ್ಮ ಹಳೆ ಕ್ಲಾಸ್ಮೇಟ್, ಗೆಳತಿ ಇದ್ದರೂ ಇರಬಹುದೇನೋ ಅಂತ ಅನ್ನಿಸ್ತು. ಅಕಿ ಎಲ್ಲೋ ಕಳೆದು ಹೋಗ್ಯಾಳ. ಕನ್ನಡ ಸಾಲಿ ಎರಡ್ನೇತ್ತಾ ಆದ ಮ್ಯಾಲೆ ಗಾಯಬ್. ಇನ್ನೂ ತನಕಾ ಪತ್ತೆ ಇಲ್ಲ.

ಯಾರೋ ಒಬ್ಬಾಕಿ ಬಂದು ಏನೋ ಹಾಡಿದಳು. ಸೀಮಾ ಕುಲಕರ್ಣಿ ಅಂತ ಹೆಸರು ಕೇಳಿದ ಮ್ಯಾಲೆ ನಾವು ಹಾಡು ಕೇಳಲಿಲ್ಲ. ಬರೇ ನೋಡಿದಿವಿ. ಹಾಡಾಕಿನ ನೋಡಿದಿವಿ. ಸೀಮಾ ಕುಲಕರ್ಣಿ ಅನ್ನೋ ಸಿಂಗರನ್ನ ನೋಡ್ಕೊತ್ತ ಫ್ಲಾಶ್ ಬ್ಯಾಕಿಗೆ ಹೋದ್ವೀ.

"ಹ್ಯಾಂ! ಇಕಿನ ಸೀಮಾ ಕುಲಕರ್ಣಿ!!!!? ಒಳ್ಳೆ ಅರವತ್ತರ ಮುದುಕಿ ಗತೆ ಇದ್ದಾಳ. ಇದೆಂಗ ಇಷ್ಟು ವಯಸ್ಸಾಗಿ ಬಿಡ್ತು ಇಕಿಗೆ? ನಮ್ಮ ಜೋಡಿಯಾಕಿ ಅಕಿ. ಹ್ಯಾಂ!?" ಅಂತ ಅನ್ನಿಸ್ತು ಅಕಿನ್ನ ನೋಡಿದರ. ಆದ್ರ ಅಕಿ ಮಾರಿ, ಫೇಸ್ ಕಟ್ ನೋಡಿದರೆ ನಮ್ಮ ಕ್ಲಾಸ್ಮೇಟ್ ಇದ್ದಂಗ ಇದ್ದಳು. ಅಕಿನ ಹೌದೋ ಅಲ್ಲೋ ಅಂತ ಭಾಳ confusion ಆಗಿ ಬಿಡ್ತು.

ಸಮಾರಂಭ ನಡಕೋತ್ತ ಹೊಂಟಿತ್ತು. ನಡು ಚಹಾಕ್ಕ ಅಂತ ಸೂಟಿ ಬಿಟ್ಟರು. ಎಲ್ಲಾರೂ ಚಹಾ, ನಾಷ್ಟಾ ಇಟ್ಟ ಕಡೆ ಭಂವ್ ಅಂತ ಹೋದರು. ಅದೇ ಇಂಪಾರ್ಟೆಂಟ್ ನೋಡ್ರೀ. ನಾನೂ ಹೋದೆ.

ಉಪ್ಪಿಟ್ಟು, ಚಹಾ ತೊಗೊಂಡು, ಈಕಡೆ ಬಂದು ಕೂಡೋಣ ಅಂತ ಬರ್ಲಿಕತ್ತಾಗ ಎದುರಿಗೆ ಯಾರ್ ಕಾಣಬೇಕು ಹೇಳ್ರೀ???? ಅಕಿನೇ ಸ್ವಾಗತ ಗೀತೆ ಹಾಡಿದ್ದ ಹುಡುಗಿ ಟೈಪಿನ ಅಜ್ಜಿ ಅಥವಾ ಅಜ್ಜಿ ಟೈಪಿನ ಹುಡುಗಿ - ಸೀಮಾ ಕುಲಕರ್ಣಿ.

ಏ! ಈಗೇ ಬೆಸ್ಟ್ ಚಾನ್ಸ್ ಸಿಕ್ಕದ. ಇಕಿನ್ನ ಹಿಡಿದು ಕೇಳೇ ಬಿಡಬೇಕು. ಕೇಳಿ, ಇಕಿ ನಮ್ಮ ಕ್ಲಾಸ್ಮೇಟ್ ಹೌದೋ ಅಲ್ಲೋ ಅಂತ confirm ಮಾಡಿಕೊಳ್ಳಲೇಬೇಕು, ಅಂತ ಡಿಸೈಡ್ ಮಾಡೇ ಬಿಟ್ಟೆ.

"ನಮಸ್ಕಾರ್ರೀ," ಅಂದೆ. ನಮಸ್ಕಾರ ಸಹ ಮಾಡಿದೆ. ಅದೂ ಫುಲ್ ನಮಸ್ಕಾರ. ಉಪ್ಪಿಟ್ಟ ಪ್ಲೇಟ್ ಬಾಜೂ ಇಟ್ಟು ಎಲ್ಲಾ ರೆಡಿ ಆಗಿದ್ದೆ ನಮಸ್ಕಾರ ಹೊಡಿಲಿಕ್ಕೆ.

ಅಕಿ ಏಕ್ದಂ ಒಂದು ತರಹ surprise ಲುಕ್ ಕೊಟ್ಟಳು. ಭಾಳ ದಿವಸದಿಂದ ಇಷ್ಟು ಚಂದಾಗಿ ಯಾರೂ ಅಕಿಗೆ ನಮಸ್ಕಾರ ಹೊಡೆದಿರಲಿಲ್ಲ ಅಂತ ಕಾಣಸ್ತದ. ಅದಕ್ಕೆ ಒಂದು ಟೈಪ್ deer in head light ಲುಕ್ ಕೊಟ್ಟು, ನಮ್ಮ ಫುಲ್ ನಮಸ್ಕಾರಕ್ಕೆ ಅಕಿ ಹಾಪೋ, ಕ್ವಾರ್ಟರೋ ಅನ್ನೋ ಹಾಂಗ ಏನೋ ಒಂದು ಟೈಪಿನ ನಮಸ್ಕಾರ ಮಾಡಿದಳು ಅನ್ನ್ರೀ.

"ರೀ, ನೀವು ಧಾರವಾಡದಾಗ ಕೆ ಬೋರ್ಡ್ ಸಾಲಿ ಸ್ಟೂಡೆಂಟ್ ಏನ್ರೀ?" ಅಂತ ಕೇಳಿದೆ.

ಅಕಿ ಭಾಳ surprise ಆಗಿ, "ಹೂಂ! ಹೂಂ! ಹೌದ್ರೀ. ನಾನು ಕಲಿತದ್ದು ಅಲ್ಲೇರೀ," ಅಂದಳು.

"ನಂದು ನೆನಪಿಲ್ಲೇನವಾ???? ನಾನು ಮಂಗೇಶ್. ಮಂಗೇಶ್ ಹೆಗಡೆ. ನೆನಪಾತೇನು?????" ಅಂತ ಕೇಳಿದೆ.

ನೋಡಲಿಕ್ಕೆ ಅಂತೂ ಫುಲ್ ಮುದುಕಿ ಗತೆ ಕಾಣ್ಲಿಕತ್ತಾಳ. ನೆನಪಿನ ಶಕ್ತಿ ಹ್ಯಾಂಗದನೋ ಏನೋ! ಯಾರಿಗೆ ಗೊತ್ತು. ಅದೂ ಢಂ ಅಂದದೋ ಏನೋ!

ಅಕಿ ತನ್ನ ಬಿಳೆಯಾಗಿರುವ ಕೂದಲಾ ಸ್ವಲ್ಪ ಕೆರಕೊಂಡಳು. ಕೆರಕೊಂಡ ಮ್ಯಾಲೆ ತಲ್ಯಾಗಿನ ಇಂಜಿನ್ ಸ್ಟಾರ್ಟ್ ಆತು ಅನ್ನಸ್ತದ.

"ನಾನು ೧೯೮೦ ಟೈಮ್ ಒಳಗ ಕೆ ಬೋರ್ಡ್ ಸಾಲಿ ಸ್ಟೂಡೆಂಟ್ ನೋಡ್ರೀ. ಆಮ್ಯಾಲೆ ನಮ್ಮಪ್ಪಗ ವರ್ಗಾತು. ಬ್ಯಾರೆ ಕಡೆ ಹೋದ್ವೀ," ಅಂತ ಹೇಳಿದಳು.

ಹಾಕ್ಕ! ಕರೆಕ್ಟ್! ನಾವು ಗೆಸ್ ಮಾಡಿದ್ದು ಏಕ್ದಂ ಬರೋಬ್ಬರಿ ಅದ. ಪರ್ಫೆಕ್ಟ್ ಮ್ಯಾಚ್ ಆಗ್ತದ. ಇಕಿನೇ ಅಕಿ. ಅಕಿನೇ ಇಕಿ. ಆವತ್ತು ಕಳೆದು ಹೋದಾಕಿ ಇಕಿನೇ ಅಂತ confirm ಆತು.

"ಬರೋಬ್ಬರಿ ಹೇಳಿದಿ ನೋಡವಾ. ನನಗೂ ಅದೇ ನೆನಪಿತ್ತು. ನೀ ಎಲ್ಲೆ ಹೋಗಿ ಬಿಟ್ಟಿ ಅಂತ ಒಟ್ಟೇ ಗೊತ್ತಿರಲಿಲ್ಲ ನೋಡು. ಈಗ ಸಿಕ್ಕಿ. ನಂದು ನೆನಪಾತ????" ಅಂತ ಮತ್ತ ಕೇಳಿದೆ.

ನಾನು ಅಕಿನ ಅಷ್ಟು ನೆನಪಿಟ್ಟು, ಎಷ್ಟೋ ವರ್ಷದ ನಂತರ ನೋಡಿ, ಬರೆ ಹೆಸರು ಕೇಳಿ, ಅಕಿ ಚಹರಾಪಟ್ಟಿ ಸಿಕ್ಕಾಪಟ್ಟೆ ಬದಲಾಗಿದ್ದರೂ, ಇಕಿನೇ ನಮ್ಮ ಕುಲಕರ್ಣಿ ಸೀಮಿ ಇರಬಹದು ಅಂತ ಗೆಸ್ ಮಾಡಿ ಕೇಳಿದ ಮ್ಯಾಲೆ ಅಕಿಗೂ ನಮ್ಮ ನೆನಪು ಇರಲಿಕ್ಕೇ ಬೇಕು. ಇರಲಿಲ್ಲ ಅಂದರೂ ನಾವು ನೆನಪು ಮಾಡಿಕೊಡಲೇ ಬೇಕು ಅಂತ ಹೇಳಿ ಅಕಿನ್ನ, ಅಕಿ memory ರಿಫ್ರೆಶ್ ಮಾಡೋ ಪ್ರಯತ್ನ ಮುಂದುವರಿಸಿದೆ. ಆದ್ರ ಅಕಿಗೆ ಒಟ್ಟ ನೆನಪಾಗವಲ್ಲತು. ಥತ್!

"ಏನಂದ್ರೀ ನಿಮ್ಮ ಹೆಸರು???" ಅಂತ ಮತ್ತ ಕೇಳಿದಳು.

ಶಿವನೇ! ಇನ್ನೂ ರೀ ಹಚ್ಚಿ ಮಾತಾಡ್ಲಿಕತ್ತಾಳ. ಅಂದ್ರ ಇಕಿಗೆ ನನ್ನ ಗುರ್ತು ಒಟ್ಟ ಹತ್ತವಲ್ತು. ಛೇ! ಏನು ತಗಡ ತಲಿ ಇಟ್ಟಾಳಪಾ ಇಕಿ, ಅಂತ ಅನ್ನಿಸ್ತು.

"ಮಂಗೇಶ್. ಮಂಗೇಶ್ ಹೆಗಡೆ ಅಂತ ನನ್ನ ಹೆಸರು. ಈಗರೆ ನೆನಪಾತೇನು?" ಅಂತ ಕೇಳಿದೆ.

ಸೀಮಾ ಕುಲಕರ್ಣಿ ಡೀಪ್ ಥಿಂಕಿಂಗ್ ಮೋಡಿಗೆ ಹೋದಳು. ಏಕ್ದಂ ದೆವ್ವಾ ಮೈಮ್ಯಾಲೆ ಬಂದವರಾಂಗ ಆಕಡೆ ಈಕಡೆ ಸ್ವಲ ಒಲಿದಾಡಿದಳು. ಸಾಲ್ಯಾಗಿದ್ದಾಗ ಹ್ಯಾಂಗ ಸ್ಲಿಮ್ ಅಂಡ್ ಟ್ರಿಮ್ ಆಗಿ ಕ್ಯೂಟ್ ಇದ್ದಳು. ಈಗ ನೋಡಿದರ. ಬ್ಯಾಡ ಬಿಡ್ರೀ. ನಮ್ಮ ಜೋಡಿಯಾಕಿನೇ. ವಯಸ್ಸು ಇನ್ನೂ ನಲವತ್ತರ ಮ್ಯಾಲೆ ಚಿಲ್ಲರೆ ಅಷ್ಟೇ. ಅಯ್ಯ ಇಕಿನ! ಈಗ ನೋಡಿದರೆ ಸಾಕು. ಅರವತ್ತರ ಅಜ್ಜಿ ಗತೆ ಆಗಿಬಿಟ್ಟಾಳ.

"ಹಾಂ! ಈಗ ನೆನಪಾತು ನೋಡ್ರೀ. ಏನಂದ್ರೀ ನಿಮ್ಮ ಹೆಸರು? ಹಾಂ ಹೆಗಡೆ. ಕರೆಕ್ಟ್. ಕರೆಕ್ಟ್. ಏ ಈಗ ಏಕದಂ ಫುಲ್ ನೆನಪಾತು," ಅಂದು ಬಿಟ್ಟಳು ಅಕಿ.

ಫುಲ್ ನೆನಪಾತು ಅಂತಾಳ. ಆದ್ರ ಮತ್ತೂ ಬಹುವಚನದಾಗ ಮಾತಾಡ್ಲಿಕತ್ತಾಳ. ಅಂದ್ರ ಏನರ್ಥ? ನಾ ಅಕಿ ಕ್ಲಾಸ್ಮೇಟ್, ಹಳೆ ಫ್ರೆಂಡ್ ಅಂತ ನೆನಪಾಗಿದ್ದರೆ ಏಕವಚನದಾಗ ಮಾತಡಿಸಬೇಕಾಗಿತ್ತಲ್ಲ? ಹಾಂ?

"ನೆನಪಾತ್ರೀ ಸರ್. ಆದ್ರ ನೀವು ಯಾವ subject ಕಲಿಸ್ತಿದ್ದಿರಿ ಅಂತ ಒಟ್ಟsss ನೆನಪಾಗವಲ್ಲತು ನೋಡ್ರೀ ಸರ್," ಅಂತ ಅಂದು ಬಿಡಬೇಕೇ!!!! ಸೂಡ್ಲೀ!!

ನನ್ನ ತಲಿಗೆ ಚಕ್ಕರನೇ ಬಂತು. ಅಲ್ಲೇ ಇದ್ದ ಖುರ್ಚಿ ಮ್ಯಾಲೆ ಕೂತೆ. ತಲಿ ಹಿಡಕೊಂಡೆ.

ಅಕಿಗೆ ಮಾತ್ರ ಖಬರೇ ಇಲ್ಲ. ಯಾವದೋ ಹಳೆ ಮಾಸ್ತರ್ ಸಿಕ್ಕಾರ ಅಂತ ಭಾಳ ಖುಷಿಯೊಳಗ ಇದ್ದಳು ಅಕಿ.

"ಹೆಗಡೆ ಸರ್, ಇನ್ನೂ ಕೆಲಸಾ ಮಾಡ್ಕೋತ್ತ ಇದ್ದೀರೋ ಅಥವಾ ರಿಟೈರ್ ಆಗಿರೋ?" ಅಂತ ಬ್ಯಾರೆ ಕೇಳಿ ಬಿಟ್ಟಳು.

ಅಷ್ಟರಾಗ ಮತ್ತ ಪ್ರೋಗ್ರಾಮ್ ಶುರು ಆತು. ಅಕಿ ಗಂಡಾ, ಮಕ್ಕಳು ಎಲ್ಲ ಅಕಿನ್ನ ಕರೆದರು.

"ಹೆಗಡೆ ಸರ್, ಪ್ರೊಗ್ರಾಮ್ ಮುಗಿದ ಮ್ಯಾಲೆ ಸ್ವಲ್ಪ ನಿಂದರ್ರಿ. ಆರಾಮ್ ಮಾತಾಡೋಣ. ಓಕೆರೀ ಸರ್?" ಅಂದಾಕಿನೇ ತನ್ನ ಪರಿವಾರದತ್ತ ಓಡಿದಳು.

ಈಕಡೆ ನಾ ವಿಚಾರ ಮಾಡಿದೆ. "ಶಿವನೇ! ಇಕಿ ಯಾಕೋ ಸ್ವಲ್ಪ ಲಗೂನೆ ಮುದುಕಿಯಾಗ್ಯಾಳ, ವಯಸ್ಸಿಗಿಂತ ಮೊದಲೇ ವಯೋವೃದ್ಧೆ ಗತೆ ಕಾಣ್ಲಿಕತ್ತಾಳ ಅಂತ ನಾ ವಿಚಾರ ಮಾಡಿದರ ಇಕಿಗೆ ನಾನೇ ಯಾವದೋ ಬುಡ್ಡಾ ಹಳೆ ಮಾಸ್ತರ್ ಗತೆ ಕಂಡು ಬಿಟ್ಟೆನೇ????"

ಅಕಟಕಟಾ!

(ಶುದ್ಧ ಕಾಲ್ಪನಿಕ (ತಲೆ) ಹರಟೆ)

(ಸ್ಪೂರ್ತಿ: ಶಿವರಾಂ ಶಾಸ್ತ್ರಿ ಅವರು ಬರೆದಿದ್ದ ಇದೇ ಮಾದರಿಯ ಜೋಕ್. ಅವರಿಗೆ ಬೇರೆ ಯಾವದೋ ಇಂಗ್ಲೀಷ್ ಜೋಕ್ ಸ್ಪೂರ್ತಿಯಂತೆ.)


Thursday, December 18, 2014

ಬೇರೆಬೇರೆಯಾಗಿದ್ದ ಗಂಡ ಹೆಂಡತಿಯರನ್ನು ಒಂದುಗೂಡಿಸಿ 'ಮಾನವೀಯತೆ ಮೆರೆದ' ಕಸ್ಟಮ್ಸ್ ಅಧಿಕಾರಿ!

ಬೇರೆಬೇರೆಯಾಗಿದ್ದ ಗಂಡ ಹೆಂಡತಿಯರನ್ನು ಕಸ್ಟಮ್ಸ್ ಅಧಿಕಾರಿಯೊಬ್ಬರು ಒಂದುಗೂಡಿಸಿ 'ಮಾನವೀಯತೆ ಮೆರೆದ' ಘಟನೆ ಸ್ಯಾನ್ ಫ್ರಾನ್ಸಿಸ್ಕೋ ಏರ್ಪೋರ್ಟ್ ನಿಂದ ವರದಿಯಾಗಿದೆ.

ಡಿಸೆಂಬರ್ ೧೭ ರಂದು ಭಾರತದಿಂದ ಆಗಮಿಸಿದ್ದರು ಆ ದಂಪತಿ. ಇಮಿಗ್ರೇಷನ್ ಮುಗಿಸಿ, ಲಗೇಜ್ ಎಲ್ಲ ಕಲೆಕ್ಟ್ ಮಾಡಿ, ಟ್ರಾಲಿಯಲ್ಲಿ ಹಾಕಿಕೊಂಡು ಹೊರಟರು. ಕಸ್ಟಮ್ಸ್ ಕ್ಲಿಯರ್ ಮಾಡುವಲ್ಲಿ ದೊಡ್ಡ, ಉದ್ದನೆಯ ಕ್ಯೂ. ಕಸ್ಟಮ್ ಅಧಿಕಾರಿಗಳಿಗೆ ಮೊದಲೇ ತಲೆ ಬಿಸಿ. ಒಬ್ಬೊಬ್ಬರದೇ ಕಸ್ಟಮ್ಸ್ ಡಿಕ್ಲೆರೇಶನ್ ಕಾರ್ಡ್ ನೋಡಿ ನೋಡಿ, ಅವರನ್ನು ಸೀದಾ ಹೊರಗೆ ಬಿಡಬಹುದೋ ಅಥವಾ ಹೆಚ್ಚಿನ ಚೆಕಿಂಗ್ ಗೆ ಕಳಿಸಬೇಕೋ ಅನ್ನುವ ಮಂಡೆ ಬಿಸಿ. ಅಂತಾದ್ದರಲ್ಲಿ ಈ ಗಂಡ ಒಂದು ಕಡೆ, ಅವನ ಹೆಂಡತಿ ಇನ್ನೊಂದು ಕಡೆ. ಅಕಟಕಟಾ!

ಒಂದು ಪರಿವಾರಕ್ಕೆ ಒಂದೇ ಒಂದು ಕಸ್ಟಮ್ಸ್ ಡಿಕ್ಲೆರೇಶನ್ ಕಾರ್ಡ್. ಪೂರ್ತಿ ಕುಟುಂಬ ಕೂಡಿ ಬಂದು, ಕಸ್ಟಮ್ಸ್ ಕ್ಲಿಯರ್ ಮಾಡಬೇಕು. ಅದು ಪದ್ಧತಿ. ಹಾಗಿದ್ದಾಗ ಗಂಡ ಒಬ್ಬನೇ ಮುಂದೆ ಬಂದು, ಕಸ್ಟಮ್ಸ್ ಅಧಿಕಾರಿ ಕೈಯಲ್ಲಿ ತನ್ನ ಕಸ್ಟಮ್ಸ್ ಫಾರ್ಮ್ ಇಡುತ್ತ, 'ನಮ್ಮ ಮಿಸೆಸ್ ಅಲ್ಲಿದ್ದಾರೆ. ಓ ಅಲ್ಲಿ. ಲೈನಿನಲ್ಲಿ ಹಿಂದೆ. ಇಬ್ಬರದೂ ಇದರಲ್ಲಿ ಇದೆ......' ಅಂದು, ಪೆದ್ದ ನಗೆ ನಕ್ಕ.

ಹಾಕ್ಕ ಅವನೌನ್!

ಕಸ್ಟಮ್ಸ್ ಅಧಿಕಾರಿಗೆ ಉರಿದು ಹೋಯಿತು. 'ರೀ! ಇಬ್ಬರೂ ಜೊತೆಯಲ್ಲೇ ಬರಬೇಕು. ಗೊತ್ತಿಲ್ಲವಾ??? ಸರಿ ಸರಿ ಒಂದು ಕೆಲಸ ಮಾಡಿ' ಅನ್ನುತ್ತ ಜನರ ಕ್ಯೂ (queue) ಸಂಬಾಳಿಸಲು ಟೆಂಪರರಿ ಬೇಲಿಯಂತೆ ಹಾಕಿದ್ದ ಕಟಾಂಜನದ ಒಂದು ಕೊಂಡಿ ತೆಗೆಯತೊಡಗಿದ.

ಗಂಡ ಪ್ರಾಣಿಗೆ ಸಿಕ್ಕಾಪಟ್ಟೆ ಖುಷಿ. ಬೇಲಿ ತೆಗೆದು, ಕ್ಯೂನಲ್ಲಿ ತುಂಬ ಹಿಂದೆ ಇದ್ದ ಹೆಂಡತಿಯನ್ನು ಮುಂದೆ ತರಿಸಿ, ಒಂದುಗೂಡಿಸಿ, ಬೇಗನೆ ಕಸ್ಟಮ್ಸ್ ಕ್ಲಿಯರ್ ಮಾಡಿ ಕಳಿಸುತ್ತಾನೆ ಅಂತ ಸಂಭ್ರಮಿಸುತ್ತ, ಕೈ ಕೈ ಎತ್ತಿ, 'ಜಲ್ದೀ ಆವ್! ಜಲ್ದೀ ಆವ್!' ಅನ್ನುತ್ತ ಹೆಂಡತಿ ಕರೆಯತೊಡಗಿದ. ಹಿಂದಿ ಗೊತ್ತಿಲ್ಲದಿದ್ದರೆ ಅವನು ಆವ್ ಆವ್ ಅಂತ ಕೂಗುವದನ್ನು 'ಶುದ್ಧ' ಕನ್ನಡಿಗರು ಹಾವ್, ಹಾವ್ ಅಂತ ಅರ್ಥ ಮಾಡಿಕೊಂಡು, ಇದೆಲ್ಲಿ ಏರ್ಪೋರ್ಟ್ ನಲ್ಲಿ ನಾಗಪ್ಪ ಬಂದಾನಪ್ಪಾ ಅಂತ ಭೀತರಾಗಬೇಕು. ಆ ರೀತಿಯಲ್ಲಿ ಆವ್, ಆವ್ ಅಂತ ಕರೆಯುತ್ತಿದ್ದ.

ತಾತ್ಕಾಲಿಕವಾಗಿ ಬೇಲಿ ತೆಗೆದ ಕಸ್ಟಮ್ಸ್ ಆಫೀಸರ್, 'ಯೋ! ನಿನ್ನ ಹೆಂಡತಿ ಇಲ್ಲಿ ಬರಲಿ ಅಂತ ಬೇಲಿ ತೆಗಿಲಿಲ್ಲ. ನೀನು ಅಲ್ಲಿ ಹೋಗಲಿ ಅಂತ ತೆಗೆದೆ. ಹೋಗಿ ಅವಳ ಜೊತೆ ನಿಲ್ಲು. ಇಬ್ಬರೂ ಕೂಡಿ, ನಿಮ್ಮ ಪಾಳಿ ಬಂದಾಗ ಬನ್ನಿ,' ಅಂತ ಝಾಡಿಸಿ, 'ನಡೆ ಇನ್ನು' ಅನ್ನುವ ರೀತಿ ಸಂಜ್ಞೆ ಮಾಡಿದಾಗ ಗಂಡನ ಮುಖ ನೋಡುವ ಹಾಗಿತ್ತು. ಬೃಹತ್ ಪ್ರಮಾಣದ KLPD!

'ಏಳೇಳು ಜನ್ಮ ಕೂಡಿ ಇರೋದು ದೂರ ಉಳೀತು. ಕಸ್ಟಮ್ ಲೈನಲ್ಲೂ ಜೊತೆ ಇರೋಕೆ ಆಗದ useless ಇವಳು' ಅಂತ ಏನೋ ಗೊಣಗುತ್ತ, ತನ್ನ ಮಹಾ ದೊಡ್ಡ ಸೈಜಿನ ಲಗೇಜ್ ಹೊತ್ತಿದ್ದ ಟ್ರಾಲಿ ನೂಕುತ್ತ ಹೆಂಡತಿಯನ್ನು ಸೇರಲು(!) ಹೊರಟ ಗಂಡ.

ಗಂಡನ ಗೊಣಗಾಟ ಕೇಳಿದ, ನೋಡಿದ ಹೆಂಡತಿ ಈ ಆಸಾಮಿ ಆಕೆಯನ್ನೇ ಬಯ್ಯುತ್ತಿರಬೇಕು ಅಂತ ತಿಳಿದು ಕೆಕ್ಕರಿಸಿ ಲುಕ್ ಕೊಟ್ಟಳು. ಸಡನ್ ಆಗಿ ಪ್ಲೇಟ್ ಚೇಂಜ್ ಮಾಡಿದ ಗಂಡ 'ಜೊತೆಯಲಿ, ಜೊತೆ ಜೊತೆಯಲಿ. ನಾನೂ ನೀನೂ ಕೂಡಿ, ಕಸ್ಟಮ್ಸ್ ಕ್ಲಿಯರ್ ಮಾಡಿ. ಜೊತೆಯಲಿ, ಜೊತೆ ಜೊತೆಯಲಿ......' ಅಂತ ರೋಮ್ಯಾಂಟಿಕ್ ಓಳು ಬಿಡುವ ಲುಕ್ ಕೊಡುತ್ತ ಹಿಂದಿದ್ದ ಹೆಂಡತಿಯನ್ನು ಕೂಡಿದ.

ಅಷ್ಟರಲ್ಲಿ ನನ್ನ ಪಾಳಿ ಬಂತು. ನನ್ನ ನೋಡಿದ ಕಸ್ಟಮ್ಸ್ ಆಫೀಸರ್ ನನಗೂ ಒಂದು ಕೆಟ್ಟ ಲುಕ್ ಕೊಟ್ಟ. ಒಬ್ಬ ದೇಸಿ ಈಗ ಮಾತ್ರ ಇಂಪ್ರೆಷನ್ ಕೆಡಿಸಿ ಹೋಗಿದ್ದ ನೋಡಿ. 'ಸರಿ ಸರಿ. ಹೋಗಿ ನೀವು. ಎಕ್ಸಟ್ರಾ ಚೆಕಿಂಗ್ ಏನೂ ಬೇಡ,' ಅಂತ ಹೇಳಿ ನನ್ನ ಕಳಿಸಿದ.

ಧಾರವಾಡದ ಬಾಬು ಸಿಂಗನ ಪೇಡಾ, ಇಲ್ಲಿನ ಕವಳ ಪ್ರಿಯ ಬಂಧುಗಳಿಗೆ ಕಳಿಸಲೆಂದು ತಂದಿದ್ದ ಜರ್ದಾ, ಅಡಿಕೆ ಎಲ್ಲ ಉಳಿಯಿತು. ಕಸ್ಟಮ್ ಅಧಿಕಾರಿಯಿಂದ ಬಚಾವ್ ಆಯಿತು ಅನ್ನುವ ಸಂತಸದಲ್ಲಿ ರೈಟ್ ಹೇಳಿದೆ.

ತಿರುಗಿ ನೋಡಿದರೆ ಬೇರೆಬೇರೆಯಾಗಿದ್ದ ಗಂಡ ಹೆಂಡತಿ ಒಂದುಗೂಡಿ, ತುಂಬ ಹಿಂದಿನಿಂದ, ತಮ್ಮ ಭಯಂಕರ ಟ್ರಾಲಿಗಳನ್ನು ನೂಕುತ್ತ, ಮತ್ತೊಮ್ಮೆ ಕಸ್ಟಮ್ಸ್ ಆಫೀಸರ್ ಹತ್ತಿರ ಆಯಾಸದ ಹೆಜ್ಜೆ ಹಾಕುತ್ತ ಬರುತ್ತಿದ್ದರು. ಬೇರೆಬೇರೆಯಾಗಿದ್ದವರು ಒಟ್ಟಿನಲ್ಲಿ ಒಂದಾಗಿದ್ದರು. ಕಸ್ಟಮ್ಸ್ ಆಫೀಸರ್ ಒಂದುಗೂಡಿಸಿದ್ದ!


(ನನ್ನ ಫೇಸ್ ಬುಕ್ ಸ್ಟೇಟಸ್ ನಿಂದ ಕಾಪಿ ಮಾಡಿದ್ದು)

Thursday, November 20, 2014

ಭಾಷಣ ಭಗ್ನವಾಗಿದ್ದಕ್ಕೆ ವೇದಿಕೆಯಿಂದಲೇ ಚಿಟಿ ಚಿಟಿ ಚೀರಿದ್ದ ಪಾಪು (ಪಾಟೀಲ್ ಪುಟ್ಟಪ್ಪ)

ಮೊನ್ನೆ ಪಾಟೀಲ್ ಪುಟ್ಟಪ್ಪ ಉರ್ಫ್ ಪಾಪು ಮತ್ತೊಮ್ಮೆ ನೆನಪಾದರು. ತಮ್ಮ ಆತ್ಮಚರಿತೆಯಲ್ಲಿ ದಿವಂಗತ ಶಿವರಾಂ ಕಾರಂತರ ಮದುವೆ ಬಗ್ಗೆ ಏನೋ ಬರೆದರಂತೆ. ಅದು ಕಾರಂತರ ಬೆಂಬಲಿಗರಿಗೆ ಸಹ್ಯವಾಗಲಿಲ್ಲ. ಅದಕ್ಕೇ ಪಾಟೀಲ್ ಪುಟ್ಟಪ್ಪನವರು ಕ್ಷಮೆ ಕೇಳಬೇಕು ಅದು ಇದು ಅಂತ ಏನೋ ಗದ್ದಲ. ಅದೆಲ್ಲ ಬೇರೆ ಬಿಡಿ. ವಿಷಯ ಅದಲ್ಲ. ಪಾಪು ನೆನಪಾಗಲಿಕ್ಕೆ ಒಂದು ಕಾರಣ ಅಷ್ಟೇ.

ಧಾರವಾಡ. ಇಸವೀ ೧೯೮೧. ನಾವು ನಾಲ್ಕನೇ ಕ್ಲಾಸು.  ಒಂಬತ್ತೂ ಚಿಲ್ಲರೆ ವರ್ಷ ವಯಸ್ಸು ಅಷ್ಟೇ. ಅದೇನೋ ನಾಟಕ ಸ್ಪರ್ಧೆ ಇತ್ತು. ನಮ್ಮ ಪ್ರಾಥಮಿಕ ಶಾಲೆಯೂ ಭಾಗವಹಿಸಿತ್ತು. 'ಸತ್ಯ ಹರಿಶ್ಚಂದ್ರ' ಅನ್ನುವ ನಾಟಕ. ಅದು ನಾಟಕವೋ, ರೂಪಕವೋ, ಮೂಕಿ ತರಹದ ಸಿನಿಮಾನೋ ಇದ್ದ ಹಾಗೆ ಇತ್ತು. ಸಂಭಾಷಣೆ ಕಡಿಮೆ. ತೆರೆ ಹಿಂದಿನಿಂದ ಹಾಡುತ್ತಿದ್ದ ಹಾಡಿಗೋ, ಡೈಲಾಗುಗಳಿಗೋ ನಮ್ಮ ಹಾವ ಭಾವ ಇತ್ಯಾದಿ. ಒಂದು ತರಹದ ವಿಭಿನ್ನ ಪ್ರಯೋಗ. ಹಾಗೆ ವಿಭಿನ್ನವಾಗಿತ್ತು ಅಂತಲೇ ಏನೋ ಗೊತ್ತಿಲ್ಲ. ನಮ್ಮ ನಾಟಕಕ್ಕೇ ಪ್ರಥಮ ಬಹುಮಾನ ಬಂದು ಬಿಡಬೇಕೇ! ಸಿಕ್ಕಾಪಟ್ಟೆ ಥ್ರಿಲ್ಲೋ ಥ್ರಿಲ್ಲು. ನಾನೇ ಹರಿಶ್ಚಂದ್ರನ ಪಾತ್ರ ಮಾಡಿದ್ದು. ದೊಡ್ಡ ಪಾತ್ರವೇನೂ ಅಲ್ಲ. ದೊಡ್ಡ ಪಾತ್ರ ಹಿಂದಿಂದ ಹಾಡಿ, ಪಿಟೀಲು ಕೊಯ್ದು, ಅದು ಇದು ಮಾತಾಡುತ್ತಿದ್ದ ಸೂತ್ರಧಾರನದು ಆಗಿತ್ತು. ಆ ಕಾಲದಲ್ಲಿ ಸುನಿಲ್ ಶೆಟ್ಟಿ ಮಾದರಿಯಲ್ಲಿ ತೋತ್ಲಾ, ಹಕ್ಲಾ ಮಾತಾಡುತ್ತಿದ್ದ ನಮಗೆ ಬಹಳ ಸಂಭಾಷಣೆ ಇರುವ ಪಾತ್ರ ಕೊಟ್ಟಿರಲಿಲ್ಲ ಅನ್ನಿ. ಏನೋ 'ಕುರುಡರಲ್ಲಿ ಮೆಳ್ಳಗಣ್ಣು ಇದ್ದವ ಶ್ರೇಷ್ಠ' ಅಂತ ಹೇಳಿ ಆ ಕಾಲದಲ್ಲಿ ಸ್ವಲ್ಪ ಎತ್ತರಕ್ಕೆ, ತೆಳ್ಳಗೆ, ಬೆಳ್ಳಗೆ ಇದ್ದು, ತಕ್ಕ ಮಟ್ಟಿನ ಉದ್ದದ ಹೇರ್ ಸ್ಟೈಲ್ ಮಡಗಿದ್ದ ನಾವು ರಾಜನ ಪಾತ್ರಕ್ಕೆ ಓಕೆ ಅಂತ ಹೇಳಿ ಹರಿಶ್ಚಂದ್ರನ ಪಾತ್ರ ಕೊಟ್ಟಿದ್ದರು ಅಷ್ಟೇ.

ನಾಟಕಕ್ಕೆ ಪ್ರಥಮ ಬಹುಮಾನ ಬಂದಿದ್ದೇ ಬಂದಿದ್ದು ನಮ್ಮ ಗ್ರಹಚಾರ ಶುರುವಾಯಿತು. ಆ ವರ್ಷದ ಮಕ್ಕಳ ದಿನಾಚರಣೆ ದಿನ ಬಹುಮಾನ ಕೊಡುವ ದಿನ ಅಂತ ನಿಕ್ಕಿಯಾಗಿತ್ತು. ಧಾರವಾಡದ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಸಮಾರಂಭ ಇತ್ತು ಅಂತ ನೆನಪು. ಆ ಸಮಾರಂಭದಲ್ಲಿ ಮತ್ತೊಮ್ಮೆ ನಾಟಕ ಮಾಡಬೇಕಂತೆ! ಇದೆಲ್ಲಿ ಕರ್ಮ ಅಂತ ಅನ್ನಿಸಿದರೂ ಏನು ಮಾಡೋದು? ಮಾಸ್ತರು, ಟೀಚರು ಹೇಳಿದಂತೆ ನಾಟಕದ ತಾಲೀಮು ಮುಂದುವರಿಸಿದ್ದೆವು. ಶಾಲೆಗೆ ಪ್ರಥಮ ಬಹುಮಾನ ಬಂದರೂ ನಮಗೇನೂ ಗಿಟ್ಟಿದ ನೆನಪಿಲ್ಲ ಬಿಡಿ. ಮೇಲಿಂದ ಶಾಲೆ ಶುರುವಾಗುವಗಿಂತ ಮೊದಲು, ನಡುವೆ ಸೂಟಿ ಬಿಟ್ಟಾಗ, ಶಾಲೆ ಮುಗಿದ ನಂತರ ನಾಟಕದ ತಾಲೀಮೋ ತಾಲೀಮು. ನಾವೆಲ್ಲ ಬಸ್ಸಿಗೆ ಹೋಗಿ ಬಂದು ಮಾಡುತ್ತಿದ್ದ ದೊಡ್ಡ ಮಂದಿ. ಇವರ ತಾಲೀಮಿನ ಅಬ್ಬರದಲ್ಲಿ ಬಸ್ಸು ತಪ್ಪಿ, ನಡೆದುಕೊಂಡು ಹೋಗಿ ಬಂದು ಮಾಡುವ ತೊಂದರೆ ಎಕ್ಸಟ್ರಾ.

ಅಂತೂ ಇಂತೂ ಆ ವರ್ಷದ ಮಕ್ಕಳ ದಿನಾಚರಣೆ ಬಂತು. ಸಂಜೆ ಸಮಾರಂಭವಿತ್ತು. ಮಧ್ಯಾನ ಮೂರು ಘಂಟೆಗೇ ನಮ್ಮನ್ನು ಅಲ್ಲಿ ಕರೆದುಕೊಂಡು ಹೋಗಿ ಕೂಡಿಸಿ ಬಿಟ್ಟಿದ್ದರು. ಪ್ರಾರಬ್ಧ! ನಾಕು ಘಂಟೆ ಹೊತ್ತಿಗೆಲ್ಲ ಮೇಕ್ಅಪ್ ಮಾಡಿ, ಕಿರೀಟ ಇತ್ಯಾದಿ ಎಕ್ಸಟ್ರಾ ಫಿಟ್ಟಿಂಗ್ ಎಲ್ಲ ಫಿಕ್ಸ್ ಮಾಡಿ, ಉತ್ಸವ ಮೂರ್ತಿ ಮಾಡಿ ಕೂಡಿಸಿಬಿಟ್ಟಿದ್ದರು. ಕರ್ಮ!

ಮಧ್ಯಾನದ ಚಹಾ, ನಾಷ್ಟಾ ಅಂತ ಏನೂ ಸಿಗಲಿಲ್ಲ. ಎಲ್ಲರಿಗೂ ಮಧ್ಯಾನ ಮಾಡಿದ ಊಟ ಎಲ್ಲ ಕರಗಿ, ಸಣ್ಣಗೆ ಹೊಟ್ಟೆ ಚುರುಗುಡಲು ಆರಂಭವಾಗಿತ್ತು. ಹೇಗೂ ಸಂಜೆ ಐದು ಐದೂವರೆಗೆ ಸಮಾರಂಭ ಶುರುವಾಗಿಬಿಡುತ್ತದೆ, ಬೇಗ ನಮ್ಮ ನಾಟಕವೂ ಮುಗಿಯುತ್ತದೆ, ಮುಗಿದ ನಂತರ ಸಮಾರಂಭ ನೋಡಲು ಬರುವ ಪಾಲಕರೊಂದಿಗೆ ಮನೆಗೆ ಓಡಿ, ಮಿಸ್ಸಾದ ನಾಷ್ಟಾ, ರಾತ್ರಿಯ ಊಟ ಎಲ್ಲ ಕೂಡಿಯೇ ಜಡಿದು ಬಿಟ್ಟರಾಯಿತು ಅಂತ ಪ್ಲಾನ್ ಹಾಕಿಕೊಂಡರೆ ಅದು ಫುಲ್ ಚೌಪಟ್ ಆಗುತ್ತದೆ ಅಂತ ಗೊತ್ತಿರಲಿಲ್ಲ.

ನಾವೆಲ್ಲ ಚಿಲ್ಲರ್ ಪಾರ್ಟಿ ಮಕ್ಕಳು ತಯಾರಾಗಿ ಕೂತಿದ್ದೇ ಬಂತು. ಹೇಳಿ ಕೇಳಿ ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್. ಸಮಾರಂಭ ಬರೋಬ್ಬರಿ ಒಂದೋ, ಒಂದೂವರೆ ತಾಸೋ ತಡವಾಗಿ ಶುರುವಾಯಿತು. ನಾಟಕ ನೋಡಲು ಬಂದಿದ್ದ ಪಾಲಕರು ಗ್ರೀನ್ ರೂಮಿಗೆ ಬಂದು, ನಮ್ಮನ್ನು ನೋಡಿಕೊಂಡು ಹೋಗಿ, ಸಭೆಯಲ್ಲಿ ಕೂತು, ಬೋರ್ ಹೊಡೆದು, ಮತ್ತೆ ಬಂದು ಮಾತಾಡಿಸಿ, ಮತ್ತೆ ಹೋಗಿ ಕೂತು, ಮತ್ತೂ ಬೋರ್ ಹೊಡೆಸಿಕೊಂಡು, ಏನೇನೋ ಮಾಡುತ್ತ ಕೂತಿದ್ದರು. ಕೆಲವರು ಎದ್ದು ಹೋಗೇ ಬಿಟ್ಟಿದ್ದರೋ ಏನೋ. ಗೊತ್ತಿಲ್ಲ.

ನಮಗೆಲ್ಲಾ ಅಂತೂ ಕೆಟ್ಟ ಬೋರ್ ಹೊಡೆಯುತ್ತಿತ್ತು. ಅಷ್ಟು ಮಕ್ಕಳನ್ನು ಒಂದು ರೂಮಿನಲ್ಲಿ, ಮೇಕ್ಅಪ್ ಮಾಡಿ, ಕೂಡಿ ಹಾಕಿದರೆ ಅವರು ಏನು ಮಾಡಬೇಕು? ತಮ್ಮ ತಮ್ಮಲ್ಲೇ ಕಿತಾಪತಿ, ಕಿತಬಿ, ಚೂಟೋದು, ಪರಚೋದು, ಜಗಳ ಮಾಡಿಕೊಳ್ಳೋದು ಮಾಡುತ್ತಾರೆ. ನಾವೂ ಅದನ್ನೇ ಸಣ್ಣ ಪ್ರಮಾಣದಲ್ಲಿ ಮಾಡುತ್ತ, ಅಲ್ಲೇ ಠಳಾಯಿಸುತ್ತಿದ್ದ ಮಾಸ್ತರ್, ಟೀಚರ್ ನಿಗರಾಣಿಯಿಂದ ಬಚಾವ್ ಆಗುತ್ತ, ಹೇಗೋ ಟೈಮ್ ಪಾಸ್ ಮಾಡುತ್ತ ಕೂತಿದ್ದೆವು. ಮೇಕ್ಅಪ್ ಮಾಡಿಸಿ ಕೂಡಿಸಿದ್ದ ಮಕ್ಕಳಿಗೆ ಎಂದಿನಂತೆ ಹಿಡಿದು ಬಡಿಯವ ಸೌಲಭ್ಯ ಮಾಸ್ತರುಗಳಿಗೆ ಇರಲಿಲ್ಲ ಅನ್ನುವದು ಗದ್ದಲಾ ಹಾಕಲಿಕ್ಕೆ ಬೋನಸ್. ಮಾಸ್ತರುಗಳು ಜಬರಿಸುತ್ತ, ಸುಮ್ಮನಾಗಿಸುತ್ತ ಅಲ್ಲೇ ತಿರುಗುತ್ತಿದ್ದರು. ಲೇಡಿ ಟೀಚರಗಳು ಇಲ್ಲದ ಹರಟೆ ಹೊಡೆಯುತ್ತ ಕೂತಿದ್ದರು. ಚೇಂಜ್ ಇರಲಿ ಅಂತ ಬಂದ ಪಾಲಕರ ಜೊತೆಗೂ ಹರಟೆ ಹೊಡೆಯುತ್ತಿದ್ದರು.

ಆರು ಘಂಟೆಯಾಯಿತು, ಆರೂವರೆ ಆಯಿತು, ಏಳೂ ಆಯಿತು, ಏಳುವರೆಯೋ ಆಯಿತು ಅಂತೆಲ್ಲ ಆಕಳಿಸುತ್ತ ಕೂತಿದ್ದ ಶಿಕ್ಷಕರು, ಪಾಲಕರು ಹೇಳಿದ್ದಕ್ಕೆ ಗೊತ್ತಾಯಿತು. ತಡ ಮಾಡಿದ್ದೂ ಅಲ್ಲದೆ ಮೇಲಿಂದ ದೊಡ್ಡ ದೊಡ್ಡ ಭಾಷಣ ಹೊಡೆಯುತ್ತ, ಮೇಕ್ಅಪ್ ಮಾಡಿಕೊಂಡು ಆ ಸಣ್ಣ ರೂಮಿನ ಕೆಟ್ಟ ಗರ್ಮಿಯಲ್ಲಿ, ಹಸಿದ ಹೊಟ್ಟೆಯಲ್ಲಿ ಕೂತಿದ್ದ ಮಕ್ಕಳನ್ನು ನರಳಿಸುತ್ತಿದ್ದ ಭಾಷಣಕೋರರಿಗೆ, ಸಮಾರಂಭದ ಆಯೋಜಕರಿಗೆ ಎಲ್ಲರೂ ಶಾಪ ಹೊಡೆಯುತ್ತಿದ್ದರು. ಅವರದ್ದೆಲ್ಲ ಭಾಷಣ ಇತ್ಯಾದಿ ಮುಗಿದ ನಂತರ ನಮ್ಮ ನಾಟಕವಂತೆ! ಹೋಗ್ಗೋ!

ಆ ಸಮಾರಂಭದ ಅತಿಥಿಯೋ, ಅಧ್ಯಕ್ಷರೋ ಆಗಿ ಬಂದಿದ್ದವರು ಇದೇ ಪಾಟೀಲ್ ಪುಟ್ಟಪ್ಪ ಅಂತ ನಂತರ ಗೊತ್ತಾಯಿತು. ಪುಣ್ಯಾತ್ಮರು ದೊಡ್ಡ ಭಾಷಣಕ್ಕೆ ನಿಂತು ಬಿಟ್ಟಿದ್ದರಂತೆ. ಅವರ ಭಾಷಣ ಮುಗಿಯುತ್ತಲೇ ಇರಲಿಲ್ಲ. ಮಕ್ಕಳ ದಿನಾಚರಣೆ ಅಂತ ನೆಹರು ಬಗ್ಗೆ ತೌಡು ಕುಟ್ಟುತ್ತ ಕೂತು ಬಿಟ್ಟಿದ್ದರು ಪಾಪು. ೧೯೫೦ ರ ಟೈಮಿನಲ್ಲೋ ಏನೋ ಅವರು ನೆಹರು ಅವರನ್ನು ಭೆಟ್ಟಿಯಾಗಿದ್ದು, ಮತ್ತೊಂದು ಮಗದೊಂದು ಅಂತೆಲ್ಲ ಮೊಳೆ ಹೊಡೆದರು ಅಂತ ಭಾಷಣ ಕೇಳಿ, ಭೇಜಾ ಫ್ರೈ ಆಗಿ ಬ್ರೈನ್ ಬರ್ಬಾದ ಆಗಿದ್ದ ಅಮ್ಮ ಹೇಳಿದ್ದಳು. ಪಾಪು ಜೋರ್ದಾರ್ ಭಾಷಣಕಾರರು. ವೇದಿಕೆ ಸಿಕ್ಕರೆ ಮತ್ತೇನು? ಕುಟ್ಟಿದ್ದೇ ಕುಟ್ಟಿದ್ದು.

ಇಲ್ಲಿ ನಮ್ಮ ಮಕ್ಕಳ ಹಾಲತ್ ಭಯಂಕರ ಖರಾಬ್ ಆಗುತ್ತಿತ್ತು. ಕೆಟ್ಟ ಹಸಿವೆ. ಎಲ್ಲರೂ, 'ಟೀಚರ್ ಭಾಳ ಹಸಿವಿರಿ,' ಅಂತಲೋ, ಬಂದಿದ್ದ ಪಾಲಕರನ್ನು ಕುರಿತು, 'ಅಪ್ಪಾ, ಅವ್ವಾ ಏನರೆ ತಿನ್ನಲಿಕ್ಕೆ ಕೊಡ್ರಿ,' ಅಂತಲೋ ರಾಗ ಎಳೆಯುತ್ತ ಕೂತಿದ್ದೆವು. ಯಾರು ಎಲ್ಲಿಂದ ಏನು ತಂದು ಕೊಟ್ಟಾರು? ಅದೂ ಫುಲ್ ಮೇಕ್ಅಪ್ ಮಾಡಿಕೊಂಡ ಮಂದಿ ತಿಂದು ಉಂಡು ಕುಡಿದು ಮಾಡಿ, ಮೇಕ್ಅಪ್ ಎಕ್ಕುಟ್ಟಿ ಹೋದರೆ ಏನು ಗತಿ? ತಿಂದು, ಕುಡಿದ ನಂತರ ನಾಟಕದ ಆಯ್ತ ವೇಳ್ಯಾಕ್ಕ ಯಾರರೆ ಕಿರುಬೆರಳು ಎತ್ತಿ ಬಿಟ್ಟರೆ ಏನು ಗತಿ? ಸೂ ಸೂ ಅನ್ನೋ ಮಂಗ್ಯಾ ಸೂಳಿಮಕ್ಕಳು. ಯಾರಾದರೂ ನಂಬರ್ ಟೂ ವತ್ರ ಅಂದರೆ? ಅಧೋಗತಿ. ಇದೆಲ್ಲ ಟೆನ್ಷನ್ ಮಾಸ್ತರ್ ಮಂದಿಗೆ. ಏನೋ ಒಂದು ರೀತಿಯಲ್ಲಿ, ಏನೇನೋ ಚೌಕ್ ಗುಳಿಗಿ ಉಳ್ಳಿಸುತ್ತ (ಸುಳ್ಳು ಹೇಳುತ್ತ), 'ಭಾಷಣ ಮುಗಿದ ಕೂಡಲೇ ನಿಮ್ಮದss ನಾಟಕ. ಹೆಚ್ಚ ಅಂದ್ರ ಒಂದು ಇಪ್ಪತ್ತು ನಿಮಿಷ. ನಂತರ ಎಲ್ಲಾರಿಗೂ ಬಿಟ್ಟು ಬಿಡ್ತೇವಿ. ಅಲ್ಲಿ ತನಕಾ ಹಸಿವಿ ತಡ್ಕೊರೀ. ಹಾಂ. ಓಕೆ?' ಅಂತೆಲ್ಲ ಮಾಸ್ತರ್ ಮಂದಿಯ ಓಳು.

ಈ ಪುಣ್ಯಾತ್ಮರೆಲ್ಲರ ಭಾಷಣ ಯಾವಾಗ ಮುಗಿಯುತ್ತದೆಯೋ ಅಂತ ತಲೆ ಮೇಲೆ ಹಾಕಿದ್ದ ಕಿರೀಟದ ಮೇಲೆ ಕೈ ಹೊತ್ತು ಕೂತಿದ್ದಾಗ ಯಾರೋ ಬಂದರು. ಸಮಾರಂಭದ ಆಯೋಜಕರಲ್ಲಿ ಒಬ್ಬರಿರಬೇಕು. 'ಲಗೂ ಲಗೂ ಕರ್ಕೊಂಡು ಬರ್ರಿ. ನಾಟಕಾ ಮಾಡಿಸಿ ಬಿಡ್ರೀ. ಲಗೂನ ಮುಗಿಸಬೇಕಾ ಮತ್ತ!' ಅಂತ ಗಡಿಬಿಡಿ ಮಾಡಿದರು. ತಡಾ ಆಗಿದ್ದು ಇವರಿಂದ, ನಾವು ಈಗ ಲಗೂ ಲಗೂ ಮುಗಿಸಬೇಕು. ಇದೊಳ್ಳೆ ಮಾತು.

ನಾವೇನೋ ನಾಟಕಾ ಮಾಡಲಿಕ್ಕೆ ಸ್ಟೇಜ್ ಕಡೆ ಹೋದೆವು. ಆದರೆ ಆ ಗ್ರೀನ್ ರೂಂ ಒಳಗೆ ನಡೆದ ವಿಚಿತ್ರ ಘಟನೆಯೊಂದನ್ನ ನಂತರ ಅಮ್ಮ ಹೇಳಿದರು. ನಾಟಕ ನೋಡಲಿಕ್ಕೆ ಅವರೂ ಬಂದಿದ್ದರಲ್ಲ. ಬಾಕಿ ಮಂದಿ ಪಾಲಕರ ಜೊತೆಗೆ, ಮಾಸ್ತರ್ ಟೀಚರ್ ಮಂದಿ ಜೊತೆ ಅವರೂ ಅಲ್ಲಿ ಇಲ್ಲಿ ಹೋಗಿ ಬಂದು ಮಾಡುತ್ತ, ಪರಿಚಿತರೇ ಆಗಿದ್ದ ಎಲ್ಲರೊಂದಿಗೆ ಮಾತಾಡುತ್ತ ಇದ್ದರು.

ಪುಂಖಾನುಪುಂಖವಾಗಿ ನೆಹರು, ಗಾಂಧಿ ಅಂತೆಲ್ಲ ಪುಂಗುತ್ತಿದ್ದ ಪಾಪು ಅವರ ಭಾಷಣ ಹೇಗೆ ನಿಂತಿತು? ಅದೂ ಅಷ್ಟು ಸಡನ್ ಆಗಿ ಹೇಗೆ ನಿಂತಿತು?

ಅಷ್ಟು ದೊಡ್ಡ ಮಹನೀಯರಿಗೆ, 'ಸರ್ರಾ, ನೀವು ಜಡಿಯಾಕ ಶುರು ಮಾಡಿ ಒಂದು ತಾಸು ಆಗಲಿಕ್ಕೆ ಬಂತು. ಕೃಪಾ ಮಾಡಿ ಸ್ವಲ್ಪ ನಿಮ್ಮ ಭಾಷಣ ಮುಗಿಸಿದರ ನಾವು ಮುಂದಿನ ಕಾರ್ಯಕ್ರಮ ಮಾಡಿಕೋತ್ತೇವಿ,' ಅನ್ನುವ ತಾಕತ್ತು, ಹಿಮ್ಮತ್ತು, ಜುರ್ರತ್ತು ಆಯೋಜಕರಲ್ಲಿ ಯಾರಿಗೂ ಇರಲಿಲ್ಲ ಬಿಡ್ರೀ. ಪಾಪು ಹೇಳಿ ಕೇಳಿ ಖತರ್ನಾಕ್ ಪತ್ರಕರ್ತರು. ಮರುದಿವಸ ಅವರ ಪೇಪರ್ ಒಳಗೆ ಬೈದು ಬರೆದು ಬಿಟ್ಟರೇನು ಗತಿ? ಅವರ ಪತ್ರಿಕೆಯಾಗಿದ್ದ 'ಪ್ರಪಂಚ' ಅದೆಷ್ಟು ಕೋಟಿ (!) ಮಂದಿ ಓದ್ತಿದ್ದರೋ ಏನೋ?

ಓವರ್ ಟು ನಮ್ಮ ಅಮ್ಮ ಫಾರ್ ಮುಂದಿನ ಕಥೆ.

ಹೀಗಿದ್ದಾಗ ಒಬ್ಬ ಚಿಕ್ಕ ಹುಡುಗಿ ಸ್ಟೇಜ್ ಮೇಲೆ ಹತ್ತಿ ಬಂದಳು. ಸೀದಾ ಹೋದವಳೇ ಸ್ಟೇಜ್ ಮೇಲೆ ಭಾಷಣ ಕುಟ್ಟುತ್ತಿದ್ದ ಪಾಪು ಅವರ ಕೈಗೇ ಒಂದು ಚೀಟಿ ಕೊಟ್ಟು ಬಿಟ್ಟಳು. ಆ ಚೀಟಿಯಲ್ಲಿ ಬರೆದಿದ್ದನ್ನು ಓದಿದ ಪಾಪು, ಕೆಂಡಾಮಂಡಲರಾಗಿ, ಸಭಿಕರನ್ನು, ಆಯೋಜಕರನ್ನು ಮತ್ತೊಂದು ಹತ್ತು ನಿಮಿಷ ಬೈದರು. 'ರಾಜೇಶ್ ಖನ್ನಾನೋ, ಹೇಮಾ ಮಾಲಿನಿಯೋ ಬಂದು ಇಲ್ಲಿ ಕುಣಿದಿದ್ದರೆ ನೋಡಿಕೋತ್ತ ಕೂಡ್ತಿದ್ದಿರಿ. ನಾನು ಮಾತಾಡಿದ್ದು ಭಾಳ ಆಯಿತು ನಿಮಗೆ. ಅಲ್ಲ? ಈ ದೇಶಕ್ಕೆ ಭವಿಷ್ಯವಿಲ್ಲ. ಏನೂ ಸಾಧ್ಯವಿಲ್ಲ,' ಅದು ಇದು ಅಂತೆಲ್ಲ ಬೈದು, ಭುಸುಗುಡುತ್ತ ಪಾಪು ಕೂತರು. ಆಷ್ಟು ಗರಂ ಆಗಿದ್ದ ಪಾಪುವಿನ ಮುಂದೆ ನಮ್ಮ ನಾಟಕ ಪ್ರದರ್ಶನ ನಡೆಯಿತು. ಇದೆಲ್ಲ ನಮಗೆ ಆಮೇಲೆ ಗೊತ್ತಾಯಿತು.

ಆ ಚಿಕ್ಕ ಹುಡುಗಿ ಕೊಟ್ಟಿದ್ದ ಚೀಟಿಯಲ್ಲಿ ಅಂತಾದ್ದೇನು ಬರೆದಿತ್ತು? ಓದಿದ ಪಾಟೀಲ್ ಪುಟ್ಟಪ್ಪ ಆ ಪರಿ ಗರಂ ಆಗಿ, ಬೈದಾಡಿ, ಚೀರಾಡಿ ಸಡನ್ನಾಗಿ ಭಾಷಣ ಮುಗಿಸುವಂತಾದ್ದು?

'ನಿಮ್ಮ ಭಾಷಣ ಮುಗಿಸಿ. ಮಕ್ಕಳಿಗೆ ತುಂಬ ತಡವಾಗುತ್ತಿದೆ.' ಇಷ್ಟೇ ಇದ್ದಿದ್ದು ಪಾಪುವಿಗೆ ಬಂದಿದ್ದ ಚೀಟಿಯಲ್ಲಿ. ಮೊದಲಿಗೊಂದು 'ದಯವಿಟ್ಟು' ಕೊನೆಗೊಂದು 'ಧನ್ಯವಾದ' ಅಂತ ಇತ್ತೇ? ಗೊತ್ತಿಲ್ಲ.

ಭಾಷಣ ಭಗ್ನವಾಗಿ, ದುರ್ವಾಸನ ಅವತಾರ ತಾಳಿದ್ದ  ಪಾಟೀಲ್ ಪುಟ್ಟಪ್ಪನವರಿಂದ ಆ ಪರಿ ಬೈಸ್ಕೊಂಡು ಮಂಗ್ಯಾ ಆಗಿದ್ದ ಆಯೋಜಕರಲ್ಲಿ ಒಬ್ಬರು ತನಿಖೆಗೆ ಇಳಿದರು. ಚೀಟಿ ಕೊಟ್ಟು ಬಂದಿದ್ದ ಮಗುವನ್ನು ಹಿಡಿದು ಕೇಳಿದರು. ಪಾಪ ಕತ್ತಲೆಯಲ್ಲಿ ಯಾರೋ ಕೊಟ್ಟಿದ್ದರು. ಮಹಿಳೆಯೊಬ್ಬರು ಕೊಟ್ಟಿದ್ದರು ಅಂತಷ್ಟೇ ಆ ಚಿಕ್ಕ ಹುಡುಗಿ ಹೇಳಿದಳು. ಅದಕ್ಕಿಂತ ಜಾಸ್ತಿ ಪಾಪ ಆಕೆಯಿಂದ ಏನೂ ಹೊರಬೀಳಲಿಲ್ಲ. ಚಳಿಗಾಲ ಬೇರೆ. ರಾತ್ರಿ ಕತ್ತಲು ಬೇಗ ಕವಿಯುತ್ತದೆ. ಇಲ್ಲದ ಧೈರ್ಯ ಮಾಡಿ ಪಾಪುವಿಗೆ ಚೀಟಿ ಕಳಿಸಿದ್ದ ಮಹಿಳೆಯ ಚಹರಾಪಟ್ಟಿ ಗೊತ್ತಾಗಲಿಲ್ಲ. ಆ ತನಿಖೆ ಆಸಾಮಿ ಸ್ವಲ್ಪ ಶಾಣ್ಯಾ ಇರಬೇಕು. ಏನೋ ಯೋಚನೆ ಮಾಡಿದ. 'ಮಕ್ಕಳಿಗೆ ತಡವಾಗುತ್ತಿದೆ,' ಅಂತ ಚೀಟಿ ಕಳಿಸಿದ್ದಾರೆ ಅಂದ ಮೇಲೆ ನಮ್ಮ ನಾಟಕಕ್ಕೇ ಸಂಬಂಧಿಸಿದವರೇ ಯಾರೋ ಇರಬೇಕು ಅಂತ ಯೋಚಿಸಿದ. ಯಾಕೆಂದರೆ ಇವರ ಭಾಷಣಗಳ ಅಬ್ಬರಕ್ಕೆ ಬೇರೆ ಎಲ್ಲ ಮಕ್ಕಳು ಎಸ್ಕೇಪ್ ಆಗಿ ಕೇವಲ ಕಳ್ಳನನ್ನಮಕ್ಕಳು (ಉರ್ಫ್ ವಯಸ್ಕರು) ಮಾತ್ರ ಉಳಿದುಕೊಂಡಿದ್ದರು.

ಹೀಗೆಲ್ಲ ಸ್ಕೀಮ್ ಹಾಕಿದ ಆ ತನಿಖೆ ಆಸಾಮಿ ಸೀದಾ ನಮ್ಮ ಗ್ರೀನ್ ರೂಮಿಗೆ ಬಂದ. ಪಾಟೀಲ್ ಪುಟ್ಟಪ್ಪನವರ ಭಾಷಣ ಹಠಾತ್ ಮುಗಿದಿತ್ತು. ನಾವು ಗ್ರೀನ್ ರೂಂ ಬಿಟ್ಟು ಮಾತ್ರ ಹೊರಗೆ ಬಿದ್ದಿದ್ದೆವು. ಪಾಲಕರು ಮತ್ತು ಕೆಲ ಶಿಕ್ಷಕರು ಎಲ್ಲ ಅಲ್ಲೇ ಇದ್ದರು. ಆವಾಗ ನಮ್ಮ ಅಮ್ಮ ಅದು ಎಷ್ಟನೇ ಸಲಕ್ಕೋ ಮತ್ತೊಮ್ಮೆ ಗ್ರೀನ್ ರೂಂ ಕಡೆ ಬಂದಿದ್ದರು. ಭಾಷಣ ಮುಗಿದ ಖುಷಿಯಲ್ಲಿ.

'ಯಾರು ಚೀಟಿ ಕಳಿಸಿದ್ದು? ನಿಮ್ಮಲ್ಲೇ ಯಾರೋ ಕಳಿಸಿರಬೇಕು. ನಾಚಿಗೆ ಬರೋದಿಲ್ಲ? ನಿಮ್ಮಿಂದಾಗಿ ನಮ್ಮ ಮಾನ ಹೋತು. ಬಹಳ ಕೆಟ್ಟ ಕೆಲಸ. ಯಾರು? ಯಾರು ಚೀಟಿ ಕಳಿಸಿದ್ದು ಅಂತ ಹೇಳ್ರೀ!' ಅಂತ ಫುಲ್ ಅವಾಜ್ ಹಾಕಿದ ತನಿಖೆಗೆ ಬಂದಿದ್ದ ಆಯೋಜಕ.

ಅಲ್ಲಿದ್ದ ಯಾರಿಗೂ ಏನೂ ತಲೆ ಬುಡ ಅರ್ಥವಾಗಲಿಲ್ಲ. ಅರ್ಥವಾಗಿದ್ದು ಒಬ್ಬರಿಗೆ ಮಾತ್ರ. ಅವರೇ ಚೀಟಿ ಕಳಿಸಿ, ಭಾಷಣ ನಿಲ್ಲಿಸಿ, ಮಕ್ಕಳನ್ನು ಬಚಾವ್ ಮಾಡಿದವರು. 'ನಾನೇರೀ ಸರಾ. ನಾನೇ ಚೀಟಿ ಕಳಿಸಿದಾಕಿ,' ಅಂತ ಹೇಳೋಕೆ ಅವರಿಗೇನು ಹುಚ್ಚನಾಯಿ ಕಚ್ಚಿತ್ತೆ? ಇಲ್ಲ. ಎಲ್ಲರೂ ಮಳ್ಳ ಮಾರಿ ಮಾಡಿಕೊಂಡು ನಿಂತರು.

ತನಿಖೆಗೆ ಬಂದವ ಚಿಟಿ ಚಿಟಿ ಚೀರಿ, ಚೀಟಿ ಕಳಿಸಿದ್ದಕ್ಕೆ ಸಾಮೂಹಿಕವಾಗಿ ಎಲ್ಲರಿಗೆ ಛೀಮಾರಿ ಹಾಕಿ, ಚೀಟಿ ವಿಷಯ, ಪಾಪು ಭಾಷಣ ನಿಂತ ವಿಷಯ ಎಲ್ಲ ವಿವರಿಸಿ, ಅವನು ಹೋದ ಅಂತಾಯಿತು. ಆವಾಗ ಅಲ್ಲಿದ್ದ ಪಾಲಕರಿಗೆ, ಶಿಕ್ಷಕರಿಗೆ ಎಲ್ಲ ತಿಳಿಯಿತು. ಯಾರೋ ಮಸ್ತ ಕಿತಾಪತಿ ಮಾಡಿ, ಬತ್ತಿ ಇಟ್ಟು, ಭಾಷಣಕಾರರ ಬಾಯಿ ಬಂದು ಮಾಡಿಸಿದ್ದಾರೆ ಅಂತ.

ಪಾಪುವಿಗೇ ಪಾಪಡಿ ತಿನ್ನಿಸಿದವರ್ಯಾರು?????

ಯಾರ ಕಿತಾಪತಿ ಅದು??????

ನಮ್ಮ ಅಮ್ಮ ಸಹಿತ ಅಲ್ಲೇ ಇದ್ದರಲ್ಲ. ತಿಳ್ಕೊಬೇಕು ಅಂತ ಅವರಿಗೂ ಕೆಟ್ಟ ಕುತೂಹಲ. ಯಾರನ್ನು ಕೇಳೋಣ ಅಂತ ಅವರಿಗೆ ಹೊಳೆಯಲಿಲ್ಲ. ಎದುರಿಗೆ ಕಂಡಾಕೆ ಅವರ ಶಾಲೆ, ಕಾಲೇಜ್ ಗೆಳತಿ, ಕ್ಲಾಸ್ಮೇಟ್. ಅವರ ಮಗ ನಮ್ಮ ಕ್ಲಾಸ್ಮೇಟ್. ಅವನೂ ನಾಟಕದಲ್ಲಿ ಇದ್ದವನೇ. ಅದಕ್ಕೇ ಅಲ್ಲಿ ಅವರು, ನಮ್ಮ ಅಮ್ಮ ಎಲ್ಲ ಜಮೆಯಾಗಿದ್ದು.

'ಏ ಇಕಿನ. ಗೊತ್ತದಯೇನಾ ನಿನಗ? ಯಾರು ಅಂತಹ ಚೀಟಿ ಕಳಿಸಿದರು ಅಂತ? ಹಾಂ?' ಅಂತ ನಮ್ಮ ಅಮ್ಮ ಅವರ ಗೆಳತಿಯನ್ನು ಕೇಳಿದರು.

'ನನಗೇನೂ ಗೊತ್ತಿಲ್ಲವಾ. ಯಾರೋ ಏನೋ,' ಅಂದ ಗೆಳತಿ, 'ಏ ಇಕಿನ, ಇಲ್ಲೆ ನೋಡ. ಇವರೇ ಚೀಟಿ ಕಳಿಸಿದವರು!' ಅಂತ ಸಣ್ಣ ದನಿಯಲ್ಲಿ ಹೇಳಿ, ತಮ್ಮನ್ನೇ ತಾವು ತೋರಿಸ್ಕೊಂಡು, ಚೀಟಿ ಕಳಿಸಿದವರ ರಹಸ್ಯ ತುಂಬ selective ಆಗಿ ಹೊರಗೆ ಹಾಕಿದ್ದರು.

'ನಿಂದೇನು ಈ ಕಿತಾಪತಿ? ಭಾಳ ಛೋಲೋ ಕೆಲಸಾ ಮಾಡಿದಿ ಬಿಡು. ನಡಿ ಈಗ ಅಲ್ಲೇ ಹೋಗಿ ಕೂಡೋಣ. ಭಾಷಣಾ ಅಂತೂ ಮುಗಿಸಿ ಒಗದಿ. ನಡಿ ನಡಿ. ನಾಟಕ ನೋಡೋಣ,' ಅನ್ನುವಷ್ಟರಲ್ಲಿ ಇಬ್ಬರೂ ಗೆಳತಿಯರಿಗೆ ತಡೆಯಲಾರದಷ್ಟು ನಗು. ಹೇಳಿ ಕೇಳಿ ಮೊದಲೆಲ್ಲ ಅಂತಾದ್ದೆಲ್ಲ ಕಿತಾಪತಿ ಬೇಕಾದಷ್ಟು ಮಾಡಿದವರೇ ಅಲ್ಲವೇ? ಧಾರವಾಡದಲ್ಲಿನ ನಮ್ಮದೇ ಕಿಡಿಗೇಡಿ ಶಾಲೆಯ ಮಾಜಿ ವಿದ್ಯಾರ್ಥಿನಿಯರು.

'ಏ! ಸಾವಕಾಶ ಮಾತಾಡ ಮಾರಾಳ. ಯಾರರ ಕೇಳಿಸಿಕೊಂಡರೆ ಕಷ್ಟ,' ಅಂತ ಹೇಳಿದ ಗೆಳತಿಯೂ ಸಿಕ್ಕಾಪಟ್ಟೆ ನಕ್ಕಳು.

ಹೀಗೆ ಅನಾಮಧೇಯರಿಂದ ಬಂದಿದ್ದ ಚೀಟಿಯೊಂದು ಪಾಪುವಿನ ಭಯಂಕರ ಭಾಷಣ ಭಗ್ನ ಮಾಡಿ, ನಮ್ಮನ್ನು ಬಚಾವ್ ಮಾಡಿ, ಏನೋ ಒಂದು ತರದಲ್ಲಿ ನಾಟಕ ಮುಗಿಸಿ, ಮೇಕ್ಅಪ್ ಕಳಚಿ, ಆ ದರಿದ್ರ ಜಾಗದಿಂದ ಹೊರಬಿದ್ದಾಗ ರಾತ್ರಿ ಒಂಬತ್ತೂವರೆ ಮೇಲಾಗಿ ಹೋಗಿತ್ತು. ನಮ್ಮನ್ನು ಬಿಟ್ಟರೆ ಬೇರೆ ಯಾವ ಮಕ್ಕಳೂ, ಮಮ್ಮಕ್ಕಳೂ, ಮಿಮ್ಮಕ್ಕಳೂ ಅಲ್ಲಿ ಕಾಣಲಿಲ್ಲ. ಇದ್ದವರೆಲ್ಲ ಕಳ್ಳನನ್ನಮಕ್ಕಳೇ.

ಅದಾದ ಮೇಲೆ ಪಾಪು ಅವರನ್ನು ಎಲ್ಲೂ ನೋಡಿಲ್ಲ ಬಿಡಿ. ಆದರೆ ಪಾಪು ಅಂದಾಕ್ಷಣ ಈ ಘಟನೆ ನೆನಪಾಗುತ್ತದೆ. ಕಿತಾಪತಿ ಮಾಡಿ, ಚೀಟಿ ಕಳಿಸಿ, ಭಾಷಣ ನಿಲ್ಲುವಂತೆ ಮಾಡಿ, ಮಕ್ಕಳನ್ನು ಬಚಾವು ಮಾಡಿದ ಅಮ್ಮನ ಖಾಸ್ ಗೆಳತಿ ನೆನಪಾಗುತ್ತಾರೆ. ಅವರ ಮಗ, ಮಿತ್ರ ನೆನಪಾಗುವದೊಂದೇ ಅಲ್ಲ ಆಗಾಗ ಅಲ್ಲಿ, ಇಲ್ಲಿ ಸಿಗುತ್ತಾನೆ ಕೂಡ. ಬಹಳ ವರ್ಷದ ನಂತರ ಭೇಟಿಯಾದಾಗ ಈ ಘಟನೆ ನೆನಪಿಸಿಕೊಂಡು ನಕ್ಕಿದ್ದೆವು.

ಭಾಷಣ ಭಗ್ನ ಮಾಡಿದ್ದಕ್ಕೆ ಪಾಪು ಅವರ ಕ್ಷಮೆ ಯಾರು ಕೇಳಿದರೋ ಬಿಟ್ಟರೋ ಗೊತ್ತಿಲ್ಲ. ಈಗ ನಾವಂತೂ ಕೇಳುತ್ತೇವೆ. ಆವತ್ತಿನ ಪರಿಸ್ಥಿತಿ ಹಾಗಿತ್ತು. ಇನ್ನೂ ಸ್ವಲ್ಪ ಹೊತ್ತು ಹಾಗೇ ಮುಂದುವರೆದಿದ್ದರೆ ನಮ್ಮ ನಾಟಕದ ಮಕ್ಕಳಲ್ಲಿ ಕೆಲವರಿಗಾದರೂ ತಲೆ ಸುತ್ತು ಬಂದು, ಮತ್ತೊಂದು ಮಗದೊಂದು ಆಗಿ, ದೊಡ್ಡ ಅನಾಹುತವಾಗುವದರಲ್ಲಿ ಸಂಶಯವೇ ಇರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಅಂತಹ ಒಂದು ಬಂಡಾಯಕಾರಿ ನಿರ್ಣಯ ತೆಗೆದುಕೊಳ್ಳಬೇಕಾಯಿತು ಅಂತ ಕಾಣಿಸುತ್ತದೆ. ಪಾಪು ಅವರ ಕ್ಷಮೆಯನ್ನು ಕೇಳುತ್ತೇವೆ. ಹಾಗೆಯೇ ಬಚಾವ್ ಮಾಡಿದ ದೋಸ್ತನ ತಾಯಿಯವರಿಗೂ ಒಂದು ದೊಡ್ಡ ಧನ್ಯವಾದ, ನಮಸ್ಕಾರ.

ಮಕ್ಕಳ ದಿನಾಚರಣೆಯಂದು ದೊಡ್ಡವರಿಂದ ಭಾಷಣ ಇಲ್ಲ ಅಂತ ಒಂದು ಠರಾವು ಪಾಸ್ ಮಾಡಿಬಿಟ್ಟರೆ ಒಳ್ಳೆದೇನೋ!

ಶ್ರೀ ಪಾಟೀಲ್ ಪುಟ್ಟಪ್ಪ ಉರ್ಫ್ ಪಾಪು

Saturday, November 15, 2014

Q & A between Swami Vivekananda & Ramkrishna Paramahansa. WISDOM overloaded!

1. Swami Vivekanand:- I can’t find free time. Life has become hectic.
Ramkrishna Paramahansa:- Activity gets you busy. But productivity gets you free.


2. Swami Vivekanand:- Why has life become complicated now?
Ramkrishna Paramahansa:- Stop analyzing life.. It makes it complicated. Just live it.


3. Swami Vivekanand:- Why are we then constantly unhappy?
Ramkrishna Paramahansa:- Worrying has become your habit. That’s why you are not happy.


4. Swami Vivekanand:- Why do good people always suffer?
Ramkrishna Paramahansa:- Diamond cannot be polished without friction. Gold cannot be purified without fire. Good people go through trials, but don’t suffer.
With that experience their life becomes better, not bitter.


5. Swami Vivekanand:- You mean to say such experience is useful?
Ramkrishna Paramahansa:- Yes. In every term, Experience is a hard teacher. She gives the test first and the lessons .


6. Swami Vivekanand:- Because of so many problems, we don’t know where we are heading…
Ramkrishna Paramahansa:- If you look outside you will not know where you are heading. Look inside. Eyes provide sight. Heart provides the way.


7. Swami Vivekanand:- Does failure hurt more than moving in the right direction?
Ramkrishna Paramahansa:- Success is a measure as decided by others. Satisfaction is a measure as decided by you.


8. Swami Vivekanand:- In tough times, how do you stay motivated?
Ramkrishna Paramahansa:- Always look at how far you have come rather than how far you have to go. Always count your blessing, not what you are missing.


9. Swami Vivekanand:- What surprises you about people?
Ramkrishna Paramahansa:- When they suffer they ask, “why me?” When they prosper, they never ask “Why me?”


10. Swami Vivekanand:- How can I get the best out of life?
Ramkrishna Paramahansa:- Face your past without regret. Handle your present with confidence. Prepare for the future without fear.


11. Swami Vivekanand:- One last question. Sometimes I feel my prayers are not answered.
Ramkrishna Paramahansa:- There are no unanswered prayers. Keep the faith and drop the fear. Life is a mystery to solve, not a problem to resolve. Trust me. Life is wonderful if you know how to live.

(copied from somebody's Facebook status)

Mamta Kulkarni, Vicky Goswami complete saga summarized for the uninitiated


Has the ghost of late music moghul Gulshan Kumar come back to haunt Vicky Goswami, husband of ex-actress Mamta Kulkarni?

It was at the inauguration of Vicky Goswami's brand new hotel in Dubai, in 1997, the plot to bump off Gulshan Kumar was discussed, finalized and supari was given and accepted. Police had interrogated all the Bollywood actors and actresses who had gone to perform at the show organized by Vicky Goswami. That's when the vital clues regarding the conspiracy emerged. Apparently Nadeem (of Nadeem Shravan music duo) did the show free of cost to cover the expenses of the Gulshan Kumar supari. At that time don Abu Salem was named as main accused. After being arrested in Lisbob and extradited to India, Abu Salem dumped all the blame on Anees Ibrahim, D's brother.

Vicky Goswami provided convenient place, pretext and opportunity for all the concerned parties to gather and hatch the plot to kill Gulshan Kumar. So, some bad Karma and unhappy soul of Gulshan Kumar is probably taking its revenge on Goswami, for the second time.

Soon after the killing of Gulshan Kumar, Vicky Goswami shifted his allegiance to Chota Rajan, Dawood's bitterest rival. So, Dawood got him arrested in Dubai and made him spend good 15 years in prison. Mamata, who had become his moll after being friendly with D company men, managed his business in Dubai, mainly real estate and patiently waited for his release. Vikcy's 25 years sentence was reduced to 15 for good conduct and for converting to Islam. Mamta also converted and that was added bonus to release him early.

Around the year 2000, Mamta's career also took nose dive because of her hifi nakhras and underworld connections. She, who was a D company moll, approached rival don Chota Rajan to force producer/ director RK Santoshi take her back into the movie 'China Gate' after he had booted her out. Producer RKS was threatened by Rajan at Mamta's behest and she was back in the movie but she was barely given any prominence. Santoshi had taken his revenge by editing out many of her important scenes.

Bollywood then controlled by D company got annoyed by Mamta's histrionics and her Chota Rajan connection and ejected her from Bollywood for good. Unwritten law was passed and diktat was issued - she was a persona non grata. That was the end of her Bollywood career. So she shifted to Dubai and managed Goswami's business while he rotted in Dubai jails.

After his release, Goswami returned to Kenya where he had connections. Back to the old game of drug trafficking. Some other drug baron of Mozambique got upset by Akasha brothers of Kenya whose bidding Goswami was doing and contacted Dawood and gave supari to take care of Goswami and company. Once again Dawood did take care of the unfinished business and leaked info to authorities. As a result of that Goswami is again behind the bars. This time along with wife, ex-actress Mamta Kulkarni.

Meanwhile nobody was convicted for the murder of Gulshan Kumar. Some were bumped off. Some died of natural causes. Many were acquitted.

So it's left for music baron's ghost to do what it thinks is necessary and it is probably doing just that!

(copied from my Facebook status)

Thursday, November 06, 2014

ಗಾಗಿ ಮತ್ತು ಸೂಪರ್ ಮ್ಯಾನ್ (ಗುಲ್ಜಾರ್ ಹೇಳಿದ ಕಥೆ)

ನಮ್ಮ ಮನೆಯಲ್ಲಿ ಎಲ್ಲೆಡೆ ಸೂಪರ್ ಮ್ಯಾನ್ ಕಾಮಿಕ್ ಪುಸ್ತಕಗಳು ಮತ್ತು ಸೂಪರ್ ಮ್ಯಾನ್ ವೀಡಿಯೊ ಕ್ಯಾಸೆಟ್ಟುಗಳು  ಬಂದು ತುಂಬ ತೊಡಗಿದ್ದವು. ಮೊದಲು ಮಕ್ಕಳ ಕೋಣೆಯಲ್ಲಿ ಮಾತ್ರ ಕಂಡು ಬರುತ್ತಿದ್ದವು. ಈಗ ಅಲ್ಲಿ ಜಾಗ ಸಾಲದೇ, ನಿಧಾನವಾಗಿ ಹೊರಬಿದ್ದು, ನನ್ನ ಪುಸ್ತಕದ ಶೆಲ್ಫ್ ಮೇಲೆ ಸಹಿತ ಜಾಗ ಆಕ್ರಮಿಸತೊಡಗಿದವು. ಇದು ಯಾವ ಮಟ್ಟಕ್ಕೆ ಹೋಯಿತು ಅಂದರೆ ನಾನು ಎಲ್ಲಾದರೂ ನನ್ನ ಒಂದು ಪುಸ್ತಕ ಈಚೆ ತೆಗೆಯಲು ಹೋದರೆ ನಾಲ್ಕಾರು ಸೂಪರ್ ಮ್ಯಾನ್ ಕಾಮಿಕ್ ಪುಸ್ತಕಗಳು, ವೀಡಿಯೊ ಕ್ಯಾಸೆಟ್ಟುಗಳು ಪುತಪುತನೆ ಉದುರಿ ಕೆಳಗೆ ಬೀಳತೊಡಗಿದವು. 'ಇವುಗಳನ್ನು ಏನು ಮಾಡಲಿ?' ಅಂತ ಒಂದು ಕ್ಷಣ ವಿಚಾರ ಬರುತ್ತಿತ್ತು. ಆದರೂ ಮರುಕ್ಷಣ ಬಿದ್ದವನ್ನು ಆರಿಸಿ, ನನ್ನ ಪುಸ್ತಕಗಳ ಮಧ್ಯೆಯೇ ತುರುಕಿ, ನನ್ನ ಕೆಲಸ ನೋಡಿಕೊಂಡು ಹೋಗುತ್ತಿದ್ದೆ.

'ಇವನ್ನು ಯಾಕೆ ರದ್ದಿ ಪೇಪರಿನವನಿಗೆ ಹಾಕಬಾರದು?'  ಅಂತ ಉಮಿಗೆ ಕೇಳಿಯೂ ಇದ್ದೆ.

'ಮಮ್ಮಿ!!!! ನೋ......! ನೋ!' ಅಂತ ಕೂಗುತ್ತ, ಎಲ್ಲಿಂದಲೋ ಹಾರಿ ಬಂದಳು ನನ್ನ ಚಿಕ್ಕ ಮಗಳು ಬುಚ್ಕಿ. ಅವಳ ಕೈಯಲ್ಲಿ ಆಗಲೂ ಒಂದು ಸೂಪರ್ ಮ್ಯಾನ್ ಕಾಮಿಕ್ ಪುಸ್ತಕ ಇತ್ತು. ನನ್ನನ್ನು ದಿಟ್ಟಿಸಿ ನೋಡಿದ ಆಕೆ ಹೇಳಿದಳು, 'ಪಪ್ಪಾ! ಅದು ಹೇಗೆ ಅವನ್ನು ರದ್ದಿಗೆ ಹಾಕುತ್ತೀಯಾ? ಸೂಪರ್ ಮ್ಯಾನ್ ಅಂದರೆ ಸೂಪರ್ ಮ್ಯಾನ್. ಬೇಕಾದರೆ ನಿನ್ನ ಪುಸ್ತಕಗಳನ್ನು ರದ್ದಿಗೆ ಹಾಕಿಕೋ! ಸೂಪರ್ ಮ್ಯಾನ್ ಗೂ ಸ್ವಲ್ಪ ಜಾಗ ಕೊಡಬೇಕಪ್ಪಾ. ಓss.........ಬಂದ್ಬಿಟ್ಟರು ದೊಡ್ಡ, ರದ್ದಿಗೆ ಹಾಕೋಕೆ.'

'ಇದು ಇನ್ನೂ ಶುರುವಾತು ಅಷ್ಟೇ. ಇನ್ನೂ ಒಂದಿಷ್ಟು ವೀಡಿಯೊ ಕ್ಯಾಸೆಟ್ಟುಗಳು ಬರುವದಿವೆ. ಅವಳ ರೂಮಂತೂ ಆಗಲೇ ತುಂಬಿ ತುಳುಕುತ್ತಿದೆ,' ಅಂದ ಉಮಿ ನಗುತ್ತ ಹೊರಟಳು.

'ಒಂದು ಮಾತು ಉಮಿ. ಎಲ್ಲಿಂದ ಬಂದವು ಇವೆಲ್ಲ? ಹಾಂ?' ಅಂತ ಕೇಳಿದೆ.

'ಗಾಗಿ! ಅವಳೇ. ಅವಳೇ ಇವೆಲ್ಲ ತಂದು ಕೊಡುವವಳು,' ಅಂದಳು ಉಮಿ.

ಗಾಗಿ. ನನ್ನ ಮಗಳ ವಯಸ್ಸಿನವಳೇ. ಒಂದೇ ತರಗತಿ ಕೂಡ. ಆದರೆ ಬೇರೆ ಶಾಲೆಗೆ ಹೋಗುತ್ತಿದ್ದಳು. ಸರಾಸರಿ ಅರ್ಧ ದಿವಸ ನಮ್ಮ ಮನೆಯಲ್ಲೇ ಕಳೆಯುತ್ತಿದ್ದಳು. ಉಳಿದರ್ಧ ಅವರ ಮನೆಯಲ್ಲಿ. ಮಿತ್ರರಾದ ಅರುಣಾ ರಾಜೆ ಪಾಟೀಲ ಮತ್ತು ವಿಕಾಸ್ ದೇಸಾಯಿ ದಂಪತಿಗಳ ಪುತ್ರಿ 'ಗಾಗಿ' ಅನ್ನುವ ಆ ಹುಡುಗಿ.

ಗಾಗಿ ಬದುಕಿದ್ದು ಕೇವಲ ಹನ್ನೊಂದೇ ವರ್ಷ.

ದಿನ ಪೂರ್ತಿ ಈ ಮಕ್ಕಳು ಸೂಪರ್ ಮ್ಯಾನ್ ವೀಡಿಯೊ ಕ್ಯಾಸೆಟ್ಟುಗಳನ್ನು ನೋಡುತ್ತಿದ್ದರು. ಇಲ್ಲ ಸೂಪರ್ ಮ್ಯಾನ್ ಕಾಮಿಕ್ಸ್ ಓದುತ್ತಿದ್ದರು. ನಾನೇನಾದರೂ ಆಕ್ಷೇಪಿಸಿದರೆ ತಮ್ಮ ತಮ್ಮ ಪ್ರೋಗ್ರೆಸ್ ಕಾರ್ಡ್ ರಪ್ ಅಂತ ಮುಖಕ್ಕೆ ಹಿಡಿಯುತ್ತಿದ್ದರು ಈ ಮಕ್ಕಳು. ಎಲ್ಲ ವಿಷಯಗಳಲ್ಲೂ ಯಾವಾಗಲೂ ಸೀದಾ A ಗ್ರೇಡನ್ನೇ ಪಡೆಯುತ್ತಿದ್ದ ಮಕ್ಕಳಿಗೆ ನಾವಾದರೂ ಏನಂತ ಹೇಳೋಣ? ಈ ಮಕ್ಕಳು ಓದುವದರಲ್ಲಿ ಮಾತ್ರವಲ್ಲ ಎಲ್ಲ ಚಟುವಟಿಕೆಗಳಲ್ಲೂ ಮುಂದಿದ್ದರು.

ಒಂದು ದಿನ ನನಗೆ ಈ ಮಕ್ಕಳು, ಅವರ ಸೂಪರ್ ಮ್ಯಾನ್ ಹುಚ್ಚಿನಿಂದ ಸಾಕಾಗಿ ಹೋಯಿತು. ಸಹನೆ ಕಳೆದುಕೊಂಡು ಸಿಕ್ಕಾಪಟ್ಟೆ ರೇಗಿ ಬಿಟ್ಟೆ.

'ಅಂಕಲ್! ಸೂಪರ್ ಮ್ಯಾನ್ ಅಂದರೆ ದೇವರು ಇದ್ದ ಹಾಗೆ. ಅವನು ಏನು ಬೇಕಾದರೂ ಮಾಡಬಲ್ಲ, ದೇವರ ಹಾಗೆ. ಗೊತ್ತೇನು!?' ಅಂದು, ರಪ್ ಅಂತ ತಿರುಗಿ ಉತ್ತರಿಸಿದ್ದ ಗಾಗಿ ನನ್ನ ಬಾಯಿ ಮುಚ್ಚಿಸಿದ್ದಳು. ಭಯಂಕರ ಚುರುಕು ಹುಡುಗಿ ಅವಳು.

ಗಾಗಿಗೆ ಕೇವಲ ಒಂಬತ್ತು ವರ್ಷ ವಯಸ್ಸಾಗಿತ್ತು. ಆಗ ಅವಳಿಗೆ ಕ್ಯಾನ್ಸರ್ ಅಂತ ಗೊತ್ತಾಯಿತು. ಮೂಳೆ ಕ್ಯಾನ್ಸರ್. ಅಂದಿನಿಂದ ಅವಳ ಗೆಳತಿಯರಾದ ಪುಗ್ಗಿ ಮತ್ತು ಬುಚ್ಕಿಯರ ಪರಿಸ್ಥಿತಿ ಪಾಪ. ಪುಗ್ಗಿ, ಅಂದರೆ ಬಸು ಭಟ್ಟಾಚಾರ್ಯನ ಮಗಳು. ನಾನು, ವಿಕಾಸ್, ಬಸು ಮೂವರೂ ಚಿತ್ರರಂಗದವರಾಗಿದ್ದರಿಂದ ನಮ್ಮ ಮಕ್ಕಳು ಸಹ ಫ್ರೆಂಡ್ಸ್. ನಮ್ಮ ಮೂವರಲ್ಲಿ ಒಬ್ಬರ ಮನೆಯಲ್ಲಿ ಮೂರೂ ಮಕ್ಕಳ ಠಿಕಾಣಿ. ಮತ್ತೆ ನಮ್ಮ ಮನೆ ಸ್ವಲ್ಪ ದೊಡ್ಡದಿದ್ದು, ಇಂಡಿಪೆಂಡೆಂಟ್ ಇದ್ದಿದ್ದರಿಂದ ನಮ್ಮ ಮನೆ ಆ ಮಕ್ಕಳಿಗೆ ಆಡುವ ಮೈದಾನವಾಗಿ ಬಿಟ್ಟಿತ್ತು.

ಒಮ್ಮೆ ನಾವೆಲ್ಲ ಕೂಡಿ ಬೆಂಗಳೂರಿಗೆ ಹೋಗಿದ್ದೆವು. ಗಾಗಿಯ ಅಪ್ಪ ವಿಕಾಸನಿಗೆ ಈಜು ಅಂದರೆ ತುಂಬ ಇಷ್ಟ. ಅವನು ತನ್ನ ಫ್ರೀ ಟೈಮ್ ಎಲ್ಲ ಈಜುಕೊಳದಲ್ಲಿಯೇ ಕಳೆಯುತ್ತಿದ್ದ. ಮಕ್ಕಳಿಗೂ ಈಜು ಕಲಿಸುತ್ತಿದ್ದ.

ವಿಕಾಸ್ ಸ್ವಲ್ಪ ಧಪ್ಪಗಿದ್ದ. 'ಪಪ್ಪಾ, ಇಷ್ಟು ಧಪ್ಪಗಿದ್ದೀಯ. ಅದು ಹೇಗೆ ನೀನು ನೀರಲ್ಲಿ ಮುಳುಗಿ ಹೊಗೋದಿಲ್ಲ? ಹಾಂ?' ಅಂತ ಗಾಗಿಯ ಪ್ರಶ್ನೆ.

'ನೀರು ತುಂಬ ಶಕ್ತಿಶಾಲಿಯಾಗಿದೆ, ಕಂದಾ. ದೊಡ್ಡ ದೊಡ್ಡ ಹಡಗುಗಳನ್ನೂ ಸಹ ಅದು ಎತ್ತಿ ಹಿಡಿಯಬಲ್ಲದು. ಗೊತ್ತಾ?' ಅಂತ ಅಪ್ಪ ವಿಕಾಸನ ವಿವರಣೆ.

'ಹಾಗಿದ್ರೆ ನೀರಲ್ಲಿ ಹಾಕಿದರೆ ನನ್ನ ರಿಸ್ಟ್ ವಾಚ್ ಯಾಕೆ ಮುಳುಗಿಹೋಗುತ್ತದೆ!?' ಅಂತ ಗಾಗಿಯ ಭಯಂಕರ ಮರುಪ್ರಶ್ನೆ.

ಇದಕ್ಕೆ ವಿಕಾಸನ ಹತ್ತಿರ ಉತ್ತರವಿರಲಿಲ್ಲ. ಅವನು ಪತ್ನಿ ಅರುಣಾಳತ್ತ ನೋಡಿದ. ಆಕೆ ಬಿದ್ದು ಬಿದ್ದು ನಕ್ಕು ಬಿಟ್ಟಳು. ಮಕ್ಕಳೆಲ್ಲರ ಮುಂದೆ ಅಪಮಾನವಾದಂತಾಗಿ ಮಳ್ಳ ಮುಖ ಮಾಡಿದ ವಿಕಾಸ್.

ಆವತ್ತು ಕಾಲು ನೋವು ಅಂತ ಗಾಗಿ ಯಾಕೋ ಸ್ವಲ್ಪ ಕುಂಟುತ್ತಿದ್ದಳು. ಮುಂದಾಗಲಿರುವ ಭಯಾನಕ ದುರಂತಕ್ಕೆ ಅದು ಸೂಚನೆಯಾಗಿತ್ತು.

ಮುಂದೆ ಗಾಗಿಗೆ ಓಡಾಡಲು ತುಂಬ ತೊಂದರೆಯಾಗತೊಡಗಿತು. ಚಿಕಿತ್ಸೆ ಆರಂಭವಾಯಿತು. ಬೇರೆ ಬೇರೆ ತರಹದ ವಿಶೇಷ ಪಾದರಕ್ಷೆಗಳನ್ನು ಮಾಡಿಸಿ, ಹಾಕಿಸಿ, ನೋಡಲಾಯಿತು. ಆದರೆ ಆಕೆಯ ಕಾಲುಗಳಲ್ಲಿಯ ನೋವು ಮಾತ್ರ ಏನೂ ಮಾಡಿದರೂ ಕಮ್ಮಿಯಾಗಲಿಲ್ಲ. ಅವಳಿಗೆ ಕಥಕ್ ನೃತ್ಯ ಕಲಿಯುವದೆಂದರೆ ತುಂಬ ಇಷ್ಟ. ಕಾಲು ನೋವಿಗೆ ಮೊದಲ ಬಲಿಯೇ ಕಥಕ್. ನೃತ್ಯ  ಮಾಡುವದನ್ನು ಬಿಟ್ಟರೂ ಗಾಗಿ ನೃತ್ಯದ ಸಂಗೀತವನ್ನು ಬಾಯಲ್ಲೇ ಸದಾ ಗುಣುಗುಣಿಸುತ್ತಲೇ ಇರುತ್ತಿದ್ದಳು. ಹೋದಲ್ಲಿ, ಬಂದಲ್ಲಿ, 'ಥಕ ಥೈ, ಥಕ ಥೈ'

ಗಾಗಿಯ ರಕ್ತದಲ್ಲಿ ಸಂಗೀತವಿತ್ತು. ಅವಳ ತಂದೆ ವಿಕಾಸ್ ದೇಸಾಯಿಯ ಚಿಕ್ಕಪ್ಪ ವಸಂತ್ ದೇಸಾಯಿ ಹಿಂದಿ ಚಿತ್ರರಂಗದ ದೊಡ್ಡ ಸಂಗೀತ ನಿರ್ದೇಶಕರರಾಗಿದ್ದರು. ಗಾಗಿಯ ಕಾಲುಗಳಲ್ಲಿ ನೋವು ಪದೇ ಪದೇ ನಿರಂತರವಾಗಿ ಬರತೊಡಗಿತು. ಶಾಲೆ ತಪ್ಪುವದು ಜಾಸ್ತಿಯಾಯಿತು. ಶಾಲೆಗಿಂತ ಆಕೆ ಹೆಚ್ಚಾಗಿ ಮಿಸ್ ಮಾಡಿಕೊಂಡಿದ್ದು ಆಕೆಯ ಕಥಕ್ ನೃತ್ಯದ ಕ್ಲಾಸುಗಳನ್ನು. ಆಕೆಯ ತಾಯಿ ಅರುಣಾ ಖಾಸಗಿಯಾಗಿ ಮನೆ ಪಾಠಕ್ಕೆ ಅಂತ ಕಥಕ್ ನೃತ್ಯ ಗುರುವೊಬ್ಬರನ್ನು ನೇಮಕ ಮಾಡಿದಳು. ಅದೇನೇ ಮಾಡಿದರೂ ಗಾಗಿ ನೃತ್ಯದ ಗೆಜ್ಜೆ ಕಟ್ಟಿಕೊಂಡು, ವೇಷ ಭೂಷಣ ಧರಿಸಿ, ಮನೆತುಂಬ ನಡೆದಾಡಲು ಮಾತ್ರ ಶಕ್ಯಳಾದಳು. ಕಾಲು ನೋವಿನ ಕಾರಣ ಮುಂದೆಂದೂ ಆಕೆ ನೃತ್ಯ ಮಾಡಲೇ ಇಲ್ಲ.  ಅದೇ ಆಕೆಯ ಕೊರಗು.

ಗಾಗಿಯನ್ನು ಗಮನಿಸುತ್ತಿದ್ದ ಡಾ. ಅಧಿಕಾರಿಗೆ ಬೇರೆ ಏನೋ ವಿಚಾರ ಬಂತು. ನೋವು ಕಾಲಲ್ಲಿದ್ದರೂ ಮೂಲ ಬೇರೆ ಎಲ್ಲೋ ಇರಬೇಕು ಅನ್ನಿಸಿತು. ಮೊಣಕಾಲಿನ ಕೆಳಗಿನ ಮೂಳೆಯ ನೆಣದಲ್ಲಿ ಏನಾದರೂ ಹೆಚ್ಚು ಕಮ್ಮಿಯಾಗಿ ನೋವು ಬರುತ್ತಿರಬಹುದೇ? ಅಂತ ಒಂದು ಊಹೆ ಅವರದು. ಎಕ್ಸ್-ರೇ ನಲ್ಲಿ ಏನೂ ನಿಖರವಾಗಿ ತಿಳಿದು ಬರಲಿಲ್ಲ. ಹಾಗಾಗಿ ಹೆಚ್ಚಿನ ಬೇರೆ ಬೇರೆ ಪರೀಕ್ಷೆ ಮಾಡಬೇಕಾಯಿತು. ಈಗ ವಿಕಾಸ್ ತನ್ನ ಮನೆ ಬಿಟ್ಟು, ಚಿಕ್ಕಪ್ಪ ವಸಂತ್ ದೇಸಾಯಿ ಅವರ ಮನೆಗೆ ಶಿಫ್ಟ್ ಮಾಡಿದ. ಅವರ ಮನೆ ಜಸಲೋಕ್ ಆಸ್ಪತ್ರೆಯ ಎದುರೇ ಇದ್ದಿದ್ದರಿಂದ ಅದು ಗಾಗಿಯ ವೈದ್ಯಕೀಯ ಅಗತ್ಯತೆಗಳಿಗೆ ಅನುಕೂಲಕರವಾಗಿತ್ತು.

ಡಾ. ಅಧಿಕಾರಿಗೆ ಗಾಗಿಯ ಪರಿಸ್ಥಿತಿ ಬಗ್ಗೆ ಒಂದು ಪಕ್ಕಾ ಐಡಿಯಾ ಬಂದು ಬಿಟ್ಟಿತ್ತು. ಆದರೂ ಇನ್ನೂ ಒಂದಿಷ್ಟು ಟೆಸ್ಟ್ ಮಾಡಿಬಿಡೋಣ ಅಂತ ಅಂದುಕೊಂಡರು. ತಾವು ಮಾಡಿದ diagnosis ತಪ್ಪೇ ಆಗಿರಲಿ ಅಂತ ಅವರೇ ಆಶಿಸುತ್ತಿದ್ದರು. ಆದರೆ ಒಂದು ದಿವಸ ಗಾಗಿಯ ಮೆಡಿಕಲ್ ರಿಪೋರ್ಟ್ ಗಳನ್ನು ಗಾಗಿಯ ಪಾಲಕರಾದ ಅರುಣಾ ಮತ್ತು ವಿಕಾಸರ ಮುಂದೆ ಇಡಲೇ ಬೇಕಾಯಿತು. ಇಟ್ಟರು. ಹೇಳಿದರು, ಕ್ಯಾನ್ಸರ್ ಇದೆ, ಅಂತ.

ಗಾಗಿ ಡಾಕ್ಟರ ಚೇಂಬರ್ ಹೊರಗೆ ಕೂತಿದ್ದಳು. ಒಳಗೆ ಹೋಗಿ, ವೈದ್ಯರು ಹೇಳಿದ್ದನ್ನು ಕೇಳಿದ ಅರುಣಾ, ವಿಕಾಸ್ ದೊಡ್ಡ ಶಾಕ್ ಆಗಿ, ದಂಗು ಹೊಡೆದು ಕೂತರು. ಈಗ ಯಾವದೇ ಸಂಶಯವಿರಲಿಲ್ಲ. ಗಾಗಿಗೆ ಕ್ಯಾನ್ಸರ್ ಇರುವದು ಪಕ್ಕಾ ಆಗಿಹೋಗಿತ್ತು. ಡಾಕ್ಟರ್ ಚೇಂಬರ್ ಬಿಡುವ ಮೊದಲು ದಂಪತಿ ಪರಸ್ಪರ ಆಣೆ ಹಾಕಿ, ಮಾತಾಡಿಕೊಂಡರು, 'ಗಾಗಿಯ ಮುಂದೆ ಮಾತ್ರ ಕ್ಯಾನ್ಸರ್ ಇರುವ ವಿಷಯ ಎಂದೂ ಹೇಳುವದಿಲ್ಲ,' ಅಂತ. ಬಹಳ ಧೈರ್ಯದಿಂದಲೇ ಅಂತಹ ದುಸ್ತರ ಪರಿಸ್ಥಿತಿಯನ್ನು ಎದುರಿಸಿದರು ಅವರು. ಗಾಗಿಯ ಮುಂದೆ, ಒಂದೇ ಒಂದು ಸಲ, ಒಂದೇ ಒಂದು ಹನಿ ಕಣ್ಣೀರು ಹಾಕಿದ್ದನ್ನು ನಾವ್ಯಾರೂ ನೋಡಿಲ್ಲ. ತಾವಿಬ್ಬರೇ ಗಂಡ ಹೆಂಡತಿ ಇದ್ದಾಗ ಅದೆಷ್ಟು ನೊಂದುಕೊಂಡರೋ, ಅದೆಷ್ಟು ರೋದಿಸಿದರೋ, ಪಾಪ ಆ ದಂಪತಿ.

ತರಹ ತರಹದ ಆಟಿಕೆಗಳು, ವೀಡಿಯೊ ಗೇಮ್ ಗಳು, ವೀಡಿಯೊ ಕ್ಯಾಸೆಟ್ಟುಗಳು, ಇತ್ಯಾದಿಗಳು ಬಂದು ಬಂದು ಗಾಗಿಯ ಕೋಣೆ ತುಂಬ ತೊಡಗಿದವು. ನೆಂಟರು, ಇಷ್ಟರು, ಹಳೇ ಗೆಳತಿಯರು ಸದಾ ಬಂದು ಗಾಗಿ ಜೊತೆ ಸಮಯ ಕಳೆಯತೊಡಗಿದರು. ಇದರಿಂದಾಗಿ ಕೆಲವೇ ದಿನಗಳಲ್ಲಿ ಗಾಗಿ ಅಂತಾಕ್ಷರಿ ಆಡುವದರಲ್ಲಿ ನಿಪುಣೆಯಾಗಿ ಬಿಟ್ಟಳು. ತನ್ನ ಕಾಯಿಲೆ ಬಗ್ಗೆ ತಲೆಕೆಡಿಸಿಕೊಂಡು ಕೂಡಲು ಗಾಗಿಯ ಬಳಿ ಒಂದು ಕ್ಷಣವಿರುತ್ತಿರಲಿಲ್ಲ. ಭರಿಸಲು ಅಸಾಧ್ಯ ಅನ್ನುವಂತಹ ಆಸ್ಪತ್ರೆಯ ವಾತಾವರಣವನ್ನು ಗಾಗಿಯ ಕೋಣೆಗೆ ಒಳಗೆ ಒಂದು ಸ್ವಲ್ಪವೂ ಬಿಟ್ಟುಕೊಂಡಿರಲಿಲ್ಲ ಗಾಗಿಯ ತಂದೆ ತಾಯಿ.

ಯಾವಾಗ ಔಷಧಗಳು ಕೆಲಸ ಮಾಡುವದನ್ನು ನಿಲ್ಲಿಸಿದವೋ ಆವಾಗ ಬೇರೆ ನಿರ್ವಾಹವಿಲ್ಲದೆ ಗಾಗಿಯ ಕಾಲನ್ನು ಕತ್ತರಿಸಿಬೇಕೆಂದು ವೈದ್ಯರು ಹೇಳಿದರು . ಆವಾಗ ಅರುಣಾ ಮತ್ತು ವಿಕಾಸ್ ಗಾಗಿಯನ್ನು ಅಮೇರಿಕಾಗೆ ಕರೆದುಕೊಂಡು ಹೋದರು. ಆವಾಗ ಗಾಗಿಗೂ ಗೊತ್ತಾಗಿ ಹೋಯಿತು, 'ತನಗೆ ಕ್ಯಾನ್ಸರ್ ಇದೆ,' ಅಂತ.

'ಆದರೆ ಕಾಲಿನಲ್ಲಿ ಯಾಕೆ ಕ್ಯಾನ್ಸರ್ ಪಪ್ಪಾ?' ಅಂತ ಗಾಗಿಯ ಪ್ರಶ್ನೆ.

'ಅದು ಮೂಳೆಯ ಕ್ಯಾನ್ಸರ್ ಕಂದಾ. ಕಾಲಿನ ಮೂಳೆಯಲ್ಲಿದೆ. ಇಲ್ಲಿನ ಅಮೇರಿಕಾ ಡಾಕ್ಟರಗಳು ಕಾಲ ಮೂಳೆಯನ್ನು ಆಪರೇಷನ್ ಮಾಡಿ, ಮೂಳೆಯನ್ನು ಕೆರೆದು, ಸ್ವಚ್ಛ ಮಾಡಿ, ಕ್ಯಾನ್ಸರ್ ಬೇರೆ ಕಡೆ ಹರಡದಂತೆ ಮಾಡುತ್ತಾರೆ,' ಅಂತ ಹೇಳಿದ ಅಪ್ಪ ವಿಕಾಸ್.

ಅಮೇರಿಕಾದಲ್ಲಿ ಗಾಗಿಯ ಚಿಕಿತ್ಸೆ ಸುಮಾರು ತಿಂಗಳುಗಳ ಕಾಲ ನಡೆಯಿತು. ಕೆಮೋಥೆರಪಿಯಿಂದಾಗಿ ಆಕೆಯ ತಲೆ ಮೇಲಿನ ಕೂದಲೆಲ್ಲ ಉದುರಿ ಹೋದವು. ಆಕೆಗೆ ತನ್ನ ಬೋಳು ತಲೆ ನೋಡುವದು, ಮುಟ್ಟಿಕೊಳ್ಳುವದು ಅಂದರೆ ಒಂದು ತರಹ ಆತಂಕ, ಹೆದರಿಕೆ. ಅರುಣಾ, ವಿಕಾಸ್ ಆಕೆಯ ಹೆದರಿಕೆಗಳನ್ನು, ಆತಂಕಗಳನ್ನು ನಕ್ಕು ಹಾರಿಸಿಬಿಡಲು ಯತ್ನ ಮಾಡಿದರು.

'ಏ, ಗಾಗಿ, ಬೋಡಿ ಸುಂದರಿ, ಏನೂ ಹೆದರಬೇಡ. ಇನ್ನು ಕೆಲವೇ ಕೆಲವು ತಿಂಗಳಲ್ಲಿ ನಿನ್ನ ಕೂದಲು ಮತ್ತೆ ಬರುತ್ತವೆ. ಚಿಂತೆ ಬೇಡ,' ಅಂತ ಏನೋ ಭರವಸೆ ಕೊಡುತ್ತಿದ್ದ ಪಾಲಕರು, 'ಮತ್ತೆ ನಮಗೆ ನಿನ್ನ ಇದೇ ಬೋಡಿ ಲುಕ್ ತುಂಬ ಇಷ್ಟ. ಈಗ ಇದೇ ಫ್ಯಾಷನ್. ಈಗೆಲ್ಲ ಇದೇ ಟ್ರೆಂಡ್. ಗೊತ್ತಿಲ್ಲವೇ ನಿನಗೆ ಪುಟ್ಟೀ?' ಅಂತ ಏನೇನೋ ಪೂಸಿ ಹೊಡೆಯುತ್ತಿದ್ದರು.

'ಹಾ! ಹಾ! ನಟ ಯೂಲ್ ಬ್ರೈನೆರ್ ತರಹಾನೇ? ಅವನೇ ತಾನೇ ಬೋಡಾ?' ಅಂತ ಗಾಗಿ ನಕ್ಕು ಕೇಳುತ್ತಿದ್ದಳು.

ನನಗನಿಸುವ ಹಾಗೆ ಗಾಗಿಗೆ ಆಕೆಯ ಪಾಲಕರಲ್ಲಿ ಪೂರ್ತಿ ವಿಶ್ವಾಸವಿತ್ತು. ಅವರು ಕೊಡುತ್ತಿದ್ದ ಅಶ್ವಾಸನೆಯಂತೆ ತಾನು ಬೇಗನೆ ಗುಣಮುಖಳಾಗುತ್ತೇನೆ ಅಂತ ತಿಳಿದುಕೊಂಡಿದ್ದಳು ಆಕೆ. ಮತ್ತೆ ಅಮೇರಿಕಾದಲ್ಲಿ ಡಾಕ್ಟರಗಳು ಆಪರೇಷನ್ ಮಾಡಿ, ಕಾಲು ಕತ್ತರಿಸದೇ, ಬ್ಯಾಂಡೇಜ್ ಕಟ್ಟಿ, ನಕ್ಕಾಗ ಆಕೆಯ ವಿಶ್ವಾಸ ದುಪ್ಪಟ್ಟಾಗಿತ್ತು.

ಆದರೆ ಅಮೇರಿಕಾದಿಂದ ಬಂದ ಕೆಲವೇ ದಿನಗಳಲ್ಲಿ ಆಕೆಯ ಕಾಲು ಕೊಳೆಯಲು ಆರಂಭಿಸಿ ಬಿಟ್ಟಿತು. ಸಿಕ್ಕಾಪಟ್ಟೆ ನೋವಿನಲ್ಲಿದ್ದಳು. ಈ ಸಲ ಮೊದಲಿನ ಡಾಕ್ಟರ್ ಬಿಟ್ಟು ಬೇರೆ ಯಾರೋ ಡಾಕ್ಟರನ್ನು ನೋಡಿದರು. ಹೊಸ ಡಾಕ್ಟರ್ ಆಕೆಯ ಕಾಲಿನ ಬ್ಯಾಂಡೇಜ್ ಕತ್ತರಿಸಿ, ತೆಗೆಸಿ ನೋಡಿದ. ಕಾಲು ಕೀವಿನಿಂದ ತುಂಬಿ ಹೋಗಿತ್ತು. ಯಾಕೋ ಈಗ ಹೊಸ ಡಾಕ್ಟರ ಮತ್ತು ತಂಡಕ್ಕೆ ಇದು ಕ್ಯಾನ್ಸರ್ ಇರಲಿಕ್ಕಿಲ್ಲ ಅನ್ನಿಸತೊಡಗಿತು. ಆದರೆ ಯಾವ ಟ್ರೀಟ್ಮೆಂಟಗಳೂ ಕೆಲಸ ಮಾಡುತ್ತಿರಲಿಲ್ಲ. ಡಾಕ್ಟರಗಳು, ಔಷದಗಳು ಬದಲಾಗುತ್ತವೇ ಹೋದವು. ಪರಿಣಾಮ ಮಾತ್ರ ನಾಸ್ತಿ. ಎಲ್ಲಾದರೂ ಇಡೀ ದೇಹಕ್ಕೇ ಸೋಂಕು ಹರಡಿ ಬಿಟ್ಟೀತು ಅಂತ ಹೆದರಿಕೆಯಲ್ಲಿ ಡಾಕ್ಟರಗಳು ಆಕೆಯ ಕಾಲು ಕತ್ತರಿಸಿದರು. ಕತ್ತರಿಸಿದ ಕಾಲನ್ನು ವಿದ್ಯುತ್ ಚಿತಾಗಾರದಲ್ಲಿ ಸುಟ್ಟು, ಮೃತರಿಗೆ ಮಾಡುವ ಸಂಸ್ಕಾರ ಎಲ್ಲವನ್ನೂ ಸರಿಯಾಗಿ ಮಾಡಲಾಯಿತು.

ಒಂದು ದಿನ ಮಲಗಿದ್ದಾಗ, ಛಾವಣಿ ನೋಡುತ್ತ, ತಣ್ಣನೆಯ ದನಿಯಲ್ಲಿ ಗಾಗಿ ಕೇಳಿದಳು, 'ಪಪ್ಪಾ, ದೇವರು ನನಗೇಕೆ ಹೀಗೆ ಶಿಕ್ಷೆ ಕೊಡುತ್ತಿದ್ದಾನೆ? ನಾನ್ಯಾವ ತಪ್ಪೂ ಮಾಡಿಲ್ಲ.'

ತಾಯಿ ಅರುಣಾ ಗಾಗಿಯ ಕೋಣೆಯಲ್ಲಿ ಕೃಷ್ಣನ ಒಂದು ಚಿಕ್ಕ ಮೂರ್ತಿ ತಂದಿಟ್ಟಿದ್ದಳು. ಮೂರ್ತಿಯ ಮುಂದೆ ಹಗಲೂ ರಾತ್ರಿ ನಿರಂತರವಾಗಿ ದೀಪ ಉರಿಯುತ್ತಿತ್ತು. ವ್ರತದ ರೀತಿಯಲ್ಲಿ ಅರುಣಾ, ವಿಕಾಸ್ ಮೀನು ಮಾಂಸ ತಿನ್ನುವದನ್ನು ಬಿಟ್ಟಿದ್ದರು. ಆದರೆ ಗಾಗಿ ಆಕೆಗೆ ತುಂಬ ಇಷ್ಟವಾಗುತ್ತಿದ್ದ ಕಬಾಬ್, ಟಿಕ್ಕಾ ಕೇಳಿದರೆ ಮಾತ್ರ ಎಂದೂ ಇಲ್ಲ ಎನ್ನುತ್ತಿರಲಿಲ್ಲ. ಇದಕ್ಕೆ ಡಾಕ್ಟರುಗಳ ಅನುಮತಿ ತೆಗೆದುಕೊಂಡಿದ್ದರು.

ಒಂದು ದಿನ ಗಾಗಿಯ ಕೋಣೆಗೆ ಮತ್ತೂ ಒಬ್ಬ ಹೊಸ ಡಾಕ್ಟರ್ ಎಂಟ್ರಿ ಕೊಟ್ಟ. ಅದೆಷ್ಟು ಡಾಕ್ಟರಗಳನ್ನು ನೋಡಿದ್ದಳೋ ಆಕೆ.

'ಪಪ್ಪಾ, ಮತ್ತೆ ಡಾಕ್ಟರ್ ಬದಲು ಮಾಡಿದೆಯಾ?' ಅಂತ ಕೇಳಿದಳು.

'ಹೌದು ಮಗೂ, ಮೊದಲಿನ ಡಾಕ್ಟರ್ ಬಳಿ ಏನೂ ಮಾಡಲಾಗಲಿಲ್ಲ,' ಅಂತ ವಿಷಾದದಿಂದ ಹೇಳಿದ ವಿಕಾಸ್.

ತನ್ನ ಕೋಣೆಯಲ್ಲಿದ್ದ ಕೃಷ್ಣನ ಮೂರ್ತಿಯನ್ನು ನೋಡುತ್ತ ಗಾಗಿ ಹೇಳಿದಳು, 'ಈ ದೇವರೂ ಅಷ್ಟೇ. ಏನೂ ಮಾಡಲಾರ. ಮತ್ತೊಂದು ಬೇರೆ ದೇವರಿಲ್ಲವೇ ಪಪ್ಪಾ?'

ಸಾಮಾನ್ಯವಾಗಿ ಅರುಣಾ ಎಂದೂ ಹೀಗೆ ಮಾತಾಡಿದವಳೇ ಅಲ್ಲ. ಅವತ್ಯಾಕೋ ಒಂದು ಮಾತು ಅಂದು ಬಿಟ್ಟಳು, 'ದೇವರು ಸಹಿತ ಸೂಪರ್ ಮ್ಯಾನ್ ಇದ್ದ ಹಾಗೆ ಕಂದಾ. ಪುಸ್ತಕದಲ್ಲಿ ಮಾತ್ರ ಅವನೂ ಸಹ ಏನು ಬೇಕಾದರೂ ಮಾಡಬಲ್ಲ.'

ಮುಂದೆ ಗಾಗಿ ಹೆಚ್ಚು ದಿನ ಬದುಕಲಿಲ್ಲ.

ಗಾಗಿಯನ್ನು ಉಳಿಸಿಕೊಳ್ಳಲಾಗದ ದುಃಖತಪ್ತ ಸೂಪರ್ ಮ್ಯಾನ್


* ಇದು ಗುಲ್ಜಾರರ ಅಠಣ್ಣಿ (ಎಂಟಾಣೆ) ಎಂಬ ಕಥಾಸಂಕಲನದಿಂದ ಆಯ್ದ ಕಥೆ. ಅದೇ ಕಥಾಸಂಕಲನದ ಇನ್ನೊಂದು ಕಥೆ LoC ಯ ಅನುವಾದ ಇಲ್ಲಿದೆ ನೋಡಿ.

* ಇದೊಂದು ನೈಜ ಘಟನೆಗಳ ಮೇಲೆ ಆಧಾರಿತ ಕಥೆ ಅಂತ ಹೇಳಲು ಯಾವದೇ ಸಂದೇಹ ಇಲ್ಲ. ಇದರಲ್ಲಿ ಬರುವ ಅರುಣಾ ರಾಜೆ ಪಾಟೀಲ್, ವಿಕಾಸ್ ದೇಸಾಯಿ, ಬಸು ಭಟ್ಟಾಚಾರ್ಯ ಎಲ್ಲ ಸಿನಿಮಾ ಬಗ್ಗೆ ತಿಳಿದ ಎಲ್ಲರಿಗೂ ಗೊತ್ತಿರುವವರೇ. ಗಾಗಿಯ ತಾಯಿ ಅರುಣಾ ರಾಜೆ ಪಾಟೀಲ ಅನ್ನುವವರು ಹುಲಕೋಟಿ ಹುಲಿ, ಮಾಜಿ ಮಂತ್ರಿ, ದಿವಂಗತ ಶ್ರೀ ಕೆ. ಎಚ್. ಪಾಟೀಲರ ಪುತ್ರಿ ಅಂತ ಎಲ್ಲೋ ಓದಿದ ನೆನಪು. ಆ ಮಾಹಿತಿ ಸರಿಯಿದ್ದರೆ ಅವರು ಇಂದಿನ ಮಂತ್ರಿ ಶ್ರೀ ಎಚ್. ಕೆ. ಪಾಟೀಲರ ಸಹೋದರಿ.

Saturday, November 01, 2014

ಇಂದಿರಾ ಗಾಂಧಿ ಹತ್ಯೆಯ ಹಿಂದೆ ಹೀಗೊಂದು ಭಯಾನಕ ಅಂತರಾಷ್ಟ್ರೀಯ ಸಂಚು ಇತ್ತೇ?

ಅಕ್ಟೋಬರ್ ೩೧, ೧೯೮೪ ರಂದು ಇಂದಿರಾ ಗಾಂಧಿ ಹತ್ಯೆಯಾಯಿತು. ನಿನ್ನೆಗೆ ಮೂವತ್ತು ವರ್ಷ. ಅವರ ಸಿಖ್ ಅಂಗರಕ್ಷಕರೇ ಗುಂಡಿಟ್ಟು ಕೊಂದು ಬಿಟ್ಟರು. ಅದಾಗುವ ಕೆಲವೇ ತಿಂಗಳ ಹಿಂದೆ ಇಂದಿರಾ ಗಾಂಧಿ ಪಂಜಾಬಿನಲ್ಲಿ ಖಲಿಸ್ತಾನಿ ಉಗ್ರವಾದವನ್ನು ಹತ್ತಿಕ್ಕಲು ಆಪರೇಷನ್ ಬ್ಲೂಸ್ಟಾರ್ ಅನ್ನುವ ಸೈನಿಕ ಕಾರ್ಯಾಚರಣೆ ಮಾಡಿದ್ದರು. ಫಿರಂಗಿ ಹಚ್ಚಿ ಸಿಖ್ ಜನರ ಪರಮ ಪವಿತ್ರ ಸುವರ್ಣ ಮಂದಿರವನ್ನು ಉಡಾಯಿಸಿ ಬಿಟ್ಟಿದ್ದರು. ಆ ಹೊತ್ತಿನ ಮಟ್ಟಿಗೆ ದೊಡ್ಡ ಮಟ್ಟದ ಖಲಿಸ್ತಾನಿ ಉಗ್ರರೆಲ್ಲರನ್ನೂ ಕೊಂದು ಉಗ್ರವಾದಕ್ಕೆ ಒಂದು ಮಂಗಳ ಹಾಡಿದ್ದರು ಇಂದಿರಾ ಗಾಂಧಿ. ಆದರೆ ಸಿಖ್ ಸಮುದಾಯ ಸಿಕ್ಕಾಪಟ್ಟೆ ಸಿಟ್ಟಿಗೆದ್ದಿತ್ತು. ಸೈನ್ಯದಲ್ಲಿ ಸಿಖ್ ಸೈನಿಕರ ಆಂತರಿಕ ದಂಗೆಗಳಾಗಿದ್ದವು. ಉಕ್ಕಿನ ಹಸ್ತದಿಂದ ಅವನ್ನೂ ಸಹ ಹತ್ತಿಕ್ಕಿದ್ದರು ಇಂದಿರಾ ಗಾಂಧಿ. ಆವಾಗ ಸುವರ್ಣ ಮಂದಿರದಲ್ಲಿ ಅನೇಕ ಅಮಾಯಕರು ಸತ್ತು ಹೋಗಿದ್ದರು. ಸೈನ್ಯ, ಇಂದಿರಾ ಗಾಂಧಿ ನಿರ್ದೇಶಿಸಿದಂತೆ, ಬೇಕಂತಲೇ ಅವರನ್ನು ಕೊಂದರು ಅಂತ ಸುದ್ದಿ ಹರಡಿಕೊಂಡಿದ್ದರು ಸಿಖ್ ಜನರು. ಇದೆಲ್ಲ ಕೂಡಿ ಇಂದಿರಾ ಅಂದರೆ ಸಿಖ್ ಜನಾಂಗ ಕೊತ ಕೊತ ಕುದಿಯುತ್ತಿತ್ತು. ಮೊದಲೇ ಯುದ್ಧ, ಗದ್ದಲ, ಇತ್ಯಾದಿಗಳಿಗೆ ಹೆಸರಾದ ಮಂದಿ ಸಿಖ್ ಜನ. ಸೇಡು ತೀರಿಸಿಕೊಳ್ಳದೇ ಬಿಡುವರಲ್ಲ. ಹಾಗಂತಲೇ ನೀಟಾಗಿ ಸ್ಕೆಚ್ ಹಾಕಿ, ಇಂದಿರಾ ಗಾಂಧಿಯ ಸಿಖ್ ಅಂಗರಕ್ಷಕರಿಂದಲೇ ಅವರನ್ನು ಕೊಲ್ಲಿಸಿಬಿಟ್ಟರು.

ಇದೆಲ್ಲ ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಆ ಅಂಗರಕ್ಷಕರು ಎಲ್ಲದನ್ನೂ ಅವರೇ ಮಾಡಿದರೇ? ಅಥವಾ ಅವರ ಹಿಂದೆ ಸೂತ್ರಧಾರರಾಗಿ ಬೇರೆ ಯಾರೋ ಇದ್ದರೋ? ಇಂದಿರಾ ಗಾಂಧಿ ಹತ್ಯೆಯ ಹಿಂದೆ ಕಣ್ಣಿಗೆ ಕಾಣದ ಒಂದು ಷಡ್ಯಂತ್ರವಿತ್ತೇ?

ಇದೆಲ್ಲ ವಿಷಯವನ್ನು ವಿಚಾರಿಸಲು ನೇಮಿಸಿದ್ದು ನ್ಯಾಯಮೂರ್ತಿ ಥಕ್ಕರ್ ಆಯೋಗ. ಅದು ಕೆಲವು ಸಂಶಯಗಳನ್ನು ವ್ಯಕ್ತಪಡಿಸಿದರೂ, ಯಾರನ್ನೂ ಬೆರಳು ತೋರಿಸಿ, 'ಇಂತಿಂತವರು ಹತ್ಯೆಯ ಹಿಂದಿನ ಸಂಚಿನಲ್ಲಿ ಇದ್ದರು. ಹೀಗೀಗೆ ಸಂಚು ಮಾಡಿದರು. ಮಾಡಿ ಮುಗಿಸಿಬಿಟ್ಟರು,' ಅಂತ ಮಾತ್ರ ಹೇಳಲಿಲ್ಲ. ಇಂದಿರಾ ಗಾಂಧಿಯ ಆಪ್ತ ಸಹಾಯಕ ಆರ್. ಕೆ. ಧವನ್ ಮೇಲೆ ದೊಡ್ಡ ಪ್ರಮಾಣದ ಸಂಶಯ, ಅಸಮಾಧಾನ ವ್ಯಕ್ತಪಡಿಸಿತ್ತು ಥಕ್ಕರ್ ವರದಿ. ಅಷ್ಟೇ. ಆದರೆ ಸ್ವತಃ ರಾಜೀವ್ ಗಾಂಧಿಯೇ, 'ಧವನ್ ಮೇಲೆ ಯಾವದೇ ಸಂಶಯ ಪಡಲು ಸಾಧ್ಯವೇ ಇಲ್ಲ. ಅವರು ನಮ್ಮ ಕುಟುಂಬದ ಒಂದು ಭಾಗವೇ ಆಗಿದ್ದರು. ಅಂತವರ ಮೇಲೆ ಸಂಶಯ ಪಡುವದೇ? ಅದು ಮಹಾ ಪಾಪ,' ಅನ್ನುವ ಧಾಟಿಯಲ್ಲಿ ಹೇಳಿಕೆ ನೀಡಿ, ಆರ್. ಕೆ. ಧವನ್ ಅವರನ್ನು ಬಚಾವು ಮಾಡಿದ್ದಲ್ಲದೇ ಅವರಿಗೆ ದೊಡ್ಡ ಸ್ಥಾನ ಮಾನ ಕೊಟ್ಟು ಚೆನ್ನಾಗಿಯೇ ನೋಡಿಕೊಂಡರು.

ಥಕ್ಕರ ಆಯೋಗದ ವರದಿ ಬಿಟ್ಟರೆ ಇಂದಿರಾ ಗಾಂಧಿ ಹತ್ಯೆಯ ಹಿಂದೆ ಇರಬಹುದಾದ ಸಂಚಿನ ಮೇಲೆ ಬೆಳಕು ಚೆಲ್ಲುವಂತಹ ಮಾಹಿತಿ ಹೊರಗೆ ಬಂದಿಲ್ಲ ಬಿಡಿ. ರಾಜೀವ್ ಗಾಂಧಿ ಹತ್ಯೆಯ ಬಗ್ಗೆ, ಹಿಂದಿದ್ದ ಸಂಭವನೀಯ ಷಡ್ಯಂತ್ರದ ಬಗ್ಗೆ ಅನೇಕ ಒಳ್ಳೊಳ್ಳೆ ಪುಸ್ತಕಗಳು ಬಂದಿವೆ. ಆಸಕ್ತಿಯಿಂದ ಓದಿಕೊಂಡು, ಒಂದಕ್ಕೊಂದು ಮಾಹಿತಿ ಜೋಡಿಸುತ್ತ ಹೋದರೆ ಒಂದು ಭಯಾನಕ ಷಡ್ಯಂತ್ರದ ಪೂರ್ತಿ ಮಾಹಿತಿ ಸಿಕ್ಕು ಬಿಡುತ್ತದೆ. ಆದರೆ ಇಂದಿರಾ ಗಾಂಧಿ ಹತ್ಯೆಯ ಬಗ್ಗೆ ಆ ತರಹದ ಮಾಹಿತಿ ಸಿಗುವದಿಲ್ಲ.

ಆದರೆ ಲಂಡನ್ ಮೂಲದ ತಾರಿಕ್ ಅಲಿ ಅನ್ನುವವರು ಒಂದು ಪುಸ್ತಕ ಬರೆದಿದ್ದಾರೆ. ಅವರು ಯಾವದೋ ಒಂದು ಡಾಕ್ಯುಮೆಂಟರಿಗೆ ಅಂತ ಒಂದು 'ಕಾಲ್ಪನಿಕ' ಸ್ಕ್ರಿಪ್ಟ್ ಬರೆದಿದ್ದರಂತೆ. ಯಾವದೋ ಕಾರಣಕ್ಕೆ ಆ ಡಾಕ್ಯುಮೆಂಟರಿ ಆಗಲಿಲ್ಲ. ಬರೆದ ಸ್ಕ್ರಿಪ್ಟನ್ನೇ ಪುಸ್ತಕದ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ.

ಪುಸ್ತಕದ ಹೆಸರು - The Assassination: Who Killed Indira G?

ಲೇಖಕರೇ ಹೇಳಿಕೊಂಡಂತೆ ಇದು ಒಂದು fictional ಪುಸ್ತಕ. ಕಾದಂಬರಿ ತರಹದ್ದು. ಆದರೆ ಇಂದಿರಾ ಗಾಂಧಿ ಹತ್ಯೆಯ ಕಾಲದ geopolitical realities ಗಳನ್ನು ಗಮನಕ್ಕೆ ತೆಗೆದುಕೊಂಡು, 'ಇಂದಿರಾ ಹತ್ಯೆಗೆ ಇವೂ ಕಾರಣವಾಗಿರಬಹುದೇ? ಹತ್ಯೆಯನ್ನು ಅಂಗರಕ್ಷಕರೇ ಮಾಡಿದ್ದರೂ ಸೂತ್ರಧಾರರೂ ಇಂತವರು ಇರಬಹುದೇ?' ಅನ್ನುವ ಒಂದು theory ಯನ್ನು ಲೇಖಕ ತಾರಿಕ್ ಅಲಿ ಹರಿಬಿಡುತ್ತಾರೆ. ಮತ್ತೊಮ್ಮೆ ನೆನಪಿರಲಿ ಇದೆಲ್ಲ ಅವರ ಕಲ್ಪನೆ ಅಷ್ಟೇ.

ಪುಸ್ತಕದ ಸಾರಾಂಶ ಇಷ್ಟು. ೧೯೮೪ ಜೂನ್ ತಿಂಗಳಲ್ಲಿ ಆಪರೇಷನ್ ಬ್ಲೂಸ್ಟಾರ್ ಮಾಡಿ, ಸಿಖ್ ಉಗ್ರವಾದವನ್ನು ಮಟ್ಟ ಹಾಕಿ ಇಂದಿರಾ ಗಾಂಧಿ ಯಶಸ್ಸಿನ ಪರಾಕಾಷ್ಠೆಯಲ್ಲಿದ್ದರು. ಆಗ ಅತ್ತಕಡೆ ಆಫ್ಘಾನಿಸ್ತಾನವನ್ನು ಸೊವಿಯಟ್ ರಶಿಯಾ ಆಕ್ರಮಿಸಿಕೊಂಡಿತ್ತು. ಅಮೇರಿಕಾ ಆಫ್ಘನ್ ಮುಜಾಹಿದೀನ್ ಬಂಡುಕೋರರಿಗೆ ಎಲ್ಲ ಸಹಾಯ ಮಾಡಿ ರಶಿಯಾವನ್ನು ಸರಿಯಾಗಿ ಹಣಿಯುತ್ತಿತ್ತು. ಪಾಕಿಸ್ತಾನ ಎಂಬ ತಗಡು ದೇಶ ಆಫ್ಘನ್ ಬಂಡುಕೋರರು ಮತ್ತು ಅಮೇರಿಕಾ ಮಧ್ಯೆ ದಲ್ಲಾಳಿ ತರಹ ಕೂತು ರಶಿಯಾಕ್ಕೆ ಸರಿಯಾಗಿ ಬತ್ತಿ ಇಡುತ್ತಿತ್ತು. ಆಫ್ಘನ್ ಮುಜಾಹಿದೀನರಿಗೆ ಪಾಕಿಸ್ತಾನ ಅಂದರೆ ತವರು ಮನೆ ತರಹ ಆಗಿತ್ತು. ಆಫ್ಘನ್ ಗಡಿಯೊಳಕ್ಕೆ ನುಗ್ಗಿ, ರಶಿಯಾ ವಿರುದ್ಧ ಗೆರಿಲ್ಲಾ ಕಾರ್ಯಾಚರಣೆ ಮಾಡಿ, ಪಾಕಿಸ್ತಾನದೊಳಕ್ಕೆ ವಾಪಸ್ ಬಂದು, ಬಲೂಚಿಸ್ತಾನದ ಎಲ್ಲೋ ಮೂಲೆಯಲ್ಲಿ ಹೊಕ್ಕಿ ಕೂತು ಬಿಡುತ್ತಿದ್ದರು. ರಶಿಯಾಕ್ಕೆ ಸಾಕು ಸಾಕಾಗಿ ಹೋಗಿತ್ತು. ಪಾಕಿಸ್ತಾನವನ್ನು ಹಿಡಿದು, ಸರಿಯಾಗಿ ಬಾರಿಸಿಬಿಡೋಣ ಅಂದರೆ ಅದೊಂದು ಹೆಚ್ಚಿನ ತಲೆನೋವು. ಆಕ್ರಮಿಸಿದ್ದ ಅಫಘಾನಿಸ್ತಾನವನ್ನೇ ಸಂಬಾಳಿಸಿಕೊಂಡು ಹೋಗುವದು ಸಾಕಾಗಿದೆ. ಹಾಗಿರುವಾಗ ಹೊಸದಾಗಿ ಪಾಕಿಸ್ತಾನವನ್ನೆಲ್ಲಿ ಆಕ್ರಮಿಸೋಣ? ಅಂತ ರಶಿಯಾದ ತಲೆಬಿಸಿ. ಆದರೆ ಪಾಕಿಸ್ತಾನಕ್ಕೆ ಒಂದು ಗತಿ ಕಾಣಿಸಿದ ಹೊರತೂ ಮುಜಾಹಿದೀನ ಬಂಡುಕೋರರ ಹಾವಳಿ ನಿಲ್ಲುವದಿಲ್ಲ. ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಬೇಕು ಅಂದರೆ ಏನು ಮಾಡಬೇಕು? ಅಂತ ರಶಿಯಾ ವಿಚಾರ ಮಾಡಿತು. ಹೇಗೂ ಭಾರತ, ಇಂದಿರಾ ಗಾಂಧಿ ರಶಿಯಾಕ್ಕೆ ಪರಮಾಪ್ತರು. ಇಂದಿರಾ ಗಾಂಧಿಗೆ ಹೇಳಿ, ಮನವಿ ಮಾಡಿಕೊಂಡು, ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಿ ಅಂತ ಹೇಳಿದರೆ ಹೇಗೆ? ಹೇಗೂ ಇಂದಿರಾ ಗಾಂಧಿಗೆ ಪಾಕಿಸ್ತಾನ ಕಂಡರೆ ಬದ್ಧ ದ್ವೇಷ. ಅದೂ ಎಲ್ಲರಿಗೂ ಗೊತ್ತಿತ್ತು.

೧೯೭೧ ರಲ್ಲಿ ಪಾಕಿಸ್ತಾನವನ್ನು ಒಡೆದು, ಬಾಂಗ್ಲಾದೇಶ ಮಾಡಿಕೊಟ್ಟುಬಿಟ್ಟಿದ್ದರು ಇಂದಿರಾ ಗಾಂಧಿ. ಆವಾಗಲೇ ಪಾಕಿಸ್ತಾನವನ್ನು ಪೂರ್ತಿಯಾಗಿ ನಾಶ ಮಾಡಿ, ಆಪೋಶನ ತೆಗೆದುಕೊಳ್ಳುವ ಒಂದು ಮಾಸ್ಟರ್ ಪ್ಲಾನ್ ಹಾಕಿದ್ದರು ಅವರು. ಆದರೆ ಅವರದ್ದೇ ಸಂಪುಟದಲ್ಲಿದ್ದ ಗದ್ದಾರ್ ಜನರಿಂದ ಮಾಹಿತಿ ಸೋರಿ ಹೋಗಿ, ಅಮೇರಿಕಾಕ್ಕೆ ಮುಟ್ಟಿ, ಅಲ್ಲಿನ ಆಗಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಬಂಗಾಲ ಕೊಲ್ಲಿಗೆ ದೊಡ್ಡ ಮಟ್ಟದ ನೌಕಾಪಡೆ ಕಳಿಸಿ, ಬರೋಬ್ಬರಿ ಆವಾಜ್ ಹಾಕಿದ್ದರು. ಅಷ್ಟು ದೊಡ್ಡ ಮಟ್ಟದ ಆವಾಜ್ ಬಂತು ಅಂತ ಆವತ್ತು ಇಂದಿರಾ ಭುಸುಗುಡುತ್ತಲೇ ಪಾಕಿಸ್ತಾನ ನಿರ್ನಾಮ ಮಾಡುವ ಆಲೋಚನೆಯಿಂದ ಹಿಂಜರಿದಿದ್ದರು. ಆದರೆ ಒಳಗೆ ರೋಷ ಹಾಗೇ ಇತ್ತು. ಈಗ ರಶಿಯಾ ಸುಪಾರಿ ಕೊಟ್ಟು, 'ಸ್ವಲ್ಪ ಪಾಕಿಸ್ತಾನವನ್ನು ವಿಚಾರಿಸಿಕೊಳ್ಳಿ. ನಾವು ಉಳಿದಿದ್ದನ್ನು ನೋಡಿಕೊಳ್ಳುತ್ತೇವೆ. ಅಮೇರಿಕಾದ ಚಿಂತೆ ನಿಮಗೆ ಬೇಡ,' ಅಂತ ಹೇಳಿದಾಗ ಇಂದಿರಾ ಸಿಕ್ಕಾಪಟ್ಟೆ ಹುರುಪಾಗಿಬಿಟ್ಟರು.

ಬ್ಲೂಸ್ಟಾರ್ ಕಾರ್ಯಾಚರಣೆಯ ಯಶಸ್ಸಿನಿಂದ ಥ್ರಿಲ್ ಆಗಿದ್ದ ಸೈನ್ಯ ಕೂಡ ರೈಟ್ ಅಂತು. ಪಾಕಿಸ್ತಾನದ ಮೇಲೆ ಆಕ್ರಮಣದ ಒಂದು ಯೋಜನೆ ತಯಾರಾಯಿತು. ಇದು ಹೇಗೋ ಲೀಕ್ ಆಗಿ, ಈ ಯೋಜನೆ ಪಾಕಿಸ್ತಾನಕ್ಕೆ ಮತ್ತು ಅಮೇರಿಕಾಗೆ ತಿಳಿದು ಬಿಟ್ಟಿತು. ಪಾಕಿಸ್ತಾನಕ್ಕಿಂತ ಹೆಚ್ಚಾಗಿ ಅಮೇರಿಕಾ ಬೆಚ್ಚಿ ಬಿತ್ತು. ಭಾರತ ಆಕ್ರಮಣ ಮಾಡಿ, ಪಾಕಿಸ್ತಾನ ಏನಾದರೂ ಯುದ್ಧ ಮಾಡಬೇಕಾಗಿ ಬಂದರೆ ಆಫ್ಘನ್ ಮುಜಾಹಿದೀನರು ಅನಾಥರಾಗಿ ಬಿಡುತ್ತಿದ್ದರು. ರಶಿಯಾ ಆರಾಮಾಗಿ ಅವರ ಬ್ಯಾಂಡ್ ಬಾರಿಸಿ ಬಿಡುತ್ತಿತ್ತು. ಹಾಗೇನಾದರೂ ಆಗಿದ್ದರೆ USA ಮತ್ತು USSR ಎಂಬ ಎರಡು ಸೂಪರ್ ಪವರ್ ಗಳ ಮಧ್ಯೆ ನಡೆಯುತ್ತಿದ್ದ ಶೀತಲ ಸಮರದಲ್ಲಿ ಅಮೇರಿಕಾಗೆ ಸೋಲಾಗುತ್ತಿತ್ತು. by hook or by crook ಸೊವಿಯಟ್ ಯೂನಿಯನ್ ನನ್ನು ನಿರ್ನಾಮ ಮಾಡಿ ಒಗೆಯಬೇಕೆಂದು ಪಣ ತೊಟ್ಟಿದ್ದ ಅಂದಿನ ಅಧ್ಯಕ್ಷ ರೇಗನ್, ಉಪಾಧ್ಯಕ್ಷ ಬುಶ್ (ಹಿರಿಯ), CIA ಮುಖ್ಯಸ್ಥ ವಿಲಿಯಂ ಕೇಸೀ ಅವರಿಗೆ ಮತ್ತು ಅಮೇರಿಕಾದ ವಿದೇಶಾಂಗ ನೀತಿ ರೂಪಿಸುತ್ತಿದ್ದ ಮಂದಿಗೆ ಇದು ಸುತಾರಾಂ ಇಷ್ಟವಿರಲಿಲ್ಲ. ಪಾಕಿಸ್ತಾನವನ್ನು ಬೆಂಡೆತ್ತುವ ಭಾರತದ ಮಹದಾಸೆಗೆ ಒಂದು ಕಡಿವಾಣ ಹಾಕಿ, ಪಾಕಿಸ್ತಾನದ ಮೇಲೆ ಆಗಲಿರುವ ಆಕ್ರಮಣ ತಪ್ಪಿಸಲೇ ಬೇಕಿತ್ತು. ಅದಕ್ಕೆ ಏನು ಮಾಡಬೇಕು? ಬೇರೆ ಬೇರೆ ಸಾಧ್ಯತೆಗಳನ್ನು ಹುಡುಕುತ್ತ ಹೊರಟರು ಪಾಕಿಸ್ತಾನ ಮತ್ತು ಅಮೇರಿಕಾ.

ಪಾಕಿಸ್ತಾನ ಪಂಜಾಬಿನ ಖಲಿಸ್ತಾನ ಉಗ್ರರಿಗೆ ಬೇಕಾದಷ್ಟು ಸಪೋರ್ಟ್ ಮಾಡಿತ್ತು. ಈಗ ಬ್ಲೂಸ್ಟಾರ್ ಕಾರ್ಯಾಚರಣೆಯ ನಂತರ ಸಿಖ್ ಸಮುದಾಯದಲ್ಲಿ ಇಂದಿರಾ ವಿರುದ್ಧ ದೊಡ್ಡ ಮಟ್ಟದ ಆಕ್ರೋಶ, ಸೇಡಿನ ಭಾವನೆ ಎದ್ದಿದ್ದು ಗೊತ್ತಿರದ ಸಂಗತಿಯೇನಾಗಿರಲಿಲ್ಲ. ಎಲ್ಲ ಗೊತ್ತೇ ಇತ್ತು. ಇಂದಿರಾ ಹತ್ಯೆಗೆ ಅನೇಕ ಯೋಜನೆಗಳನ್ನು ಬೇರೆ ಬೇರೆ ಸಿಖ್ ಉಗ್ರಗಾಮಿ ಸಂಘಟನೆಗಳು ಹಾಕಿ ಕೊಳ್ಳುತ್ತಿದ್ದವು. ಅಂತಹ ಸಂಘಟನೆಗಳನ್ನು ಪಾಕಿಸ್ತಾನದ ISI, ಅಮೇರಿಕಾದ CIA ಬೇಹುಗಾರರು infiltrate ಮಾಡಿದ್ದರು!

ಯಾವಾಗ ಸಿಖ್ ಅಂಗರಕ್ಷರನ್ನು ಉಪಯೋಗಿಸಿಕೊಂಡು ಇಂದಿರಾ ಗಾಂಧಿಯ ಹತ್ಯೆ ಮಾಡಿಬಿಡಬೇಕು ಎನ್ನುವ ಯೋಜನೆಯ ಸುಳಿವು ಪಾಕಿಸ್ತಾನ, ಅಮೇರಿಕಾ ಕಿವಿಗೆ ಬಿತ್ತೋ ಅಂತರಾಷ್ಟ್ರೀಯ ಬೇಹುಗಾರರು ಜಾಗೃತರಾಗಿ ಬಿಟ್ಟರು. ಅಥವಾ ಅಂತಹದೊಂದು ಖತರ್ನಾಕ್ ಐಡಿಯಾ ಅವರೇ ಕೊಟ್ಟಿದ್ದರೋ ಏನೋ. ಒಟ್ಟಿನಲ್ಲಿ ಇಂತಹ ಸದಾವಕಾಶ ಮತ್ತೆ ಸಿಗುವದಿಲ್ಲ ಅಂತ ಅವರಿಗೆ ಖಾತ್ರಿಯಾಗಿ ಹೋಯಿತು. ಅಂತಹ ಇಂದಿರಾ ಹತ್ಯೆಯ ಯೋಜನೆಯನ್ನು ಯಾವದೇ ರೀತಿಯಲ್ಲಿ ವಿಫಲವಾಗಲು ಬಿಡಬಾರದು ಅಂತ ಖುದ್ದಾಗಿ ತಾವೇ ಅದರ ಮೇಲ್ವಿಚಾರಣೆಗೆ ನಿಂತು ಬಿಟ್ಟರು. ಕೇವಲ ಭಾರತದ ಸಿಖ್ ಜನರೇ ಆಗಿದ್ದರೆ ಎಲ್ಲಾದರೂ ತಪ್ಪು ಮಾಡಿಕೊಂಡು ಹತ್ಯೆಯ ಯತ್ನದಲ್ಲಿ ವಿಫಲರಾಗುತ್ತಿದ್ದರೋ ಏನೋ. ಆದರೆ ಈಗ ವೃತ್ತಿಪರ ಬೇಹುಗಾರರು, covert operation specialist ಗಳು ಟೊಂಕ ಕಟ್ಟಿ ಅವರ ಸಹಾಯಕ್ಕೆ ನಿಂತರು. ಶಿಸ್ತುಬದ್ಧವಾಗಿ ಯೋಜನೆ ಹಾಕಿಕೊಟ್ಟರು. ಅದಕ್ಕೆಂದೇ ಬೇರೆ ಬೇರೆ ಬೇಹುಗಾರಿಕೆ ಸಂಸ್ಥೆಗಳ ಸ್ಪೆಷಲಿಸ್ಟಗಳು ಪಾಕಿಸ್ತಾನಕ್ಕೆ ಬಂದು ಕೂತಿದ್ದರು. ಹಂತಕರಲ್ಲಿ ಒಬ್ಬನಾದ ಬೀಯಂತ್ ಸಿಂಗನನ್ನು ರಹಸ್ಯವಾಗಿ ಪಂಜಾಬ್ ಗಡಿಯಿಂದ ಹೆಲಿಕಾಪ್ಟರ್ ನಲ್ಲಿ ಪಾಕಿಸ್ತಾನಕ್ಕೆ ಲಿಫ್ಟ್ ಮಾಡಿ, ಅವನನ್ನು ಪಾಕಿಸ್ತಾನದಲ್ಲಿ ವಾರಗಟ್ಟಲೆ ಇಟ್ಟುಕೊಂಡು, ಬರೋಬ್ಬರಿ ತರಬೇತಿ ನೀಡಿ, step by step ಸೂಚನೆ ಕೊಟ್ಟು, rehearsal ಮಾಡಿಸಿಯೇ ಕಳಿಸಲಾಗಿತ್ತು. ಅವರು ಹೇಳಿದಂತೆ ಬಂದು ಮಾಡುವದಷ್ಟೇ ಅವನ ಕೆಲಸವಾಗಿತ್ತು. ಅದಕ್ಕೆ ಬೇಕಾದ ಇನ್ನಿತರ ವ್ಯವಸ್ಥೆಗಳನ್ನು ಅಂತರಾಷ್ಟ್ರೀಯ ಬೇಹುಗಾರಿಕೆ ಸಂಸ್ಥೆಗಳ covert operators ಅವರದ್ದೇ ರೀತಿಯಲ್ಲಿ ಮಾಡುತ್ತಿದ್ದರು.

ಹೀಗೆ ಪಾಕಿಸ್ತಾನ ಮತ್ತು ಅಮೇರಿಕಾ ಎರಡೂ ಕೂಡಿ, ಆಫ್ಘಾನಿಸ್ತಾನದಲ್ಲಿ ಸೊವಿಯಟ್ ರಶಿಯಾ ಹಣಿಯುವ ತಮ್ಮ ಪ್ಲಾನಿಗೆ ಎಲ್ಲಿ ಇಂದಿರಾ ಗಾಂಧಿ ಮುಳ್ಳಾಗಿ ಬಿಡುತ್ತಾರೋ ಅನ್ನುವ ಆತಂಕದಲ್ಲಿ, ಇಂದಿರಾ ಗಾಂಧಿಯನ್ನು ತೆಗೆಸಿಬಿಟ್ಟರು ಅಂತ ತಾರಿಕ್ ಅಲಿ ಅವರ ಕಲ್ಪನೆ. once again ಕಲ್ಪನೆ. ಆದರೆ ಆಗಿನ geopolitical ವಸ್ತುಸ್ಥಿತಿ ಗಮನಿಸಿದರೆ ಇದ್ದರೂ ಇರಬಹುದು ಅನ್ನಿಸುತ್ತದೆ. ತಾರಿಕ್ ಅಲಿ ಇನ್ನೂ ಹೆಚ್ಚಿನ ಕಲ್ಪನೆ ಮಾಡಿಕೊಂಡು covert operators, ಅವರ ತರಬೇತಿ ವಿಧಾನ ಎಲ್ಲ ವಿವರವಾಗಿ ಬರೆದಿದ್ದಾರೆ. ಅದು ಬೇರೆ ಬಿಡಿ.

ತಾರಿಕ್ ಅಲಿ ಕಲ್ಪಿಸಿಕೊಂಡಿರುವ ಥಿಯರಿಯಲ್ಲಿ ಭಯಾನಕ ಅನ್ನಿಸುವ ಒಂದು ಅಂಶವಿದೆ. ಅದು ಏನಾದರೂ ನಿಜವೇ ಆಗಿ, ಒಂದು ದಿವಸ ಹೊರಗೆ ಬಂದರೆ ಅದೊಂದು ದೊಡ್ಡ ಸ್ಪೋಟಕ explosive ಸುದ್ದಿ ಆಗುವದರಲ್ಲಿ ಯಾವದೇ ಸಂಶಯವಿಲ್ಲ.

ಅದೇನೆಂದರೆ, ಹಂತಕರಲ್ಲಿ ಒಬ್ಬನಾದ ಬೀಯಂತ್ ಸಿಂಗನನ್ನು, ಇಂದಿರಾ ಹತ್ಯೆಯ ನಂತರ, ಅಲ್ಲೇ ಇದ್ದ ರಕ್ಷಣಾ ಪಡೆಯವರು ಗುಂಡಿಟ್ಟು ಕೊಂದು ಬಿಟ್ಟರು. ಪರಿಸ್ಥಿತಿ ನಿಯಂತ್ರಿಸಲು ಅಂತ ಗುಂಡು ಹಾರಿಸಿದರು. ಅದರಲ್ಲಿ ಗುಂಡು ತಿಂದ ಬಿಯಾಂತ್ ಸಿಂಗ್ ಸತ್ತು ಹೋದನೇ? ಅಥವಾ ಬೀಯಂತ್ ಸಿಂಗನನ್ನು ಮುಗಿಸೇ ಬಿಡಿ ಅಂತ ಬೇರೆ ಎಲ್ಲಿಂದಲೋ ಆಜ್ಞೆ ಬಂದಿತ್ತೆ? ಲೇಖಕ ತಾರಿಕ್ ಅಲಿ ಅವರ ಕಲ್ಪನೆ ಪ್ರಕಾರ ಇಂದಿರಾ ಹತ್ಯೆಯ ಮಾಸ್ಟರ್ ಪ್ಲಾನ್ ಹಾಕಿದವರಿಗೆ ಬಿಯಾಂತ್ ಸಿಂಗ್ ಉಳಿಯುವದು ಬೇಕಾಗಿಯೇ ಇರಲಿಲ್ಲ. ಯಾಕೆಂದರೆ ಅವನು ಪಾಕಿಸ್ತಾನಕ್ಕೆ ಹೋಗಿದ್ದ. ಅಲ್ಲಿ ನಾಮೀ ಬೇಹುಗಾರರನ್ನು ಭೆಟ್ಟಿಯಾಗಿದ್ದ. covert operations ಮಾಡುವ ವಿಶ್ವದ ಕೆಲವೇ ಕೆಲವು ಸ್ಪೆಷಲಿಸ್ಟಗಳ ಮುಖ ಪರಿಚಯ ಎಲ್ಲ ಅವನಿಗೆ ಇತ್ತು. ಅನೇಕ ರಹಸ್ಯಗಳನ್ನು ಅರಿತಿದ್ದ. ಮುಂದೊಂದು ದಿನ ಅವನು ಅದನ್ನೆಲ್ಲ ಯಾರ ಮುಂದಾದರೂ ಬಾಯಿ ಬಿಟ್ಟರೆ ಕಷ್ಟ ಅಂತ ಅವನನ್ನು 'ತೆಗೆದು' ಬಿಡುವಂತೆ ಇಂದಿರಾ ನಿವಾಸದ ರಕ್ಷಣಾ ಸಿಬ್ಬಂದಿಗೆ ಆಜ್ಞೆಯಾಗಿತ್ತು. ಹಾಗಿದ್ದರೆ ವಿದೇಶದ ಬೇಹುಗಾರರು ಭಾರತದ ರಕ್ಷಣಾ ಏಜನ್ಸಿಗಳನ್ನೂ ಸಹ infiltrate ಮಾಡಿದ್ದರೆ? ಅವುಗಳಲ್ಲೂ ಅವರ ಏಜೆಂಟಗಳು ಇದ್ದರೆ? ಅಂತವರು ಗದ್ದಾರಿ ಮಾಡಿಬಿಟ್ಟರೆ? ಅಂತೆಲ್ಲ ಯೋಚನೆಗಳನ್ನು ಹರಿಬಿಡುತ್ತಾರೆ ತಾರಿಕ್ ಅಲಿ. ಮತ್ತೆ ಬೀಯಾಂತ್ ಸಿಂಗ್ ಹತ್ಯೆ ಬಗ್ಗೆ ಅನೇಕ ಗೊಂದಲಗಳೂ ಇವೆ. ಅವನ್ನು ಮೊದಲು ಬಂಧಿಸಿ ನಂತರ ಕೊಲ್ಲಲಾಯಿತು ಅಂತಲೂ ಸುದ್ದಿಯಾಗಿತ್ತು.

ಒಟ್ಟಿನಲ್ಲಿ ಒಂದು ಇಂಟೆರೆಸ್ಟಿಂಗ್ ಮಾಹಿತಿ. 'ಹೀಗೂ ಆಗಿರಬಹುದೇ?' ಅಂತ ಅನ್ನಿಸದೇ ಇರುವದಿಲ್ಲ. ಚಿಕ್ಕ ಪುಸ್ತಕ. ಅದೂ ನಾಟಕದಂತೆ ಬರೆದಿದ್ದು. ಒಂದೆರೆಡು ಘಂಟೆಗಳಲ್ಲಿ ಓದಿ ಮುಗಿಸಿಬಿಡಬಹುದು. ಆದರೆ ಅದರಲ್ಲಿನ ಸಾಧ್ಯತೆಗಳು, ಅಂತರಾಷ್ಟ್ರೀಯ ಮಟ್ಟದ covert operations, ದೊಡ್ಡ ದೊಡ್ಡ ಷಡ್ಯಂತ್ರಗಳು ಇತ್ಯಾದಿಗಳ ಬಗ್ಗೆ ಯೋಚನೆ ಮಾಡಿದಂತೆ ತಲೆ ಗಿಂವ್ವೆನ್ನುತ್ತದೆ.

ಒಮ್ಮೊಮ್ಮೆ ಹೀಗಾಗುತ್ತದೆ. ಕೆಲವು ಖತರ್ನಾಕ್ ಲೇಖಕರಿಗೆ ಇಂತಹ ರೋಚಕ ಘಟನೆಗಳ ಬಗ್ಗೆ ಎಲ್ಲ ಮಾಹಿತಿ ಬರೋಬ್ಬರಿ ಸಿಕ್ಕಿರುತ್ತದೆ. ಆದರೆ ಎಲ್ಲವನ್ನೂ ಇದ್ದಕ್ಕಿದ್ದ ಹಾಗೆ ಬರೆದು ಬಿಟ್ಟರೆ ಏನೇನೋ ಸಮಸ್ಯೆಗಳು ಎದುರಾಗುತ್ತವೆ. ಕೋರ್ಟು, ಕೇಸು, ಅದು ಇದು ಅಂತ ರಗಳೆ. ಅದಕ್ಕೇ ಅಂತಲೇ ಇದ್ದದ್ದನ್ನು ಇದ್ದ ಹಾಗೆಯೇ ಬರೆದು, ಹೆಸರು ಗಿಸರು ಒಂದಿಷ್ಟು ಚೇಂಜ್ ಮಾಡಿ, ಕಾಲ್ಪನಿಕ ಅಂತ ಒಂದು ಲೇಬಲ್ ಅಂಟಿಸಿಬಿಡುತ್ತಾರೆ. ಅವರ ತಪ್ಪಲ್ಲ ಬಿಡಿ. ಇದೇ ಮಾದರಿಯಲ್ಲಿ ಜಾನ್ ಕೆನಡಿ ಹತ್ಯೆ (Kennedy Must Be Killed: A Novel by Chuck Helppie), ವಿಮಾನ ಸ್ಪೋಟದಲ್ಲಿ ಪಾಕಿಸ್ತಾನದ ಅಧ್ಯಕ್ಷ ಜಿಯಾ ಉಲ್ ಹಕ್ ಸಂಶಯಾಸ್ಪದ ಸಾವು (A Case of Exploding Mangoes by Mohammed Hanif) ಬಗ್ಗೆ ಒಳ್ಳೊಳ್ಳೆ ಪುಸ್ತಕಗಳು ಬಂದಿವೆ. ಕಾಲ್ಪನಿಕ ಅಂತ ಅವರು ಹೇಳಿಕೊಂಡಿದ್ದು ಬಿಟ್ಟರೆ ಸ್ವಲ್ಪ ಸಾಮಾನ್ಯ ಜ್ಞಾನ ಇರುವವರಿಗೂ ಎಲ್ಲ ಬರೋಬ್ಬರಿ ಗೊತ್ತಾಗಿ, ಸಂಚಿನ ಸೂತ್ರಧಾರಿಗಳು ಯಾರು, ಎಂತ ಅಂತ ಎಲ್ಲ ತಿಳಿದುಬಿಡುತ್ತದೆ. ಇದೂ ಅದೇ ಮಾದರಿಯ ಪುಸ್ತಕ ಇರಬಹುದೇ? ಗೊತ್ತಿಲ್ಲ ;)

ಭಾರತದ ಬಾಹ್ಯ ಬೇಹುಗಾರಿಕೆ ಸಂಸ್ಥೆ R&AW ದ ಸ್ಥಾಪಕ ಮತ್ತು ಇಂದಿರಾ ಗಾಂಧಿಯ ಪರಮಾಪ್ತ, ಅವರ ಸುತ್ತ ಇರುತ್ತಿದ್ದ ಕಾಶ್ಮೀರಿ ಕೂಟದಲ್ಲಿನ ಪ್ರಮುಖ, ದಿವಂಗತ ರಾಮೇಶ್ವರ್ ನಾಥ್ ಕಾವ್ ಇಂದಿರಾ ಹತ್ಯೆಯ ಬಗ್ಗೆ most authentic & real ಅನ್ನುವಂತಹ ಒಂದು ಪುಸ್ತಕ ಬರೆದಿಟ್ಟಿದ್ದಾರಂತೆ. ಆದರೆ ಅವರು ಒಂದು ಕಂಡೀಶನ್ ಹಾಕಿ ಸತ್ತು ಹೋದರು. 'ನನ್ನ ಸಾವಿನ ಇಪ್ಪೈತ್ತೈದು ವರ್ಷಗಳ ನಂತರವೇ ಇದನ್ನು ಪ್ರಕಟಿಸಬಹುದು. ಅಲ್ಲಿಯವರೆಗೆ ಸೀಲ್ ಮಾಡಿ ಇಡತಕ್ಕದ್ದು,' ಅಂತ. ಅದೇನೇನು ಸ್ಪೋಟಕ ಮಾಹಿತಿ ಬರೆದಿದ್ದಾರೋ ಭಾರತದ ಗೂಢಚರ್ಯೆಯ ಪಿತಾಮಹ ಕಾವ್. ಹಾಗಂತ ಅವರು R&AW  ದ ನಿವೃತ್ತ ಅಧಿಕಾರಿ ಯಾದವ್ ಅವರಿಗೆ ಹೇಳಿಕೊಂಡಿದ್ದರಂತೆ. ಅದನ್ನು ಯಾದವ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಅದೂ ಒಂದು ಅದ್ಭುತ ಪುಸ್ತಕ. Mission R&AW by RK Yadav. ಆ ಪುಸ್ತಕದಿಂದ ಆಯ್ದ ಒಂದು ಬರಹ ಇಲ್ಲಿದೆ ನೋಡಿ.


Thursday, October 30, 2014

ಇಂದಿರಾ ಗಾಂಧಿ ಹತ್ಯೆ, ಮುಂಬೈ ಟ್ರಿಪ್ಪು, ಮೂವತ್ತು ವರ್ಷಗಳ ಬಳಿಕ ಮತ್ತೆ ನೆನಪು

೩೧ ಅಕ್ಟೋಬರ್ ೧೯೮೪. ಅಂದು ಇಂದಿರಾ ಗಾಂಧಿ ಹತ್ಯೆಯಾಗಿ ಹೋಯಿತು. ಇವತ್ತಿಗೆ (೩೧ ಅಕ್ಟೋಬರ್ ೨೦೧೪) ಬರೋಬ್ಬರಿ ಮೂವತ್ತು ವರ್ಷ. ನಮ್ಮ ತಲೆಮಾರಿನ ಮಂದಿಗೆ, ಅಂದರೆ ೧೯೭೦ ರ ಜಮಾನಾದಲ್ಲಿ ಹುಟ್ಟಿದ ಮಂದಿಗೆ, ಮೂರು ಗಾಂಧಿಗಳ ಸಾವಿನ ಬಗ್ಗೆ ಬರೋಬ್ಬರಿ ನೆನಪಿರುತ್ತದೆ. ಸಂಜಯ್ ಗಾಂಧಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ. 'ಆದಿನ ಎಲ್ಲಿದ್ದೆ? ಏನು ಮಾಡುತ್ತಿದ್ದೆ?' ಅಂತ ಕೇಳಿ ನೋಡಿ. ನೆನಪುಗಳು ಬರೋಬ್ಬರಿ ಬಿಚ್ಚಿಕೊಳ್ಳುತ್ತವೆ. ಅಮೇರಿಕಾದಲ್ಲಿ ೧೯೫೦ ರ ಜಮಾನಾದಲ್ಲಿ ಹುಟ್ಟಿದ ಮಂದಿಗೆ ೧೯೬೩ ರಲ್ಲಿ ಆದ ಜಾನ್ ಕೆನಡಿ ಹತ್ಯೆ, ೧೯೬೮ ರಲ್ಲಿ ಆದ ರಾಬರ್ಟ್ ಕೆನಡಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಹತ್ಯೆಗಳು ಮನಸ್ಸಿನಲ್ಲಿ ಹೇಗೆ ಅಚ್ಚೊತ್ತಿ ನಿಂತಿರುತ್ತವೋ ಹಾಗೇ ನಮಗೆ ಭಾರತೀಯರಿಗೆ ಗಾಂಧಿ ಕುಟುಂಬದ ಸಾವುಗಳು.

ನಾನಂತೂ ಅವತ್ತು ಮುಂಬೈನಲ್ಲಿದ್ದೆ. ಆಗಿನ ಬಾಂಬೆ. ಆಗ ಹನ್ನೆರೆಡು ವರ್ಷ, ಏಳನೇ ಕ್ಲಾಸ್. ಅಕ್ಟೋಬರ್ ರಜೆಯ ಸಮಯ. ಅದಕ್ಕೇ ಅಂತಲೇ ಮುಂಬೈಗೆ ಹೋಗಿದ್ದಾಗಿತ್ತು. ನೆಂಟರ ಮನೆಯಲ್ಲಿ ಒಂದೆರೆಡು ವಾರ ಕಳೆದು ಬರಲು. ನಮ್ಮ ಚಿಕ್ಕಜ್ಜಿ (ಅಮ್ಮನ ಚಿಕ್ಕಮ್ಮ) & ಫ್ಯಾಮಿಲಿ ಆಗ ಅಲ್ಲೇ ಇತ್ತು. ಅವರ ಮನೆಯಲ್ಲೇ ಉಳಿದಿದ್ದು. ಅಣ್ಣ IIT ಮುಂಬೈನಲ್ಲಿ ಮೂರನೇ ವರ್ಷದ ವಿದ್ಯಾರ್ಥಿ. ಅದೂ ಒಂದು ಎಕ್ಸಟ್ರಾ ಬೋನಸ್ ಮುಂಬೈಗೆ ಹೋಗಲು. ಬೇರೆ ಯಾರೋ ನೆಂಟರು ಅಲ್ಲಿಗೆ ಹೊರಟಿದ್ದರು. ನಾನೂ ಅವರ ಜೊತೆ ತಗಲಾಕಿಕೊಂಡು ಹೋಗಿದ್ದೆ.

ಮುಂಬೈಗೆ ಹೋಗಿ, ರಜೆ ಎಂಜಾಯ್ ಮಾಡಿ, ಊರು ಸುತ್ತಿ, ವಾಪಸ್ ಬರೋ ಟೈಮ್ ಬಂದಿತ್ತು. ಆವತ್ತು ೩೧ ಅಕ್ಟೋಬರ್ ೧೯೮೪ ರಂದು ಪಾಕಿಸ್ತಾನದಲ್ಲಿ ಇಂಡಿಯಾ ಪಾಕಿಸ್ತಾನ ಒನ್ ಡೇ ಕ್ರಿಕೆಟ್ ಮ್ಯಾಚ್ ನಡೆಯುತ್ತಿತ್ತು.

ಟೀವಿಯಲ್ಲಿ ಕ್ರಿಕೆಟ್ ನೋಡುವದು ಅಂದರೆ ಆಗೆಲ್ಲ ದೊಡ್ಡ ಮಾತು. ಧಾರವಾಡಕ್ಕೆ ಇನ್ನೂ ಟೀವಿ ಬಂದಿರಲಿಲ್ಲ. ಕೆಲವೇ ತಿಂಗಳ ಹಿಂದೆ ಇಂದಿರಾ ಗಾಂಧಿಯೇ ಮಂಜೂರ್ ಮಾಡಿ ಹೋಗಿದ್ದರು. ಅವರ ಮರಣದ ನಂತರ ಒಂದೋ ಎರಡೋ ತಿಂಗಳಲ್ಲಿ ಬಂತು ಅನ್ನಿ. ದೇಶದ ತುಂಬೆಲ್ಲ low power tv transmitters ಮಂಜೂರು ಮಾಡಿದ್ದರು ಇಂದಿರಾ ಗಾಂಧಿ. ಸಾಯುವ ಮುಂಚೆ ಮಾಡಿದ ಒಂದು ದೊಡ್ಡ ಕೆಲಸ ಅದು. ಮತ್ತೆ ಜನರಲ್ ಎಲೆಕ್ಷನ್ ಬೇರೆ ಬಂದಿತ್ತು. ಅದಕ್ಕೆ ಅನುಕೂಲವಾಗಲಿ ಅಂತ ದೇಶದ ತುಂಬೆಲ್ಲ ಟೀವಿ ಭಾಗ್ಯ.

ಕ್ರಿಕೆಟ್ ಮ್ಯಾಚಿನಲ್ಲಿ ಭಾರತದ ಬ್ಯಾಟಿಂಗ್ ಮುಗಿದಿತ್ತು. ಆಗ ಒಮ್ಮೆಲೇ ಟೀವಿಯಲ್ಲಿ ಕ್ರಿಕೆಟ್ ಮ್ಯಾಚ್ ಪ್ರಸಾರ ನಿಂತು ಹೋಯಿತು. ಇಂದಿರಾ ಗಾಂಧಿ ಮೇಲೆ ದಾಳಿಯಾಯಿತು ಅಂತ ಟೀವಿಯಲ್ಲಿ ಸುದ್ದಿ ಬಂತೇ? ನೆನಪಿಲ್ಲ. ಆದರೆ ಟೀವಿ ಪ್ರಸಾರ ನಿಂತು, ಸೊಳೆ ರಾಗದ, ಹೊಗೆ ಹಾಕಿಸ್ಕೊಂಡವರ ಮನೆಯ ಕೊಂಯ್ ಅನ್ನುವ ಮ್ಯೂಸಿಕ್ ಅಂತೂ ಶುರುವಾಗಿ ಏನೋ ಅಪಶಕುನದ ಸೂಚನೆ ಕೊಡುತ್ತಿತ್ತು. ಕೇವಲ ಟೀವಿ ಪ್ರಸಾರ ಒಂದೇ ಅಲ್ಲ, ಆಕಡೆ ಕ್ರಿಕೆಟ್ ಮ್ಯಾಚ್ ಸಹಿತ ಅರ್ಧಕ್ಕೆ ನಿಂತು ಹೋಗಿತ್ತು ಅಂತ ಆಮೇಲೆ ಗೊತ್ತಾಯಿತು. ಮ್ಯಾಚ್ ಒಂದೇ ಏನು, ಉಳಿದ ಸರಣಿ ಸಹಿತ ಖತಂ ಆಗಿ, ಭಾರತ ಕ್ರಿಕೆಟ್ ತಂಡ ತಾಪಡ್ತೋಪ್ ವಾಪಸ್ ಬಂದುಬಿಟ್ಟಿತು.

ಆಫೀಸಿನಿಂದ ಚಿಕ್ಕಜ್ಜ ಫೋನ್ ಮಾಡಿ ಸುದ್ದಿ ಹೇಳಿದ್ದರು, 'ಇಂದಿರಾ ಗಾಂಧಿಗೆ ಗುಂಡು ಹಾಕಿದರಂತೆ' ಅಂತ. ಅಷ್ಟೇ ಸುದ್ದಿ ಹೊರಬಿಟ್ಟಿತ್ತು ಸರಕಾರ. ನಿಧನರಾಗಿದ್ದಾರೆ ಅಂತ ಅಧಿಕೃತ ಸುದ್ದಿ ಬಂದದ್ದು ಬಹಳ ತಡವಾಗಿ. ರಾತ್ರಿ ಯಾವಾಗಲೋ ಡಿಕ್ಲೇರ್ ಆಯಿತು, 'ಇಂದಿರಾ ಗಾಂಧಿ ಇನ್ನಿಲ್ಲ,' ಅಂತ.

ಮಧ್ಯಾನ ಊಟಕ್ಕೆ ಚಿಕ್ಕಜ್ಜ ಮನೆಗೆ ಬಂದಿದ್ದರು. ಇಂದಿರಾ ಗಾಂಧಿ ಮೇಲೆ ಆದ ದಾಳಿ ಆಹೊತ್ತಿನ ಬ್ರೇಕಿಂಗ್ ನ್ಯೂಸ್. ಈಗಿನ ಹಾಗೆ ಬ್ರೇಕಿಂಗ್ ನ್ಯೂಸ್ ಕೊಡುವ ಮಂದಿ, ಸಾವಿರ ಚಾನೆಲ್ ಇರಲಿಲ್ಲ ಅಷ್ಟೇ. ರೇಡಿಯೋ ಮೇಲೆ ಸ್ವಲ್ಪ updates ಬರುತ್ತಿತು. ಇಂದಿರಾ ಗಾಂಧಿಯನ್ನು ಸೇರಿಸಿದ್ದ AIIMS ಆಸ್ಪತ್ರೆಯಿಂದ ಮೆಡಿಕಲ್ ಬುಲೆಟಿನ್ ಬರುತ್ತಿತ್ತು. ಅದನ್ನು ಉಪಯೋಗಿಸಿ AIR ಸುದ್ದಿ ಕೊಡುತ್ತಿತ್ತು ಅಂತ ನೆನಪು.

ಊಟ ಮುಗಿಸಿದ ಚಿಕ್ಕಜ್ಜ ವಾಪಸ್ ಹೊರಟರು ಆಫೀಸಿಗೆ. ಹೋಗುವಾಗ ಸುದ್ದಿ ಕೇಳಲಿಕ್ಕೆ ಇರಲಿ ಅಂತ ಪಾಕೆಟ್ ಟ್ರಾನ್ಸಿಸ್ಟರ್ ತೆಗೆದುಕೊಂಡು, ಸ್ವಿಚ್ ಆನ್ ಮಾಡಿ ನೋಡಿದರೆ ಅದರಲ್ಲಿನ ಬ್ಯಾಟರಿ ಸೆಲ್ಲು ಸತ್ತು ಹೋಗಿತ್ತು. ಬ್ಯಾಟರಿ ಪವರ್ ನಾಸ್ತಿ. ಇಲ್ಲೆ. 'ಬ್ಯಾಟರಿ ಸೆಲ್ಲಿಗೆ ಏನು ಮಾಡೋಣ?' ಅಂತ ಅವರು ವಿಚಾರ ಮಾಡುತ್ತಿದ್ದಾಗ ನಾನು ನನ್ನ 'ಭಯಂಕರ ತಲೆ' ಓಡಿಸಿ, ನನ್ನ ಹತ್ತಿರ ಇದ್ದ ಪಾಕೆಟ್ ಪೆನ್ ಟಾರ್ಚ್ ಬ್ಯಾಟರಿಯಿಂದ ಸೆಲ್ ತೆಗೆದು ಕೊಟ್ಟಿದ್ದೆ. ಆ ಪೆನ್ ಟಾರ್ಚ್ ಅಲ್ಲೇ ಮುಂಬೈನಲ್ಲಿ ಖರೀದಿ ಮಾಡಿದ್ದೆ, ಒಂದು ವಾರದ ಹಿಂದೆ. ವಾರಾಂತ್ಯಕ್ಕೆ IIT ಹಾಸ್ಟೆಲ್ ಬಿಟ್ಟು, ಜೊತೆಗಿದ್ದು ಟೈಮ್ ಕಳೆಯಲು ಬಂದಿದ್ದ ಅಣ್ಣನ ಜೊತೆ ಫೋರ್ಟ್ ಏರಿಯಾಕ್ಕೆ ಶಾಪಿಂಗಿಗೆ ಹೋಗಿದ್ದೆ. ಖರೀದಿ ಮಾಡಿದ್ದು ಒಂದು ಮೂರು ನಾಕು ಇಲೆಕ್ಟ್ರಾನಿಕ್ ವಾಚು, ಒಂದು ಟಾರ್ಚ್ ಬ್ಯಾಟರಿ. ಅದೂ ಚೈನಾ ಮೇಡ್, ಸ್ಪೆಷಲ್ ಬೆಳ್ಳಿ ಕೋಟಿಂಗ್ ಇದ್ದ ಪೆನ್ ಟಾರ್ಚ್. ಪೆನ್ನುಗಳಲ್ಲಿ ಚೈನಾ ಹೀರೋ ಪೆನ್ ಹೇಗೆ ಫೇಮಸ್ ಇತ್ತೋ ಹಾಗೇ ಈ ಚೈನಾ ಮೇಡ್ ಟಾರ್ಚ್ ಕೂಡ. ಭಾಳ ಸ್ಲಿಕ್ ಆಗಿ, ಮಸ್ತ ಇತ್ತು. ಹಸಿರು ಬಣ್ಣದ ಪ್ರಕಾಶ. ಅದೇ ಭಯಂಕರ ವಿಶೇಷ. ಅಂತಹ ಟಾರ್ಚ್ ಒಂದರ ಮೇಲೆ ಮೊದಲಿಂದ ಒಂದು ಕಣ್ಣಿತ್ತು. ಆದರೆ ಧಾರವಾಡದಲ್ಲಿ ಎಲ್ಲೂ ಕಣ್ಣಿಗೆ ಬಿದ್ದಿರಲಿಲ್ಲ. ಈಗ ಮುಂಬೈನಲ್ಲಿ ಫುಟ್ ಪಾತ್ ವ್ಯಾಪಾರಿ ಬಳಿ ಕಂಡ ಮೇಲೆ ಮುಗಿಯಿತು. ಖರೀದಿ ಮಾಡಿಸಿ, ಕೊಡಿಸಿಕೊಂಡೇಬಿಟ್ಟೆ. ಆದರೆ ಅದು ಸಿಕ್ಕಾಪಟ್ಟೆ ಸೆಲ್ ತಿನ್ನುತ್ತಿತ್ತು ಅಂತ ನಂತರ ಗೊತ್ತಾಯಿತು. ಏನೋ ಅಂದು ಆ ಟಾರ್ಚಿನಲ್ಲಿದ್ದ ಸೆಲ್ ನಲ್ಲಿ ಇನ್ನೂ ಪವರ್ ಇತ್ತು. ಅವನ್ನೇ ತೆಗೆದು ಅಜ್ಜನ ಟ್ರಾನ್ಸಿಸ್ಟರಿಗೆ ಹಾಕಿ ಕೊಟ್ಟೆ. ಅಜ್ಜ ಫುಲ್ impress ಆಗಿ, ಖುಷ್ ಆಗಿ, ಟ್ರಾನ್ಸಿಸ್ಟರ್ ಹಚ್ಚಿಕೊಂಡು, ಕಿವಿ ಹತ್ತಿರ ಇಟ್ಟುಕೊಂಡು, ಕಾರ್ ಡ್ರೈವ್ ಮಾಡಿಕೊಂಡು ಹೋಗಿಬಿಟ್ಟರು. ಮುಂದೆ ಆ ನನ್ನ ಟಾರ್ಚ್ ಮುರ್ಡೇಶ್ವರದಲ್ಲಿ ಕಣ್ಮರೆಯಾಯಿಯಿತು. ದೇವಸ್ಥಾನದ ಉದ್ಘಾಟನೆಗೆ ಹೋಗಿದ್ದ ತಂದೆಯವರು ಎಲ್ಲೋ misplace ಮಾಡಿಕೊಂಡುಬಿಟ್ಟಿದ್ದರು. ಹೋಗಿದ್ದೇ ಒಳ್ಳೇದಾಯಿತು ಅನ್ನಿ. ಆ ಟಾರ್ಚಿಗೆ ಬ್ಯಾಟರಿ ಸೆಲ್ ಹಾಕುತ್ತ ಹೋಗಿದ್ದರೆ ದಿವಾಳಿ ತೆಗೆಯಬೇಕಾಗುತ್ತಿತ್ತು. ಕಳೆದು ಹೋಗಿ ರೊಕ್ಕ ಉಳಿಯಿತು.

ಇಂದಿರಾ ಗಾಂಧಿ ಹತ್ಯೆಯ ಬಳಿಕ, ಮುಂಬೈನಲ್ಲಿ, ಅದೂ ನಾವಿದ್ದ ತುಂಬ posh ಕೊಲಾಬಾ ಏರಿಯಾದಲ್ಲಿ, ಏನೂ ಗಲಭೆ ಗಿಲಭೆ ಆಗಿರಲಿಲ್ಲ. ದೇಶದ ಬೇರೆ ಕಡೆ ಆದ ಗಲಭೆ ನೋಡಿ ಕೆಲ ಮಂದಿ ತಾವಾಗೇ ಅಂಗಡಿ ಬಂದ್ ಮಾಡಿಕೊಂಡು ಹೋಗಿದ್ದರು. ಮನೆ ಹತ್ತಿರದಲ್ಲೇ ಇದ್ದ ಒಬ್ಬ ಸರ್ದಾರ್ಜೀ ಅಂಗಡಿ ಮಾತ್ರ ಬಂದಾಗಿತ್ತು. ನಾವು ವಾಪಸ್ ಬರೋ ತನಕಾ ಆ ಸರ್ದಾರ್ಜೀ ಅಂಗಡಿ ಬಾಗಿಲು ತೆಗೆದಿರಲಿಲ್ಲ. ಅದು ನೆನಪಿದೆ. ಅದ್ಯಾಕೆ ನೆನಪಿದೆ ಅಂದರೆ ಅವನ ಅಂಗಡಿಗೆ ಒಂದೆರೆಡು ಸಲ ಹೋಗಿದ್ದೆ. ಬ್ಯಾಟರಿ ಟಾರ್ಚಿಗೆ ಬಲ್ಬ್ ತಂದುಕೊಳ್ಳಲು. ನಮ್ಮ ಚೈನಾ ಬ್ಯಾಟರಿಗೆ ಅಲ್ಲ. ಅಲ್ಲೇ ನೆಂಟರ ಮನೆಯಲ್ಲಿದ್ದ ಎಲ್ಲ ಬ್ಯಾಟರಿ ಟಾರ್ಚ್ ತೊಗೊಂಡು, ಪುಕುಳಿ ಕುಟ್ಟಿ, ಬಿಚ್ಚಿ ನೋಡೋ ಅಬ್ಬರದಲ್ಲಿ ಬಲ್ಬ್ ಒಂದೆರೆಡು ಬಾರಿ ಢಂ ಅಂದಿತ್ತು. ನಾವು ಹವ್ಯಕರು ಬ್ಯಾಟರಿ ಟಾರ್ಚ್ ಹೊತ್ತಲಿಲ್ಲ ಅಂದರೆ ಪುಕುಳಿ, ಅಂದರೆ ಬ್ಯಾಟರಿ ಪುಕುಳಿ, ತಟ್ಟಿ ತಟ್ಟಿ ಹೊತ್ತಿಸಲು ನೋಡುತ್ತೇವೆ. ಒಮ್ಮೊಮ್ಮೆ ಬ್ಯಾಟರಿ ಪುಕುಳಿ ತಟ್ಟುವ ಅಬ್ಬರದಲ್ಲಿ ಬಲ್ಬು ಮತ್ತೊಂದು ಮಟಾಶ್ ಆಗಿಹೋಗುತ್ತವೆ. ಏನು ಮಾಡಲಿಕ್ಕೆ ಬರುತ್ತದೆ? collateral damage. ಹೋದವರ ಮನೆ ಸಾಮಾನು ಮುಟ್ಟೋದೇ ತಪ್ಪು. ಅಂತಾದರಲ್ಲಿ ಮುಟ್ಟಿದ್ದೊಂದೇ ಅಲ್ಲದೇ ಹಾಳು ಮಾಡಿದ್ದು ದೊಡ್ಡ ತಪ್ಪು. ಅದನ್ನೇ ಸರಿಪಡಿಸೋಣ ಅಂತ ಇದ್ದ ಬಿದ್ದ ಒಂದೆರೆಡು ರೂಪಾಯಿ ಜೋಡಿಸಿಕೊಂಡು ಸರ್ದಾರ್ಜೀ ಅಂಗಡಿಗೆ ಹೋಗಿ, ಗುಟ್ಟಾಗಿ ಬಲ್ಬ್ ತಂದು, ಅದು ನೆಂಟರ ಮನೆ ಬ್ಯಾಟರಿಗೆ ಸರಿ ಹೊಂದದೇ, ಮತ್ತೆ ಅದನ್ನು ಹಿಂದೆ ಕೊಡಲು ಹೋದಾಗ ಸರ್ದಾರ್ಜೀ ಕೆಟ್ಟ ಮುಖ ಮಾಡಿ, ಅವನಿಗೆ ಹರಕು ಮುರುಕು ಹಿಂದಿಯಲ್ಲಿ ಏನೋ ಹೇಳಿ, ಅವ 'ಇದೇ ಕೊನೆ. ಮುಂದೆ ಬದಲು ಮಾಡಿ ಕೊಡಲ್ಲ,' ಅನ್ನುವ ರೀತಿಯಲ್ಲಿ ರೋಪ್ ಹಾಕಿ, ಬೇರೆ ಬಲ್ಬ್ ಕೊಟ್ಟು ಕಳಿಸಿದ್ದ. ಪುಣ್ಯಕ್ಕೆ ಅದು ಬರೋಬ್ಬರಿ ಫಿಟ್ ಆಗಿ, ನೆಂಟರ ಮನೆ ಬ್ಯಾಟರಿ ಮೊದಲಿನ ಸ್ಥಿತಿಗೆ ಬಂದಿತ್ತು. ಅಬ್ಬಾ! ಆತಂಕ ದೂರವಾಗಿತ್ತು. 'ಮಾಣಿ ಬಂದು ಬ್ಯಾಟರಿ ಹಾಳುಗರಿದು ಹೋದ,' ಅನ್ನುವ ಅಪಖ್ಯಾತಿ ತಪ್ಪಿತ್ತು. ಆವಾಗ ನಮಗೆ ಬ್ಯಾಟರಿ ಮಳ್ಳು ಅಂತ ಕಾಣುತ್ತದೆ. ಅದಕ್ಕೇ ಕಂಡ ಕಂಡ ಬ್ಯಾಟರಿಯ ಪುಕಳಿ ತಟ್ಟಿ ತಟ್ಟಿ ಬುರುಡೆ ಬಿಚ್ಚುತ್ತಿದ್ದೆ. ಒಳಗಿನ ಮೆಕ್ಯಾನಿಸಮ್ ಅರಿಯಲು. ಬೇರೆ ಬೇರೆ ವಯಸ್ಸಿಗೆ ನಮಗೆ ಬೇರೆ ಬೇರೆ ಮಳ್ಳುಗಳಿದ್ದಿದ್ದು ಬೇರೆ ಮಾತು ಬಿಡಿ. ಈಗ ಓದೋದು, ಬರೆಯೋದು ಬಿಟ್ಟರೆ ಬೇರೆ ಯಾವದೂ ಮಳ್ಳು ಇದ್ದ ಹಾಗಿಲ್ಲ. ಇದೆಲ್ಲ ಕಾರಣಗಳಿಂದ ಅಂಗಡಿ ಮುಚ್ಚಿಕೊಂಡು ಹೋಗಿದ್ದ ಬ್ಯಾಟರಿ ಬಲ್ಬಿನ ಸರ್ದಾರ್ಜೀ ಇನ್ನೂ ನೆನಪಿನಿಂದ ಮಾಸಿಲ್ಲ.

ಇಂದಿರಾ ಗಾಂಧಿ ಹತ್ಯೆ ಬಿಟ್ಟರೆ ಇನ್ನೂ ಹಲವು ವಿಶೇಷಗಳಿದ್ದವು ಆ ಮುಂಬೈ ಪ್ರವಾಸಕ್ಕೆ. ನಾವಿದ್ದ ಮನೆಯ ಮುಂದೇ ಸಮುದ್ರ. ನೋಡಲು ಮಾತ್ರ. ಹೋಗಲಿಕ್ಕೆ ದಾರಿ ಇರಲಿಲ್ಲ. ಎಲ್ಲ ನೌಕಾದಳದವರ ನಿಗರಾಣಿಯಲ್ಲಿತ್ತು. ಮನೆ ಮುಂದೇ 'ಸಾಗರ್ ಸಂಗೀತ್' ಎಂಬ ಸುಮಾರು ಮೂವತ್ತು ಮಹಡಿಗಳ ಗಗನಚುಂಬಿ ಕಟ್ಟಡವಿತ್ತು. ಅದರ ಟಾಪ್ ಫ್ಲೋರಿನಲ್ಲಿ ಆಕಾಲದ ಖ್ಯಾತ ಹಿಂದಿ ಸಿನೆಮಾ ತಾರೆ ನೂತನ್ ಇರುತ್ತಿದ್ದಳು.

ನೂತನ್

ನೂತನ್ ಅಂತ ಹೇಳಿದರೆ 'ನೀತೂ ಸಿಂಗಾ!?' ಅಂತ ಕೇಳಿ ನಾವು ಮಳ್ಳಾಗಿದ್ದೆವು. ಆ ವಯಸ್ಸಿನಲ್ಲಿ ನೂತನ್ ಯಾರೋ ನೀತೂ ಸಿಂಗ್ ಯಾರೋ? ಎಲ್ಲ ಒಂದೇ. ಅಂತೂ ಒಂದು ದಿವಸ ಸಂಜೆ ಹೊರಗೆ ಹೋಗಿ, ಆ ಗಗನಚುಂಬಿ ಕಟ್ಟಡದ ಲಿಫ್ಟ್ ಸುತ್ತ ಮುತ್ತ ಕಾಯುತ್ತ ನಿಂತು, ಹೊರಗಿಂದ ಬಂದು ಲಿಫ್ಟ್ ಸೇರಿಕೊಂಡ ನೂತನ್ ಎಂಬ ತಾರೆಯನ್ನು ನೋಡಿ ಬಂದಾಯಿತು. 'ಅವಳೇ ನೋಡಿ ನೂತನ್,' ಅಂತ ಯಾರೋ ತೋರಿಸಿದರು. ನಾವು ಒಟ್ಟು ಆಕಡೆ ನೋಡಿ, ನೂತನ್ ನೋಡಿದ್ದೂ ಆಯಿತು, ಡನ್ ಅಂತ ಒಂದು ಚೆಕ್ ಮಾರ್ಕ್ ಹಾಕಿದೆವು ಅನ್ನಿ.

ನೂತನ್ ಮಗ ಮೋಹನೀಶ್ ಬಹ್ಲ್ ತನ್ನ ಆಕಾಲದ ಗರ್ಲ್ ಫ್ರೆಂಡ್ ಕಿಮಿ ಕಾಟ್ಕರ್ ಜೊತೆ

ಆಕೆಯ ಮಗ ಮೋಹನೀಶ್ ಬೆಹಲ್ ಆಗ ಇನ್ನೂ ಇಪ್ಪತ್ತು ವರ್ಷದ ಪಡ್ಡೆ ಹುಡುಗ. ಆ ಕಾಲದ ಫೇಮಸ್ ಮಾಡೆಲ್ ಕಿಮಿ ಕಾಟ್ಕರ್ ಅವನ ಆವತ್ತಿನ ಗರ್ಲ್ ಫ್ರೆಂಡ್. ಅಂತೆಲ್ಲ ಹಿರಿಯರು ಹೇಳುತ್ತಿದ್ದರು. ಇಂಪೋರ್ಟೆಡ್ ಕಾರ್ ಒಂದನ್ನು ಸುಂಯ್ಯ ಅಂತ ಫಾಸ್ಟಾಗಿ ಓಡಿಸಿಕೊಂಡು ಹೋಗಿ ಬಂದು ಮಾಡುತ್ತಿದ್ದ ನೂತನಳ ಮಗ ಮೋಹನೀಶ್. ಪಕ್ಕದಲ್ಲಿ ಯಾವದೋ ಒಂದು ಪಟಾಕಾ ಹುಡುಗಿ ಕೂತಿರುತ್ತಿತ್ತು. ಅವಳು ಕಿಮಿ ಕಾಟ್ಕರ್ ಅಂತೆ. ಅಜ್ಜನ ಮನೆ ದೊಡ್ಡ ಬಾಲ್ಕನಿಯಿಂದ ಎಲ್ಲ ನೋಡಿದ್ದು ನೆನಪಿದೆ. ೧೯೮೬ ರಲ್ಲಿ ಮುಂದೆ ಎರಡು ವರ್ಷಗಳ ಬಳಿಕ 'ಟಾರ್ಜನ್' ಎಂಬ ಹಿಂದಿ ಸಿನೆಮಾದಲ್ಲಿ ಕಿಮಿ ಕಾಟ್ಕರಳ 'ವಿಶ್ವರೂಪ' ದರ್ಶನವಾಗಿ ಜನ್ಮ ಪಾವನವಾಯಿತು. 'ಕಾಡಿನ ರಾಜ' ಕನ್ನಡ ಸಿನೆಮಾದಲ್ಲಿ ಮಲಯಾಳಿ ಕುಟ್ಟಿ ದೀಪಾ, 'ಟಾರ್ಜನ್' ಹಿಂದಿ ಸಿನೆಮಾದಲ್ಲಿ ಕಿಮಿ ಕಾಟ್ಕರ್ ನೋಡದಿದ್ದರೆ ಈ ಜೀವನವೇ ವ್ಯರ್ಥ. ಈ ಮೊದಲು ನೋಡಿಲ್ಲ ಅಂದರೆ ಏನೂ ಚಿಂತೆ ಮಾಡದಿರಿ. ಅವೆಲ್ಲ ಈಗ ಯೂಟ್ಯೂಬ್ ಮೇಲೆ ಲಭ್ಯ. ಈಗ ನೋಡಿ ಕಣ್ಣು ತಂಪು ಮಾಡಿಕೊಳ್ಳಿ. ಅಷ್ಟೇ ಹೆಂಡತಿ ಮಕ್ಕಳ ಮುಂದೆ ನೋಡಿ, ಸಿಕ್ಕಿ ಬಿದ್ದು, ನಿಮ್ಮದು ನಾಯಿಪಾಡಾದರೆ ಅದಕ್ಕೆ ನಾವು ಜವಾಬ್ದಾರರಲ್ಲ.

ಮುಂಬೈಗೆ ಉಳಿಯಲು, ನೋಡಲು ಅಂತ ಹೋಗಿದ್ದು ಅದೇ ಕೊನೆ. ೧೯೭೬, ೧೯೮೪ ಎರಡೇ ಎರಡು ಸಲ ಮುಂಬೈನಲ್ಲಿ ಇದ್ದು ಬಂದಿದ್ದು. ಉಳಿದೆಲ್ಲ ಟೈಮ್ ನಲ್ಲಿ ಕೇವಲ ಟ್ರಾನ್ಸಿಟ್ ಅಥವಾ ಹೆಚ್ಚೆಂದರೆ ಒಂದೆರೆಡು ದಿವಸದ ಆಫೀಸ್ ಕೆಲಸ ಅಷ್ಟೇ.

ಇವತ್ತು ಇಂದಿರಾ ಗಾಂಧಿ ಮೂವತ್ತನೇ ಪುಣ್ಯ ತಿಥಿ. ಇದೆಲ್ಲ ಯಾಕೋ ನೆನಪಾಯಿತು.

ಇಂದಿರಾ ಗಾಂಧಿಯ ಹತ್ಯೆಯ ದಿನ ನೀವೆಲ್ಲಿದ್ದಿರಿ? ಏನು ಮಾಡುತ್ತಿದ್ದಿರಿ? ಪ್ಲೀಸ್ ಹೇಳಿ :)

ಮುಂದಿನ ಬ್ಲಾಗ್ ಪೋಸ್ಟಿನಲ್ಲಿ ಇಂದಿರಾ ಗಾಂಧಿ ಹತ್ಯೆಯ ಹಿಂದೆ ಇರಬಹುದಾದ ಒಂದು ಸಂಭವನೀಯ ಅಂತರಾಷ್ಟ್ರೀಯ ಷಡ್ಯಂತ್ರದ ಭಯಂಕರ ರೋಚಕ ವಿವರಗಳ ಬಗ್ಗೆ ಬರೆಯಲಿದ್ದೇನೆ. ನಿರೀಕ್ಷಿಸಿ.
-- ಇಲ್ಲಿದೆ ನೋಡಿ. (http://maheshuh.blogspot.com/2014/11/blog-post.html)


Monday, October 27, 2014

ಪ್ರಯಾಣದಲ್ಲಿ ಪವಾಡಗಳೊಂದಿಗೆ ಶುರುವಾಗುವ 'ಶ್ರೀ ಏಕನಾಥ ಈಶ್ವರನ್' ಎಂಬ ಶ್ರೇಷ್ಠ ದಾರ್ಶನಿಕರ ಜೀವನ ಚರಿತ್ರೆ

೧೯೫೯ ರ ಸಮಯ. ಆವಾಗೆಲ್ಲ ಭಾರತದಿಂದ ಅಮೇರಿಕಾಗೆ ಹೋಗಿ ಬಂದು ಮಾಡುವದೆಲ್ಲ ಹೆಚ್ಚಾಗಿ ಹಡಗಿನಲ್ಲಿಯೇ. ಹಾಗೇ ಹೊರಟವರು ಒಬ್ಬರು ಯೂನಿವರ್ಸಿಟಿ ಪ್ರೊಫೆಸರರು. ಅವರಿಗೆ ಪ್ರತಿಷ್ಠಿತ ಫುಲ್ ಬ್ರೈಟ್ ಸ್ಕಾಲರ್ಷಿಪ್ ಸಿಕ್ಕಿತ್ತು. ಅದರ ಸಲುವಾಗಿ ಅಮೇರಿಕಾಗೆ ಹೊರಟಿದ್ದರು.

ಮುಂಬೈ ಬಿಟ್ಟಿದ್ದೇ ಬಿಟ್ಟಿದ್ದು, ಅರಬ್ಬೀ ಸಮುದ್ರದಲ್ಲಿ ಸಿಕ್ಕಾಪಟ್ಟೆ ಚಂಡಮಾರುತ. ಎಲ್ಲರ ಚಂಡೆ ಬಾರಿಸಿ ಹೋಯಿತು. ಹಡಗು ಸಿಕ್ಕಾಪಟ್ಟೆ ಹೊಯ್ದಾಡುತ್ತಿತ್ತು. ದೊಡ್ಡ ಹಡಗಾಗಿದ್ದರಿಂದ ಮುಳುಗುವ ಅಪಾಯವಿರಲಿಲ್ಲ. ಆದರೆ ಪ್ರಯಾಣಿಕರು ಮಾತ್ರ ತತ್ತರಿಸಿಹೋದರು. ಎಲ್ಲ ಸರಿಯಾಗಿದ್ದರೂ, ಹಡಗಿನ ಸಾಮಾನ್ಯ ಹೊಯ್ದಾಟದಿಂದಲೇ ಜನರಿಗೆ sea sickness ಆಗಿ, ತುಂಬ ತೊಂದರೆಯಾಗುತ್ತದೆ. ಇನ್ನು ಈ ರೀತಿಯಾದ ಚಂಡಮಾರುತ ಎದ್ದರೆ ಕೇಳಬೇಕೇ? ಒಬ್ಬರ ಹೊಟ್ಟೆಯಲ್ಲಿ ಒಂದು ಅಗುಳು ಊಟ ನಿಲ್ಲಲಿಲ್ಲ. ಅಡುಗೆ ಮಾಡಬೇಕಾದವರೇ ಹೊಟ್ಟೆ ಹಿಡಿದುಕೊಂಡು, ವಾಂತಿ ಮಾಡುತ್ತ, ಹಡಗಿನ ರೈಲಿಂಗ್ ಮೇಲೆ ವಾಲಿಕೊಂಡು ನಿಂತಿದ್ದರು.

ಹೀಗಿದ್ದಾಗ ಒಂದು ದಿವಸ ಮುಂಜಾನೆ ನಮ್ಮ ಪ್ರೊಫೆಸರ್ ಸಾಹೇಬರು ಎಂದಿನಂತೆ ಬೆಳಗಿನ ಉಪಹಾರಕ್ಕೆ ಬಂದು ಕೂತರು. ಹಡಗಿನ ಅಡಿಗೆ ಭಟ್ಟ ವಿಚಿತ್ರವಾಗಿ ನೋಡಿದ. ಇತರೆ ಪ್ರಯಾಣಿಕರೆಲ್ಲರ ಹೊಟ್ಟೆ ಅದ್ಯಾವ ರೀತಿಯಲ್ಲಿ ತೊಳೆಸಿ, ಸಿಕ್ಕಾಪಟ್ಟೆ sea sickness ಆಗಿ, ಏನೂ ತಿನ್ನಲು, ಉಣ್ಣಲು ಆಗದೇ, ಬಲವಂತದಿಂದ ಏನಾದರೂ ಹೊಟ್ಟೆಗೆ ಹಾಕಿಕೊಂಡರೆ ಒಂದು ಅಗುಳೂ ನಿಲ್ಲದೆ, ಎಲ್ಲರೂ, 'ತಿಂಡಿ ಬೇಡ. ಊಟ ಬೇಡ. ಕೇವಲ ನೀರು, ಎಳನೀರು, ಸೂಪು ಅದು ಇದು ಕೊಡಿ,' ಅಂತ ಬೊಬ್ಬೆ ಹೊಡೆಯುತ್ತಿದ್ದರೆ, ಈ ಮಹಾನುಭಾವ ಪ್ರೊಫೆಸರ್ ಮಾತ್ರ ಬೆಳಿಗ್ಗೆ ಬರೋಬ್ಬರಿ ಏಳು ಘಂಟೆಗೆ ಹಡಗಿನ ಉಪಾಹಾರ ಗೃಹಕ್ಕೆ ಬಂದು, 'ಎಲ್ರೀ ಬ್ರೇಕ್ ಫಾಸ್ಟ್? ತುಂಬ ಹಸಿವೆಯಾಗಿದೆ. ಬೇಗ ಕೊಡ್ರೀ,' ಅನ್ನೋ ರೀತಿ ಕೂತು ಬಿಟ್ಟಿದ್ದಾನೆ. ಇವನಿಗೇನು sea sickness ಅಂತ ಏನೂ ಆಗುವದೇ ಇಲ್ಲವೇ? ಯಾವ ತರಹದ ವಿಚಿತ್ರ ಮನುಷ್ಯ ಇವನು? ಅಂತ ಅಚ್ಚರಿಪಟ್ಟುಕೊಂಡು, ಸರಿಯಾದ ಬ್ರೇಕ್ ಫಾಸ್ಟ್ ತಯಾರು ಮಾಡಿ, ತಿನ್ನಿಸಿ ಕಳಿಸಿದ ಹಡಗಿನ ಅಡುಗೆ ಭಟ್ಟ.

ಹೋಗೋಕಿಂತ ಮೊದಲು ಪ್ರೊಫೆಸರ್ ಸಾಹೇಬರನ್ನು ಒಂದು ಮಾತು ಕೇಳಬೇಕು ಅನ್ನಿಸಿತು ಅಡುಗೆಯವನಿಗೆ. 'ಸಾರ್, ಒಂದು ಪ್ರಶ್ನೆ. ಅದ್ಯಾವ ತರಹದ medication ತೆಗೆದುಕೊಳ್ಳುತ್ತೀರಿ? ನಿಮಗೆ sea sickness ಏನೂ ಆದ ಹಾಗೆ ಕಾಣುವದೇ ಇಲ್ಲವಲ್ಲ. ಏನು ನಿಮ್ಮ ರಹಸ್ಯ?' ಅಂತ ಕೇಳಿಬಿಟ್ಟ. ಪ್ರೊಫೆಸರ್ ಸಾಹೇಬರು ನಕ್ಕು ಹೇಳಿದರು, 'medication ಅಲ್ಲಯ್ಯ meditation. ಎಲ್ಲ ಧ್ಯಾನದ ಪ್ರಭಾವ,' ಅಂತ ಹೇಳಿ, ಕಣ್ಣು ಹೊಡೆದು ಹೋಗಿಬಿಟ್ಟರು. ಆ ಪ್ರೊಫೆಸರರು ಹಡಗಿನಲ್ಲಿದ್ದಾಗಲೂ ತಮ್ಮ ಮುಂಜಾನೆಯ ಧ್ಯಾನ, ಯೋಗ ಇತ್ಯಾದಿಗಳನ್ನು ಮಾತ್ರ ಬಿಡುತ್ತಿದ್ದಿಲ್ಲ. ತಮ್ಮ ಕ್ಯಾಬಿನ್ ನಲ್ಲಿ ಸ್ವಲ್ಪ ಗದ್ದಲ, ಸ್ಥಳದ ಅಭಾವ ಅಂತ ಹೇಳಿ ಬೆಳಿಗ್ಗೆ ಐದು ಘಂಟೆಗೆ ಎದ್ದು, ಖಾಲಿಯಿರುತ್ತಿದ್ದ, ಪೂರ್ತಿ ಶಾಂತವಿರುತ್ತಿದ್ದ ಹಡಗಿನ ಡೆಕ್ಕಿನ ಮೇಲೆ, ಒಂದು ಮೂಲೆಯಲ್ಲಿದ್ದ ಟೆನಿಸ್ ಕೋರ್ಟಿನಲ್ಲಿ ತಮ್ಮ ಬೆಳಗಿನ ಕೋಟಾ ಆದ ಎರಡು ಘಂಟೆ ಧ್ಯಾನ, ಯೋಗ ಎಲ್ಲ ಮುಗಿಸಿಕೊಂಡು ಬಂದು ಬಿಡುತ್ತಿದ್ದರು. ಅದೇ ಅವರನ್ನು sea sickness ನಿಂದ ಬಚಾವ್ ಮಾಡಿತ್ತು. ಹಾಗಂತ ಅವರ ಅಚಲ ನಂಬಿಕೆ. ಅದನ್ನೇ ಹಡಗಿನ ಅಡುಗೆ ಭಟ್ಟನಿಗೆ ಹೇಳಿ ಹೊರಟಿದ್ದರು. ಯಾವ medication ಅಂತ ಕೇಳಿದರೆ meditation ಅನ್ನುವ ಪ್ರೊಫೆಸರರನ್ನು,'ಇದು ಯಾರೋ ತಲೆ ಪಿರ್ಕಿ ಗಿರಾಕಿ,' ಅನ್ನುವಂತೆ ನೋಡಿ ಕಳಿಸಿರಬೇಕು ಬಿಡಿ ಆ ಅಡುಗೆ ಭಟ್ಟ.

ಮುಂದೆ ಹಡಗು ಯುರೋಪ್ ತಲುಪಿತು. ಅಲ್ಲಿಂದ ಮತ್ತೆ ಬೇರೆ ಹಡಗಿನಲ್ಲಿ ಪಯಣ. ಮುಂದಿನ ಪ್ರಯಾಣ ಬೇರೆ ಯಾವದೋ ಒಂದು ಬಂದರಿನಿಂದ. ಹೋಗಿ ಮುಟ್ಟಿದ ಬಂದರು ನಗರದಿಂದ ಟ್ರೈನ್ ನಲ್ಲಿ ಎಲ್ಲ ಪ್ರಯಾಣಿಕರನ್ನು ಬೇರೆ ನಗರಕ್ಕೆ ಕಳುಹಿಸಲಾಯಿತು. ಜೊತೆಗೆ ಅವರ ಸಾಮಾನುಗಳನ್ನೂ ಸಹ. ಪ್ರತಿ ಪ್ರಯಾಣಿಕರ ಸಾಮಾನುಗಳನ್ನು ಒಂದೊಂದು ಟ್ರಂಕ್ ತರಹದ ದೊಡ್ಡ ಪೆಟ್ಟಿಗೆಗಳಲ್ಲಿ ಹಾಕಿ, ಸಾಮಾನು ಸಾಗಾಣಿಕೆ ರೈಲ್ವೆ ಬೋಗಿಗಳಲ್ಲಿ ಹಾಕಿ ಕಳಿಸಲಾಯಿತು. ಟ್ರೈನ್ ನಿಂದ ಸೀದಾ ಹಡಗಿಗೆ ಸಾಮಾನು ರವಾನೆ. ಪ್ರಯಾಣಿಕರು ಮಾತ್ರ ರೈಲಿನಿಂದ ಇಳಿದು, ತಮ್ಮ ಪಾಸ್ಪೋರ್ಟ್, ವೀಸಾ ಇತ್ಯಾದಿ ತೋರಿಸಿ ಹಡಗು ಹತ್ತಿದರೆ, ಮುಂದೆ ಇಳಿಯುವದು ಸೀದಾ ನ್ಯೂಯಾರ್ಕ್ ನಗರದ ಬಂದರಿನಲ್ಲಿ. ಅದಕ್ಕೇ  ಅಂತಲೇ ಹೇಳಿದ್ದರು, 'ನಿಮ್ಮ ಪಾಸ್ಪೋರ್ಟ್, ವೀಸಾ ಇತ್ಯಾದಿಗಳನ್ನು ನಿಮ್ಮ ಜೊತೆಯೇ ಇಟ್ಟುಕೊಂಡಿರಿ. ಬಾಕಿ ಎಲ್ಲ ಸಾಮಾನುಗಳನ್ನು ಪೆಟ್ಟಿಗೆಯೊಳಗೆ ಹಾಕಬಹದು. ಆದರೆ ಅವುಗಳಲ್ಲಿ ಹಾಕಿದ ಯಾವದಾದರೂ ಸಾಮಾನು ನಂತರ ಬೇಕು ಅಂದರೆ ಸಿಗುವದಿಲ್ಲ. ಎಚ್ಚರಿಕೆ!' ಅಂತ.

ಹೇಳಿ ಕೇಳಿ absent minded ಪ್ರೊಫೆಸರ್ ಸಾಹೇಬರು. ಮೇಲಿಂದ ಮೊದಲನೇ ಸಲ ವಿದೇಶ ಪ್ರಯಾಣ. ಯಾವದೋ ಪೊರಪಾಟಿನಲ್ಲಿ ತಮ್ಮ ಎಲ್ಲ ಸಾಮಾನು including ಪಾಸ್ಪೋರ್ಟ್, ವೀಸಾ ಎಲ್ಲವನ್ನೂ ದೊಡ್ಡ ಸರಕು ಸಾಗಾಣಿಕೆ ಟ್ರಂಕ್ ತರಹದ ಬಾಕ್ಸಿನಲ್ಲಿ ಹಾಕಿ ರೈಲು ಹತ್ತಿಬಿಟ್ಟಿದ್ದರು. ಶಿವನೇ ಶಂಭುಲಿಂಗ!

ಪ್ರಯಾಣದ ನಂತರ ಬೇರೆ ಶಹರ ಬಂತು. ಅಲ್ಲಿಂದಲೇ ಅಮೇರಿಕಾಗೆ ಹೋಗುವ ಹಡಗು ಹತ್ತಬೇಕು. ಅದಕ್ಕಿಂತ ಮೊದಲು ಪಾಸ್ಪೋರ್ಟ್, ವೀಸಾ ಎಲ್ಲ ಪರಿಶೀಲನೆ ಆಗಬೇಕು. ಅದರ ಪ್ರಕಾರ ಅಲ್ಲಿಯ ವಲಸೆ ಅಧಿಕಾರಿ ಬಂದು, ನಮ್ಮ ಪ್ರೊಫೆಸರ್ ಅವರ ಹತ್ತಿರ, 'ಪಾಸ್ಪೋರ್ಟ್, ವೀಸಾ ಕೊಡಿ' ಅಂದ. ಆವಾಗಲೇ ಅವರಿಗೆ ಅರ್ಥವಾಗಿದ್ದು, 'ಓಹೋ! ಈಗ ವೀಸಾ, ಪಾಸ್ಪೋರ್ಟ್ ಎಲ್ಲ ತೋರಿಸಬೇಕು. ಆದರೆ ನನ್ನ ಪಾಸ್ಪೋರ್ಟ್, ವೀಸಾ ಎಲ್ಲ ಸರಕು ಸಾಗಾಣಿಕೆ ಬಾಕ್ಸಿನಲ್ಲಿ ಹೋಗಿಬಿಟ್ಟಿವೆ,' ಅಂತ. ಅದನ್ನೇ ಆ ಅಧಿಕಾರಿಗೆ ಹೇಳಿಕೊಂಡರು. ಅವನೇನು ಮಾಡಿಯಾನು? 'ನೋಡಿ ಸರ್! ಒಂದೇ ತರಹದ ಸಾವಿರಾರು ಬಾಕ್ಸುಗಳಿವೆ. ಮತ್ತೆ ಇಲ್ಲಿ ಅವನ್ನೆಲ್ಲವನ್ನೂ ತೆಗೆದು, ನಿಮ್ಮ ಬಾಕ್ಸ್ ಯಾವದು ಅಂತ ಹುಡುಕಿಕೊಡುವ ಯಾವದೇ ವ್ಯವಸ್ಥೆ ಇಲ್ಲ. ಅದಕ್ಕೇ ಪ್ರಯಾಣಿಕರಿಗೆ ಸೂಚನೆ ಕೊಟ್ಟಿದ್ದೆವು. ನಿಮಗೆ ಅವಶ್ಯವಾದ ವಸ್ತುಗಳನ್ನು ಸರಕಿನ ಬಾಕ್ಸಿನಲ್ಲಿ ಹಾಕದೇ ಜೊತೆಗೇ ಇಟ್ಟುಕೊಳ್ಳಿ ಅಂತ. ನೀವು ಹಾಗೆ ಮಾಡದೇ ಈಗ ಪಾಸ್ಪೋರ್ಟ್, ವೀಸಾ ಜೊತೆಗೆ ಇಲ್ಲ ಅನ್ನುತ್ತೀದ್ದೀರಿ. ಏನೂ ಮಾಡಲು ಸಾಧ್ಯವಿಲ್ಲ. ನೀವು ಮುಂದಿನ ಹಡಗಿಗೆ ಕಾಯಬೇಕಾಗುತ್ತದೆ ಅಥವಾ ವಾಪಸ್ ಇಂಡಿಯಾಕ್ಕೆ ಹೋಗಬೇಕಾಗುತ್ತದೆ. ಅದರ ವ್ಯವಸ್ಥೆ ಬಗ್ಗೆ ಯೋಚನೆ ಮಾಡಿ,' ಅಂತ ಹೇಳಿದ ಅಧಿಕಾರಿ ಒಂದು ತರಹದ ಸಂತಾಪ ಸೂಚಿಸಿದ.

ಪ್ರೊಫೆಸರ್ ಬಿಟ್ಟು ಬೇರೆ ಯಾರೋ ಆಗಿದ್ದರೆ, 'ನಮ್ಮ ಕರ್ಮ. ಏನು ಮಾಡೋದು? ಮುಂದಿನ ಸಲ ಹೋದರಾಯಿತು,' ಅಂತ ಅಂದುಕೊಂಡು, ಕೈ ಚೆಲ್ಲಿ, ತಲೆ ಹಿಡಿದುಕೊಂಡು, ಮುಂದೆ ಏನಾಗುತ್ತದೆಯೋ ಅದು ಆಗಲಿ ಅನ್ನುವ ತರಹ, ಶಿವಾ! ಅಂತ ಕೂತು ಬಿಡುತ್ತಿದ್ದರೋ ಏನೋ. ಆದರೆ ಇವರು ಮಹಾನ್ ಖತರ್ನಾಕ್ ಪ್ರೊಫೆಸರ್. ಆ ಅಧಿಕಾರಿ ಜೊತೆ ಮಾತುಕತೆ ಶುರು ಹಚ್ಚಿಕೊಂಡರು.

'ಹೌದು. ನನ್ನಿಂದ ತಪ್ಪಾಗಿದೆ. ನೀವು ಕೊಟ್ಟಿದ್ದ ಸೂಚನೆ ಗಮನಿಸಲೇ ಇಲ್ಲ. ಆದರೆ ತಾವು ಈಗ ಒಂದು ಸಹಾಯ ಮಾಡಬಹುದೇ?' ಅಂತ ಒಂದು ಫಿಟ್ಟಿಂಗ್ ಇಟ್ಟರು ಪ್ರೊಫೆಸರ್.

'ಏನು?????' ಅಂದ ಆ ಅಧಿಕಾರಿ.

'ನೋಡಿ. ನನ್ನ ಸಾಮಾನುಗಳೆಲ್ಲ ಆ ಬಾಕ್ಸಿನಲ್ಲಿ ಇವೆ. ಬಾಕ್ಸುಗಳೆಲ್ಲ ಇದೇ ರೈಲು ಗಾಡಿಯಲ್ಲಿ ಬಂದಿವೆ. ನನ್ನ ಬಾಕ್ಸನ್ನು ಹೊರಗೆ ತೆಗೆದು ಕೊಡಿಸಿ ಬಿಟ್ಟರೆ, ನಾನು ನಿಮಗೆ ಚಿರಋಣಿಯಾಗಿರುತ್ತೇನೆ. ಒಂದು ಸಲ ನನ್ನ ಬಾಕ್ಸ್ ಸಿಕ್ಕಿದರೆ ಸಾಕು. ಅದರಲ್ಲಿ ನನ್ನ ಪಾಸ್ಪೋರ್ಟ್, ವಿಸಾ ಎಲ್ಲ ಇದೆ. ನನ್ನ ಬಾಕ್ಸ್ ಸ್ವಲ್ಪ ತೆಗೆಸಿ ಕೊಡ್ತೀರಾ?' ಅಂತ ರಿಕ್ವೆಸ್ಟ್ ಮಾಡಿಕೊಂಡರು ಪ್ರೊಫೆಸರ್.

'ರೀ ಸ್ವಾಮೀ. ಅದೆಲ್ಲ ಆಗೋ ಮಾತಲ್ಲ ಅಂತ ಹೇಳಿದೆ. ಹೇಳಿದ್ದು ತಿಳಿಯೋದಿಲ್ಲವೇ ನಿಮಗೆ? ಯಾವ ಬಾಕ್ಸ್ ನಿಮ್ಮದು ಅಂತ ತೆಗೆಸಿಕೊಡೋಣ? ಎಲ್ಲ ಒಂದೇ ಮಾದರಿಯ ಬಾಕ್ಸಗಳಲ್ಲಿ ಎಲ್ಲರ ಸಾಮಾನು ಹಾಕಲಾಗಿದೆ. ಬಾಕ್ಸ್ ಮೇಲೆ ಹೆಸರು, ವಿಳಾಸ ಎಲ್ಲ ಇದೆ ಬಿಡಿ. ಆದರೆ ಸಾವಿರಾರು ಬಾಕ್ಸುಗಳನ್ನು ಒಂದರಮೇಲೊಂದರಂತೆ ಪೇರಿಸಿ ಇಡಲಾಗಿದೆ. ಹಾಗಿರುವಾಗ ಒಂದೊಂದೇ ಬಾಕ್ಸ್ ತೆಗೆದು, ಅದು ನಿಮ್ಮದು ಹೌದೋ ಅಲ್ಲವೋ ಅಂತ ನೋಡುತ್ತ ಕೂಡಲು ಟೈಮ್ ಇಲ್ಲ. ಮತ್ತೆ ಅದೆಲ್ಲ ಮಾಡಲು ಕೆಲಸಗಾರರಿಲ್ಲ. ಮತ್ತೆ ಅದು ನಮ್ಮ ಪದ್ದತಿಯೂ ಅಲ್ಲ. ನೀವು ಸುಮ್ಮನೆ ವಾಪಸ್ ಇಂಡಿಯಾಕ್ಕೆ ಹೋಗುವದನ್ನೋ ಅಥವಾ ಎಲ್ಲರ ಬಾಕ್ಸ್ ಹಡಗಿಗೆ ಶಿಫ್ಟಾದ ಮೇಲೆ ಇಲ್ಲೇ ಉಳಿವ ನಿಮ್ಮ ಬಾಕ್ಸ್ ಬಿಡಿಸಿಕೊಂಡು, ಮುಂದಿನ ಹಡಗಲ್ಲಿ ಅಮೇರಿಕಾಗೆ ಹೋಗುವ ಬಗ್ಗೆಯೋ ವಿಚಾರ ಮಾಡಿ. ತಿಳೀತಾ?' ಅಂತ ಕರ್ಟ್ ಆಗಿ ಹೇಳಿ ಹೊರಟ.

'ಸರ್, ಒಂದು ನಿಮಿಷ. ಒಂದೇ  ನಿಮಿಷ. ಇನ್ನೊಂದೇ ಮಾತು. ಪ್ಲೀಸ್ ಕೇಳಿ,' ಅಂದರು ಪ್ರೊಫೆಸರ್ ಸಾಹೇಬರು. 'ಇದೇ ಆಖ್ರೀ ರಿಕ್ವೆಸ್ಟ್. ಇದರ ಮೇಲೆ ಮತ್ತೇನೂ ಕೇಳುವದೇ ಇಲ್ಲ,' ಅನ್ನುವ ರೀತಿಯಲ್ಲಿ ಕೇಳಿಕೊಂಡರು.

ಆ ವಲಸೆ ಅಧಿಕಾರಿಗೆ ಏನೋ ಕರುಣೆ ಬಂದಿರಬೇಕು. ಸ್ವಲ್ಪ ಕರಗಿದ. 'ಏನು ಹೇಳಿ?' ಅನ್ನೋ ಲುಕ್ ಕೊಟ್ಟು ನಿಂತ.

'ಆಕಸ್ಮಾತ್ ಇಲ್ಲಿರುವ ಸಾವಿರಾರು ಬಾಕ್ಸುಗಳಲ್ಲಿ ನನ್ನ ಬಾಕ್ಸ್ ಯಾವದು ಅಂತ ನಾನು ಗುರುತಿಸಿ ಹೇಳಬಲ್ಲೆ ಅಂತಾದರೆ ನೀವು ನನ್ನ ಬಾಕ್ಸ್ ಹೊರಗೆ ತೆಗೆಸಿಕೊಡುತ್ತೀರಾ ಸರ್?' ಅಂತ ಒಂದು ಚಾಲೆಂಜ್ ಒಗೆದರು ಪ್ರೊಫೆಸರ್ ಸಾಹೇಬರು.

ಅಧಿಕಾರಿ ಈಗ ಬೆರಗಾದ. ಒಂದೇ ನಮೂನಿಯ ಸಾವಿರಾರು ಬಾಕ್ಸುಗಳಿವೆ. ಅವುಗಳಲ್ಲಿ ತಮ್ಮ ಬಾಕ್ಸ್ ಯಾವದು ಅಂತ ನಿಖರವಾಗಿ ತೋರಿಸುತ್ತೇನೆ ಅನ್ನುತ್ತಿದ್ದಾರೆ ಈ ಆಸಾಮಿ. ಇವರೇನು ಪವಾಡ ಪುರುಷರೇ? ಮತ್ತೆ ಒಂದೇ ಒಂದು ಚಾನ್ಸ್ ಕೇಳುತ್ತಿದ್ದಾರೆ. ಎಲ್ಲ ಬಾಕ್ಸ್ ತೆಗೆಸುವ ತಲೆಬಿಸಿಯಂತೂ ಇಲ್ಲವೇ ಇಲ್ಲ. ಬಾಕ್ಸ್ ರಾಶಿ ಇರುವ ಜಾಗಕ್ಕೆ ಕರೆದುಕೊಂಡು ಹೋದರಾಯಿತು. ಅವರ ಬಾಕ್ಸ್ ಯಾವದು ಅಂತ ತೋರಿಸುತ್ತಾರೆ. ತೋರಿಸಿದ ಒಂದೇ ಬಾಕ್ಸನ್ನು ರಾಶಿಯಿಂದ ತೆಗೆಸಿದರಾಯಿತು. ಅದು ಅವರದ್ದೇ ಆಗಿದ್ದರೆ ಒಳ್ಳೆಯದು. ಇಲ್ಲವೆಂದರೆ ವಾಪಸ್ ಕಳುಹಿಸಿ ಬಿಟ್ಟರಾಯಿತು ಅಂತ ಅಂದುಕೊಂಡ ಆ ಅಧಿಕಾರಿ. ವಲಸೆ ಅಧಿಕಾರಿಯಾದರೇನು? ಒಮ್ಮೊಮ್ಮೆ ಅವರೂ ಮನುಷ್ಯತ್ವದಿಂದ ವರ್ತಿಸುತ್ತಾರೆ ನೋಡಿ.

ಆಯಿತು. ಪ್ರೊಫೆಸರ್ ಸಾಹೇಬರನ್ನು ಕರೆದುಕೊಂಡು ಹೊರಟ. ರೈಲಿನಲ್ಲಿ ಬಂದಿದ್ದ ಎಲ್ಲ ಬಾಕ್ಸುಗಳನ್ನು ಒಂದು ದೊಡ್ಡ ರಾಶಿ ಮಾಡಿ ಪೇರಿಸಿಟ್ಟಿದ್ದರು. ಹಡಗಿಗೆ ಸಾಗಿಸುವ ಪ್ರಕ್ರಿಯೆ ಆರಂಭವಾಗಲಿತ್ತು.

'ನಿಮ್ಮ ಬಾಕ್ಸ್ ಯಾವದು ಅಂತ ತೋರಿಸಿ. ಒಂದೇ ಅವಕಾಶ. ಓನ್ಲಿ ಒನ್ ಚಾನ್ಸ್,' ಅಂದ ಅಧಿಕಾರಿ.

ಹಡಗಿನ ಸಂಸ್ಥೆಯ generic ಬಾಕ್ಸುಗಳು. ಎಲ್ಲ ಒಂದೇ ತರಹ ಇದ್ದವು. ಅದೂ ಸಾವಿರಾರು ಸಂಖ್ಯೆಯಲ್ಲಿ. ಅವುಗಳಲ್ಲಿ ತಮ್ಮದು ಯಾವದು ಅಂತ ಪ್ರೊಫೆಸರ್ ತಮ್ಮ ಬಾಕ್ಸ್ ಕಂಡು ಹಿಡಿದು ಕೊಡಬೇಕು.

ಪ್ರೊಫೆಸರ್ ಕಣ್ಣು ಮುಚ್ಚಿ ಒಂದು ಕ್ಷಣ ಧ್ಯಾನಸ್ಥರಾದರು. ಕಣ್ಣು ತೆರೆದವರೇ, ಪೂರ್ತಿ ವಿಶ್ವಾಸದಿಂದ, ಒಂದು particular ಬಾಕ್ಸ್ ತೋರಿಸಿ, 'ಅದೇ ನನ್ನ ಬಾಕ್ಸ್. ಅದನ್ನು ಪ್ಲೀಸ್ ಕೆಳಗಿಸಿಕೊಡಿ,' ಅಂದು ಮತ್ತೆ ಕಣ್ಣು ಮುಚ್ಚಿದರು. ಅವರನ್ನು ನೋಡಿದರೆ ದೇವರನ್ನು ಪ್ರಾರ್ಥಿಸುತ್ತಿದ್ದಾರೋ ಅನ್ನುವ ಹಾಗಿತ್ತು.

ಅಧಿಕಾರಿ, 'ಇದೆಲ್ಲ ಆಗೋ ಹೋಗೋ ಮಾತೇ?' ಅನ್ನುವ ರೀತಿಯಲ್ಲಿ ತಲೆ ಅಡ್ಡಡ್ಡ ಆಡಿಸುತ್ತ, ಅಲ್ಲಿದ್ದ ಪೋರ್ಟರ್ ಒಬ್ಬನ ಹತ್ತಿರ ಪ್ರೊಫೆಸರ್ ತೋರಿಸಿದ್ದ ಆ ಬಾಕ್ಸನ್ನು ಇಳಿಸಿ, ಈಕಡೆ ತರುವಂತೆ ಹೇಳಿದ. ಅದರಂತೆ ಪೋರ್ಟರ್ ಬಾಕ್ಸ್ ಇಳಿಸಿ, ತಂದು ಕೊಟ್ಟ.

ನೋಡಿದರೆ ಅದು ಪ್ರೊಫೆಸರ್ ಸಾಹೇಬರ ಬಾಕ್ಸೇ ಆಗಿರಬೇಕೇ!! ಒನ್ ಇನ್ ಮಿಲಿಯನ್ ಚಾನ್ಸ್ ಅಂದರೆ ಇದೇ ಇರಬೇಕು!

ಮೇಲಿದ್ದ ಹೆಸರು, ವಿಳಾಸ ಇತ್ಯಾದಿ ನೋಡಿದ ಪ್ರೊಫೆಸರ್ ಸಾಹೇಬರು, 'Yes! ಇದು ನಂದೇ!' ಅಂತ ಉದ್ಗರಿಸಿದರು. ಓಪನ್ ಮಾಡಿ, ಬೇಗ ಬೇಗನೆ ತಮ್ಮ ಪಾಸ್ಪೋರ್ಟ್, ವೀಸಾ ಇತ್ಯಾದಿಗಳನ್ನು ತೆಗೆದುಕೊಳ್ಳತೊಡಗಿದರು.

ವಲಸೆ ಅಧಿಕಾರಿ ಅಚ್ಚರಿಯಿಂದ 'ಹಾಂ!' ಅಂತ ತೆರೆದ ಬಾಯಿ ಮುಚ್ಚಲಿಲ್ಲ. ಪ್ರೊಫೆಸರ್ ಸಾಹೇಬರೇ ಅವನ ಮುಖದ ಮುಂದೆ ಕೈಯಾಡಿಸಿ, 'ಸರ್, ತುಂಬ ಥ್ಯಾಂಕ್ಸ್. ನನ್ನ ಪಾಸ್ಪೋರ್ಟ್, ವೀಸಾ ಎಲ್ಲ ತೆಗೆದುಕೊಂಡೆ ಸರ್. ನೀವು ಈಗ ಬೇಕಾದರೆ ಆ ಬಾಕ್ಸ್ ಬಂದ್  ಮಾಡಿಸಿ, ಹಡಗಿಗೆ ಸಾಗಿಸಬಹುದು. ನನ್ನ ಪಾಸ್ಪೋರ್ಟ್, ವೀಸಾ ಸ್ಟ್ಯಾಂಪ್ ಮಾಡಿಕೊಟ್ಟು ಬಿಟ್ಟರೆ ನಾನೂ ಸಹ ಹೋಗಿ ಹಡಗು ಹತ್ತಿಕೊಳ್ಳುತ್ತೇನೆ. ಮತ್ತೊಮ್ಮೆ ನಿಮಗೆ ಬಹಳ ಬಹಳ ಥ್ಯಾಂಕ್ಸ್!' ಅಂದರು.

ವಲಸೆ ಅಧಿಕಾರಿ ಗರಬಡಿದವನಂತೆ ನಿಂತೇ ಇದ್ದ. 'ಇದ್ದ ಸಾವಿರಾರು, ಒಂದೇ ತರಹದ, ಬಾಕ್ಸುಗಳಲ್ಲಿ ತಮ್ಮ ಬಾಕ್ಸ್ ಯಾವದು ಅಂತ ಅದೆಂಗೆ ಕಂಡು ಹಿಡಿದರು? ಅದೂ ಮೊದಲನೇ ಸಲವೇ ಕರೆಕ್ಟಾಗಿ,' ಅಂತ ಅವನಿಗೆ ತಿಳಿಯಲಿಲ್ಲ. 'ಹೆಂಗ್ರೀ????' ಅಂತ ಪ್ರೊಫೆಸರ್ ಕಡೆ ನೋಡಿದರೆ ಅವರು ತುಂಟ ನಗೆ ನಗುತ್ತ ನಿಂತಿದ್ದರು.

ವಲಸೆ ಅಧಿಕಾರಿ ತನ್ನ ಕೆಲಸ ಮುಗಿಸಿ, ಶುಭ ಪ್ರಯಾಣ ಕೋರಿ, ಪ್ರೊಫೆಸರ್ ಸಾಹೇಬರನ್ನು ಕಳಿಸಿಕೊಟ್ಟ. ಕಳಿಸುವ ಮುಂಚೆ ಕೇಳೇ ಬಿಟ್ಟ. 'ಅದೆಂಗೆ ನಿಮ್ಮ ಬಾಕ್ಸ್ ಅಷ್ಟು ನಿಖರವಾಗಿ ಕಂಡುಹಿಡಿದಿರಿ? ನಿಮಗೇನು ಅತೀಂದ್ರಿಯ ಶಕ್ತಿಗಳಿವೆಯೇ? ಅಷ್ಟೊಂದು ಒಂದೇ ತರಹದ ಬಾಕ್ಸುಗಳಿದ್ದವು. ಹೆಂಗ್ರೀ? ಸ್ವಲ್ಪ ಹೇಳಿ' ಅಂತ ಕೇಳಿದ. 'ಪ್ಲೀಸ್ ಹೇಳಿ ಹೋಗಿ,' ಅನ್ನುವ ಲುಕ್ ಕೊಟ್ಟ.

'ಎಲ್ಲ ಶ್ರೀಕೃಷ್ಣನ ಮಹಿಮೆ. ಅವನದೇ ಕೃಪೆ. ಅವನು ಎಂದೂ ನನ್ನ ಕೈಬಿಟ್ಟಿಲ್ಲ. ಬಿಡುವದೂ ಇಲ್ಲ. ಅಷ್ಟಿದೆ ಅವನ ಮೇಲೆ ನನ್ನ ನಂಬಿಕೆ. ಸರಿ ಈಗ ಬರ್ಲಾ? ಮತ್ತೊಮ್ಮೆ ತುಂಬ ಥ್ಯಾಂಕ್ಸ್' ಅಂತ ಹೇಳಿ ಹಡಗು ಹತ್ತಲು ಹೊರಟೇ ಬಿಟ್ಟರು.

'ಶ್ರೀ....ಕೃಷ್.... ನಾ. ಏನಪ್ಪಾ ಹೇಳ್ತಾನೆ ಈ ಆಸಾಮಿ. ತಲೆ ಬುಡವಿಲ್ಲ. ಆದರೂ ಸಕತ್ ಇದ್ದಾನೆ,' ಅಂದುಕೊಂಡ ವಲಸೆ ಅಧಿಕಾರಿ ಅವರನ್ನು ಅಭಿನಂದಿಸಿ ಕಳುಹಿಸಿಕೊಟ್ಟ.

ಹೀಗೆ ತಮಾಷೆಯಾಗಿ ತಮ್ಮ ಪ್ರಥಮ ವಿದೇಶಪ್ರಯಾಣದ ಬಗ್ಗೆ ಹೇಳಿಕೊಂಡವರು ಶ್ರೀ ಏಕನಾಥ ಈಶ್ವರನ್. ಇಪ್ಪತ್ತನೇ ಶತಮಾನದ ಒಬ್ಬ ಪ್ರಮುಖ ದಾರ್ಶನಿಕರು, ಮಹತ್ವದ philosopher, ಧ್ಯಾನದ (Meditation) ಹಿರಿಯ ಶಿಕ್ಷಕರು, ಅಧ್ಯಾತ್ಮದ ಉನ್ನತ ಚಿಂತಕರು, ಜಗತ್ತಿನ ಎಲ್ಲ ಪ್ರಮುಖ ಧರ್ಮಗ್ರಂಥಗಳ ಮೇಲೆ ಭಾಷ್ಯ ಬರೆದ ಖ್ಯಾತ ಲೇಖಕರು. ಕೇರಳದಲ್ಲಿ ಹುಟ್ಟಿ, ನಾಗಪುರ್ ಯೂನಿವರ್ಸಿಟಿಯಲ್ಲಿ ಇಂಗ್ಲೀಶ್ ಪ್ರೊಫೆಸರ್ ಆಗಿದ್ದವರು. ಐವತ್ತರ ದಶಕದಲ್ಲಿ ಭಾರತದಲ್ಲಿ ಅಂಕಣಕಾರರಾಗಿ, ಭಾಷಣಕಾರರಾಗಿ ಸುಮಾರು ಪ್ರಸಿದ್ಧರಾಗಿದ್ದವರು. ಆದರೆ ಅವರು ದಾರ್ಶನಿಕ, spiritual teacher, philosopher ಅಂತ ಹೊರಹೊಮ್ಮಿದ್ದು, ಪ್ರಸಿದ್ಧರಾಗಿದ್ದು ಅಮೇರಿಕಾದಲ್ಲಿ.

ಶ್ರೀ ಏಕನಾಥ ಈಶ್ವರನ್
ಶ್ರೀ ಏಕನಾಥ ಈಶ್ವರನ್ ಅವರು ಅಮೇರಿಕಾಗೆ ಫುಲ್ ಬ್ರೈಟ್ ಸ್ಕಾಲರ್ಷಿಪ್ ಮೇಲೆ ಬಂದರು. ಸ್ಯಾನ್ ಫ್ರಾನ್ಸಿಸ್ಕೋ ಏರಿಯಾದಲ್ಲಿರುವ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಬರ್ಕ್ಲೀ, ಇಂಗ್ಲೀಶ್ ವಿಭಾಗದಲ್ಲಿ ತಮ್ಮ ಕಾರ್ಯ ನಿರ್ವರ್ಹಿಸುತ್ತಿದ್ದರು. ಆಹೊತ್ತಿಗಾಗಲೇ ಅವರಿಗೆ ವೇದ, ಉಪನಿಷತ್ತು, ಭಗವದ್ಗೀತೆ, ಪತಂಜಲಿಯ ಯೋಗ ಸೂತ್ರಗಳು, ವೇದಾಂತ, ಬೌದ್ಧರ ಧರ್ಮ ಗ್ರಂಥವಾದ ಧಮ್ಮಪಾದ, ಸೂಫಿ ಕವಿಗಳ ಕವಿತೆಗಳು ಎಲ್ಲದರ ಮೇಲೆ ಅಗಾಧ ಪಾಂಡಿತ್ಯವಿತ್ತು. ನಿರಂತರ ಸಾಧನೆಯಿತ್ತು. ಸಂಸ್ಕೃತ, ಇಂಗ್ಲೀಶ್ ಎರಡೂ ಭಾಷೆಗಳ ಮೇಲೆ ಒಳ್ಳೆ ಹಿಡಿತವಿತ್ತು. ಮತ್ತೆ ಆಗಲೇ ಸುಮಾರು ಹದಿನೈದು ವರ್ಷಕ್ಕಿಂತಲೂ ಹೆಚ್ಚಿನ ಅಧ್ಯಾತ್ಮಿಕ ಸಾಧನೆಯಿತ್ತು. ಹೀಗಾಗಿ spirituality / ಅಧ್ಯಾತ್ಮದ ಬಗ್ಗೆ ಆಸಕ್ತಿಯಿದ್ದ ವಿದ್ಯಾರ್ಥಿಗಳು ಅವರ ಸುತ್ತ ಕಲೆಯತೊಡಗಿದರು. ಅದ್ಭುತ ಇಂಗ್ಲೀಶ್ ಪ್ರೊಫೆಸರ್ ಅಂತ ಖ್ಯಾತರಾಗಿಯೇ ಇದ್ದರು. ಈಗ ಅಮೇರಿಕಾದಲ್ಲಿ ಅದ್ಭುತ ದಾರ್ಶನಿಕ, ಅತ್ಯುತ್ತಮ ಅಧ್ಯಾತ್ಮಿಕ ಶಿಕ್ಷಕ ಅಂತ ಹೊರಹೊಮ್ಮ ತೊಡಗಿದರು. ಇದಕ್ಕಾಗಿ ಅವರು ಮಾಡಿದ್ದು ಏನೂ ಇಲ್ಲ. ಕೇವಲ ತಮ್ಮ ಜ್ಞಾನ, ಅದಕ್ಕಿಂತ ಹೆಚ್ಚಾಗಿ ಸ್ವಂತ ಅನುಭವಗಳಿಂದ ಪರಿಪಕ್ವಗೊಂಡಿದ್ದ ಜ್ಞಾನವನ್ನು ಯಾವದೇ ಪ್ರತಿಫಲದ ಆಸೆಯಿಲ್ಲದೆ ಎಲ್ಲರೊಂದಿಗೆ ಹಂಚಿಕೊಂಡಿದ್ದು. ಅಲ್ಲಿಂದ ಶುರುವಾದ ಅವರ ಯಶೋಗಾಥೆ ಮುಂದುವರೆಯುತ್ತಲೇ ಇದೆ.

ಅವರ ಇಂಗ್ಲೀಶ್ ಕ್ಲಾಸಿಗಿಂತ ಅವರ ಮನೆಯಲ್ಲಿಯೇ ಜಾಸ್ತಿ ವಿದ್ಯಾರ್ಥಿಗಳು ಸೇರತೊಡಗಿದರು. ದಿನಾ ಸಂಜೆ informal ಆಗಿ ಪ್ರವಚನ ನೀಡಲು ಶುರುವಿಟ್ಟುಕೊಂಡರು ಶ್ರೀ ಈಶ್ವರನ್. ಅದ್ಯಾವ ರೀತಿಯ response ಬಂತು ಅಂದರೆ ಪ್ರೊಫೆಸರ್ ಸಾಹೇಬರ ಸಣ್ಣ ಬ್ಯಾಚುಲರ್ apartment ಯಾವದಕ್ಕೂ ಸಾಲಲಿಲ್ಲ. ಪ್ರವಚನಗಳನ್ನು ಬೇರೆ ಕಡೆ ಪಬ್ಲಿಕ್ ಜಾಗಗಳಿಗೆ ಶಿಫ್ಟ್ ಮಾಡಬೇಕಾಯಿತು. ಪ್ರವಚನಗಳು ತುಂಬಿ ತುಳುಕತೊಡಗಿದವು. ಸನಾತನ ಧರ್ಮದ ತಿರುಳನ್ನು ಸರಳ ಭಾಷೆಯಲ್ಲಿ ಹೇಳುವ ಅವರ ಶೈಲಿಗೆ ಇಲ್ಲಿಯ ಜನ ಫುಲ್ ಫಿದಾ. ಮತ್ತೆ ಅವರ ಪ್ರವಚನಗಳು ಫುಲ್ ಪ್ರಾಕ್ಟಿಕಲ್. ದಿನನಿತ್ಯದ ಬದುಕಿಗೆ ಅಳವಡಿಸಿಕೊಳ್ಳಲು ಅನುಕೂಲವಾಗುವ ಹಾಗೆಯೇ ಇರುತ್ತಿದ್ದವು. ಅವರ ಪ್ರವಚನಗಳಲ್ಲಿ ಒಣ ವೇದಾಂತ, ಮಣ್ಣು ಮಶಿ ಇಲ್ಲವೇ ಇಲ್ಲ, ಕೇಳಲೇಬೇಡಿ.

ಧ್ಯಾನದ (Meditation) ಮೇಲೆ ಆಪರಿ ಆಸಕ್ತಿಯನ್ನು ಗಮನಿಸಿದ ಶ್ರೀ ಏಕನಾಥ ಈಶ್ವರನ್ ಬರ್ಕ್ಲೀ ಯೂನಿವರ್ಸಿಟಿಗೆ ಒಂದು ಐತಿಹಾಸಿಕ ಪ್ರಪೋಸಲ್ ಇಟ್ಟರು. 'ಮೆಡಿಟೇಶನ್ ಅಂದರೆ ಧಾನ್ಯವನ್ನೂ ಸಹ ಇತರೆ ವಿಷಯಗಳಂತೆ ಪಾಠ ಮಾಡುತ್ತೇನೆ. ಅನುಮತಿ ಕೊಡಿ,' ಅಂತ. ಬರ್ಕ್ಲೀ ವಿಶ್ವವಿದ್ಯಾಲಯ ಅಂತಹ ಹೊಸ ಪ್ರಯೋಗಗಳಿಗೆ ಯಾವಾಗಲೂ ತೆರೆದುಕೊಳ್ಳುವಂತಹ radical ಯೂನಿವರ್ಸಿಟಿ. 'ಆಯಿತು  ಮಾಡಿಕೊಳ್ಳಿ. ಮೊದಲು syllabus, textbook ಇತ್ಯಾದಿಗಳ ಬಗ್ಗೆ ಮಾಹಿತಿ ಕೊಡಿ. ಕೊಟ್ಟ ನಂತರ ಧ್ಯಾನದ ಕೋರ್ಸಿಗೆ ಅನುಮತಿ ಸಿಗುತ್ತದೆ. ಮುಂದಿನ ಸೆಮಿಸ್ಟರ್ ನಿಂದ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು, ನಿಮ್ಮ ಕೋರ್ಸ್ ಸೇರಬಹುದು. ಅದರಲ್ಲಿ ಗಳಿಸುವ ಕ್ರೆಡಿಟ್ (ಅಂಕಗಳು) ಡಿಗ್ರಿಗಾಗಿ ಉಪಯೋಗಿಸಬಹುದು' ಅಂತ ಹೇಳಿತು ಯೂನಿವರ್ಸಿಟಿ.

ಜಗತ್ತಿನ ವಿಶ್ವವಿದ್ಯಾಲಯವೊಂದು ಧ್ಯಾನದ ಮೇಲೆ ಕ್ರೆಡಿಟ್ ಕೋರ್ಸ್ ಶುರು ಮಾಡಿದ್ದು ಅದೇ ಮೊದಲು. ಇದೆಲ್ಲ ೧೯೬೦ ರ ಸುಮಾರಿನ ಮಾತು.

ಅಲ್ಲಿಯವರೆಗೆ ತಮ್ಮ ಪಾಡಿಗೆ ತಮ್ಮ ಧ್ಯಾನ, ಅಧ್ಯಾತ್ಮ ಅಧ್ಯಯನ, ಅಧ್ಯಾಪನ ಮಾಡಿಕೊಂಡಿದ್ದ ಶ್ರೀ ಏಕನಾಥ ಈಶ್ವರನ್ ಈಗ ಕ್ರಮಬದ್ಧವಾಗಿ ಒಂದು spiritual framework ಅಭಿವೃದ್ಧಿ ಮಾಡಲು ಕುಳಿತರು. ಅದರ ಪರಿಣಾಮವಾಗಿ ತಯಾರಾಗಿದ್ದೇ Passage Meditation & 8 Points Program.

ಬರ್ಕ್ಲೀ ಯೂನಿವರ್ಸಿಟಿಯಲ್ಲಿ ಕಿಕ್ಕಿರಿದ ತರಗತಿಗೆ ಮೆಡಿಟೇಶನ್ ಪಾಠ ಮಾಡುತ್ತಿರುವ ಪ್ರೊಫೆಸರ್ ಈಶ್ವರನ್

ಬರ್ಕ್ಲೀ ಯೂನಿವರ್ಸಿಟಿಯಲ್ಲಿ ಧ್ಯಾನ / meditation ಅನ್ನುವ ಕೋರ್ಸಿಗೆ ಅಭೂತಪೂರ್ವ ಯಶಸ್ಸು ಸಿಕ್ಕಿತು. ಮುಂದೆ ಹಲವು ವರ್ಷಗಳ ಕಾಲ ಬರ್ಕ್ಲೀ ಯೂನಿವರ್ಸಿಟಿಯಲ್ಲಿ ಆ ಕೋರ್ಸ್ ಮತ್ತು ಇತರ ಸಂಬಂಧಿತ ಕೋರ್ಸುಗಳನ್ನು ಶ್ರೀ ಏಕನಾಥ ಈಶ್ವರನ್ ಮತ್ತು ಅವರಿಂದ ತಯಾರಾದ ಶಿಷ್ಯರು ಪಾಠ ಮಾಡಿದರು. ಸಾವಿರಾರು ಜನ ವಿದ್ಯಾರ್ಥಿಗಳು ಧ್ಯಾನವನ್ನು ಪದ್ಧತಿ ಪ್ರಕಾರ ಕಲಿತು ಜೀವನ ಹಸನು ಮಾಡಿಕೊಂಡರು. 'ವಾರಕ್ಕೊಮ್ಮೆ ತರಗತಿಯ ನಂತರ ಧ್ಯಾನದ ನೆಪದಲ್ಲಿ ಕಣ್ಣು ಮುಚ್ಚಿ ಕೂತು, ಸೆಮಿಸ್ಟರ್ ಕೊನೆಗೆ ಒಂದು ಪ್ರಬಂಧ ಬರೆದು ಕೊಟ್ಟರೆ ಒಂದಿಷ್ಟು ಮಾರ್ಕ್ಸ್ ಸಿಗುತ್ತದೆ. ಡಿಗ್ರಿಗೆ ಒಂದು ಸಹಾಯವಾಗುತ್ತದೆ,' ಅಂತ ಅಂದುಕೊಂಡು, ಅಷ್ಟೇ ಮಾಡಿ, ಎದ್ದು ಹೋದವರೂ ಇದ್ದರು ಬಿಡಿ.

ಧ್ಯಾನದ ಬಗ್ಗೆ, ಅಧ್ಯಾತ್ಮದ ಬಗ್ಗೆ, spirituality ಬಗ್ಗೆ, philosophy ಬಗ್ಗೆ, metaphysics ಬಗ್ಗೆ ಬೇಕಾದಷ್ಟು ಪುಸ್ತಕಗಳಿದ್ದವು. ಅವನ್ನೆಲ್ಲ ಕಲಿಸಿಕೊಡುವ ಗುರುಗಳೂ ಇದ್ದರು. ಅದೆಲ್ಲ ಸರಿ. ಆದರೆ ಇಷ್ಟು ಸರಳವಾಗಿ, practical ಆಗಿ, systematic ಆಗಿ, methodical ಆಗಿ, ಒಂದು integrated approach ರೀತಿಯಲ್ಲಿ, ಭಾರತೀಯ ಸನಾತನ ಸಂಪ್ರದಾಯಕ್ಕೆ ಚ್ಯುತಿ ಬರದಂತೆ, ಧ್ಯಾನ / meditation ಹೇಳಿಕೊಟ್ಟವರಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ಶ್ರೀ ಏಕನಾಥ ಈಶ್ವರನ್.

ವಿಶ್ವವಿದ್ಯಾಲದ ಒಳಗೆ ಮತ್ತು ಹೊರಗೆ ಅವರು ನೀಡುತ್ತಿದ್ದ ಪ್ರವಚನಗಳಿಂದ ಪ್ರಭಾವಿತರಾದ, ತುಂಬ ಶ್ರದ್ಧಾವಂತರಾದ ಒಂದಿಷ್ಟು ಶಿಷ್ಯರ ದಂಡು ಅವರ ಸುತ್ತ ಬೆಳೆಯತೊಡಗಿತು. ಎಲ್ಲರೂ ಬೇರೆ ಬೇರೆ ಕೆಲಸ, ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡವರೇ. ಮತ್ತೆ ಈಶ್ವರನ್ ಹೇಳಿದ್ದು ಸಹ ಅದನ್ನೇ. 'ಅಧ್ಯಾತ್ಮ, spirituality ಯಲ್ಲಿ ಸಾಧನೆಯನ್ನು ಜೀವನದ ಯಾವದೇ ಘಟ್ಟದಲ್ಲಿ, ನಾವಿರುವ ಜೀವನದ context ನಲ್ಲಿಯೇ ಮಾಡಬಹುದು. ಮತ್ತೆ ಅದರಲ್ಲೇ ಮಾಡುವದು ಸಹಜ ಧರ್ಮ. ಅಧ್ಯಾತ್ಮ ಸಾಧನೆಗಾಗಿ ಚಿತ್ರ ವಿಚಿತ್ರ ವೇಷ ಭೂಷಣ, ತರೇವಾರಿ ಆಚರಣೆ ಎಲ್ಲದರ ಜರೂರತ್ತೇ ಇಲ್ಲ. ಮುಖ್ಯವಾಗಿ ಸಮಾಜದ ಮುಖ್ಯವಾಹಿನಿಗೆ ಬೆನ್ನು ಹಾಕುವ ಅವಶ್ಯಕತೆಯಂತೂ ಇಲ್ಲವೇ ಇಲ್ಲ,' ಅಂತ ಈಶ್ವರನ್ ಉವಾಚ. ಅವರು ಇದ್ದಿದ್ದು ಸಹ ಹಾಗೆಯೇ. ಧ್ಯಾನದ, ಅಧ್ಯಾತ್ಮದ ಶಿಕ್ಷಕರೇ ಆದರೂ ಟಿಪಿಕಲ್ ಪ್ರೊಫೆಸರ್ ಹಾಗೆ ಯಾವಾಗಲೂ ನೀಟಾಗಿ ಸೂಟ್ ಅಥವಾ ಬಿಸಿನೆಸ್ ಕ್ಯಾಶುಯಲ್ ಡ್ರೆಸ್ ಹಾಕಿಕೊಳ್ಳುತ್ತಿದ್ದರು. ಯಾವದೇ ತರಹದ ನಾಮ, ವಿಭೂತಿ, ಜುಟ್ಟ, ಗಿಟ್ಟ ಅಂತ ಯಾವದೇ ತರಹದ ಎಕ್ಸಟ್ರಾ ಫಿಟ್ಟಿಂಗ್ ಗಿಟ್ಟಿಂಗ್ ಇಲ್ಲ. ಡಂಬಾಚಾರ ಕೇಳಲೇಬೇಡಿ.

ಅವರಡಿಯಲ್ಲಿ ಶ್ರದ್ಧೆಯಿಂದ ಸಾಧನೆ ಶುರು ಮಾಡಿಕೊಂಡಿದ್ದ ಅವರ ಶಿಷ್ಯರಿಗೆ ಅನ್ನಿಸಿದ್ದು, 'ನಮ್ಮದೇ ಒಂದು ಅಧ್ಯಾತ್ಮಿಕ ಸಮುದಾಯ (spiritual community) ಮಾಡಿಕೊಂಡರೆ ಹೇಗೆ?' ಅಂತ. ಬರ್ಕ್ಲೀ ಕ್ಯಾಂಪಸ್ ನಂತಹ ಜನಜಂಗುಳಿ ಇರುವ ಪ್ರದೇಶಕ್ಕಿಂತ, ಸ್ವಲ್ಪ ದೂರದಲ್ಲಿ, ಊರ ಹೊರಗೆ, ಶಾಂತಿಯಿಂದ ಇರುವ, ನಿಸರ್ಗದ ಮಡಿಲಲ್ಲಿರುವ ಪ್ರದೇಶ ಸಿಕ್ಕರೆ ಒಳ್ಳೆಯದು ಅನ್ನುವ ಭಾವನೆ ಎಲ್ಲರಿಗೂ ಬರಲು ಆರಂಭವಾಗಿತ್ತು. ಅಂತಹ ಆಸೆಗೆ ದೇವರೇ ತಥಾಸ್ತು ಅನ್ನುವಂತೆ ಸಿಕ್ಕಿದ್ದು ಇನ್ನೂರೈವತ್ತು ಎಕರೆಗಳ ಸುಂದರ ಕೃಷಿ ಪ್ರದೇಶ. ಒಳ್ಳೆ ಭಾರತದ ಆಶ್ರಮಗಳ ಸೆಟ್ಟಿಂಗ್ ಇತ್ತು. ಆ ಕಾಲದಲ್ಲಿ ತುಂಬ ಚೀಪಲ್ಲೇ ಸಿಕ್ಕಿತ್ತಂತೆ. ಸ್ಯಾನ್ ಫ್ರಾನ್ಸಿಸ್ಕೋ ನಗರದಿಂದ ಉತ್ತರಕ್ಕೆ ಒಂದು ಎಪ್ಪತ್ತು ಮೈಲಿ ದೂರ. ತುಂಬ ಸುಂದರ ಸ್ಥಳ. ನಿಸರ್ಗ ರಮಣೀಯ. ಎಕರೆಗಟ್ಟಲೆ ಹುಲ್ಲುಗಾವಲು. ಹಾಯಾಗಿ ಓಡಾಡಿಕೊಂಡಿರುವ ಕಾಡು ಜಿಂಕೆ, ಮೊಲ, ಹಂಸ, ಇತ್ಯಾದಿ. ಸಣ್ಣ ತೊರೆ. ಇವರದ್ದೇ ಆದ ಗದ್ದೆ. ಹಸುಗಳಿರುವ ಕೊಟ್ಟಿಗೆ. ಒಂದು ಸಣ್ಣ ಹಳ್ಳಿಯ ಹಾಗೆ. ಎರಡು ಮೈಲಿ ದೂರದಲ್ಲಿ ಸುಂದರ ಡಿಲ್ಲನ್ ಬೀಚ್. ಅಂತಹ ಜಾಗದಲ್ಲಿ ಶುರುವಾದದ್ದೇ 'ರಾಮಗಿರಿ ಆಶ್ರಮ'. ಇದು ಮುಂದೆ ಶ್ರೀ ಈಶ್ವರನ್ ಮತ್ತು ಅವರ ಖಾಸ್ ಶಿಷ್ಯರ ಖಾಯಂ ನೆಲೆಯಾಯಿತು. ಟಿಪಿಕಲ್ ಗುರುಕುಲದ ಮಾದರಿಯ ಸೆಟಪ್. ವ್ಯತ್ಯಾಸ ಅಂದರೆ ಗುರುಕುಲದ ಸೆಟ್ಟಿಂಗ್ ಆದರೂ ಹೊರಗಡೆ ಹೋಗಿ ಕೆಲಸ ಮಾಡುವವರು, ವಿದ್ಯಾಭ್ಯಾಸ ಮಾಡುವವರು, ಸಂಸಾರಸ್ಥರೂ ಎಲ್ಲ ಇದ್ದರು. ಇನ್ನು ಕೆಲವರು ಆಶ್ರಮದ ಫುಲ್ ಟೈಮ್ ಕೆಲಸಗಾರರಾದರು. ಯಾಕೆಂದರೆ ಆವಾಗಲೇ 'ನೀಲಗಿರಿ ಧ್ಯಾನ ಕೇಂದ್ರ' (Blue Mountain Center of Meditation) ಅನ್ನುವ ಸಂಸ್ಥೆಯನ್ನು ಶ್ರೀ ಈಶ್ವರನ್ ಮತ್ತು ಶಿಷ್ಯರು ಸ್ಥಾಪಿಸಿ, ಪುಸ್ತಕಗಳ ಪ್ರಕಟಣೆ, ಧ್ಯಾನದ ಕ್ಯಾಂಪ್ ಗಳನ್ನು ನಡೆಸುವದು ಇತ್ಯಾದಿ ಶುರುಮಾಡಿಕೊಂಡಿದ್ದರು. ನೀಲಗಿರಿ ಅನ್ನುವ ಹೆಸರು ಏಕನಾಥ ಈಶ್ವರನ್ ಅವರ ಮೂಲ ಸ್ಥಳದಿಂದ ಪ್ರಭಾವಿತ. ಅವರು ಹುಟ್ಟಿದ್ದು, ಬೆಳೆದಿದ್ದು ಎಲ್ಲ ಕೇರಳದ ನೀಲಗಿರಿ ಬೆಟ್ಟದ ತಪ್ಪಲಲ್ಲೇ.

ನಿಸರ್ಗದ ಮಡಿಲಲ್ಲಿ ರಾಮಗಿರಿ ಆಶ್ರಮ

ಸುಮಾರು ೧೯೬೫ ರ ಹೊತ್ತಿಗೆ ಶ್ರೀ ಏಕನಾಥ ಈಶ್ವರನ್ ಪೂರ್ಣ ಪ್ರಮಾಣದ ಧ್ಯಾನದ ಶಿಕ್ಷಕ, ಪ್ರವಚನಕಾರ, ಲೇಖಕ  ಅಂತ ಬದಲಾದರು. ಇಂಗ್ಲೀಶ್ ಅಧ್ಯಾಪನ ನಿಂತಿತು. full time ಅಧ್ಯಾತ್ಮದ ಅಧ್ಯಾಪನ ಶುರುವಾಯಿತು. ಅವರೇ ಹೇಳುವಂತೆ, 'Earlier I used to teach skills to make a living. Now I teach skills to make a life' ಅನ್ನುವ ಮಾದರಿಯಲ್ಲಿ ತಮ್ಮ professional direction ಬದಲು ಮಾಡಿಕೊಂಡರು. ಅವರ ಪ್ರಕಾರ ಎಲ್ಲವನ್ನೂ ಶ್ರೀಕೃಷ್ಣ ಮಾಡಿಸಿದ. ಶ್ರೀಕೃಷ್ಣ ಅವರ ಆರಾಧ್ಯ ದೈವ. ಅವರ ಅಜ್ಜಿ (ತಾಯಿಯ ತಾಯಿ) ಅವರ ಅಧ್ಯಾತ್ಮಿಕ ಗುರು.

ಅವರ ಪ್ರವಚನಗಳನ್ನು ಆಧಾರಿಸಿ ಅನೇಕ ಪುಸ್ತಕಗಳನ್ನು ಬರೆದು ಪ್ರಕಟಮಾಡಿದರು. ಅವುಗಳಲ್ಲಿ ಭಗವದ್ಗೀತೆ ಭಾಷ್ಯ, ಉಪನಿಷತ್ತುಗಳ ಭಾಷ್ಯ, ಧಮ್ಮಪಾದದ ಭಾಷ್ಯ, ಮತ್ತಿತರ ಪುಸ್ತಕಗಳು ಬಹಳ ಪ್ರಖ್ಯಾತವಾದವು. ಬೇರೆ ಧರ್ಮಗಳ ಅನೇಕ ಗ್ರಂಥಗಳ ಮೇಲೂ ಸಾಕಷ್ಟು ಪುಸ್ತಕ ಬರೆದರು. ತಾವು ತುಂಬ ಇಷ್ಟಪಡುತ್ತಿದ್ದ ಗಾಂಧಿ, ಗಡಿನಾಡ ಗಾಂಧಿ ಬಾದಶಾ ಖಾನ್ ಮೇಲೂ ಪುಸ್ತಕ ಬರೆದರು. ಅವೆಲ್ಲ ತುಂಬ ಪಾಪ್ಯುಲರ್ ಆದವು. ಮಾರುಕಟ್ಟೆಯಲ್ಲಿ ಯಶಸ್ವಿಯೂ ಆದವು. ಇಂದೂ ಸಹ ಅನೇಕ ಪುಸ್ತಕಗಳು ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿವೆ. ಅಂತಹ ಪುಸ್ತಕಗಳು ಅನೇಕ ಭಾಷೆಗಳಿಗೆ ತರ್ಜುಮೆಗೊಂಡು ಅಮೇರಿಕಾದ ಹೊರಗೂ ಶ್ರೀ ಈಶ್ವರನ್ ಅವರಿಗೆ ಅನುಯಾಯಿಗಳು ಸಿಕ್ಕರು. ಧ್ಯಾನದ ಕ್ಯಾಂಪುಗಳಿಗೆ (Meditation Retreats) ಜಗತ್ತಿನ ಬೇರೆ ಬೇರೆ ಕಡೆಯಿಂದ ಜನರು ಬರಲು ಶುರು ಮಾಡಿ ಅಮೇರಿಕಾದ ಹೊರಗೂ ಈಶ್ವರನ್ ಖ್ಯಾತರಾದರು.

ಇಷ್ಟೆಲ್ಲ ಸಾಧನೆ ಮಾಡಿದರೂ ಶ್ರೀ ಏಕನಾಥ ಈಶ್ವರನ್ publicity ಹಿಂದೆ, ಪ್ರಚಾರದ ಹಿಂದೆ ಎಂದೂ ಓಡಲಿಲ್ಲ. ತಮ್ಮ ಶಿಷ್ಯ ಸಮುದಾಯದ ಅಭ್ಯುದಯವೇ ತಮ್ಮ ಮುಖ್ಯ ಗುರಿ ಅನ್ನುವ ಮಾದರಿಯಲ್ಲಿ, ಟಿಪಿಕಲ್ ಗುರುಕುಲದ ಪರಮಗುರುವಿನ ಹಾಗೆ, ತಮ್ಮ ಶಿಷ್ಯರನ್ನು, ಅವರ ಅಧ್ಯಾತ್ಮ ಸಾಧನೆಯನ್ನು ಗಮನಿಸುತ್ತ, ಅಗತ್ಯವಿದ್ದಲ್ಲಿ ತಿದ್ದುತ್ತ, ಸತತವಾಗಿ ಸುಮಾರು ನಲವತ್ತು ವರ್ಷ ಪ್ರತಿನಿತ್ಯ ಪ್ರವಚನ ಕೊಡುತ್ತ, ಪುಸ್ತಕ ಬರೆಯುತ್ತ, ತಮ್ಮದೇ ಪ್ರಕಾಶನದ ಮೂಲಕ ಅವನ್ನು ಪ್ರಕಟಿಸುತ್ತ, ತಮ್ಮ ಜೀವನ ಸವೆಸಿದರು ಶ್ರೀ ಏಕನಾಥ ಈಶ್ವರನ್. ಮಹಾನ್ ವ್ಯಕ್ತಿ. ಅದರ ಬಗ್ಗೆ ದೂಸರಾ ಮಾತಿಲ್ಲ.

ಮೊದಲೇ ಹೇಳಿದಂತೆ ಶ್ರೀ ಏಕನಾಥ ಈಶ್ವರನ್ ಅವರದು holistic approach to spirituality. ಹಾಗಾಗಿಯೇ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು, ತಮ್ಮ ಶಿಷ್ಯ ಸಮುದಾಯವನ್ನು ತೊಡಗಿಸಿಕೊಂಡರು. ಆಫ್ರಿಕಾದ ಆನೆಗಳ ಸಂರಕ್ಷಣೆ ಬಗ್ಗೆ ಮಾಡಿದ ಕೆಲಸಕ್ಕೆ ಯುನೈಟೆಡ್ ನೇಶನ್ಸ್ ಪ್ರಶಸ್ತಿ ಬಂತು. ಅಮೇರಿಕಾದಲ್ಲಿ ಸಸ್ಯಾಹಾರವನ್ನು ಒಂದು ಚಳುವಳಿ  ಮಾದರಿಯಲ್ಲಿ ಬೆಳಸಿದವರೇ ಅವರು. ಅವರ ಶಿಷ್ಯೆ, ನಮ್ಮ ಆತ್ಮೀಯ ಹಿರಿಯ ಭಗಿನಿ, ಲಾರೆಲ್ ರಾಬರ್ಟ್ಸನ್ ಬರೆದ ಸಸ್ಯಾಹಾರಿ ಅಡುಗೆಯ ಪುಸ್ತಕ ಇಂದಿಗೂ ಬೆಸ್ಟ್ ಸೆಲ್ಲರ್. ಈಶ್ವರನ್ ಅಂತಹ ಮಹನೀಯರು ಮಾಡಿದ ಕೆಲಸಗಳಿಂದಲೇ ಇಂದು ಸಸ್ಯಾಹಾರ ಅಮೇರಿಕಾದಲ್ಲಿ ಪ್ರಸಿದ್ಧವಾಗಿ, ಜನರಿಗೆ ಸಸ್ಯಾಹಾರದ ಮಹತ್ವ ತಿಳಿದದ್ದು.

ಶಿಷ್ಯರೆಂದರೆ ಕೇವಲ ಮನುಷ್ಯರಷ್ಟೇ ಅಲ್ಲ. ಶ್ವಾನ ಶಿಷ್ಯರಾದ ಮೂಕಾ ಮತ್ತು ಗಣೇಶರೊಂದಿಗೆ ಗುರುಗಳು

೧೯೫೯ ರಲ್ಲಿ, ತಮ್ಮ ಐವತ್ತನೇ ವಯಸ್ಸಿನಲ್ಲಿ, ಕೇವಲ ಎರಡು ವರ್ಷದ ಮಟ್ಟಿಗೆ ಅಂತ ಅಮೇರಿಕಾಗೆ ಬಂದಿದ್ದರು ಶ್ರೀ ಈಶ್ವರನ್. ಆದರೆ ಆ ಭಗವಂತ ಹಾಕಿದ ಯೋಜನೆ ಬೇರೇನೋ ಇತ್ತು. ಅದಕ್ಕೇ ಇಂಗ್ಲೀಶ್ ಮಾಸ್ತರರು ಅಧ್ಯಾತ್ಮದ ಮಾಸ್ತರರಾಗಿ ಬದಲಾದರು. ಎರಡು ವರ್ಷಕ್ಕೆ ಬಂದವರು ಅಖಂಡ ನಲವತ್ತೂ ಚಿಲ್ಲರೆ ವರ್ಷ ಇಲ್ಲೇ ಇದ್ದರು. ೧೯೯೯ ರಲ್ಲಿ ತಮ್ಮ ತೊಂಬತ್ತನೇ ವಯಸ್ಸಿನಲ್ಲಿ ಸಮಾಧಿ ಹೊಂದಿದರು. ಹಲವಾರು ಶ್ರೇಷ್ಠ ಪುಸ್ತಕಗಳಿಂದ, ಪ್ರವಚನಗಳ ಸಾವಿರಾರು ಘಂಟೆಗಳ ಆಡಿಯೋ ವೀಡಿಯೊ ರೆಕಾರ್ಡಿಂಗ್ ಗಳಿಂದ ಇವತ್ತಿಗೂ ಆಸಕ್ತಿಯುಳ್ಳವರಿಗೆ ಮಾರ್ಗದರ್ಶನ ಮಾಡುತ್ತಲೇ ಇದ್ದಾರೆ ಶ್ರೀ ಈಶ್ವರನ್. ಮುಂದೆಯೂ ಇರುತ್ತಾರೆ.

ಶ್ರೀ ಏಕನಾಥ ಈಶ್ವರನ್ ಅವರ ಮಹಾ ಸಮಾಧಿಯ ನಂತರ ಅವರ ಪತ್ನಿ ಶ್ರೀಮತಿ ಕ್ರಿಸ್ಟಿನ್ ಈಶ್ವರನ್ ಮತ್ತು ಅವರ ಮೊದಲನೇ ತಲೆಮಾರಿನ ಶಿಷ್ಯರು ಅವರ ಕೆಲಸವನ್ನು Blue Mountain Center of Meditation ಮುಖಾಂತರ ಮುಂದುವರೆಸಿದ್ದಾರೆ. ಶ್ರೀಮತಿ ಈಶ್ವರನ್ ಅವರಿಗೆ ಈಗ ೯೪ ರ ತುಂಬು ಹರೆಯ. ಹೆಚ್ಚೆಂದರೆ ಅರವತ್ತು ವರ್ಷದ ಮಹಿಳೆಯ ಹಾಗೆ ಕಾಣುವ ಅವರು ತುಂಬ ಚಟುವಟಿಕೆಯಿಂದ ಇದ್ದಾರೆ. ಹೋದವರನ್ನೆಲ್ಲ ತುಂಬ ಪ್ರೀತಿಯಿಂದ ಮಾತಾಡಿಸುತ್ತ, ಈಶ್ವರನ್ ಅವರ ಸಂದೇಶವನ್ನು ಸಾರುತ್ತ, ಓದುತ್ತ, ಬರೆಯುತ್ತ, ಚಟುವಟಿಕೆಯ ಚಿಲುಮೆಯಂತೆ ಇದ್ದಾರೆ. ಎಲ್ಲ ಅವರ ಅರವತ್ತು ಚಿಲ್ಲರೆ ವರ್ಷಗಳ ಅಖಂಡ ಸಾಧನೆಯ ಫಲ. ಈಶ್ವರನ್ ಅವರ ಮೊದಲನೇ ತಲೆಮಾರಿನ ಉಳಿದ ಶಿಷ್ಯರೂ ಅಷ್ಟೇ. ಎಲ್ಲರಿಗೂ ಎಪ್ಪತ್ತರ ಹತ್ತಿರ ವಯಸ್ಸು. ಆದರೆ ಅವರ energy level ನೋಡಿದರೆ ನಮ್ಮಂತವರು ದಂಗು ಹೊಡೆಯಬೇಕು. ಎಲ್ಲ ಹಲವಾರು ವರ್ಷಗಳ ಸಾಧನೆಯ ಫಲ. ಶಿಸ್ತು ಬದ್ಧ ಜೀವನ ಶೈಲಿ. ಮುಖ್ಯವಾಗಿ integrated & holistic approach to spirituality. ಅದೇ ಮುಖ್ಯ ಕಾರಣ. ಎದ್ದು ನಾಕು ಹೆಜ್ಜೆ ಇಡಲು ಆಗದೇ, ಪಲ್ಲಕ್ಕಿ ಏರುವ ಸ್ವಾಮಿಗಳೇ ಜಾಸ್ತಿಯಾಗಿರುವ ಸಮಯದಲ್ಲಿ ಇಲ್ಲಿನ ರಾಮಗಿರಿಯ ಸಂತರು ತುಂಬ ವಿಶಿಷ್ಟರಾಗಿ ಕಾಣುತ್ತಾರೆ. ಅವರು ತಮ್ಮನ್ನು ಸಂತರು, ಸ್ವಾಮಿಗಳು ಅಂತೆಲ್ಲ ಬ್ರಾಂಡ್ ಮಾಡಿಕೊಳ್ಳುವದೇ ಇಲ್ಲ. ಆ ಮಾತು ಬೇರೆ.

ಈಗಲೂ ಅಷ್ಟೇ. ಶ್ರೀ ಈಶ್ವರನ್ ಸ್ಥಾಪಿಸಿದ ಸಂಸ್ಥೆಗೆ ಪ್ರಚಾರದ ಹಪಾಹಪಿಯಿಲ್ಲ. ಹುಯ್ಯಂತ ದೊಡ್ಡ ಪ್ರಮಾಣದಲ್ಲಿ ಬೆಳೆಸುವ ಆಲೋಚನೆಯಂತೂ ಇಲ್ಲವೇ ಇಲ್ಲ. ಎಷ್ಟರ ಮಟ್ಟಿಗೆ ಅಂದರೆ ಆಶ್ರಮಕ್ಕೆ ಒಂದು ಸರಿಯಾದ ಬೋರ್ಡ್ ಸಹ ಇಲ್ಲ. ರಸ್ತೆಯ ಮೇಲೆಯೇ ಇದ್ದರೂ, ಅದರ ಬಗ್ಗೆ ಗೊತ್ತಿಲ್ಲದವರಿಗೆ, ಇಲ್ಲಿಯೇ ರಾಮಗಿರಿ ಆಶ್ರಮ ಇದೆ ಅಂತ ಗೊತ್ತೂ ಆಗುವದಿಲ್ಲ. ದೇವಸ್ಥಾನದಂತೆ ಮಾಡಿಕೊಂಡು, ಉತ್ಸವಮೂರ್ತಿಗಳಂತೆ ಆಗಿ, ಮಾಡುವ ಮುಖ್ಯವಾದ ಕೆಲಸ ಬಿಟ್ಟು, ಸುಮ್ಮನೆ ಕೆಲಸವಿಲ್ಲ ಅಂತ ಆಶ್ರಮಕ್ಕೆ ಬಂದು ಹಾಳು ಹರಟೆ ಹೊಡೆಯುವವರ ಕಿರಿಕಿರಿ ಬೇಡ ಅಂತಲೇ ಹಾಗೆ ಮಾಡಿಟ್ಟುಕೊಂಡು ಇರಬೇಕು ಅವರು. ಯಾಕೆಂದರೆ ತುಂಬ ಚಿಕ್ಕ ಸೆಟಪ್ ಅವರದು. ಆದರೆ ಕೆಲಸ ಬಹಳ. ನಿಜವಾದ ಆಸಕ್ತರು ಹೋದರೆ ತುಂಬ ಪ್ರೀತಿಯಿಂದ ಆಶ್ರಮ ತೋರಿಸಿ, ಎಲ್ಲ ವಿವರಣೆ ನೀಡಲು ಅಲ್ಲಿನವರು ಸದಾ ಸಿದ್ಧ.

ಈಗಲೂ ಆಶ್ರಮದಲ್ಲಿ ಸುಮಾರು ಮೂವತ್ತು ಜನರಿದ್ದಾರೆ. ಶ್ರೀ ಈಶ್ವರನ್ ಹಾಕಿ ಕೊಟ್ಟ ಮಾರ್ಗದಲ್ಲಿಯೇ ಸಾಧನೆ ಮಾಡಿಕೊಂಡಿದ್ದಾರೆ. spiritual retreats ಗಳ ಮೂಲಕ, ಇಂಟರ್ನೆಟ್ ವೆಬಿನಾರ್ ಗಳ ಮೂಲಕ, ಪುಸ್ತಕಗಳ ಮೂಲಕ, ಉಚಿತ ಸೆಮಿನಾರ್ ಗಳ ಮೂಲಕ ಆಸಕ್ತರಿಗೆ, ಸಾಧಕರಿಗೆ ಮಾರ್ಗದರ್ಶನ ಮಾಡುತ್ತಾರೆ. ಆದರೆ ಪರಮಗುರು ಮಾತ್ರ ಶ್ರೀ ಈಶ್ವರನ್ ಅವರೇ. ಎಲ್ಲವೂ ಅವರು ಸ್ಥಾಪಿಸಿದ ಪದ್ಧತಿ ಮೇಲೇ ಆಧಾರಿತ. ಮತ್ತೆ ಅದರಲ್ಲಿ ಎಂದಿಗೂ ಬದಲಾವಣೆ ಇರುವದಿಲ್ಲ.

ಈಗ ಸುಮಾರು ಹನ್ನೆರೆಡು ವರ್ಷಗಳಿಂದ Blue Mountain Center of Meditation ಜೊತೆಗೆ ಒಡನಾಟ ನನ್ನದು. ೨೦೦೧ ರಲ್ಲಿ ಭಗವದ್ಗೀತೆಯ ಮೇಲೆ ಯಾವದಾದರೂ ಒಳ್ಳೆಯ ಪುಸ್ತಕ ಓದೋಣ ಅಂತ ಹುಡುಕುತ್ತಿದ್ದಾಗ ಅಚಾನಕ್ ಆಗಿ ಕಣ್ಣಿಗೆ ಬಿದ್ದಿದ್ದು ಶ್ರೀ ಏಕನಾಥ ಈಶ್ವರನ್ ಬರೆದ ಮೂರು ಸಂಪುಟಗಳ ಅದ್ಭುತ ಗೀತಾ ಭಾಷ್ಯ. ಮುಂದೆ ಒಂದಕ್ಕೊಂದು ಆಯಿತು. ಅತೀ ಸರಳವೆನ್ನಿಸುವ ಅವರ spiritual system ಸುಮ್ಮನೆ ಟ್ರೈ ಮಾಡಿ ನೋಡಿದೆ. ಅದ್ಭುತ positive ಪರಿಣಾಮಗಳು ಮೂಡಿ ಬಂದವು. ಮುಖ್ಯವಾಗಿ stress ಕಮ್ಮಿಯಾಗಿ, vision ಶುಭ್ರವಾಗಿ, ಜೀವನದ ಆದ್ಯತೆಗಳು ಸ್ಪಷ್ಟವಾಗುತ್ತ ಹೋದವು. ಮುಂದೆ ಬೇರೆ ಏನೇನೋ ವೇದಾಂತ, ತತ್ವಜ್ಞಾನ, metaphysics ಎಲ್ಲ ಓದಿರಬಹುದು ಬಿಡಿ. ಆದರೆ ಅದ್ವೈತ ವೇದಾಂತದ ಹೆಚ್ಚಿನ ಅಧ್ಯಯನಕ್ಕೆ, ಸಾಧನೆಗೆ ಒಂದು ಫೌಂಡೇಶನ್ ಹಾಕಿ ಕೊಟ್ಟಿದ್ದು ಮಾತ್ರ ಶ್ರೀ ಈಶ್ವರನ್ ಮತ್ತು ಅವರ ಧ್ಯಾನದ ಪದ್ಧತಿ. ಅದಕ್ಕೆ ಚಿರಋಣಿ. ನಂತರ ಆಶ್ರಮದಲ್ಲಿ ನಡೆಯುವ ವಾರಾಂತ್ಯದ, ಪೂರ್ತಿ ವಾರದ spiritual retreats ಗೆ ಹೋಗುವದನ್ನು ಶುರು ಮಾಡಿದಾಗಿಂದ ಆಶ್ರಮದ ಜನರು ತುಂಬ ಆತ್ಮೀಯರಾದರು. ಅವರ extended family ಒಳಗೆ ನಮಗೂ ಒಂದು ಜಾಗ ಸಿಕ್ಕಿ, ಆಶ್ರಮದಲ್ಲಿ ಆಗುವ ಕಾರ್ಯಕ್ರಮಗಳಿಗೆ ಇತ್ಯಾದಿಗಳಿಗೆ ಆಹ್ವಾನ ಬರತೊಡಗಿತು. ಈಗ ಆರು ವರ್ಷಗಳ ಹಿಂದೆ ಸ್ಯಾನ್ ಫ್ರಾನ್ಸಿಸ್ಕೋ ಏರಿಯಾಗೆ ಬಂದ ನಂತರ ಅವರೆಲ್ಲರ ಜೊತೆ ಒಡನಾಟ ಇನ್ನೂ ಹೆಚ್ಚಾಯಿತು. ನಾವಿದ್ದ ಜಾಗದಿಂದ ಕೇವಲ ೯೦ ಮೈಲಿ ದೂರ. ಒಂದೂವರೆ ಘಂಟೆ ಸಾಕು ಕಾರಿನಲ್ಲಿ ಹೋಗಲು. ಇಷ್ಟು ಹತ್ತಿರದಲ್ಲಿ ಇಷ್ಟೆಲ್ಲ ಮಹಾನ್ ಸಾಧಕರ ಒಡನಾಟ ಸಿಕ್ಕಿದ್ದು ನಮ್ಮ ಪುಣ್ಯ, ಭಾಗ್ಯ. ನಾವು ಅಂತ ಅಲ್ಲ, ಎಲ್ಲರನ್ನೂ ಅದೇ ರೀತಿ ಆದರಿಸುವದು ಅವರ ರೂಢಿ.

ಮೊನ್ನೆ ಅಕ್ಟೋಬರ್ ೨೫ ರಂದು ಶ್ರೀ ಏಕನಾಥ ಈಶ್ವರನ್ ಅವರ ಹದಿನೈದನೇ ಪುಣ್ಯತಿಥಿಯನ್ನು ಆಚರಿಸಲಾಯಿತು. Attendance by invitation only. ಆಶ್ರಮಕ್ಕೆ ಆಪ್ತರಾದ ಸುಮಾರು ಒಂದು ನೂರು ಜನ ಆಮಂತ್ರಿತರಾಗಿದ್ದರು. ಅದರಲ್ಲಿ ಒಂದಿಷ್ಟು ತುಂಬ ಖಾಸ್ ಜನರಿಗೆ ವಾರಾಂತ್ಯದಲ್ಲಿ ಆಶ್ರಮದ ಪಕ್ಕದಲ್ಲಿರುವ retreat house ನಲ್ಲಿ ಉಳಿಯುವ ಅವಕಾಶ ಕಲ್ಪಿಸಿದ್ದರು. ನಮ್ಮ ಸೌಭಾಗ್ಯಕ್ಕೆ ನಮಗೂ ಆ ಅವಕಾಶ ಸಿಕ್ಕಿತ್ತು. ಆ ಸುಂದರ, ನಿಸರ್ಗ ರಮಣೀಯ ವಾತಾವರಣವಿರುವ ಆಶ್ರಮದ ಸೆಟಪ್ ನಲ್ಲಿ ಮೂರು ದಿವಸ ಇದ್ದು ಬರುವ ಭಾಗ್ಯ ನಮ್ಮದು. spiritual retreat ಅಂತ ಅಲ್ಲಿ ವರ್ಷಕ್ಕೆ ಎರಡು ಮೂರು ಸಲ ಹೋಗಿ, ಒಂದು ವಾರ ಇದ್ದು ಬರುವದು ಬೇರೆ. ಅದೆಲ್ಲ ಒಂದು ತರಹದ structured retreat ತರಹದ ಪ್ರೊಗ್ರಾಮ್. ಅದೇ ಬೇರೆ. ಈಗ ಪುಣ್ಯತಿಥಿ ಬಿಟ್ಟರೆ ಯಾವದೇ ನಿಶ್ಚಿತ ಕಾರ್ಯಕ್ರಮ ಇಲ್ಲದೆ, ಮಳೆಗಾಲದ ತಂಪು ಹವೆಯಲ್ಲಿ, ಸುಂದರ ನಿಸರ್ಗ ನೋಡುತ್ತ, ಎದ್ದು ಹೋದರೆ ಮೈಮೇಲೆ ಕೈಯಾಡಿಸುವಷ್ಟು ಹತ್ತಿರದಲ್ಲಿ ತಮ್ಮ ಪಾಡಿಗೆ ಇರುವ ಜಿಂಕೆಗಳನ್ನು ನೋಡುತ್ತ, ಒಂದಿಷ್ಟು ಪುಸ್ತಕ ಓದುತ್ತ, ಮೊಬೈಲ್, ಇಂಟರ್ನೆಟ್, ನ್ಯೂಸ್ ಪೇಪರ್ ಇತ್ಯಾದಿಗಳ ಜಂಜಡವಿಲ್ಲದೇ ನಾಕು ದಿವಸ ಆರಾಮಾಗಿ ಇದ್ದು ಬಂದಾಯಿತು. ನಂತರ ಬರೆದಿದ್ದೇ ಇದು.

ಇದನ್ನು ಓದಿದ ಕೆಲವರಾದರೂ ಶ್ರೀ ಈಶ್ವರನ್ ಅವರ website ನೋಡಿ, ಅವರ ಪ್ರವಚನದ  ವೀಡಿಯೊಗಳನ್ನು ವೀಕ್ಷಿಸಿ, ಅವರ ಪುಸ್ತಕಗಳನ್ನು ಓದಿ, ಅವುಗಳಿಂದ ಏನಾದರೂ ಉಪಯೋಗ ಪಡೆದುಕೊಂಡರೆ ಅದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ. ನಮಗೆ ಸಿಕ್ಕ ಭಾಗ್ಯ ತಮಗೂ ಸಿಗಲಿ. ಅಧ್ಯಾತ್ಮ ಸಾಧನೆಯಿಂದ (spiritual practice) ಎಲ್ಲರಿಗೂ ಒಳ್ಳೆಯದಾಗಲಿ. ಶುಭಂ ಅಸ್ತು।।

*******************
ಒಂದಿಷ್ಟು ಫೋಟೋಗಳು:

ರಾಮಗಿರಿ ಆಶ್ರಮ - ೧
ರಾಮಗಿರಿ ಆಶ್ರಮ - ೨
ರಾಮಗಿರಿ ಆಶ್ರಮದಲ್ಲಿ ಕಾಡು ಜಿಂಕೆಗಳು. 

*******************

http://www.easwaran.org/ -  ಭರಪೂರ ಮಾಹಿತಿಯಿಂದ ಕೂಡಿದ ಆಶ್ರಮದ website. ಆಸಕ್ತರಿಗೆ ಎಲ್ಲ ವಿವರಗಳೂ ಸಿಗುತ್ತವೆ. youtube ಮೇಲೆ, ಗೂಗಲ್ ಬುಕ್ಸ್ ಮೇಲೆ ಸಹ ಬೇಕಾದಷ್ಟು ಮಾಹಿತಿ ಇವೆ. ಆಸಕ್ತರು ಅವನ್ನೂ ನೋಡಬಹದು.

ಭಾರತದಲ್ಲಿ ಜೈಕೋ ಬುಕ್ಸ್ ಶ್ರೀ ಈಶ್ವರನ್ ಅವರ ಪುಸ್ತಕಗಳ ಲೋಕಲ್ ಎಡಿಷನ್ ಹೊರತರುತ್ತದೆ. ಭಾರತದ ಎಲ್ಲ ದೊಡ್ಡ ಪುಸ್ತಕದ ಅಂಗಡಿಗಳಲ್ಲಿ ಅವರ ಪುಸ್ತಕಗಳು ಲಭ್ಯ.

*******************

ಶ್ರೀ ಏಕನಾಥ ಈಶ್ವರನ್ ಅವರ ಪುಸ್ತಕಗಳು, ಪ್ರವಚನಗಳ ಮೇಲೆ ಆಧಾರಿತ ಹಳೆಯ ಬ್ಲಾಗ್ ಪೋಸ್ಟುಗಳು ಎಲ್ಲ ಇಲ್ಲಿವೆ. 

*******************

೨೦೦೫ ರಲ್ಲಿ ಮೊದಲ ಬಾರಿಗೆ ರಾಮಗಿರಿ ಆಶ್ರಮಕ್ಕೆ ಭೆಟ್ಟಿ ಕೊಟ್ಟು ಬಂದ ನಂತರ ಬರೆದ ಒಂದು ಹಳೆಯ ಬ್ಲಾಗ್ ಪೋಸ್ಟ್.