Tuesday, April 04, 2023

ಸ್ಮಾರ್ಟ್ ಬ್ರಾಹ್ಮಣ...

ನಮ್ಮ ಬ್ಯಾಚಿನ "ಸ್ಮಾರ್ಟ್ ಬ್ರಾಹ್ಮಣ" ಪ್ರಸನ್ನ ದೇಸಾಯಿಗೆ ಹುಟ್ಟುಹಬ್ಬದ ಶುಭಾಶಯಗಳು!

ಪ್ರಸನ್ನ ದೇಸಾಯಿ ಯಾವಾಗ ಸ್ಮಾರ್ಟ್ ಬ್ರಾಹ್ಮಣ ಆದ?

ಕೆಸಿಡಿಯಲ್ಲಿ ಪಿಯೂಸಿ ಮಾಡುತ್ತಿರುವಾಗ ಅದ್ಯಾವದೋ ಅರ್ಜಿ ಭರ್ತಿ ಮಾಡಬೇಕಿತ್ತು. ಧರ್ಮ, ಜಾತಿ ಕಾಲಮ್ಮಿನಲ್ಲಿ ಈ ಪುಣ್ಯಾತ್ಮ ಸ್ಮಾರ್ತ ಬ್ರಾಹ್ಮಣ ಎಂಬುದನ್ನು ಇಂಗ್ಲೀಷಿನಲ್ಲಿ smarth brahman ಎಂದು ಬರೆಯಲು ಹೋಗಿ, smarth ಎಂದು ಬರೆಯುವಾಗ ಕೊನೆಯಲ್ಲಿ h ಗಾಯಬ್ ಮಾಡಿದ್ದಾನೆ. ಅದು smart brahman ಆಗಿ, ಊರೆಲ್ಲಾ ಗುಲ್ಲಾಗಿ, ಒಟ್ಟಿನಲ್ಲಿ ಇವನು ಸ್ಮಾರ್ಟ ಬ್ರಾಹ್ಮಣ ಎಂದು ಖ್ಯಾತನಾಗಿಬಿಟ್ಟಿದ್ದಾನೆ. ಇದು ಕಥೆಯೋ, ದಂತಕಥೆಯೊ ಅಥವಾ ನಿಜವೋ ಎಂಬುದನ್ನು ನಮ್ಮ ಸ್ಮಾರ್ಟ ದೋಸ್ತನೇ ಖಾತ್ರಿ ಮಾಡಬೇಕು. 

ತುಂಬಾ ಸ್ಮಾರ್ಟಾಗಿ ಇದ್ದ(ಇರುವ) ಇವನು ಸ್ಮಾರ್ಟ ಬ್ರಾಹ್ಮಣ ಎನ್ನುವ ಬಿರುದನ್ನು (ಜೊತೆಗೆ ಬಾವಲಿಯನ್ನು, ಕಣ್ಕಪಡಿಯನ್ನು) ಧರಿಸಲು ಎಲ್ಲ ರೀತಿಯಿಂದಲೂ ಅರ್ಹನಾಗಿದ್ದ. ಆಗ ಧಾರವಾಡ ತುಂಬಾ ಬ್ರೇಕ್ ಡ್ಯಾನ್ಸ್ ಹವಾ (ಘಾಟು) ಎಬ್ಬಿಸಿದ್ದ ಪ್ರವೀಣ್ ಪಾಂಡೆಯ ಎಂಬ ಪ್ರಭೂತಿಯ ಶಿಷ್ಯನೂ ಆಗಿದ್ದ. ಪ್ರವೀಣ್ ಪಾಂಡೆಯೇನೋ ಸಿಕ್ಕಸಿಕ್ಕ ಎಲ್ಲ ಮಂದಿಗೆ  (ರೊಕ್ಕ ಕೊಟ್ಟರೆ ಹಂದಿಗೆ ಕೂಡ) ಬ್ರೇಕ್ ಡಾನ್ಸ್ ಕಲಿಸಲು ಸಿದ್ಧನಿದ್ದ. ಆದರೆ ನಮ್ಮ ಮಿತ್ರರಲ್ಲಿ ಯಾರೂ ಅವನ ಶಿಷ್ಯರಾದ ಬಗ್ಗೆ ಮಾಹಿತಿ ಇರಲಿಲ್ಲ. ಚೋರ ಗುರುವಿಗೆ ಚಾಂಡಾಲ ಶಿಷ್ಯನ ಮಾದರಿಯಲ್ಲಿ ಪ್ರವೀಣ್ ಪಾಂಡೆ ಎಂಬ ಬ್ರೇಕ್ ಡಾನ್ಸ್ ಗುರುವಿನ ಶಿಷ್ಯ ನಮ್ಮ ಪ್ರಸನ್ನ.

'ಪಚ್ಯಾ, ಪ್ರವೀಣ್ ಪಾಂಡೆ ಕಡೆ ಹೋಗಿ ಬ್ರೇಕ್ ಡಾನ್ಸ್ ಕಲಿತಾನಂತಲೇ,' ಎಂದು ಒಬ್ಬ ಮಿತ್ರ ಉದ್ಗರಿಸಿದರೆ, 'ಪಚ್ಯನಾ?? ಬ್ರೇಕ್ ಡಾನ್ಸ್?? ಸೀದಾ ನಡೀಲಿಕ್ಕೆ ಬರೂದಿಲ್ಲ ಮಂಗ್ಯಾನಮಗ್ಗ. ಸೊಟ್ಟಗಾಲ ಹಾಕಿ ನಡಿತಾನ. ಬ್ರೇಕ್ ಡಾನ್ಸ್ ಅಂತ ಬ್ರೇಕ್ ಡಾನ್ಸ್,' ಎಂದು ಅವರದೇ ರೀತಿಯಲ್ಲಿ 'ಪ್ರಶಂಸೆ' ಮಾಡಿದ ಅವನ ಮಿತ್ರರೂ ಇದ್ದರು. ಅವರೇ ಸಂಜೆ ಭೆಟ್ಟಿಯಾದಾಗ ಪಚ್ಯಾನ ಮುಂದೆ, 'ಪಚ್ಯಾ. ಏನ್ ಬ್ರೇಕ್ ಡಾನ್ಸ್ ಹೊಡಿತಿಲೇ? ಗ್ರೇಟ್ ಬಿಡಲೇ. ನಿನ್ನ ಮುಂದ ಮೈಕೇಲ್ ಜ್ಯಾಕ್ಸನ್  ಏನೂ ಅಲ್ಲ. ಅವನ್ನ ನಿವಾಳಿಸಿ ಒಗಿಬೇಕು,' ಎಂದು ಹೊಗಳಿ ಉಬ್ಬಿಸಿ ಏನಾದರೂ ಚಿಲ್ಲರೆ ಕಾಸು ವಸೂಲಿ ಮಾಡಿದರೂ ಮಾಡಿದ್ದಾರು. ಹಲ್ಕಟ್ ದೋಸ್ತರು ಮತ್ತು ಅವರ ಮಷ್ಕಿರಿ. ಜೀವನದ ಒಂದು ಅಂಗ. ಅದು ನಿಜವಾದ ಅಮೃತಕಾಲ. 

ನಾನ್ -ವೆಜ್ ಹೋಟೆಲಿನ ವೇಟರನಿಗೆ ತಪ್ಪದೆ ಟಿಪ್ಪು ಕೊಡಬೇಕು ಇಲ್ಲವಾದರೆ ಮುಂದಿನ ಸಲ ಹೋದಾಗ ಲಿವರ್ ಪೀಸ್ ಹಾಕುವುದಿಲ್ಲ ಎಂಬ ಅದ್ಭುತ ಸಂಶೋಧನೆ ಬಗ್ಗೆ ನಾನು ಕೇಳಿದ್ದೇ ಈ ಸ್ಮಾರ್ಟ್ ಮನುಷ್ಯನಿಂದ. ಪಚ್ಯಾ ಆಗಲೇ ಬಹಳ ಮುಂದುವರೆದ ಪ್ರವರ್ಗಕ್ಕೆ ಸೇರಿ ಭಯಂಕರ ಸಂಶೋಧನೆಗಳನ್ನು ಕೈಗೊಂಡಿದ್ದ. ಎಲ್ಲೋ ಹೋಗಿ ಭರ್ಜರಿ ಪಾರ್ಟಿ ಮಾಡಿ ಬಂದಿದ್ದರು ಎಂದು ಕಾಣುತ್ತದೆ. ನಂತರ ಮುಂದಿನ ಪಾರ್ಟಿಯವರೆಗೆ ಅದೇ ಸುದ್ದಿ. ಆಡು ಮುಟ್ಟದ ಸೊಪ್ಪಿಲ್ಲ. ಸ್ಮಾರ್ಟ್ ಬ್ರಾಹ್ಮಣ ಮುಟ್ಟಿ ನೋಡಿ ಸ್ವಾಹಾ ಮಾಡದ ಆಡಿಲ್ಲ.

ಪಿಯೂಸಿ ನಂತರ ಬೆಳಗಾವಿಗೆ ಹೋಗಿಬಿಟ್ಟ. ಬಿಇ ಮುಗಿಸಿದ ನಂತರ ಮೀನು ಸಾಕಲು ಹೋಗಿದ್ದನಂತೆ. ಬಿಇ ನಂತರ 'ಉದರ ನಿಮಿತ್ತಂ ಬಹುಕೃತ ವೇಷಮ್'  ಅಂದರೆ ಹೊಟ್ಟೆಪಾಡಿಗೆ ಏನೇನೋ ವೇಷ ಹಾಕುತ್ತಲೇ ಇರಬೇಕಾಗುತ್ತದೆ. 'ಧರ್ಮೋ ರಕ್ಷತಿ ರಕ್ಷಿತಃ' ಅಂದರೆ ಧರ್ಮವನ್ನು ರಕ್ಷಿಸಿದವನನ್ನು ಧರ್ಮ ರಕ್ಷಿಸುತ್ತದೆ. 'ಮೀನೋ ಸಾಕತಿ ಸಾಕತಃ'  ಅಂದರೆ ಮೀನು ಸಾಕಿದವನನ್ನು ಮೀನು ಸಾಕುತ್ತದೆ. ಈ ಧ್ಯೇಯವಾಕ್ಯದಿಂದ ಪ್ರೇರಿತನಾಗಿ ಮೀನು ಸಾಕಿ ಮತ್ಸೋದ್ಯಮಿ ಆಗಬೇಕೆಂದಿದ್ದ ಎಂದು ಕಾಣುತ್ತದೆ. ಅದರಂತೆ ಮೀನು ಸಾಕಿದ. ಸಾಕಿದ ಮೀನು ಕೈಹಿಡಿದ ಹಾಗೆ ಕಾಣಲಿಲ್ಲ. ಯಾರಿಗೆ ಗೊತ್ತು ಈಗಲೂ ಪಾರ್ಟ್ ಟೈಮ್ ಮೀನು ಹಿಡಿಯುತ್ತಾ, ಸಾಕುತ್ತಾ ಇದ್ದಾನೋ ಏನೋ??ಆವಾಗ ಮತ್ಸ್ಯ ಈಗ ಮತ್ಸ್ಯಕನ್ಯೆ?? ಯಾವ ಹುತ್ತದಲ್ಲಿ ಯಾವ ಹಾವೋ. ಸ್ಮಾರ್ಟ್ ಬ್ರಾಹ್ಮಣನ ಗಾಳಕ್ಕೆ ಯಾವ ಮತ್ಸ್ಯವೋ, ಯಾವ ಮತ್ಸ್ಯಕನ್ಯೆಯೋ?? ಸ್ಮಾರ್ಟ್ ದೋಸ್ತನೇ ವಿವರಿಸಬೇಕು.

ಸ್ಮಾರ್ಟ್ ದೋಸ್ತನಿಗೆ ಹುಟ್ಟುಹಬ್ಬದ ಶುಭಾಶಯಗಳು. 

ವಿ.ಸೂ: ಮಿತ್ರ ಪ್ರಸನ್ನ ದೇಸಾಯಿಯ ಜನ್ಮದಿನದಂದು ಶಾಲಾ ವಾಟ್ಸಪ್ಪ್ ಗುಂಪಿನಲ್ಲಿ ಹಂಚಿಕೊಂಡ ಸಂದೇಶ.

4 comments:

sunaath said...

“Smart ಬ್ರಾಹ್ಮಣನೂ ಅವನ ಸಂಗಾತಿಗಳೂ.................!”
ಸಂಶೋಧನೆಗೆ ಒಳ್ಳೆಯ ವಸ್ತು!

Mahesh Hegade said...

ಸ್ಮಾರ್ಟ್ ಬ್ರಾಹ್ಮಣನ ಸಂಗಾತಿಗಳ ಬಗ್ಗೆ ಬರೆಯಬೇಕು ಎಂದರೆ ಪೊಲೀಸ್ ಕಡತಗಳನ್ನು ಹುಡುಕಬೇಕಾದೀತು. ಹಾಗಿದ್ದರು ಒಬ್ಬೊಬ್ಬರು. ಇದ್ದವರಲ್ಲಿ ಇವನೇ ಸ್ವಲ್ಪ ಸುಭಗ! :) :)

ಕಾಮೆಂಟಿಗೆ ಧನ್ಯವಾದಗಳು.

ವಿ.ರಾ.ಹೆ. said...

'ಮೀನೋ ಸಾಕತಿ ಸಾಕತಃ' LoL

Mahesh Hegade said...

ವಿರಾಹೆ, ಹ್ವಾ, ಕಾಮೆಂಟಿಗೆ ಧನ್ಯವಾದ.