Sunday, July 19, 2015

ಕೇಸರಿ ಹಾಲು.....ಸುಹಾಗ್ ರಾತ್ ಸ್ಪೆಷಲ್!

'ಕೇಸರಿ' ಹಾಲು ಹಿಡಿದುಕೊಂಡು ಹೊರಟ ಫಸ್ಟ್ ನೈಟ್ ಪುಣ್ಯಾತ್ಗಿತ್ತಿ!
ನಮ್ಮ ಪದ್ದಿ ಒಂದು ಅನಾಹುತ ಕೆಲಸ ಮಾಡಿಕೊಂಡು ಕೂತಾಳ. ಪದ್ದಿ ರೀ ಪದ್ದಿ. ನಮ್ಮ ದೋಸ್ತ ಚೀಪ್ಯಾನ ಕಿರೀ ನಾದಿನಿ. ಅವನ ಹೆಂಡ್ತಿ ಉರ್ಫ್ ರೂಪಾ ವೈನಿಯ ಕಡೇ ತಂಗಿ ಪದ್ಮಾವತಿ ಉರ್ಫ್ ಪದ್ದಿ. ಹೆಸರೇನೋ ಪದ್ದಿ ಅಂತ ಅದ. ಆದ್ರ ಮಾಡೋ ಕೆಲಸ ನೋಡಿಬಿಟ್ಟರೆ ಸಾಕು, ಬರೋಬ್ಬರಿ ಪೆದ್ದಿ ಕೆಲಸ ಅಷ್ಟೂ. ಹುಚ್ಚ ಪೆಕಡೂ!

ಏನು ಅಂತಹ ಅನಾಹುತ ಮಾಡಿಕೊಂಡಳು ಅಂತ ಕೇಳಿದರೆ ಲಗ್ನ (ಮದುವೆ) ಮಾಡಿಕೊಂಡುಬಿಟ್ಟಳು. ಅದೂ ಭಾರಿ ಬಂಡಾಯಕಾರಿ ಮದುವೆ. ಅಂತರ್ಜಾತೀಯ ವಿವಾಹ. ಇಕಿ ನೋಡಿದರೆ ಶುದ್ಧ ವೈಷ್ಣವ ಆಚಾರಿ ಮನೆತನದ ಹುಡುಗಿ. ಹೋಗಿ ಹೋಗಿ ಮೇಸ್ತ್ರಿ ಯಲ್ಲಪ್ಪನ ಮಗ ಗೌಂಡಿ ದ್ಯಾಮಪ್ಪನ್ನ ಲಗ್ನಾ ಮಾಡಿಕೊಂಡು ಕೂತಾಳ. ಆಚಾರಿ ಮತ್ತ ವಡ್ಡರು ಬೀಗಾ ಬೀಗರು. ಎಂತಾ ಯೋಗಾಯೋಗವಯ್ಯಾ!

ಅದೂ ಎಂತಾ ವೇಳ್ಯಾದಾಗ ಲಗ್ನಾ ಮಾಡಿಕೊಂಡಳು ಅಂದರ ಏನು ಕೇಳ್ತೀರಿ!? ಅಪ್ಪಾ, ಅವ್ವಾ, ಅಜ್ಜಾ, ಅಜ್ಜಿ ಎಲ್ಲ ಒಂದಿಷ್ಟು ಪುಣ್ಯ ಗಳಿಸಿ ಬರೋಣ ಅಂತ ಯಾತ್ರಾಕ್ಕ ಹೋಗ್ಯಾರ. ಇಕಿ ಪದ್ದಿ ಮನ್ಯಾಗೇ ಇದ್ದಾಳ. ಅಕಿ ಹಿರೇ ಅಣ್ಣ ಲಪುಟ ನಾಗಣ್ಣ ಉರ್ಫ್ ತೂತ ನಾಗ್ಯಾ ಮತ್ತ ಅವನ ಹೆಂಡತಿ ಬಿಟ್ಟರೆ ಮನಿಯಾಗ ಹಿರಿಯರು ಅನ್ನುವವರು ಯಾರೂ ಇಲ್ಲ. ತೂತ ನಾಗ್ಯಾ ಮತ್ತ ಅವನ ಹೆಂಡತಿ ವಿಷಯ ಬಿಡ್ರಿ. ಅವು ಮನ್ಯಾಗ ಇದ್ದರೂ ಅಷ್ಟ ಇಲ್ಲದಿದ್ದರೂ ಅಷ್ಟ. ತೂತ ನಾಗ್ಯಾ ಅಂತೂ ಶುದ್ಧ ಬೇವಡಾ ಆದಮೀ. ಒಂದು ಕ್ವಾರ್ಟರ್ ಹಳೆ ಮಂಗ್ಯಾ (Old Monk) ರಮ್ ಕುಡಿದುಬಿಟ್ಟ ಅಂದ್ರ ನಾಗಣ್ಣನಿಂದ 'ರಂ'ಗಣ್ಣ ಆಗಿ ಎಚ್ಚರ ತಪ್ಪಿ ಮಕ್ಕೊಂಡುಬಿಡ್ತಾನ. ಇನ್ನು ಅವನ ಹೆಂಡ್ತಿ ಅಕಿ ಮಂದಿ ಮನಿಗೆ ಅಡಿಗೆ ಅದು ಇದು ಕೆಲಸ ಮಾಡಲಿಕ್ಕೆ ಓಡಿ ಹೋಗ್ತಾಳ. ನಾಗಣ್ಣನಂತಹ ಬೇಕಾರ್ ಮನುಷ್ಯಾನ್ನ ಕಟ್ಟಿಕೊಂಡ ಮ್ಯಾಲೆ ಜಿಂದಗಿ ಕೇ ಲಿಯೇ ಏನರೆ ಜುಗಾಡ್ ಮಾಡಲಿಕ್ಕೇಬೇಕಲ್ಲಾ! ಪಾಪಿ ಪೇಟ್ ಕಾ ಸವಾಲ್! ಹೀಂಗಾಗಿ ಪ್ರಾಯದ ಪದ್ದಿ ಮ್ಯಾಲೆ ಒಂದು ಖಡಕ್ ನಜರ್ ಅಂದರೆ ಕಣ್ಣು ಇಡುವ ಮಂದಿನೇ ಇಲ್ಲ.

ಅದೂ ಈ ಪದ್ದಿ ಬ್ಯಾರೆ ಉದ್ಯೋಗಿಲ್ಲದ ಮನಿಯಾಗೇ ಕೂತದ. ಈಗ ಮೂರು ವರ್ಷಾತು. ಇನ್ನೂ SSLC ನೇ ಮುಗಿವಲ್ಲತು. ಮರಳಿ ಯತ್ನವ ಮಾಡು ಅನ್ನುವವರಂಗ ಅಕಿದು ದಂಡಯಾತ್ರೆ ನಡದೇ ಇದೆ. ಈ ಸಲಾನೂ ಮತ್ತೆ ಪರೀಕ್ಷಾ ಕೊಟ್ಟಾಳ. ಈಗ ಬರೋಬ್ಬರಿ ಹದಿನೆಂಟು ವಯಸ್ಸು ಕೂಡ ತುಂಬಿಬಿಟ್ಟದ. ಅದು ಯಾವಾಗಿಂದ ಗೌಂಡಿ ದ್ಯಾಮಪ್ಪನ ಜೋಡಿ ಲವ್ವಿ ಡವ್ವಿ ನಡೆದಿತ್ತೋ ಗೊತ್ತಿಲ್ಲ. ಒಟ್ಟಿನ್ಯಾಗ ಇಕಿ ವಯಸ್ಸಿಗೆ ಬರೋದನ್ನೇ ಕಾದುಕೋತ್ತ ಕೂತಿದ್ದರು ಅನ್ನಿಸ್ತದ. ಇಕಿ ಪದ್ದಿಗೆ ಹದಿನೆಂಟು ತುಂಬಿತು ಅಂತ ಖಾತ್ರಿಯಾದ ಕೂಡಲೇ ಗೌಂಡಿ ದ್ಯಾಮಪ್ಪಾ ಮತ್ತ ಇಕಿ ಪದ್ದಿ ಕೂಡಿ ಲಗ್ನಾ ಮಾಡಿಕೊಂಡೇಬಿಟ್ಟಾರ. ಮತ್ತ ಫುಲ್ ಸೇಫ್ಟಿ ಇರಲಿ ಅಂತ ರಿಜಿಸ್ಟರ್ ಸಹಿತ ಮಾಡಿಸೇಬಿಟ್ಟಾರ. ಫುಲ್ ಶಿವಾಯ ನಮಃ!

ಒಂದು ತಿಂಗಳು ಬಿಟ್ಟು ಮನಿ ಮಂದಿ ಯಾತ್ರಾ ಮುಗಿಸಿ ವಾಪಸ್ ಬಂದಾರ. ಅಲ್ಲೇ ಧಾರವಾಡ ರೈಲ್ವೆ ಸ್ಟೇಷನ್ ಒಳಗ ಇಳಿದ ಕೂಡಲೇ ಭೆಟ್ಟಿಯಾದ ಮಾಳಮಡ್ಡಿ ಮಹನೀಯರೊಬ್ಬರು ಕೇಳ್ಯಾರ, 'ನಿಮಗ ಸುದ್ದಿ ಗೊತ್ತಾತೇನು?' ಅಂತ. ಪದ್ದಿ ಅಪ್ಪಾ, ಅವ್ವಾ ಎಲ್ಲಾ ಕೂಡಿ, 'ಏನು ಸುದ್ದಿರೀ? ನಾವು ಈಗ ಮಾತ್ರ ಯಾತ್ರಾ ಮುಗಿಸಿಕೊಂಡು ಬರ್ಲಿಕತ್ತೇವಿ. ನಿನ್ನೆ ಮಾತ್ರ ತಿರುಪತಿ ವೆಂಕಪ್ಪನ  ದರ್ಶನ ಮಾಡಿಕೊಂಡು ಗಾಡಿ ಹತ್ತಿದ್ದಿವಿ. ಈಗ ಬಂದು ಮುಟ್ಟಲಿಕತ್ತೇವಿ. ಏನು ಸುದ್ದಿ?' ಅಂದಾರ. ಅದನ್ನು ಕೇಳಿದ ಅವರು ಪೆಕಪೆಕಾ ಅಂತ ಅಂಡು ತಟ್ಟಿಕೊಂಡು ನಕ್ಕು, 'ತಿರುಪತಿ ವೆಂಕಪ್ಪ ನಿಮಗ ನಾಮಾ ಹಾಕಿದನೋ ಇಲ್ಲೋ ಗೊತ್ತಿಲ್ಲ. ನಿಮ್ಮ ಮಗಳು ಪದ್ಮಾವತಿಯಂತೂ ಮಸ್ತ ನಾಮಾ ಹಾಕ್ಯಾಳ ನೋಡ್ರಿಪಾ. ಏ! congratulations! congratulations!' ಅಂತ ಮುಗುಮ್ಮಾಗಿ ಹೇಳ್ಯಾರ. ಡಬಲ್ ಮೀನಿಂಗ್ ಡೈಲಾಗ್ ಹೊಡೆದಾರ. ಪದ್ದಿ ಮನಿಯವರಿಗೆ ಮಾಮಲಾ ಏನು ಅಂತ ಗೊತ್ತೇ ಆಗಿಲ್ಲ. ಎಲ್ಲೆ ಈ ಪರಿ congratulations ಅಂತ ಹೇಳೋದು ನೋಡಿ ಎಲ್ಲಿ ಮಗಳು ತನ್ನ ಎಂಟನೆಯದ್ದೋ ಒಂಬತ್ತನೆಯದ್ದೋ ಪ್ರಯತ್ನದಲ್ಲಿ SSLC ಪಾಸಾಗಿಬಿಟ್ಟಳೋ ಅಂತ ವಿಚಾರ ಮಾಡ್ಯಾರ. ತೀರ್ಥಯಾತ್ರೆಯ ಪುಣ್ಯ ಫಲ ಇಷ್ಟು ಬೇಗ ಬಂದಿರಬಹುದೇನು ಅಂತ ಆಶ್ಚರ್ಯಪಟ್ಟಾರ. ಅವರಿಗೇನು ಗೊತ್ತು ಮನಿಯಾಗ ಏನು ಲಫಡಾ ಬಾಜಿ ಆಗಿ ಕೂತದ ಅಂತ ಹೇಳಿ.

ಮನಿಗೆ ಬಂದು ಮುಟ್ಟ್ಯಾರ. ಅವರು ಪ್ರಸಾದ ಕೊಟ್ಟರೆ ಪದ್ದಿ ಅಪ್ಪಾ ಅವ್ವಗ ಬಾಂಬ್ ಕೊಟ್ಟುಬಿಟ್ಟಾಳ. ಬಾಂಬ್ ಕೊಟ್ಟಾಳ ಅಂದ್ರ ಬಾಂಬಿನಂತಹ ಸುದ್ದಿ ಒಗೆದಾಳ ಅಂತ. ಎಲ್ಲಾ ಪುಣ್ಯ ಕ್ಷೇತ್ರಗಳ ಪ್ರಸಾದವನ್ನು ಗಿರಮಿಟ್ ಗತೆ ಮಿಕ್ಸ್ ಮಾಡಿಕೊಂಡು, ಎರಡೂ ಕೈಯಾಗ ಮುಕ್ಕಿಕೋತ್ತ, ಗೌಂಡಿ ದ್ಯಾಮಪ್ಪನ ಜೋಡಿ ರಿಜಿಸ್ಟರ್ ಲಗ್ನಾ ಮಾಡಿಕೊಂಡ ಸುದ್ದಿಯ ಬಾಂಬನ್ನು ಒಗೆದೇಬಿಟ್ಟಾಳ. ದೊಡ್ಡ ಪ್ರಮಾಣದ ಸ್ಪೋಟ ಆಗಿಬಿಟ್ಟದ. ಮನಿ ಮಂದಿಯೆಲ್ಲ ಪದ್ದಿಗೆ ಹಾಕುವಷ್ಟು ಹಾಕ್ಯಾರ. ಹೊಡೆದಾರ. ಬಡಿದಾರ. ಅತ್ತು ಕರೆದು ಎಲ್ಲ ಮಾಡ್ಯಾರ. ಪದ್ದಿ ಮಾತ್ರ ಅಟಲ್ ಬಿಹಾರಿ ವಾಜಪೇಯಿ ಗತೆ ಅಟಲ್ (ಅಚಲ) ನಿರ್ಧಾರ ತೊಗೊಂಡು ಕೂತುಬಿಟ್ಟಾಳ. ಮುಗೀತು ಕಥಿ. ಲಗ್ನಾ ರಿಜಿಸ್ಟರ್ ಬ್ಯಾರೆ ಆಗಿಬಿಟ್ಟದ. ಏನೂ ಮಾಡಲಿಕ್ಕೆ ಬರಂಗಿಲ್ಲ. ಡೈವೋರ್ಸ್ ಮಾಡಿಸಬಹುದು. ಡೈವೊರ್ಸೀ ಸ್ಟೇಟಸ್ ಬರುತ್ತದೆಯೇ ವಿನಃ ಮೊದಲಿನ ಕನ್ಯಾ ಸ್ಟೇಟಸ್ ಬರೋದಿಲ್ಲ. ಮುಗೀತ ಅಷ್ಟ. ಪದ್ದಿ ಅಪ್ಪ ದೊಡ್ಡ ಆಚಾರ್ರಿಗೆ ದೊಡ್ಡ ಗೌಂಡಿ ಅಳಿಯ. ಶುದ್ಧ ಅಂತರ್ಜಾತೀಯ ವಿವಾಹ. ಶಾದಿ ಭಾಗ್ಯ ಹೀಂಗೂ ಬರಬಹುದು ಅಂತ ಪದ್ದಿ ಪಾಲಕರು ವಿಚಾರ ಮಾಡಿರಲಿಲ್ಲ ಬಿಡ್ರೀ.

ಮತ್ತೇನು ಮಾಡೋದು? ಪುಣ್ಯಕ್ಕ ಪದ್ದಿಗೆ ಅಕಿಗಿಂತ ಕಿರಿಯರಾದ ತಂಗಿ, ತಮ್ಮ ಯಾರೂ ಇಲ್ಲ. ಅದೊಂದು ಛಲೋ ಆತು. ಇಲ್ಲ ಅಂದ್ರ ಮುಂದ ಅವರ ಲಗ್ನ ಆಗೋದು ಕಷ್ಟ ಇತ್ತು. ಯಾರಿಗೆ ಗೊತ್ತು ಗೌಂಡಿ ದ್ಯಾಮಪ್ಪಗ ತಮ್ಮ, ತಂಗಿ ಇದ್ದಾರೋ ಏನೋ. ಮತ್ತೊಂದಿಷ್ಟು ಅಂತರ್ಜಾತೀಯ ವಿವಾಹ ಆಗ್ತಿದ್ದವೋ ಏನೋ?

ಓಣಿ ಮಂದಿ, ಬಳಗದವರೂ ಎಲ್ಲ ಕೂಡಿ ಸಮಾಧಾನ ಮಾಡ್ಯಾರ. 'ಇರ್ಲಿ ಬಿಡ್ರೀ. ಹೋಗಿ ಹೋಗಿ ಗೌಂಡ್ಯಾರ ಹುಡುಗನ್ನೇ ಮಾಡಿಕೊಂಡಳು. ಮುಂದಿನ ಮನಿ ಡಿಸೋಜಾನ ಮನಿಯಾಗ ಜಗ್ಗೆ ಆಫ್ರಿಕಾದ ನಿಗ್ರೋ ಹುಡುಗುರು ಭಾಡಿಗೆಗೆ ಇದ್ದರು. ಯಾರರೆ ಕರೆ ದೆವ್ವದಂತಹ ನಿಗ್ರೋ ಹುಡುಗನ ಜೋಡಿ ಅಂತರರಾಷ್ಟ್ರೀಯ ಲಗ್ನಾ ಮಾಡಿಕೊಂಡು ಬಂದಿದ್ದಳು ಅಂದ್ರ ಭಾಳ ತೊಂದ್ರಿ ಇತ್ತು. ಹೌದಿಲ್ಲೋ?? ಈಗ ಏನು ಮಾಡಲಿಕ್ಕೆ ಬರ್ತದ? ಆ ಗೌಂಡಿ ಸೂಳಿಮಗ್ಗ ಪಂಚಗೇವ್ಯಾ ಕುಡಿಸಿ, ಆದಷ್ಟು ಶುದ್ಧಿ ಮಾಡಿಕೊಂಡು, ಕನ್ಯಾದಾನ ಮಾಡಿ ಮುಗಿಸಿರಿ. ಏನು ಮಾಡಲಿಕ್ಕೆ ಬರ್ತದ??' ಅಂತ ಸುಮ್ಮನೆ ಉದ್ರಿ ಉಪದೇಶ, ಬಿಟ್ಟಿ ಸಲಹೆ ಕೊಟ್ಟಾರ ಓಣಿ ಮಂದಿ.

ಪದ್ದಿಯ ಅಪ್ಪ ಅವ್ವಂಗೂ ಬ್ಯಾರೆ ದಾರಿ ಕಂಡಿಲ್ಲ. ಅವರ ಮಠದ ಸ್ವಾಮಿಗಳು ಬ್ಯಾರೆ ಏನೋ ಕೋರ್ಟ್ ಕೇಸಿನ್ಯಾಗ ಬ್ಯುಸಿ. ಹಾಂಗಾಗಿ ಮಠಕ್ಕೆ ಬರಲಿಕ್ಕೆ ಹೇಳಿ ಕಳಿಸಿಲ್ಲ. ಇಲ್ಲಂದ್ರ ಇಷ್ಟು ಆಗೋ ಪುರಸತ್ತಿಲ್ಲದೇ, ಮಠಕ್ಕೆ ಕರೆಯಿಸಿಕೊಂಡು, ಮಾಂಡವಲಿಗೆ ಕೂತುಬಿಡ್ತಾರ. 'ದೊಡ್ಡ ಲಫಡಾ ಆಗ್ಯದ. ನಿಮಗ ಮಠದಿಂದ ಬಹಿಷ್ಕಾರ ಬೀಳಬಾರದು ಅಂದ್ರ ಇಷ್ಟು ಕೊಡಬೇಕಾಗ್ತದ. ನಿಮಗ ಅಂತ ಸೋವಿ ರೇಟ್. ಮ್ಯಾಲಿಂದ ಇನ್ನೂ ಒಂದು ಲಕ್ಷ ಕೊಟ್ಟುಬಿಟ್ಟರೆ ನಿಮ್ಮ ಗೌಂಡಿ ಅಳಿಯಾಗೂ ಬೇಕಾದ್ರ ಒಂದು ಜನಿವಾರ ಹಾಕಿ ಕರೆ ಬ್ರಾಹ್ಮಣ ಅಲ್ಲಲ್ಲ ಖರೇ ಬ್ರಾಹ್ಮಣನನ್ನ ಮಾಡಿಬಿಡ್ತೇವಿ. ಇನ್ನೊಂದೆರೆಡು ತಲೆಮಾರು ಆದ ಮ್ಯಾಲೆ ಯಾರಿಗೂ ಗೊತ್ತಾಗಂಗಿಲ್ಲ. ಎಷ್ಟು ಕೊಡ್ತೀರಿ? ಐದು (ಲಕ್ಷ) ಅಂತ ಬರೆದುಕೊಳ್ಳಲೇ?' ಅಂತ ಡೀಲಿಂಗ್ ಶುರು ಆಗೇಬಿಡ್ತದ. ಸ್ವಾಮಿಗಳು ಪುಣ್ಯಕ್ಕೆ ಕೋರ್ಟ್ ಕೇಸಿನ್ಯಾಗ ಬ್ಯುಸಿ ಇರುವದರಿಂದ ಅಂತಹ ಬುಲಾವಾ ಇನ್ನೂ ಬಂದಿಲ್ಲ. ಬುಲಾವಾ ಬರೋಕಿಂತ ಮೊದಲು ಈ ಯಬಡ ಪದ್ದಿಯ ಅಂತರ್ಜಾತೀಯ ಲಗ್ನದ ಕೇಸನ್ನು ಮುಚ್ಚಿಹಾಕಿಬಿಡಬೇಕು.

ಆವಾ ಗೌಂಡಿ ದ್ಯಾಮಪ್ಪ ಏನೋ ರಿಜಿಸ್ಟರ್ ಲಗ್ನಾ ಮಾಡಿಕೊಂಡುಬಿಟ್ಟ. ಈಗ ಬಿರಾದರಿ, ರಿಷ್ತೇದಾರಿ ಮಂದಿಯನ್ನು ಹ್ಯಾಂಗರೆ ಮಾಡಿ ಸ್ವಲ್ಪಾದರೂ ಸಂಬಾಳಿಸಬೇಕಲ್ಲ. ಪದ್ದಿ ಮದುವೆಗೆ ಅಂತ ಒಂದಿಷ್ಟು ರೊಕ್ಕಾ ಕೂಡಿ ಇಟ್ಟಿದ್ದರು. ಪೂರ್ತಿ ಅಷ್ಟೂ ರೊಕ್ಕಾ ಖರ್ಚು ಮಾಡೋ ಪರಿಸ್ಥಿತಿಯಂತೂ ಇಲ್ಲ. ವರದಕ್ಷಿಣೆ ಇಲ್ಲದೇ ಫೆಂಟಾಸ್ಟಿಕ್ ಅಳಿಯ ಭಾಗ್ಯ ಸಿಕ್ಕದ. ವರದಕ್ಷಿಣೆ ರೊಕ್ಕಾ ಸೇವ್ ಆತು. ಒಂದು ಸಣ್ಣ ಪ್ರಮಾಣದಾಗ ಲಗ್ನಾ ಅಂತ ಮಾಡಿ, ಸ್ವಲ್ಪೇ ಮಂದಿ, ಅದೂ ಭಾಳ ಕಿರಿಕಿರಿ ಮಾಡುವ ಮಂದಿಯನ್ನು ಮಾತ್ರ ಕರೆದು, ಒಂದು ಊಟ ಹಾಕಿಸಿ, ಮಾಡಿಸಿದ ಆಚಾರ್ರಿಗೆ ಸಣ್ಣ ಪ್ರಮಾಣದ ದಕ್ಷಿಣೆ ಕೊಟ್ಟು, ಹ್ಯಾಂಗರೆ ತಮ್ಮ ಕನ್ಯಾಸರೆ ಬಿಡಿಸಿಕೊಂಡರಾತು ಅಂತ ಕಪಿಗಳು (ಉರ್ಫ್ ನ್ಯಾ ಪಿತೃಗಳು) ವಿಚಾರ ಮಾಡಿದರು. ಕನ್ಯಾದಾನಂ ಮಾಡಾಮಿ ಅಂತ ಬುದ್ಧಂ ಶರಣಂ ಗಚ್ಚಾಮಿ ಮಾದರಿಯಲ್ಲಿ ರೆಡಿ ಆದರು.

ಏನೋ ಒಂದು ಮುಹೂರ್ತ ನೋಡಿದರು. ಅಲ್ಲೇ ಯಾವದೋ ಒಂದು ಸಣ್ಣ ಹನುಮಪ್ಪನ ಗುಡಿಯ ತರಹದ್ದನ್ನು ನೋಡಿ, ಅಲ್ಲೇ ಬುಕ್ ಮಾಡಿ, ಒಂದು ಸ್ವಲ್ಪೇ ಮಂದಿಗೆ ಕರೆದು, ಸಣ್ಣ ಪ್ರಮಾಣದಲ್ಲಿ, ಬಾರಿಸುವ, ಅಂದರೆ ಬಾಜಾ ಬಜಂತ್ರಿ ಬಾರಿಸುವ ಮಂದಿಯನ್ನು ಕರೆದು, ಹೆಂಗೋ ಒಂದು ಲಗ್ನಾ ಮಾಡಿ ಮುಗಿಸಿದರು. ಆ ಅಳಿಯಾ ಗೌಂಡಿ ದ್ಯಾಮಪ್ಪನೋ ಸೀದಾ ವಡ್ಡರ ಓಣಿಯಿಂದ ಎದ್ದು ಬಂದು ಕೂತೇಬಿಟ್ಟ. ಸ್ನಾನರೆ ಮಾಡಿದ್ದನೋ ಇಲ್ಲೋ ಗೊತ್ತಿಲ್ಲ. ಪ್ಯಾಂಟು ಶರ್ಟಿನ ಮೇಲೆ ಧೋತ್ರಾ, ಜುಬ್ಬಾ ಹಾಕ್ಕೊಂಡು, ತಲಿ ಮ್ಯಾಲೆ ಬಾಸಿಂಗ ಇಟ್ಟುಕೊಂಡು, ಅಲ್ಲೇ ಕಿಡಕಿಯಿಂದಲೇ ಪಿಚಕ್ ಅಂತ ಒಂದು ಗುಟ್ಕಾ ಪಿಚಕಾರಿ ಹಾರಿಸಿ, ಹೊಸಾ ಗುಟ್ಕಾ ಪ್ಯಾಕೆಟ್ ಫುಲ್ ಹರಿದು ಬಾಯಿಗೆ ಹಾಕ್ಕೊಂಡು ಲಗ್ನ ಮಂಟಪದಾಗ ಕೂತ. ಲಗ್ನಾ ಮಾಡಿಸಲಿಕ್ಕೆ ಬಂದಿದ್ದ ಆಚಾರ್ರು ತಲಿ ತಲಿ ಚಚ್ಚಿಕೊಂಡರು. ಹುಚ್ಚ ಗೌಂಡಿ ದ್ಯಾಮಪ್ಪಾ ಅವರಿಗೂ ಒಂದು ಗುಟ್ಕಾ ಪ್ಯಾಕೆಟ್ ಕೊಡಲಿಕ್ಕೆ ಹೋಗಿದ್ದ. ದಕ್ಷಿಣೆ ಮಾದರಿಯಲ್ಲಿ. ಆವಾ ಸಣ್ಣ ಆಚಾರಿ ಇಸಿದುಕೊಂಡೇಬಿಡ್ತಿದ್ದ. ಯಾಕಂದ್ರ ಆವಾ ಆಚಾರಿ ಸಕಲ ಚಟ ಸಂಪನ್ನ. ಅದು ಏನೋ ಲಗ್ನಾ ಮಾಡಿಸಲಿಕ್ಕೆ ಕೂತೇನಿ ಅಂತ ಅರಿವಾಗಿ ಸುಮ್ಮನೇ ಬಿಟ್ಟಾನ. ಆಮ್ಯಾಲೆ ಇಸಿದುಕೊಂಡು ಹೋಗಿರಬೇಕು ಬಿಡ್ರೀ. ಆಚಾರ್ರು ಗುಟ್ಕಾ ಹಾಕಬಾರದು ಅಂತ ಎಲ್ಲರೆ ಕಾಯಿದೆ ಅದ ಏನು?????

ಏನೋ ಒಂದು ತರಹದಾಗ ಲಗ್ನಾ ಮಾಡಿ ಮುಗಿಸಿದರು. proper ವರ ಸಿಕ್ಕಿದ್ದರೆ ಇನ್ನೂ ಒಂದು ಶೇಕಡಾ ನಲವತ್ತು ಪರ್ಸೆಂಟ್ ಖರ್ಚು ಹೆಚ್ಚೇ ಬರ್ತಿತ್ತು ಅಂತ ಪದ್ದಿ ಪಾಲಕರ ಊಹೆ. ಲವ್ ಮ್ಯಾರೇಜ್ ಮಾಡಿಕೊಂಡು ಅಪ್ಪಾ ಅವ್ವನ ಖರ್ಚು ಕಮ್ಮಿ ಮಾಡಿದ ಪುಣ್ಯಾ ಪದ್ದಿಗೆ ಬಂತೇ? ಗೊತ್ತಿಲ್ಲ. ಆದ್ರ ಗೌಂಡಿ ದ್ಯಾಮಪ್ಪನನ್ನು ಮನೆ ಅಳಿಯನನ್ನಾಗಿ ಸಹ ತಂದ್ಕೋಬೇಕಾತು. ಯಾಕಂದ್ರ ಅವನ ಜೋಪಡಿ ಮನಿ ಇರೋದು ವಡ್ಡರ ಓಣಿಯಾಗ. ಅಲ್ಲೆ ವಡ್ಡರ ಜೋಡಿ ಇಕಿ ಪದ್ದಿ ಏಗಾಡಿ ಹಾರಿಬಿದ್ದಳು. ಸಾಧ್ಯವೇ ಇಲ್ಲ. ಅಲ್ಲಿ ಮನೆ ಮುಂದೆಯೇ ನಾವು ನೀವು ಅರವಿ ಒಣಗಿಸಿದಾಂಗ ಮೊಲದ ಮಾಂಸ ಒಣಗಿಸಿರ್ತಾರ. ಗೌಂಡಿ ದ್ಯಾಮಪ್ಪ ನನಗ ಖುದ್ದ ಹೇಳಿದ್ದ. 'ಸರ್ರಾ! ಒಮ್ಮೆ ನಿಮಗ ಮೊಲದ ಮಾಂಸಾ ತಿನ್ನಿಸಬೇಕು ನೋಡ್ರೀ. ಮಸ್ತ ರುಚಿ ಇರ್ತದ. ಅದೂ ಜಂಗಲಿ ಮೊಲದ ಮಾಂಸ ತಿಂದಿರಿ ಅಂದ್ರ ಅಷ್ಟೇ ಮತ್ತ. ಭಾರಿ ರುಚಿ. ಅದು ಟೈವಾಕ್ ಕಡೆ ಹೋದಾಗ ಮೊಲ ಕಂಡ್ರ ಹೊಡಕೊಂಡು ಬರತೇವರೀ. ಆಮ್ಯಾಲೆ ಮಾಂಸಾ ಎಳಿ ಎಳಿ ಮಾಡಿ ಅರವಿ ಒಣಾ ಹಾಕೋ ಹಗ್ಗದ ಮ್ಯಾಲೆ ಹಾಕಿ ಒಣಗಿಸಿ ಬಿಡ್ತೇವಿ ನೋಡ್ರೀ ಸರ್ರಾ. ಆಮೇಲೆ ಬೇಕಾದಾಗ ಅದನ್ನು ಹುರಕೊಂಡು ತಿನ್ನೋದು ನೋಡ್ರೀ. ಮಾಡಿಸಿ ತರ್ಲೇನು ನಿಮಗ?' ಅಂತ ಕೇಳಿದ್ದ. 'ಏ ಬ್ಯಾಡ ಮಾರಾಯಾ. ನಾವು ಖಟ್ಟರ್ ವೆಜಿಟೇರಿಯನ್ ಮಂದಿ,' ಅಂತ ಹೇಳಿ ಸಾಗಹಾಕಿದ್ದೆ.

ಒಮ್ಮೆ ಇದೇ ಗೌಂಡಿ ದ್ಯಾಮಪ್ಪ ನನ್ನ ಕ್ರಿಕೆಟ್ ಸ್ಟಂಪ್ ಕೇಳಿಬಿಟ್ಟಿದ್ದ. ಹ್ಯಾಂ!? ಈ ವಡ್ಡರ ಓಣಿ ಮಂದಿ ಯಾರ ಜೋಡಿ ಮ್ಯಾಚ್ ಆಡಲಿಕ್ಕೆ ಹೊಂಟಾರ ಅಂತ ನಾ ವಿಚಾರ ಮಾಡಿದರೆ ಗೌಂಡಿ ದ್ಯಾಮಪ್ಪ ಕ್ರಿಕೆಟ್ ಸ್ಟಂಪ್ ಕೇಳಿದ್ದು ಬೇರೆಯೇ ಕಾರಣಕ್ಕೆ ಇತ್ತು. ಮೊಲದ ಬೇಟೆ ಆಡಲಿಕ್ಕೆ ಕ್ರಿಕೆಟ್ ಸ್ಟಂಪ್ ಬೆಸ್ಟ್ ಆಗ್ತದಂತ. ಭರ್ಚಿಗತೆ ಭಲ್ಲೆಗತೆ ಒಗಿತಾರಂತ. ಚೂಪನೆ ಸ್ಟಂಪ್ ಹೋಗಿ ಮೊಲಕ್ಕ ಬಡಿದು ಮೊಲ ಮಟಾಶ್! ಹೋಗ್ಗೋ ಶಿವನೇ! ಮೊದಲು ಇದೆಲ್ಲ ಗೊತ್ತಿರದೇ ಎಷ್ಟು ಸಾರೆ ಈ ಹೊಲಸ್ ಸೂಳಿಮಗಗ ನನ್ನ ಕ್ರಿಕೆಟ್ ಸ್ಟಂಪ್ ಕೊಟ್ಟು ಪಾಪ ಮಾಡಿದೆ ನಾನು! ಈಗ ಅದಕ್ಕೆ ಪ್ರಾಯಶ್ಚಿತ ಅಂದ್ರ ಸ್ಟಂಪುಗಳಿಗೆ ಮಾಳಮಡ್ಡಿ ಎಮ್ಮಿಕೇರಿ ಮ್ಯಾಲಿನ ಕಮ್ಮಾರ ಶಾಲಿಯೊಳಗ ಬ್ಯಾರೆ ಕಬ್ಬಿಣದ ತುದಿ ಹಾಕಿಸಬೇಕು. ನಮ್ಮ ಪದ್ದಿ ಇಂತಾ ಗೌಂಡಿ ಮನ್ಯಾಗ ಹೋಗಿ ಜೀವನ ಮಾಡಲಿಕ್ಕೆ ಸಾಧ್ಯ ಅದೇನ್ರೀ? ಎಲ್ಲಿದು? ಸಾಧ್ಯವೇ ಇಲ್ಲ. ಹಾಂಗಾಗಿ ಗೌಂಡಿ ದ್ಯಾಮಪ್ಪಗ ಇಲ್ಲೇ ಬಂದು ಇರು ಅಂದಾರ ಪದ್ದಿ ಅಪ್ಪ. ಅವಾ ಒಬ್ಬನೇ ಬರಬೇಕು ಮತ್ತ. ಎಲ್ಲರೆ ಪೂರ್ತಿ ವಡ್ಡರ ಓಣಿ ಮಂದಿ ಕರೆದುಕೊಂಡು ಬಂದ್ರ ಕಷ್ಟ ಅಂತ ಹೇಳಿ ಬರೆ ಅವಂಗ ಒಬ್ಬವಗ ಬಾ ಅಂದಾರ. ಅವನೇ ಕಟ್ಟಿಕೊಟ್ಟಿದ್ದ ಮನಿ. ಈಗ ಮೂರು ವರ್ಷದದಿಂದ ಪದ್ದಿ ಮನಿಯ extension ಕಟ್ಟೋ ಕೆಲಸ ನಡೆದಿತ್ತು. extension ಭಾಡಿಗಿ ಕೊಟ್ಟು ಒಂದಿಷ್ಟು ರೊಕ್ಕಾ ಮಾಡಿಕೊಳ್ಳೋಣ ಅಂದ್ರ ಅದನ್ನ ಈಗ ಮಗಳು ಅಳಿಯನಿಗೇ ಬಿಟ್ಟುಕೊಡಬೇಕಾಗಿ ಬಂದಿದ್ದು ಏನು ವಿಪರ್ಯಾಸ ನೋಡಿ. ಗೌಂಡಿ ದ್ಯಾಮಪ್ಪ ಮನಿ ಕಟ್ಟಿದನೋ, ಪದ್ದಿ ಮನದಾಗ ಒಂದು ಗೂಡು ಕಟ್ಟಿದನೋ ಗೊತ್ತಿಲ್ಲ. ಗೂಡು ಕಟ್ಟಿ ಪಾರಿವಾಳದಾಂಗ ಬಂದು ಕೂತನೋ ಅಥವಾ ಸಣ್ಣ ಚಿಟಗುಬ್ಬಿ ತರಹ ಬಂದುಕೂತು ಪದ್ದಿ ತಲಿಕೆಡಿಸಿದನೋ ಗೊತ್ತಿಲ್ಲ. ಒಟ್ಟಿನಲ್ಲಿ 'ಮೈನೆ ಪ್ಯಾರ್ ಕಿಯಾ' ಆಗಿಬಿಡ್ತು. ಕಬೂತರ್ ಜಾ ಜಾ ಜಾ ಕಬೂತರ್ ಜಾ ಜಾ ಜಾ. ಚಿಟಗುಬ್ಬಿ ಆ ಆ ಆ ಚಿಟಗುಬ್ಬಿ ಆ ಆ ಆ. ಆವ್! ಆವ್! ಅಂತ ಕರೆದರೆ ಹಾವು ಬರಲಿಲ್ಲ. ಹಾವರಾಣಿಯಂತಹ ಪದ್ದಿ ಬಂದಳು.

ಒಟ್ಟಿನ್ಯಾಗ ಪದ್ದಿ ಲಗ್ನಾ ಗೌಂಡಿ ದ್ಯಾಮಪ್ಪನ ಜೋಡಿ ಆತು. ಓಣಿ ಮಂದಿ ಬಿಟ್ಟಿ ಊಟ ಕಟದು, ಇಲ್ಲದ್ದು ಸಲ್ಲದ್ದು ಮಾತಡಿಕೋತ್ತ ಹೋದವು. ಎಂತಾದ್ದೇ ಲಗ್ನಾ ಮಾಡಿ ಒಗಿರಿ ನೀವು. ಮಂದಿ ಮಾತ್ರ ಒಂದಕ್ಕೆರೆಡು ಮಾತಾಡೇ ಮಾತಾಡ್ತಾರ. ಅದು ಅವರ ಜನ್ಮ ಸ್ವಭಾವ. ಬೇರೆಯವರು ಮಾಡಿದ ಲಗ್ನದಾಗ ಕೊಂಕು ಕಂಡುಹಿಡಿಯೋದು ಅಂದ್ರ ಅಷ್ಟು ಖುಷಿ ಅವರಿಗೆ. ವರನ ಬಗ್ಗೆ, ಕನ್ಯಾ ಬಗ್ಗೆ, ಮಾಡಿದ arrangements ಬಗ್ಗೆ, ಹಾಕಿದ ಊಟ, ತುಂಬಿದ ಉಡಿ, ಕೊಟ್ಟ ಕಾಣಿಕೆ ಎಲ್ಲದರ ಬಗ್ಗೆ ಒಂದಲ್ಲ ಒಂದು ಕೊಂಕು ನುಡಿಲಿಕ್ಕೇಬೇಕು. ಮ್ಯಾಲಿಂದ ಖಾಲಿ ಲಕೋಟೆ ಗಿಫ್ಟ್ ಬ್ಯಾರೆ. ಮದ್ವಿಯೊಳಗ ಯಾರಿಗೆ ಗೊತ್ತಾಗಬೇಕು, ಯಾರು ರೊಕ್ಕಾ ಇಟ್ಟು ಕೊಟ್ಟರು, ಯಾರು ಪಕ್ಕಾ ಮಂದಿ ರೊಕ್ಕಾ ಇಲ್ಲದೇ ಖಾಲಿ ಲಕೋಟೆ ಕೊಟ್ಟರು ಅಂತ???

ಲಗ್ನಾ ಮುಗೀತು. ಆದ್ರ ಮುಂದಿನದು ಭಾಳ ಇಂಪಾರ್ಟೆಂಟ್ ಕಾರ್ಯಕ್ರಮ. ಪ್ರಸ್ಥ. ಏ ಅದು ಭಾಳ ಮುಖ್ಯರೀ. ಮದ್ವಿಗಿಂತ ಭಾಳ ಕಾಳಜಿ ವಹಿಸಿ ಮಾಡ್ಬೇಕಾಗ್ತದ. ಅದೇನೋ ಶೋಡಷ ಸಂಸ್ಕಾರಗಳಲ್ಲಿ ಒಂದಾದ ಗರ್ಭದಾನ ಅದು ಇದು ಅಂತ ಹೇಳಿ ಪ್ರಸ್ಥದ ಸಂಸ್ಕಾರ ಅಂದ್ರ ಮತ್ತ ಮುಹೂರ್ತ ನೋಡಿ, ಮತ್ತ ಪೂಜಿ ಮಾಡಿ, ನಂತರವೇ ಹುಡುಗ ಹುಡುಗಿ ಕೈಯಾಗ ಗಾಡಿ ಚಾವಿ ಕೊಟ್ಟು ಇನ್ನು ಬೇಕಾದ್ರ ಗಾಡಿ ಗಿಚ್ಚಾಗಿ ಹೊಡೀರಿ ಅಂದಂಗ ಅದು. ದೀಪಾವಳಿಗೆ ಒಂದು ವಾರ ಮೊದಲೇ ಪಟಾಕ್ಷಿ ತಂದು ಇಟ್ಟರೂ ದೀಪಾವಳಿ ದಿವಸದಂದೇ ಪಟಾಕ್ಷಿ ಹೊಡಿಲಿಕ್ಕೆ ಕೊಟ್ಟಂಗ. ಪ್ರಸ್ಥದ ತನಕಾ ಲಗ್ನಾದ ಗಂಡ ಹೆಂಡತಿ ದೂರದಿಂದಲೇ ನಮಸ್ಕಾರ ಮಾಡಿಕೋತ್ತ ಇರಬೇಕು ಅಷ್ಟೇ. ಬೇಕಾದಷ್ಟು ಮಾಡಬಹದು. ಯಾವ ಭಂಗಿ ಬೇಕು ಆ ಭಂಗಿಯೊಳಗ ಮಾಡಬಹುದು. ಆದ್ರ ನಮಸ್ಕಾರ ಮಾತ್ರ. ಮತ್ತ ಎಲ್ಲರೆ ಫ್ರೆಶ್ ಆಗಿ ಲಗ್ನಾದ ಹುಡುಗಿ ಹುಡುಗ ಕದ್ದು ಎಲ್ಲೆಲ್ಲೋ ಕೈಬಿಟ್ಟಾರು ಅಂತ ಕಾಯಲಿಕ್ಕೆ ಹಳೆ ಮುದಿಕ್ಯಾರು, ಹೊಸ ಆಂಟಿಗಳು ಎಲ್ಲ ಕಣ್ಣಿಗೆ ಎಣ್ಣಿ ಹಾಕ್ಕೊಂಡು ಕೂತಿರ್ತಾವ. ಮಂಗಳಸೂತ್ರ ಬಂತು ಹೇಳಿ ಕಾಮಸೂತ್ರ ಏನರೆ ಓದಲಿಕ್ಕೆ, ಓದಿಸಲಿಕ್ಕೆ ಹೋದ್ರ ಫಟ್ ಅಂತ ಒಂದು ಕಡತ ಬೀಳ್ತದ. ಜೋಡಿ ಬೇರೆಬೇರೆ ಮಾಡಿ ಓಡಸ್ತಾರ. ನಿಶ್ಚಯವಾಗಿರುವ ಪ್ರಸ್ಥವನ್ನು ಮತ್ತೂ postpone ಮಾಡ್ತೇವಿ ಅಂತ ಹೇಳಿಬಿಡ್ತಾರ. ಧಮಿಕಿ ಹಾಕ್ತಾರ!

ಅದು ಪದ್ದಿ ದ್ಯಾಮಪ್ಪನ ಲಗ್ನಾಗಿ ಭಾಳ ದಿವಸದ ಮ್ಯಾಲೆ ಪ್ರಸ್ಥದ ಮುಹೂರ್ತ ಕೂಡಿ ಬಂತು. ಲಗ್ನಾಗಿ ಒಂದು ವಾರದ ನಂತರ ಮುಹೂರ್ತ ಏನೋ ಇತ್ತು. ಆವಾ ಆಚಾರಿ ಅದೇ ಮುಹೂರ್ತಕ್ಕೇ ಪ್ರಸ್ಥ ಇಡೋಣೇನು ಅಂತ ಕೇಳಿದ. ಪದ್ದಿ ಅವ್ವಾ ಪದ್ದಿ ಕಡೆ ನೋಡಿದಳು. ಪದ್ದಿ ಹೇಳಿ ಕೇಳಿ ಹಾಪ್ ಪೆದ್ದಿ. ಅಕಿಗೆ ಪಾಪ ಪ್ರಸ್ಥ ಅಂದರೆ ಏನೂ ಅಂತನೂ ಗೊತ್ತಿಲ್ಲ. ಮೊನ್ನೆ SSLC ಸಮಾಜ ಶಾಸ್ತ್ರದ ಪರೀಕ್ಷಕ್ಕೆ ಬೇಕು ಅಂತ ದಕ್ಕನ್ ಪ್ರಸ್ಥಭೂಮಿ ಅಂತ ಬಾಯಿಪಾಠ ಹೊಡದೇ ಹೊಡದಾಳ. ಪ್ರಸ್ಥ ಇಡೋಣೇನು ಅಂತ ಕೇಳಿದ ಕೂಡಲೇ ಮತ್ತ ವಿಚಾರ ಮಾಡದೇ ಹೂಂ ಅಂದುಬಿಟ್ಟಾಳ. ಅಲ್ಲೇ ಕೂತ ಪದ್ದಿಯ ವೈನಿ ಒಂದು ತರಹ ಕೆಟ್ಟ ಮಸಡಿ ಮಾಡಿ ಪದ್ದಿ ಅವ್ವಂಗ ಏನೋ ಸನ್ನಿ ಮಾಡ್ಯಾಳ. ಇಬ್ಬರೂ ಕೂಡಿ ಪದ್ದಿನ ಕರ್ಕೊಂಡು ಒಳಗಿನ ಕಡೆ ಹೋಗಿ ಏನೋ ಕುಸುಪುಸು ಮಾತಾಡಿ ಬಂದರು. ಬರೋವಾಗ ಪದ್ದಿ ಅವ್ವಾ ಪದ್ದಿಯ ತಲಿಗೆ ಕೈ ತಿವಿಯುತ್ತ ಬಂದರು. ಪದ್ದಿದು ಮಾತ್ರ ಒಂದೇ ಮಾತು - 'ಮುಂದಿನ ವಾರದ ಆ ಮುಹೂರ್ತಕ್ಕ ಪ್ರಸ್ಥ ಯಾಕ ಬ್ಯಾಡ? ಅದಕೂ ಮುಂದಿನ ಮುಹೂರ್ತ ಮತ್ತ ಯಾವಾಗ ಅದನೋ ಏನೋ!?'. 'ಇದಕ್ಕೇ ನಿನಗ ತಲಿ ಇಲ್ಲಾ ಅನ್ನೋದು. ಬರೇ ಯಬಡಿ ಗತೆ ಲವ್ ಮಾಡಿಬಿಟ್ಟರೆ ಆತೇನು? ಕೆಟ್ಟ ಗಡಿಬಿಡಿಯಾಗ ಕುಂಡಿಗೆ ಕಾಲು ಹಚ್ಚಿ ಪೀಟಿ ಉಷಾನ ಗತೆ ಓಡಿಹೋಗಿ ರಿಜಿಸ್ಟರ್ ಲಗ್ನಾ ಮಾಡಿಕೊಂಡುಬಿಟ್ಟರೆ ಆತೇನು?? ಖಬರಗೇಡಿ ತಂದು. ಬುದ್ಧಿ ಅನ್ನೋದು ಒಟ್ಟೇ ಇಲ್ಲಾ ಮಬ್ಬ ಹುಡುಗಿಗೆ,' ಅಂತ ಬಯ್ಕೋತ್ತ ಮತ್ತ ಪಡಸಾಲಿಗೆ ಬಂದು ಕೂತರು ಪದ್ದಿ ಅವ್ವಾ. 'ಹೂಂ! ಏನ್ರೀ ಬಾಯಾರ? ಮುಂದಿನ ವಾರ ಪ್ರಸ್ಥದ ಮುಹೂರ್ತ ಇಟ್ಟುಬಿಡ್ಲ್ಯಾ?' ಅಂತ ಕೇಳಿದ ಆಚಾರಿ. 'ಆಚಾರ್ರ! ಮುಂದಿನ ವಾರ ಬ್ಯಾಡ್ರೀ. ಅದಕೂ ಮುಂದಿನ ವಾರ ನೋಡ್ರೀ,' ಅಂದರು ಪದ್ದಿ ಅವ್ವಾ. 'ಯಾಕ??' ಅನ್ನೋ ಲುಕ್ ಕೊಟ್ಟ ಆಚಾರಿ. ಅವಂಗ ಲಗೂನೆ ಮುಗಿಸಿ, ದಕ್ಷಿಣಾ ಕಲೆಕ್ಟ್ ಮಾಡಿಕೊಂಡು ಓಡಬೇಕು. 'ಅಯ್ಯ! ಆಚಾರ್ರ, ನೀವು ಸುಮ್ಮನೇ ಬ್ಯಾರೆ ಮೂರ್ತಾ ನೋಡ್ರೆಪಾ. ಮುಂದಿನ ವಾರ ಆಕಿ ಒಳಗ ಇರಂಗಿಲ್ಲ,' ಅಂತ ಕೆಟ್ಟ ಮಸಡಿ ಮಾಡಿ ಹೇಳಿದರು. ಆಚಾರ್ರಿಗೆ ಗೊತ್ತಾತು. 'ಹೂಂ, ಐದು ದಿನಾದ ಮ್ಯಾಲೆ ನೀರು. ಮತ್ತ ಮುಂದಿನ ವಾರದ ಕೊನೀಗೇ ರಜೋದರ್ಶನ ಆತು ಅಂದ್ರ ಅದರ ಮುಂದಿನ ವಾರ ಸಹಿತ ವಿಘ್ನ ಬಂದೀತು ನೋಡ್ರೀ!' ಅಂತ ವಾರ್ನಿಂಗ್ ಕೊಟ್ಟರು. ಏನು ಐದು ದಿನವೋ, ಏನು ನೀರೋ, ಏನು ರಜವೋ, ಏನು ದರ್ಶನವೋ, ಏನು ವಿಘ್ನವೋ...... ಪದ್ದಿಗೆ ಅಂತೂ ಏನೂ ಗೊತ್ತಾಗಲೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ 'ಪದ್ದಿ ಒಳಗಿರಂಗಿಲ್ಲ' ಅಂತ ಅವರ ಅವ್ವ ಹೇಳಿದ್ದರ ಅರ್ಥ ಪದ್ದಿಗೇ ಗೊತ್ತಾಗಲಿಲ್ಲ. 'ಒಳಗಿರಂಗಿಲ್ಲ ಅಂದ್ರ ಎಲ್ಲೆ ಹೊರಗ ಹೊಂಟೇನಿ?' ಅಂತ ತಲಿ ಕರಾಪರಾ ಕೆರಕೊಂಡಳು. ಏನೂ ನೆನಪಿಗೆ ಬರಲಿಲ್ಲ. ಅವ್ವನ್ನ ಕೇಳೋಣ ಅಂದ್ರ ಮತ್ತ ಬೈತಾಳ. ನೋಡೋಣ ಮುಂದಿನ ವಾರ ಎಲ್ಲೆ ಹೊರಗ ಹೋಗೋದದ ಅಂತ ವಿಚಾರ ಮಾಡಿ ಸುಮ್ಮನಾದಳು.

ಆಚಾರ್ರು ಒಂದು ವಾರ ಬಿಟ್ಟು ಪ್ರಸ್ಥಕ್ಕೆ ಅಂತನೇ ಒಂದು ಬೆಸ್ಟ್ ಮುಹೂರ್ತ ಹುಡುಕಿದರು. ಎಲ್ಲಾ ವಿವರವಾಗಿ ಹೇಳಿದರು. ಸಾಮಾನಿನ ಪಟ್ಟಿ ಗಿಟ್ಟಿ ಮಾಡಿಕೊಟ್ಟು, ಆವತ್ತಿನ ಸಣ್ಣ ಪ್ರಮಾಣದ ದಕ್ಷಿಣೆ ತೊಗೊಂಡು, ಚಂಡಿಕಿ ನೇವಿಕೊಳ್ಳುತ್ತ ಎದ್ದು ಹೋದರು.

ಮುಂದಿನ ವಾರ ಪದ್ದಿ ಸೀದಾ ಹೊರಗೆ. ಆವಾಗ ಗೊತ್ತಾತು ಅವರ ಅವ್ವ 'ಆಕಿ ಒಳಗಿರಂಗಿಲ್ಲ' ಅಂದಿದ್ದರ ಅರ್ಥ. ಒಳಗೆ ಇರದೇ ಇರುವದಕ್ಕೂ ಪ್ರಸ್ಥಕ್ಕೂ ಎತ್ತಣದೆತ್ತ ಸಂಬಂಧವಯ್ಯಾ ಅಂತ ಅಂದುಕೊಂಡಳು. ಫುಲ್ ರೆಸ್ಟ್. ಒಂದು ವಾರ ಫುಲ್ ರೆಸ್ಟ್.

ಅದರ ಮುಂದಿನವಾರ ಬರೋಬ್ಬರಿ ಪ್ರಸ್ಥದ ಮುಹೂರ್ತ ಬಂತು. ಆಚಾರ್ರು ಬರೋಬ್ಬರಿ ಮಧ್ಯಾನವೇ ಬಂದ್ರು. ಮಧ್ಯಾನದಿಂದಲೇ ದೊಡ್ಡ ಪೂಜೆ. ಗೌಂಡಿ ದ್ಯಾಮಪ್ಪನಿಗೆ ಹೊಗೆ ಹಾಕಿಸಿಕೊಂಡು ಹಾಕಿಸಿಕೊಂಡು ಸಾಕಾಗಿ ಹೋಗಿದೆ. ಅಂದ್ರೆ ಹೋಮ, ಹವನದ ಹೊಗೆ ಕುಡಿದೂ ಕುಡಿದೂ ಸಾಕಾಗಿ ಹೋಗಿದೆ. ಆವಾ ಬೀಡಿ ಸಹಿತ ಸೇದೊದಿಲ್ಲ. ಎಲಿ ಅಡಿಕಿ, ಗುಟ್ಕಾ ಬಿಟ್ಟರೆ ಬ್ಯಾರೆ ಯಾವದೂ ಚಟಾ ಇಲ್ಲ ಅವಂಗ. ಶೆರೆ ಗಿರೆ ಒಟ್ಟ ಕುಡಿಯಂಗಿಲ್ಲ. ಹ್ಯಾಂಗೋ ಕುಂತು ಪೂಜಿ ಮಾಡಿಸಿಕೊಂಡ. ಪದ್ದಿ ಬಿಡಿ, ಮಸ್ತ ಖುಷಿಯಲ್ಲೇ ಇದ್ದಳು. ಈ ಪ್ರಸ್ಥ ಅನ್ನೋದು ಮುಗಿದು ಹೋತು ಅಂದ್ರ ಅಕಿ ಫುಲ್ ನಿರಾಳ.

ಪ್ರಸ್ಥ ಭೂಮಿಯನ್ನು ಮಸ್ತ ಅಲಂಕಾರ ಮಾಡಿದ್ದರು. ಪ್ರಸ್ಥದ ಕೋಣೆ ಅನ್ನೋದು ಪದ್ಧತಿ. ಆದ್ರ ನಮ್ಮ ಗೌಂಡಿ ದ್ಯಾಮಪ್ಪ ಸಾಹೇಬರ ಸೈಜಿಗೆ ಅವರೇ ಕಟ್ಟಿಕೊಟ್ಟಿದ್ದ ಮನೆಯ ದೊಡ್ಡ ಹೊಸ ಪಡಸಾಲೆಯನ್ನೇ ಪ್ರಸ್ಥದ ಕೋಣೆ ಮಾಡಿದ್ದರು. ದೊಡ್ಡ ಸೈಜಿನ ಕೋಣೆ ಆದ್ದರಿಂದ ಪ್ರಸ್ಥ ಭೂಮಿ ಅನ್ನೋದೇ ಬೆಹತರ್. ದಕ್ಕನ್ ಪ್ರಸ್ಥ ಭೂಮಿ (Deccan Plateau) ಇದ್ದಂಗ. ದ್ಯಾಮಪ್ಪ ಮತ್ತ ಇಕಿ ಪದ್ದಿ ಇಬ್ಬರೂ ದೊಡ್ಡ ಹೊನಗ್ಯಾ ಸೈಜಿನವರೇ. ಅದಕ್ಕೇ ನೆಲದ ಮ್ಯಾಲೆ ನಾಕ್ನಾಕು ಗಾದಿ ಒಗೆದು, ಮ್ಯಾಲೆ ಧಪ್ಪನೆ ಜಮಖಾನಿ ಹಾಕಿ, ಫಸ್ಟ್ ನೈಟ್ ಬೆಡ್ ತಯಾರು ಮಾಡಿದ್ದರು. ಹೊನಗ್ಯಾ ಮಂದಿ ಕಟ್ಟಿಗೆ ಮಂಚದ ಮ್ಯಾಲೆ ಏನೋ ಮಾಡಲಿಕ್ಕೆ ಹೋಗಿ, ಏನೋ ಆಗಿ, ಬಿದ್ದು, ಸೊಂಟಾ ಮುರಕೊಂಡರು  ಅಂದ್ರ ಅಷ್ಟ ಮತ್ತ. 'ಪ್ರಥಮ ಚುಂಬನೆ ದಂತ ಭಗ್ನೆ' ಇದ್ದಂಗ 'ಪ್ರಥಮ ರಾತ್ರಿಯೇ ಸೊಂಟ ಮುರಿತೇ' ಆಗಬಾರದು ಅಂತ. ಪ್ರಸ್ಥದ ಬೆಡ್ಡಿಗೆ ಹಾಸಿದ ಮಸ್ಲೀನ್ bedsheets ಗಳನ್ನು ಭಾಡಿಗೆಗೆ ತಂದುಬಿಟ್ಟಿದ್ದನಂತ ಪದ್ದಿ ಅಣ್ಣ ಖತರ್ನಾಕ್ ತೂತ್ ನಾಗ್ಯಾ. ಅದು ದೋಭಿ ಅಂಗಡಿಯವಂಗೂ ಲಾಭ. ಇವರಿಗೂ ಕ್ಯಾಪಿಟಲ್ ಖರ್ಚು ಇಲ್ಲ. ಏಕ್ ರಾತ್ ಕಾ ಮಾಮಲಾ! ಮರುದಿವಸ ಹೋಗಿ ವಾಪಸ್ ಕೊಟ್ಟು ಬಂದರಾತು. ಆವಾ ದೋಭಿ ಹ್ಯಾಂಗೂ ವಾಶ್ ಮಾಡಿ ಅವನ ಗಿರಾಕಿಗೆ ಕೊಟ್ಟು ಕಳಿಸ್ತಾನ. ನೋಡ್ರೀ, ನೀವು ಡ್ರೈಕ್ಲೀನ್ ಮಾಡಲಿಕ್ಕೆ ಅರವಿ ಕೊಟ್ಟು ಬಂದಾಗ ಏನೇನು ಆಗಬಹುದು ಅಂತ. ನಿಮ್ಮ ರೇಶ್ಮಿ ಸೀರಿ ಯಾರ್ಯಾರಿಗೆ ಭಾಡಿಗೆ ಕೊಟ್ಟುಬಿಡ್ತಾರೋ ಏನೋ! ಮುಂದಿನ ಸಾರೆ ಎಲ್ಲರೆ ಲಗ್ನಕ್ಕ ಹೋದಾಗ ನೋಡ್ರಿ. ಎಲ್ಲರೆ ನಿಮ್ಮದೇ ಸೀರಿ ಯಾರರೆ ಉಟ್ಟುಕೊಂಡು ಬಂದಾರೋ ಅಂತ.

ರಾತ್ರಿ ಆತು. ಮುಹೂರ್ತ ಹತ್ರ ಬಂತು. ಎಲ್ಲಾ ತಯಾರಿಯಾಗಿತ್ತು. ಮಸ್ತ ಊಟಾದ ಮ್ಯಾಲೆ ಫೈನಲ್ ಟಚ್ ಕೊಡಲಿಕ್ಕೆ ಎಲ್ಲಾರೂ ರೆಡಿ ಆದರು. ಈ ಕಡೆ ಗೆಳತಿಯರು ಪದ್ದಿನ ಶೃಂಗಾರ ಮಾಡಲಿಕ್ಕೆ ಕರಕೊಂಡು ಹೋದರು. ಆವಾ ದ್ಯಾಮಪ್ಪ ಅಂತೂ ಎಲ್ಲೋ ಹೋದವ ಬಂದ. ಅಸಡ್ಡಾಳ ಹರ್ಕಾ ಪರ್ಕಾ ಜೀನ್ಸ್ ಪ್ಯಾಂಟ್ ಮ್ಯಾಲೆ ಕೆಂಪ ಸ್ಯಾಂಡೋ ಬನಿಯನ್ ಹಾಕ್ಕೊಂಡು ಅಡ್ಯಾಡಲಿಕತ್ತಿದ್ದ. ಪ್ರಸ್ಥದ ಕೋಣೆಗೆ ಹೋಗಿ ಸೆಟಲ್ ಆಗಪಾ ಅಂದ್ರ ಹಾಂಗೇ ಹೊಂಟಿತ್ತು ಅದು ಹಾಪಾ. ಚಂದಾಗಿ ದಾಡಿ ಗೀಡಿ ಮಾಡಿಕೊಂಡು, ಸ್ನಾನಾ ಗೀನಾ ಮಾಡಿದ ಮ್ಯಾಲೆ ಒಳಗ ಹೋಗಪಾ ಅಂತ explicit ಆಗಿ ಹೇಳಬೇಕಾತು ಆ ವಡ್ಡಗ. ಗಡಿಬಿಡಿಯಾಗ ಹೋಗಿ ಏನೋ ದಾಡಿ, ಸ್ನಾನ ಮುಗಿಸಿ ಮತ್ತ ಅದೇ ಅರಿವಿ ಹಾಕಿಕೊಂಡು ಬಂದು ಕೂತ. ಹೇಶಿ! 'ಪ್ರಸ್ಥದ ಕೋಣೆ ಒಳ ಹೊಕ್ಕಲೇನು?' ಅನ್ನೋ ಲುಕ್ ಕೊಟ್ಟ. ಪದ್ದಿ  ಅಪ್ಪಾ ಆಚಾರರು ತಲಿ  ತಲಿ ಚಚ್ಚಿಕೊಂಡರು. ಪ್ರಸ್ಥಕ್ಕಾಗೇ ಅಂತ ತಂದಿದ್ದ ಬಿಳೆ ಶರ್ಟ್, ಬಿಳೆ ಪಂಚೆ, ಬಿಳೆ ಶಾಲು ಕೊಟ್ಟರು. ಅದನ್ನು ಹಾಕಿಕೊಂಡು ಒಳಗ ಹೊಕ್ಕು ಅಂದರು. ಗೌಂಡಿ ದ್ಯಾಮಪ್ಪ ಡ್ರೆಸ್ ಬದಲು ಮಾಡಿಕೊಂಡು ಬಂದ. ರೆಡ್ ಅಂಡ್ ವೈಟ್ ಆಗಿ ಬಂದ. ಬಿಳೆ ಪಂಚೆಯೊಳಗೆ  ಢಾಳಾಗಿ ಕಾಣುತ್ತಿದ್ದ ಕೆಂಪು ಚಡ್ಡಿ. ಹಾ!!! ಹಾ!!!

ಏನು ಹೇಳೋಣ!? ಎಲ್ಲರೂ ತಟ್ಟಿಕೊಂಡು ತಟ್ಟಿಕೊಂಡು ನಕ್ಕರು. ಪದ್ದಿಯ ಗೆಳತಿಯರೆಲ್ಲ ಪೆಕಪೆಕಾ ಅಂತ ಏನೇನೋ ತಟ್ಟಿಕೊಂಡು ನಕ್ಕರು. ಪೆದ್ದ ಪದ್ದಿ ಮಾತ್ರ, 'ಯಾಕ ನಗ್ಲೀಕತ್ತೀರಿ ಎಲ್ಲಾರೂ? ಹಾಂ?' ಅಂತ ಇನ್ನೋಸೆಂಟ್ ಆಗಿ ಕೇಳಿದಳು. ಆಕೆಯ ತಲೆಗೆ ಮೊಟಕಿದ ಅವರ ಅವ್ವ ಪ್ರಸ್ಥಕ್ಕಾಗಿ ಆಕೆಯ ವಿಶೇಷ ಕೇಶ ಶೃಂಗಾರದಲ್ಲಿ ತೊಡಗಿದರು. ತಲೆ ತಗ್ಗಿಸಿಕೊಂಡು ಕೂತ ಪದ್ದಿ ಮನದಲ್ಲೇ, 'ಆಹಾ ನನ್ನ ಪ್ರಸ್ಥವಂತೆ! ಓಹೋ ನನ್ನ ಪ್ರಸ್ಥವಂತೆ! ನನಗೂ ನಿನಗೂ ಏನಂತೆ? ಟಾಂ ಟಾಂ ಟಾಂ!' ಅಂತ 'ಮಾಯಾ ಬಜಾರ್' ಅನ್ನುವ ಪುರಾತನ ಸಿನೆಮಾದ ಹಾಡೊಂದನ್ನು ಗುಣುಗಿದಳು. ತಾವು ಶುದ್ಧ ಆಚಾರ್ರಾಗಿ ವಡ್ಡರ ಹುಡುಗನನ್ನು ಅಳಿಯನನ್ನಾಗಿ ಪಡೆಯಬೇಕಾಗಿ ಬಂದಿದ್ದು ಜಗತ್ತೆಂಬ ಈ ಮಾಯಾ ಬಜಾರಿನ ಅತಿ ದೊಡ್ಡ ಮಾಯೆಯಲ್ಲದೇ ಇನ್ನೇನು ಅಂದುಕೊಂಡರು ಪದ್ದಿಯ ಮಾತಾಶ್ರಿ. ಮಾಯಾವಾದಿ ಅದ್ವೈತಿಗಳನ್ನು ಸಿಕ್ಕಾಪಟ್ಟೆ ಖಂಡಿಸುವ, ದ್ವೇಷಿಸುವ ದ್ವೈತಿಗಳಿಗೆ ಮಾಯಾವಾದದ ಖಡಕ್ ಟ್ರೀಟ್ಮೆಂಟ್ ಒಮ್ಮೊಮ್ಮೆ ಈ ಮಾದರಿಯಲ್ಲಿ ಸಿಕ್ಕಿಬಿಡುತ್ತದೆ. ಏನು ಮಾಡಲಿಕ್ಕೆ ಬರುತ್ತದೆ?? 'ಬ್ರಹ್ಮ ಸತ್ಯ ಜಗತ್ ಮಿಥ್ಯಾ, ಜೀವೋ ಬ್ರಹ್ಮೈವ ನ ಪರಹ' - ಅನ್ನುವ ಆದಿ ಶಂಕರರ ವಿವೇಕ ಚೂಡಾಮಣಿಯ ಮಾತು ಮಾತ್ರ ಶಂಬರ್ ಟಕಾ ಸತ್ಯ. ಸಿಕ್ಕಿರುವ ವಡ್ಡರ ಅಳಿಯ ಸತ್ಯ. ನಂಬಿದ ಮಗಳು ಮಿಥ್ಯಾ. ಕರ್ಮ! ಕರ್ಮ!

ಎಲ್ಲ ರೆಡಿ. ಆಚಾರ್ರು ಫೈನಲ್ ಪೂಜೆ ಮಾಡಿ, ಹೊಸ ದಂಪತಿಗಳನ್ನು ಹಾರೈಸಿ, ಏನೇನೋ ಮಂತ್ರ ಹೇಳಿದರು. ಕೆಟ್ಟ ತುಂಟ ಖತರ್ನಾಕ್ ಆಚಾರಿ. ಸಿಕ್ಕಾಪಟ್ಟೆ ಮಷ್ಕಿರಿ. 'ಕಭಿ ಕಭಿ' ಚಿತ್ರದ ಹಾಡನ್ನು ಅಪಭ್ರಂಶ ಮಾಡಿ ಸಂಸ್ಕೃತ ಮಂತ್ರದ ಧಾಟಿಯಲ್ಲಿಯೇ ಹೇಳಿ ಕೆಟ್ಟ ವಿಕಟ ನಗೆ ನಕ್ಕ. 'ಸುಹಾಗ್ ರಾತ್ ಹೈ, ಚಡ್ಡಿ ಉತಾರ್ ರಹಾ ಹೂಂ ಮೈ!' ಶಿವ ಶಿವಾ! ಆಚಾರ್ ಮಂದಿ ಸಹಿತ ಎಷ್ಟು ಕೆಟ್ಟು ಕೆರಾ ಹಿಡಿದು ಹೋಗ್ಯಾರ ನೋಡ್ರೀ. ಅಂತರ್ಜಾತೀಯ ವಿವಾಹ ಅಂತ ಆಚಾರರಿಗೂ ಸಹ ಇಲ್ಲದ ಮಷ್ಕಿರಿ. 'ಸುಹಾಗ್ ರಾತ್ ಹೈ, ಘುಂಗಟ್ ಉಠಾ ರಹಾ ಹೂಂ ಮೈ,' ಅಂತ ಇದ್ದ ಹಾಡನ್ನು ಹೆಂಗ ಹಾಡಿದ, ಅದೂ ಸಂಸ್ಕೃತ ಮಂತ್ರದ ಶೈಲಿಯಲ್ಲಿ ಅಂದರೆ ಏನು ಹೇಳೋಣ. ಇಂತಾ ಆಚಾರರು ಇದ್ದರೆ ಸನಾತನ ಧರ್ಮ, ಶೋಡಷ ಸಂಸ್ಕಾರಗಳ ಉದ್ಧಾರ ಆಗಿಹೋದಂತೆಯೇ!

ಸರಿ ಮೊದಲು ಗೌಂಡಿ ದ್ಯಾಮಪ್ಪನನ್ನು ಪ್ರಸ್ಥ ಭೂಮಿಯೊಳಗೆ ತಳ್ಳಿದರು. ಅವನ ದೋಸ್ತರು ಏನೇನೋ ಮಷ್ಕಿರಿ ಮಾಡಿ, ಕಿವಿಯಲ್ಲಿ ಏನೇನೋ ಕುಸುಪುಸು ಅಂದು, ಯಾವದ್ಯಾವದೋ ಒಂದಿಷ್ಟು ಪುಸ್ತಕ ಕೊಟ್ಟು ಕಳಿಸಿದರು. ಗೌಂಡಿ ದ್ಯಾಮಪ್ಪನಿಗೆ ವಾತ್ಸಾಯನ ಕಾಮಶಾಸ್ತ್ರದ ಪುಸ್ತಕವನ್ನೇ ಕೊಟ್ಟರೂ ಓದಲಿಕ್ಕೆ ಬರಬೇಕಲ್ಲ?? ಚಿತ್ರ ವಿಚಿತ್ರವಾದ ಚಿತ್ರಗಳಿರುವ ಪುಸ್ತಕವನ್ನೇ ಕೊಟ್ಟು ಕಳಿಸಿರಬೇಕು ಅಂದುಕೊಂಡೆ. ಬೇರೆ ಯಾವ ವಿಷಯದಲ್ಲಿ ಏನೋ ಗೊತ್ತಿಲ್ಲ. ಕಾಮಶಾಸ್ತ್ರಕ್ಕೆ ಬಂದಾಗ ಮಾತ್ರ - A picture is worth a thousand words!

ಸರಿ, ವರ ಮಹಾಶಯ ಅಂತೂ ಒಳಗೆ ಹೋಗಿ ಕೂತ. ಇನ್ನು ಕನ್ಯೆಯನ್ನು ಒಳಗೆ ಕಳಿಸುವ ಕಾರ್ಯಕ್ರಮ. ಅದಕ್ಕೆ ಬೇರೆಯೇ ಇವೆ ರೀತಿ ರಿವಾಜುಗಳು. ಪದ್ದಿಯ ಸಿಂಗಾರ ಮುಗಿಯಿತು. ಇನ್ನು ಆಕೆಯ ಕೈಯಲ್ಲಿ ಕೇಸರಿ ಹಾಕಿದ ಹಾಲಿನ ಲೋಟ ಕೊಟ್ಟು, ಒಂದಿಷ್ಟು ರೇಗಿಸಿ, ಒಳಗೆ ಕಳಿಸಿ, ಬಾಗಿಲು ಎಳೆದುಕೊಂಡರೆ ಒಂದು ಕೆಲಸ ಸಮಾಪ್ತ. ಆಗ ಬಂದೊದಗಿತು ಆಪತ್ತು!!

ಪದ್ದಿಯ ಅವ್ವ ಮಸ್ತ ಕೆನೆಹಾಲನ್ನು ಕಾಯಿಸಿ, ಆರಿಸಿ, ರೆಡಿ ಮಾಡಿದಳು. ಕೆಟ್ಟ ಗಡಿಬಿಡಿಯಲ್ಲಿರುವ ಪ್ರಸ್ಥದ ಗಂಡು ಹಿಂದೆ ಮುಂದೆ ನೋಡದೇ ಗಟಗಟ ಅಂತ ಕುಡಿದರೆ ಬಾಯಿ, ಗಂಟಲು ಸುಡುವದಿಲ್ಲ ಅಂತ ಖಾತ್ರಿ ಮಾಡಿಕೊಂಡಳು. ಪ್ರಥಮ ರಾತ್ರಿಯಲ್ಲಿ, ಗಡಿಬಿಡಿಯಲ್ಲಿ, ಕೆಟ್ಟ ಬಿಸಿ ಹಾಲು ಕುಡಿದು, ಬಾಯಿ ಗಂಟಲು ಸುಟ್ಟುಕೊಂಡು, ಜೀವನಪೂರ್ತಿ ತೆನಾಲಿ ರಾಮನ ಬೆಕ್ಕಿನ ಹಾಗೆ ಹಾಲಿನ ದ್ವೇಷ, ಹೆದರಿಕೆ ಬೆಳೆಸಿಕೊಂಡ ಅದೆಷ್ಟು ಗಂಡು ಮುಂಡೆಗಂಡರಿಲ್ಲ!? Dime a dozen!

ಮಸ್ತ ಕಾದಾರಿದ ಕೆನೆ ಹಾಲಿಗೆ ಸಕ್ಕರೆ ಪಕ್ಕರೆ ಹಾಕಿ, ಬೆಳ್ಳಿ ಲೋಟದಲ್ಲಿ ಹಾಕಿ ಇನ್ನೇನು ಪದ್ದಿಯ ಕೈಗೆ ಕೊಟ್ಟು, ದ್ಯಾಮಪ್ಪನಿರುವ ಪ್ರಸ್ಥ ಭೂಮಿಗೆ ಕಳಿಸೋಣ ಅನ್ನುವಾಗ ಪದ್ದಿಯ ಅಮ್ಮನಿಗೆ ಏನೋ ನೆನಪಾಯಿತು. ಹಾಲಿಗೆ ಕೇಸರಿಯನ್ನೇ ಹಾಕಿಲ್ಲ. ತಮ್ಮ ಮರೆವಿಗಾಗಿ ತಾವೇ ತಲೆ ತಲೆ ಚಚ್ಚಿಕೊಂಡರು. ಈ ಕಡೆ ಪದ್ದಿಗೆ ಲಗೂನೆ ಪ್ರಸ್ಥ ಭೂಮಿಗೆ ಹಾರುವ ತರಾತುರಿ. ಇಲ್ಲಿ ನೋಡಿದರೆ ಆಕೆಯ ಅವ್ವ ಅದು ಇದು ಅಂತ ಲೇಟ್ ಮಾಡುತ್ತಿದ್ದಾಳೆ. ಅಷ್ಟಕ್ಕೂ ಪ್ರಸ್ಥದ ಕೋಣೆಗೆ ಹಾಲಿನ ಲೋಟ ಯಾಕೆ ಹಿಡಿದುಕೊಂಡು ಹೋಗಬೇಕು ಅಂತ ಪದ್ದಿಯ ಜಿಜ್ಞಾಸೆ. ಕೇಳೋಣ ಅಂದರೆ ಅವ್ವ ಭಾಳ ಬ್ಯುಸಿ. ಅದಕ್ಕೇ ಗೆಳತಿಯರನ್ನು ಕೇಳಿಬಿಟ್ಟಳು. ಅಷ್ಟೇ ಮತ್ತೆ.

'ಲೇ, ಫಸ್ಟ್ ನೈಟ್ ಹಾಲು ತೊಗೊಂಡು ಯಾಕ ಹೋಗಬೇಕಲೇ? ಇದೇನು ನಾಗರ ಪಂಚಮಿ ಇದ್ದಂಗ ಏನು? ಪ್ರಸ್ಥದ ಕ್ವಾಣ್ಯಾಗ ಯಾವ ನಾಗಪ್ಪ ಇರ್ತದ? ಈ ನಾಗಪ್ಪಗ ಹ್ಯಾಂಗ ಹಾಲೆರೆಯಬೇಕು??' ಅಂತ ಇನ್ನೋಸೆಂಟ್ ಆಗಿ ಕೇಳಿಬಿಟ್ಟಳು ಪದ್ದಿ. ಅಕಿ ಪ್ರತಿ ನಾಗರ ಪಂಚಮಿಗೆ ಮುದ್ದಾಂ ನಾಗಪ್ಪಗ ಹಾಲೆರೆಯುತ್ತಾಳೆ.

ಅದನ್ನು ಕೇಳಿದ ಗೆಳತಿಯರು ಬಿದ್ದೂ ಬಿದ್ದೂ ನಕ್ಕರು. ಏನು ಹೇಳಬೇಕು ಅಂತಲೇ ಅವರಿಗೆ ಗೊತ್ತಾಗಲಿಲ್ಲ. ಅಷ್ಟರಲ್ಲಿ ಮಂಗ್ಯಾನಿಕೆ ಮಂಜಿ ಉರ್ಫ್ ಮಂಜುಳಾ ಮಾತಾಡಲು ಆರಂಭಿಸಿದಳು. ಅಕಿ ಭಾಳ ಖತರ್ನಾಕ್. ಸಾಲಿಯೊಳಗ ಇದ್ದಾಗಲೇ ನಾಲ್ಕಾರು ಅನಧೀಕೃತ ಪ್ರಸ್ಥ ಮುಗಿಸಿಬಿಟ್ಟಿದ್ದಳು. ಭಾಳ ಮಂದಿ ಜೋಡಿ. ಹಾಂಗಾಗಿ ಅಕಿಗೆ ಪ್ರಸ್ಥದ ಬಗ್ಗೆ ಎಲ್ಲಾ ಗೊತ್ತದ. veteran hand ಅಕಿ ಮಂಜಿ.

'ಹೂಂನಲೇ ಪದ್ದಿ. ಫಸ್ಟ್ ನೈಟ್ ಅಂದ್ರ ಒಂದು ತರಹದ ನಾಗರ ಪಂಚಮಿ ಇದ್ದಂಗ ನೋಡವಾ. ನಾಗಪ್ಪಗ ಹಾಲು ಕುಡಿಸಲಿಕ್ಕೇಬೇಕು. ಇಲ್ಲಂದ್ರ ನಾಗಪ್ಪ ಏಳೋದೇ ಇಲ್ಲ. ಭುಸ್ ಭುಸ್ ಅಂತ ಅನ್ನೋದೇ ಇಲ್ಲ!' ಅಂತ ಅಂದಾಕಿನೇ ತಟ್ಟಿಕೊಂಡು ತಟ್ಟಿಕೊಂಡು ನಕ್ಕಳು. ಉಳಿದ ಗೆಳತಿಯರೆಲ್ಲ ಬಿದ್ದೂ ಬಿದ್ದೂ ನಕ್ಕರು.

ಈಕಡೆ ಪದ್ದಿಯ ಅವ್ವನಿಗೆ ಕೇಸರಿ ಹುಡುಕುವ ಗಡಿಬಿಡಿ. ಅದು ಏನಾಗಿತ್ತು ಅಂದರೆ ಪದ್ದಿಯ ಲಗ್ನಕ್ಕೆ ಸ್ವೀಟಂತ ಕೇಸರಿಭಾತ್ ಮಾಡಿಸಿದ್ದರು. ಅಡಿಗೆ ಭಟ್ಟ ಆಚಾರಿ ಬಾಬಣ್ಣನಿಗೆ ಪದ್ದಿಯ ಅಮ್ಮ ಮರೆಯದೇ ಹೇಳಿದ್ದರು, 'ಸ್ವಲ್ಪ ಕೇಸರಿ ಉಳಿಸಿ ಹೋಗಪಾ. ನಂತರ ಬೇಕಾಗ್ತದ,' ಅಂತ. ಅವಂಗ ಎಲ್ಲೆ ನೆನಪಿರಬೇಕು? ಅಡಿಗೆ ಸಹಿತ ಬೀಡಿ ಸೇದಿಕೋತ್ತಲೇ ಮಾಡ್ತಿತ್ತು ಆ ಅಡಿಗೆ ಭಟ್ಟ. ಒಂದೋ ಎಲ್ಲಾ ಕೇಸರಿ ಖರ್ಚು ಮಾಡಿ ಹಾಕ್ಯಾನ. ಇಲ್ಲಾ ಉಳಿದ ಕೇಸರಿ ತೊಗೊಂಡು ಓಡಿ ಹೋಗ್ಯಾನ. ಒಟ್ಟೇ ಕೇಸರಿ ನಾಸ್ತಿ. ಈಗ ಫಸ್ಟ್ ನೈಟ್ ಹಾಲಿಗೆ ಹಾಕೋಣ ಅಂದರೆ ಕೇಸರಿ ಇಲ್ಲವೇ ಇಲ್ಲ. ಕೇಸರಿ ಹಾಕದೇ ಹಾಲು ಫಸ್ಟ್ ನೈಟ್ ಹಾಲು ಆಗುವದೇ ಇಲ್ಲ. ಏನು ಮಾಡಬೇಕು??? ರಾತ್ರಿ ಬ್ಯಾರೆ ಒಂಬತ್ತರ ಮ್ಯಾಲೆ ಆಗಿಹೋಗ್ಯದ. ಆ ಹೊತ್ತಿನಾಗ ಯಾವದೇ ಅಂಗಡಿ ತೆಗೆದಿರುವದಿಲ್ಲ.

ಓಣಿಯೊಳಗ ಯಾರದ್ದಾರ ಮನಿಯೊಳಗ ಕೇಸರಿ ಸಿಗಬಹುದೇನೋ ಅಂತ ವಿಚಾರ ಮಾಡಿದ ಪದ್ದಿಯ ಅವ್ವ ಕೇಸರಿ ಹುಡಕಿಕೊಂಡು ಹೋದರು. ಬಸುರಿಯರಿಗೆ ಕೇಸರಿ ಹಾಕಿದ ಹಾಲು ಕುಡಿಸುವದು ವಾಡಿಕೆ. ಬಸುರಿ ಹೆಂಗಸು ಕೇಸರಿ ಹಾಲು ಕುಡಿದರೆ ಮುಂದೆ ಹುಟ್ಟುವ ಮಗುವಿಗೆ ಬರೋಬ್ಬರಿ ಕೆಂಪು ಬಣ್ಣ ಬರುತ್ತದೆಯಂತೆ. ಹಾಗಾಗಿ ಓಣಿಯಲ್ಲಿ ಯಾರದಾದರೂ ಮನೆಯಲ್ಲಿ ಬಸುರಿ ಹೆಂಗಸರಿದ್ದರೆ ಅಂತವರ ಮನೆಯಲ್ಲಿ ಕೇಸರಿ ಸಿಗಬಹುದು ಅಂತ ವಿಚಾರ ಮಾಡಿದ ಪದ್ದಿಯ ಅವ್ವ ಕಂಡಕಂಡವರ ಮನೆ ಬಾಗಿಲನ್ನು ಬೇಕುಬೇಕಾದ ಹಾಗೆ ಬಡಿದೇ ಬಡಿದಳು. ಬಾಗಿಲು ತೆಗೆಯಲಿಲ್ಲ ಅಂದರೆ ಸೀರೆ ಮೇಲೆ ಮಾಡಿಕೊಂಡು ಕಾಲಿಂದ ಒದ್ದು ಒದ್ದು ತೆಗೆಸಿದಳು. ಬಾಗಿಲು ತೆಗೆದವರಿಗೆ ಕೇಳಿದ್ದು ಒಂದೇ ಮಾತು - 'ನಿಮ್ಮನ್ಯಾಗ ಯಾರರೆ ಬಸುರಿದ್ದಾರೇನು???' ಅಂತ. ಏನ್ರೀ ಇದು?? ಕೇಸರಿ ಇದೆಯೇನು? ಇದ್ದರೆ ಒಂದು ನಾಕು ಎಸಳು ಕೊಡಿ ಅಂದರೆ ಅದು ಒಂದು ಮಾತು. ಅದು ಬಿಟ್ಟು ಗೌತಮ ಬುದ್ಧ 'ಸಾವಿಲ್ಲದ ಮನೆಯಿಂದ ಸಾಸಿವೆ ತೆಗೆದುಕೊಂಡ ಬಾ' ಅಂದರೆ ಕಿಸಾ ಗೋತಮಿ ಎಲ್ಲರೆ ಮನೆ ಹೊಕ್ಕು, ಸಾಸಿವೆ ಕೊಡ್ರೀ ಅನ್ನುವ ಮೊದಲು ನಿಮ್ಮದು ಸಾವಿಲ್ಲದ ಮನೆಯೇನು ಅಂತ ಕೇಳಿದ ಹಾಗೆ ಆಯಿತು ಈ ಕೇಸು. ಆಕೆ ಪದ್ದಿಯಾದರೆ ಇವರು ಪದ್ದಿಯ ತಾಯಿ. ಡಬಲ್ ಪೆದ್ದಿ. ಇಡೀ ಓಣಿ ಅಡ್ಯಾಡಿದರು. ಯಾರ ಮನೆಯಲ್ಲಿಯಾದರೂ ಕೇಸರಿ ಇತ್ತೋ ಏನೋ. ಆದರೆ ಯಾರ ಮನೆಯಲ್ಲೂ ಬಸುರಿ ಹೆಂಗಸರು ಮಾತ್ರ ಇರಲಿಲ್ಲ. ಅದೂ ಹೋಗಿ ಹೋಗಿ ಮುಟ್ಟು ನಿಂತ ವಿಧವೆಯರ ಮನೆಗಳಲ್ಲಿ, ಮದುವೆಯೇ ಆಗದ ಬ್ರಹ್ಮಚಾರಿಗಳ ಮನೆಗಳಲ್ಲಿ ಕೂಡ 'ನಿಮ್ಮನ್ಯಾಗ ಯಾರರೆ ಬಸುರಿದ್ದಾರೇನು??' ಅಂತ ಕೇಳಿದ್ದು ಮಾತ್ರ ಶುದ್ಧ ಅಪದ್ಧವಾಗಿ ಹೊರಹೊಮ್ಮಿ ಎಲ್ಲರೂ ಬಿದ್ದು ಬಿದ್ದು ನಕ್ಕು, ಪದ್ದಿಯ ಅವ್ವನನ್ನು ಓಡಿಸಿ, ಬಾಗಿಲು ಹಾಕಿಕೊಂಡು ಮತ್ತೂ ನಕ್ಕರು. ತಮ್ಮ ಓಣಿಯಲ್ಲಂತೂ ಕೇಸರಿ ಸಿಗಲಿಲ್ಲ ಪಕ್ಕದ ಓಣಿ ನೋಡೋಣ ಅಂತ ಆಕಡೆ ಹೋದರು. ಈ ಕಡೆ ಪ್ರಸ್ಥದ ಮುಹೂರ್ತ ಸಮೀಪಿಸುತ್ತಿತ್ತು. ಆಚಾರ್ರು ಸಿಕ್ಕಾಪಟ್ಟೆ ಗಡಿಬಿಡಿ ಮಾಡುತ್ತಿದ್ದರು. ಪದ್ದಿಗೆ ಬೇಗನೆ ಪ್ರಸ್ಥ ಭೂಮಿಗೆ ಜಂಪ್ ಹೊಡಿ ಅನ್ನುತ್ತಿದ್ದರು. ಆದರೆ ಪದ್ದಿಯ ಕೈಯಲ್ಲಿ ಕೇವಲ ಸಾಧಾರಣ ಹಾಲು ಮಾತ್ರ ಇತ್ತು. ಕೇಸರಿ ಹಾಕಿದಾಗ ಮಾತ್ರ ಅದು ಫಸ್ಟ್ ನೈಟ್ ಹಾಲಾಗುತ್ತದೆ. ಕೇಸರಿ ಇಲ್ಲ. ಕೇಸರಿ ತರಲು ಹೋದ ಅವ್ವನೂ ಇಲ್ಲ. ಈ ಕಡೆ ಆಚಾರಿಯ ಪ್ರೆಷರ್. ಸುಸ್ತೆದ್ದು ಹೋದಳು ಪದ್ದಿ.

'ಪದ್ದಕ್ಕಾ, ಏ ಪದ್ದಕ್ಕಾ, ಲಗೂನೇ ಪ್ರಸ್ಥದ ಕ್ವಾಣಿ ಸೇರಿಕೋ ಮಾರಾಳ. ಮುಹೂರ್ತ ಮೀರಲಿಕ್ಕೆ ಬಂದದ. ಈ ಪ್ರಸ್ಥದ ಸಂಸ್ಕಾರ ಸರಿಯಾದ ವೇಳ್ಯಾಕ್ಕ ಸರಿಯಾಗಿ ಆಗಿಬಿಡಬೇಕು ನಮ್ಮವ್ವಾ. ಇಲ್ಲಂದ್ರ ಮುಂದ ಹುಟ್ಟೋ ಮಕ್ಕಳು ಮಂಗೋಲಿಯನ್ ಆದರೂ ಆಗಬಹುದು. ಇಲ್ಲಾ ಕಾಡು ಮನುಷ್ಯರು ಆದರೂ ಆಗಬಹುದು. ಯಾಕ ತಡಾ? ಎಲ್ಲಾ ರೆಡಿ ಇದ್ದಂಗ ಅದ. ಎರಡೂ ಕೈಯಾಗ ಹಾಲಿನ ವಾಟಗಾ ಹಿಡಕೊಂಡು, ಮನಸ್ಸಿನಾಗ ನಿಮ್ಮ ಕುಲದೇವರಾದ ನರಸಿಂಹನ ನಾಮ ಸ್ಮರಣೆ ಮಾಡುತ್ತ, ಎಲ್ಲಾ ನಾಗಪ್ಪಗಳನ್ನೂ ನೆನಪು ಮಾಡಿಕೊಂಡು, 'ಹೆಡಿ ಎತ್ತಿ ಭುಸ್ ಭುಸ್ ಮಾಡಬ್ಯಾಡ್ರೀ, ಪ್ರೀತಿಯಿಂದ ಡಂಕ್ ಹೊಡಿ ನಾಗಪ್ಪಾ,' ಅಂತ ಮನಸ್ಸಿನಾಗೇ ಪ್ರಾರ್ಥನಾ ಮಾಡಿಕೊಂಡು, ಬಲಗಾಲಿಟ್ಟು ಲಗೂನೆ ಪ್ರಸ್ಥದ ಕ್ವಾಣಿ ಹೊಕ್ಕುಬಿಡು ಮಾರಾಳ, ಪದ್ದಕ್ಕಾ!' ಅಂತ ಆಚಾರ್ರು ಚಂಡಿಕಿ ನೀವಿಕೊಳ್ಳುತ್ತ ಬೊಂಬಡಾ ಹೊಡೆದರು. 'ಹ್ಯಾಂ!??? ನಾಗಪ್ಪ ಡಂಕ್ ಹೊಡಿತದೇನು???? ಹ್ಯಾಂ??? ಡಂಕ್ ಹೊಡೆಯೋದು ಚೇಳಲ್ಲಾ??? ಹಾಂಗಿದ್ರ ಮತ್ತ ಅಕಿ ನಟಿ ಸುಶ್ಮಿತಾ ಸೇನ್ 'ಬಿಚುವಾ ಜವಾನಿ ಕಾ ಡಂಕ್ ಮಾರೆ, ಡಂಕ್ ಮಾರೆ,' ಅಂತ ಯಾಕ ಹೊಯ್ಕೊಂಡಳು??' ಅಂತ ಪದ್ದಿ ಈಗಿತ್ತಲಾಗೆ ನೋಡಿದ್ದ 'ಚಿಂಗಾರಿ' ಸಿನೆಮಾದ ಹಾಡಿನ ನೆನಪು ಮಾಡಿಕೊಂಡಳು. ಚೇಳು ಒಂದೇ ಅಲ್ಲ ನಾಗಪ್ಪ ಕೂಡ ಡಂಕ್ ಹೊಡೆಯುತ್ತದೆಯೇ????!

ಈಗ do or die ಕ್ಷಣ ಪದ್ದಿಗೆ. ಕೇಸರಿ ತರಲು ಹೋದ ಅವ್ವ ಎಲ್ಲೋ ನಾಪತ್ತೆ. ಈಕಡೆ ಆಚಾರರು ಸಿಕ್ಕಾಪಟ್ಟೆ ಪ್ರೆಷರ್ ಹಾಕುತ್ತಿದ್ದಾರೆ. ಮುಹೂರ್ತಕ್ಕೆ ಸರಿಯಾಗಿ ಪ್ರಸ್ಥದ ಸಂಸ್ಕಾರ ಆಗಲಿಲ್ಲ ಅಂದರೆ ಮುಂದೆ ಮಂಗೋಲಿಯನ್ ಅಂತಹ ಮಂಗ್ಯಾ ಮಕ್ಕಳು ಹುಟ್ಟುವ ರಿಸ್ಕ್. ಏನು ಮಾಡಲಿ ಅಂತ ಪದ್ದಿ ವಿಚಾರ ಮಾಡಿದಳು. ಸುತ್ತ ಮುತ್ತ ನೋಡಿದಳು. ಹಳೆ ಮಂಗ್ಯಾ ರಮ್ ಕುಡಿದು ಫುಲ್ ಟೈಟಾಗಿ ಮಲಗಿಬಿಟ್ಟಿದ್ದ ಆಕೆಯ ಹಿರಿಯಣ್ಣ ನಾಗಣ್ಣ ಉರ್ಫ್ ತೂತ್ ನಾಗ್ಯಾ ರಾತ್ರಿಯ ಹೊತ್ತಿನಲ್ಲಿ ಉಚ್ಚೆ ಹೊಯ್ಯಲು ಎದ್ದು ಬಂದವ ಏನೋ ಮಾಡಿದ. ಪದ್ದಿಗೆ ಏನೋ ಐಡಿಯಾ ಬಂತು. ಐಡಿಯಾ ಬಂದಿದ್ದೇ ತಡ ಅದನ್ನು ಅಮಲು ಮಾಡಿಯೇಬಿಟ್ಟಳು. ಪ್ರಾಬ್ಲಮ್ ಫಿನಿಶ್. ಬಗೆಹರಿದೇಹೋಯಿತು. ಹಾಗೆ ಬಂದಿದ್ದು ಹೀಗೆ ಹೋದಂಗೆ. ಪದ್ದಿ ಈಗ ರೆಡಿ. ಪ್ರಸ್ಥ ಭೂಮಿಗೆ ಎಂಟ್ರಿ ಕೊಡಲಿಕ್ಕೆ ರೆಡಿ. ರೆಡಿ, ಸ್ಟೆಡಿ, ಗೋ!

ಹಾಲಿನ ವಾಟಗ ಹಿಡಿದ ಪದ್ದಿ ಪ್ರಸ್ಥ ಭೂಮಿಗೆ ಎಂಟ್ರಿ ಕೊಟ್ಟಳು. ಬಾಯಲ್ಲಿ ಗುಟ್ಕಾ ಹಾಕಿಕೊಂಡು, ಮೊಬೈಲ್ ಮೇಲೆ ಏನೋ ಮಾಡುತ್ತಿದ್ದ ಗಂಡ ಗೌಂಡಿ ದ್ಯಾಮಪ್ಪ ಗಹಗಹಿಸಿ ನಕ್ಕ. ಡಂಕು ಹೊಡೆಯುವ ಚೇಳಿನಂತೆ, ಭುಸುಗುಟ್ಟುವ ಹಾವಿನಂತೆ ನಕ್ಕ. ಪದ್ದಿ ಬೆದರಿದಳು.

'ಏ, ಪದ್ದಿ ಇಲ್ಲಿ ಬಾರಬೇ! ಇವತ್ತು ನಮ್ಮ ಫಸ್ಟ್ ನೈಟ್. ನಿನ್ನ ನಾ ಬಿಡಂಗಿಲ್ಲ,' ಅಂದವನೇ ಗೌಂಡಿ ದ್ಯಾಮಪ್ಪ ಡೈವ್ ಹೊಡೆದ. ಉಟ್ಟ ಪಂಚೆ ಎತ್ತಿಹೋಗಿ, ಬಿದ್ದುಹೋಗಿ, ಕೆಂಪು ಚಡ್ಡಿ ಕಂಡಿತು. 'ಏ, ನಿನ್ನ, ದ್ಯಾಮಪ್ಪ..... ಅಲ್ಲಲ್ಲ ನಿಮ್ಮ. ಲಗ್ನಾದ ಮೇಲೆ ನೀವು. ಗಂಡಗ ನೀನು ಅಂದ್ರ ಪಾಪ ಬರ್ತದ. ನೀವು ಸ್ವಲ್ಪ ನಿಮ್ಮ 'ಪಂಚಾಂಗ' ಅಂದರೆ ಪಂಚೆಯಲ್ಲಿರುವ ನಿಮ್ಮ ಅಂಗ ಉರ್ಫ್ ಕೆಂಪು ಚಡ್ಡಿ ಸ್ವಲ್ಪ ಮುಚ್ಚಿಕೊಂಡರೆ ಒಳ್ಳೇದು. ನನಗ ಭಾಳ ಕೆಲಸ ಅದ!' ಅಂದ ಪದ್ದಿ ಬಾಂಬ್ ಹಾಕಿಬಿಟ್ಟಳು.

ಕೇಳಿದ ಗೌಂಡಿ ದ್ಯಾಮಪ್ಪ ಥಂಡಾ ಹೊಡೆದ. 'ಏನು ಕೆಲಸ ಐತಿ? ಹಾಂ???' ಅಂತ ಹೂಂಕರಿಸಿದ.

'ಸ್ವಲ್ಪ ತಡಿರೀ. ನಾಗಪ್ಪಗ ಹಾಲು ಎರೆಯೋದು ಅದ. ಎಲ್ಲದ ನಾಗಪ್ಪ? ಎಲ್ಲದ ಹಾವಿನ ಹುತ್ತ??? ಎಲ್ಲೆ ಹಾಲು ಸುರುವಲಿ?' ಅಂತ ತನಗೆ ತಾನೇ ಅಂದುಕೊಂಡ ಪದ್ದಿ, 'ರೀ, ನಾಗಪ್ಪ ಎಲ್ಲದರೀ??? ನಾಗಪ್ಪಾ... ಅದೇ ಭುಸ್ ಭುಸ್ ನಾಗಪ್ಪಾ ಎಲ್ಲದ ಅಂತ??? ಅದಕ್ಕೇ ಅಂತನೇ ಕೇಸರಿ ಹಾಲು ಮಾಡಿಕೊಂಡು ಬಂದೇನಿ. ನಾಗಪ್ಪಗ ಹಾಲು ಎರದಾದ ಮ್ಯಾಲೆ ಮುಂದಿನ ಕೆಲಸ,' ಅಂದ ಪದ್ದಿ, 'ನಾಗಪ್ಪಾ! ಮೈ ಡಿಯರ್ ನಾಗಪ್ಪಾ! ಎಲ್ಲಿದ್ದಿ? ಎಲ್ಲಿ ಕದ್ದು ಮುಚ್ಚಿಟ್ಟುಕೊಂಡೀ??? ಲಗೂ ಬಾ! ಬಾ ನಾಗಪ್ಪಾ! ಲಗೂನೆ ಬಾ! ಭಾಳ ಕಾಯಿಸಬ್ಯಾಡ,' ಅನ್ಕೋತ್ತ ಇಡೀ ಪಡಸಾಲಿ ತುಂಬಾ ಓಡಾಡಿಬಿಟ್ಟಳು. ನಾಗಪ್ಪನ ಹುಡಿಕಿಕೊಂಡು ಪಡಸಾಲಿ ಮೂಲಿ ಮೂಲಿ ಅಡ್ಯಾಡಿಬಿಟ್ಟಳು.

ಪದ್ದಿಯಂತಹ ಪೆದ್ದಿಯ ಗಂಡನಾದರೂ ಗೌಂಡಿ ದ್ಯಾಮಪ್ಪ ಇಕಿಗಿಂತ ಭಾಳ ಶಾಣ್ಯಾ. ಅವನಿಗೆ ತಿಳಿದೇಹೋಯಿತು. ಬಿದ್ದು ಬಿದ್ದು ನಕ್ಕ.

'ಏ, ಪದ್ದಿ ಡಾರ್ಲಿಂಗ್!' ಅಂದ.

'ಏನದು ಅಸಹ್ಯ ಡಾರ್ಲಿಂಗ್?? ನಾ ಸ್ತ್ರೀಲಿಂಗ. ನೀವು ಪುಲ್ಲಿಂಗ. ಈ ನಮ್ಮ ಫಸ್ಟ್ ನೈಟ್ ಹಾಸಿಗೆ ನಪುಂಸಕಲಿಂಗ. ಹೀಂಗಿದ್ದಾಗ ಅದೆಲ್ಲಿಂದ ಬಂತು ಈ ವಿಚಿತ್ರ ಲಿಂಗ ಡಾರ್ಲಿಂಗ?????' ಅಂತ ಅಂದುಬಿಟ್ಟಳು ಪದ್ದಿ. SSLC ಇಂಗ್ಲಿಷ್ ಪೇಪರ್ ಇನ್ನೂ ಉಳದದ ಅಕಿದು. ಹೀಂಗ ಹೇಳಿದಳು ಅಂದ ಮ್ಯಾಲೆ ಈ ಸರೆನೂ ಇಂಗ್ಲಿಷ್ ಪಾಸ್ ಆಗೋದು ಖಾತ್ರಿ ಇಲ್ಲ ಬಿಡ್ರೀ.

'ಪದ್ದಿ, ಅದು ಹಾಂಗಲ್ಲ. ಆ ಹಾಲು ನನಗೇ ಅಂತನೇ ಕೊಟ್ಟು ಕಳಿಸಿದ್ದು. ನಾನೇ ಕುಡಿಬೇಕು. ಲಾಸ್ಟಿಗೆ ಒಂಚೂರೇ ಚೂರು ನಿನಗ ಕುಡಿಸಬೇಕು. ಇಲ್ಲಿ ಕೊಡು,' ಅಂದ ದ್ಯಾಮಪ್ಪ.

'ಹ್ಯಾಂ???? ನಿನ್ನ ಹೆಸರು ದ್ಯಾಮಪ್ಪ. ನೀನು ಹಾಲು ಕುಡಿಯೋ ನಾಗಪ್ಪ ಯಾವಾಗಾದೀ???' ಅಂತ ಇನ್ನೋಸೆಂಟ್ ಆಗಿ ಕೇಳಿಬಿಟ್ಟಳು ಪದ್ದಿ. ಎಲ್ಲರೆ ಈ ದ್ಯಾಮಪ್ಪ ಇಚ್ಛಾಧಾರಿ ನಾಗ ಇದ್ದಾನೇನು ಅಂತ ಸಂಶಯ ಬಂತು ಅಕಿಗೆ. ಅದು ಒಂಬತ್ತನೇತ್ತಾ ಇದ್ದಾಗ ಶ್ರೀದೇವಿಯ ನಗೀನಾ ಸಿನಿಮಾ ನೋಡಿ ಬಂದಾಳ. ಆ ಮೂವಿ ಒಳಗ ಶ್ರೀದೇವಿ ಇಚ್ಛಾಧಾರಿ ನಾಗಿನ್ ನೋಡ್ರಿ. ಬೇಕಾದಾಗ ಇಚ್ಛಾಧಾರಿ ಹಾವು. ಬೇಕಾದಾಗ ಕಚ್ಛಾಧಾರಿ ಹೆಂಗಸು. ಅಯ್ಯೋ! ಕಚ್ಛೆ ಸೀರಿ ಉಟ್ಟುಕೊಂಡ ಹೆಂಗಸು ಅಂತ. ಹಾಂಗ ಎಲ್ಲರೆ ಈ ದ್ಯಾಮಪ್ಪ ಕೂಡ ಇಚ್ಛಾಧಾರಿ ನಾಗಪ್ಪ ಇದ್ದಾನೇನೋ ಅಂತ ಸಂಶಯ ಬಂತು. ಲವ್ ಮಾಡಿ, ರಿಜಿಸ್ಟರ್ ಲಗ್ನಾ ಮಾಡಿಕೊಂಡ ಗಂಡ ಕೆಂಪು ಕಚ್ಛಾಧಾರಿ ದ್ಯಾಮಪ್ಪನೋ ಅಥವಾ ಇಚ್ಛಾಧಾರಿ ನಾಗಪ್ಪನೋ ಅಂತ ಡೌಟ್ ಬಂತು.

ಅದು ಹೆಂಗೋ ಮಾಡಿ ದ್ಯಾಮಪ್ಪ ಆ ಹಾಲು ತನಗೇ ಅಂತ convince ಮಾಡಿದ. ಅಷ್ಟು ಮಾಡುವಷ್ಟರಲ್ಲಿ ಅವನ ತಲೆ ಹನ್ನೆರೆಡಾಣೆ ಆಯಿತು. ಪದ್ದಿ ಯಾವದೋ ರೀತಿಯಲ್ಲಿ ನಂಬಿ ಹಾಲು ಕೊಟ್ಟಳು. ಈಗ ಆಯಿತು ದೊಡ್ಡ ಅನಾಹುತ!

ಪದ್ದಿ ಕೊಟ್ಟ ಹಾಲನ್ನು ತೆಗೆದುಕೊಂಡ ದ್ಯಾಮಪ್ಪ. ಏನೋ ಒಂದು ತರಹ ಇತ್ತು. ಮೂಸಿ ನೋಡಿದ. ಏನೋ ಒಂದು ತರಹದ ಪರಿಚಿತ ವಾಸನೆ ಬಂತು. ಏನು ಅಂತ ಏಕ್ದಂ ಹೊಳೆಯಲಿಲ್ಲ. ಕೇಸರಿ ಹಾಲಿಗೆ ಒಂದು ತರಹದ ಅಡ್ಡ ವಾಸನೆ ಇತ್ತು. ಎಲ್ಲಿಂದ ಬಂತು ಅಂತ ಆಕಡೆ ಈಕಡೆ ಮೂಸಿ ಮೂಸಿ ನೋಡಿದ. ಪದ್ದಿ ಏಕ್ದಂ ಮಸ್ತ ವಾಸನೆ ಹೊಡೆದಳು. ಐದು ದಿನದ ನಂತರ ಸ್ನಾನ ಮಾಡಿದಾಕೆ ಆಕೆ. ಆಕೆ ಫ್ರೆಶ್ ಆಗಿ ವಾಸನೆ ಹೊಡೆಯದೇ ಮತ್ತೆಂಗೆ ವಾಸನೆ ಹೊಡೆದಾಳು????

'ಏನಿದು? ಈ ಹಾಲಿನ್ಯಾಗ ಏನೋ ಒಂದು ತರಹದ ವಿಚಿತ್ರ ವಾಸನಿ ಬರಾಕತ್ತದ. ಯಾಕ????' ಅಂತ ಪ್ರಶ್ನೆ ಒಗೆದಿದ್ದಾನೆ ದ್ಯಾಮಪ್ಪ.

'ಅದು.... ಅದು...... ' ಅಂತ ತಡವರಿಸಿದ್ದಾಳೆ ಪದ್ದಿ.

'ಏನಾತು????' ಅಂತ ಕೇಳಿದ್ದಾನೆ ಪತಿ ದೇವರು. ಸ್ವಲ್ಪ ಆವಾಜ್ ಹಾಕಿದ್ದಾನೆ.

'ಅದು..... ಅದು..... ಹಾಲಿಗೆ ಹಾಕಲಿಕ್ಕೆ ಕೇಸರಿ ಸಿಗಲೇ ಇಲ್ಲ. ಇರಲೇ ಇಲ್ಲ. ಕೇಸರಿ ಹುಡಕಿಕೋತ್ತ ಹೋದಾಕಿ ನಮ್ಮ ಅವ್ವ ಬರಲೇ ಇಲ್ಲ. ಆಚಾರ್ರು ಗಡಿಬಿಡಿ ಮಾಡಿದರು. ಅದಕ್ಕsss...... ' ಅಂತ ಎಳೆದಿದ್ದಾಳೆ.

'ಕೇಸರಿ ಸಿಗಲಿಲ್ಲ. ಓಕೆ. ಅದಕ್ಕೇ?? ಏನು ಮಾಡಿದಿ?????' ಅಂತ ಕೇಳಿ, ಅಬ್ಬರಿಸಿದ್ದಾನೆ ದ್ಯಾಮಪ್ಪ.

'ಕೇಸರಿ ಸಿಗಲಿಲ್ಲ. ಅದಕ್ಕೇ ಅದರಾಗ ವಿಮಲ್ ಗುಟ್ಕಾ ಹಾಕಿಬಿಟ್ಟೆ. ರಾತ್ರಿ ಉಚ್ಚಿ ಹೊಯ್ಯಲಿಕ್ಕೆ ಎದ್ದು ಬಂದಿದ್ದ ನಾಗಣ್ಣ ಗುಟ್ಕಾ ಹಾಕಿದ. ಏನೋ ನೆನಪಾತು. ಅಲ್ಲೇ ನಾಗಣ್ಣನ ಗುಟ್ಕಾ ಕಾಣಿಸ್ತು. ಅದಕ್ಕೇ ಹಾಲಿಗೆ ಗುಟ್ಕಾ ಹಾಕಿಕೊಂಡು ತಂದುಬಿಟ್ಟೆ!' ಅಂತ ವರದಿ ಒಪ್ಪಿಸಿದಳು ಪದ್ದಿ.

'ಶಿವ ಶಿವಾ! ಫಸ್ಟ್ ನೈಟ್ ಹಾಲಿನಲ್ಲಿ ಗುಟ್ಕಾ ಮಿಕ್ಸ್ ಮಾಡಿಕೊಂಡು ಕುಡಿದವ ನಾನೇ ಮೊದಲಿಗ ಇರಬೇಕು. ನನ್ನನ್ನು ಎಂತಹ ಐತಿಹಾಸಿಕ ಪುರುಷನನ್ನಾಗಿ ಮಾಡಿಬಿಟ್ಟಿ ಪದ್ದಿ! ಮೈ ಡಿಯರ್ ಪೆದ್ದಿ!' ಅಂತ ತಲೆ ತಲೆ ಚಚ್ಚಿಕೊಂಡಿದ್ದಾನೆ ದ್ಯಾಮಪ್ಪ.

'ಹಾಲಿಗೆ ವಿಮಲ್ ಗುಟ್ಕಾ ಯಾಕ ಹಾಕಿದಿ???' ಅಂತ ಕೇಳಿದ್ದಾನೆ.

'ಅದು ಕೇಸರಿ ಇರಲಿಲ್ಲ. ಕೇಸರಿಯಿಲ್ಲದ ಹಾಲು ಫಸ್ಟ್ ನೈಟ್ ಹಾಲು ಆಗೋದೇ ಇಲ್ಲ. ಅದಕ್ಕೇ ವಿಮಲ್ ಗುಟ್ಕಾ ಹಾಕಿದೆ!' ಅಂತ ಹೇಳಿದಳು ಪದ್ದಿ.

'ಯಾಕ??? ವಿಮಲ್ ಗುಟ್ಕಾ ಹಾಕಿದರೆ ಕೇಸರಿ ಹಾಕಿದಂಗ ಏನು? ಕೆಟ್ಟ ಅಸಡ್ಡಾಳ ಅಡ್ಡ ವಾಸನಿ ಹೊಡಿಲಿಕತ್ತದ ಈ ಹಾಲು. ಯಾಕ ವಿಮಲ್ ಗುಟ್ಕಾ ಹಾಕಿದಿ ಹಾಲಿನ್ಯಾಗ? ಹ್ಯಾಂ????' ಅಂತ ಮತ್ತ ಕೇಳ್ಯಾನ ದ್ಯಾಮಪ್ಪ.


ಕೇಸರಿಯುಕ್ತ ವಿಮಲ್ ಗುಟ್ಕಾ ಮತ್ತು ಪಾನ್ ಮಸಾಲಾ!
'ಅದು ವಿಮಲ್ ಗುಟ್ಕಾ, ವಿಮಲ್ ಪಾನ್ ಮಸಾಲಾ ಒಳಗ ಕೇಸರಿ ಅದಂತ. ಕೇಸರಿ ಯುಕ್ತ. ಕಣಕಣದಲ್ಲಿಯೂ ಕೇಸರಿಯಿದೆ ಅಂತ advertisement ಒಳಗ ಹೇಳೇ ಹೇಳ್ತಾರ. ಅದಕ್ಕೇ ಕೇಸರಿ ಬದಲು ಕೇಸರಿಯುಕ್ತ ವಿಮಲ್ ಗುಟ್ಕಾ ಹಾಕಿಕೊಂಡು ಬಂದೆ. ಹಾಲು ಹೆಂಗದ? ನಿಮ್ಮ ನಾಗಪ್ಪಗ ಸೇರ್ತದ? ಎಲ್ಲದ ನಿಮ್ಮ ನಾಗಪ್ಪಾ? ಸ್ವಲ್ಪ ತೋರಿಸಿರಿ ನೋಡೋಣ. ನಾನೇ ಹಾಲು ಕುಡಿಸಲಿ ನಿಮ್ಮ ನಾಗಪ್ಪಗ??? ಡಂಕು ಹೊಡಿತದ ನಿಮ್ಮ ನಾಗಪ್ಪಾ?' ಅಂತ ಭಾಳ ಇನ್ನೋಸೆಂಟ್ ಆಗಿ ಕೇಳಿದ ಪದ್ದಿ, 'ಡಂಕು ಮಾರೆ ದ್ಯಾಮಪ್ಪ ಕಾ ನಾಗಪ್ಪ ಡಂಕು ಮಾರೆ! ಡಂಕು ಮಾರೆ!' ಅಂತ ಸುಶ್ಮಿತಾ ಸೇನ್ ಮಾದರಿಯಲ್ಲಿ ಪ್ರಸ್ಥದ ಕೋಣೆಯಲ್ಲಿ ಡಾನ್ಸ್ ಬ್ಯಾರೆ ಹೊಡೆದುಬಿಟ್ಟಳು.

ದ್ಯಾಮಪ್ಪ ನಕ್ಕ. ಬಿದ್ದೂ ಬಿದ್ದೂ ನಕ್ಕ. ಉಳ್ಳಾಡಿ ಉಳ್ಳಾಡಿ ನಕ್ಕ. ಯಾವ ಪರಿ ಉಳ್ಳಾಡಿದ ಅಂದ್ರ ಉಳ್ಳಾಡಿ ಉಳ್ಳಾಡಿ ಎಲ್ಲ ಬಟ್ಟೆ ಸ್ಥಾನ ಪಲ್ಲಟ ಆಗಿ ಹರೋ ಹರೋ ಆಗಿಬಿಟ್ಟಿತು.

'ಏನ್ರೀ ಇದು ಅಸಹ್ಯ??? ವಿಮಲ್ ಗುಟ್ಕಾ ಹಾಕಿ ಕೇಸರಿ ಹಾಲು ಮಾಡಿಕೊಂಡು ಬಂದೆ ಅಂದರೆ ಇಷ್ಟು ನಗ್ತೀರಲ್ಲಾ!? ಲಗೂನೆ ನಿಮ್ಮ ನಾಗಪ್ಪಗ ಕುಡಿಸಿರಿ. ಎಲ್ಲದ ನಿಮ್ಮ ನಾಗಪ್ಪಾ!?' ಅಂತ ಕೇಳೇ ಕೇಳಿದಳು ಪದ್ದಿ.

ಒಂದೇ ಗುಟುಕಿನಲ್ಲಿ ವಿಮಲ್ ಗುಟ್ಕಾ ಹಾಕಿದ್ದ 'ಕೇಸರಿ' ಹಾಲು ಕುಡಿದ ದ್ಯಾಮಪ್ಪ ಲೈಟ್ ಆಫ್ ಮಾಡಿದ್ದಾನೆ. ಪದ್ದಿಯನ್ನು ಬರಸೆಳೆದುಕೊಂಡವನೇ 'ದೇವರ ಪೂಜೆಗೆ' ಶುರು ಹಚ್ಚಿಕೊಂಡಿದ್ದಾನೆ. ಮೊದಲು ಕಲಶ ಪೂಜೆ!  ನಂತರ ಬಾಕಿಯದು.

ಕತ್ತಲಲ್ಲಿ ರಾತ್ರಿಯಿಡೀ ಪದ್ದಿಯದು ಒಂದೇ ವಾರಾತ - 'ಏ! ಏ! ಏನ್ರೀ ಇದು? ಎಂತಾ ನಾಗಪ್ಪಾ!? ವಿಚಿತ್ರ ನಾಗಪ್ಪಾ! ಒಟ್ಟೇ ಭುಸ್ ಭುಸ್ ಅನ್ನವಲ್ತಲ್ಲಾ????? ಹ್ಯಾಂ? ಎಂತಾ ನಾಗಪ್ಪರೀ ಇದು? ಸುಸ್ತಾಗಿ ಮಲ್ಕೊಂಡುಬಿಡ್ತು????'

'ನಿಮ್ಮೌನ್! ನೀನೂ ಮಲ್ಕೋಬೇ!' ಅಂತ ಚೀರಿದ ಗೌಂಡಿ ದ್ಯಾಮಪ್ಪ ಒಂದು ವಿಮಲ್ ಗುಟ್ಕಾ ಹರಿದು, ಬಾಯಿಗೆ ಹಾಕಿಕೊಂಡು ಮಲಗಿಬಿಟ್ಟಿದ್ದಾನೆ. ಪದ್ದಿ ಬಿಡಿ. ಕತ್ತಲಲ್ಲಿ ಕಳೆದು ಹೋದ ದ್ಯಾಮಪ್ಪನ ನಾಗಪ್ಪನನ್ನು ಹುಡುಕುತ್ತಲೇ ಇದ್ದಾಳೆ!

** ಹಾವಿನೊಡನೆ ಹನಿಮೂನ್ ಮಾಡಿಕೊಂಡವರ ವೀಡಿಯೊ ನೋಡಲು ಇಲ್ಲಿ ಹೋಗಿ! (ಫೇಸ್ಬುಕ್ ಅಕೌಂಟ್ ಇರಬೇಕು.)

** ಎರಡು ಲೈನ್ ಇರುವ ಈ ಜೋಕ್ ಹೇಳಿದವರು ಸದಾನಂದ ಭಟ್ಟರು. ಇಪ್ಪತ್ತು ಪೇಜಿನ ಕಥೆ ಬರೆದವರು ನಾವು. ಮೂಲದ ಎಲ್ಲ ಕ್ರೆಡಿಟ್ ಸದಾನಂದ ಭಟ್ಟರಿಗೇ ಸೇರಬೇಕು.

 
** ಇನ್ನೂ ಹೆಚ್ಚಿನ ಕಿಕ್ ಬೇಕಾದರೆ ಬಾಬಾ ಜರ್ದಾ - ೧೬೦ ಸಹಿತ ಹಾಕಿಬಿಡಬಹುದು. ಅದರಲ್ಲೂ ಕೇಸರಿ ಇದೆ.


** ಉಪಯೋಗಿಸಿದ ಚಿತ್ರಗಳನ್ನು ಇಂಟರ್ನೆಟ್ ನಿಂದ ಎತ್ತಿದ್ದು. ಎಲ್ಲ ಕಾಪಿ ರೈಟ್ಸ್ ಮಾಲೀಕರದು.

4 comments:

Amit said...

ಚೆನ್ನಾಗಿದೆ ಹಗಡೆಯವರೆ,
ಎರಡು ಸಾಲಿನ ಜೋಕನ್ನುಇಪ್ಪತ್ತು ಪುಟದ ಕಥೆ ಮಾಡಿದ ಪರಿ, ತುಂಬಾನೇ ಚೆನ್ನಾಗಿದೆ.

sunaath said...

ವಿಮಲ ಗುಟಕಾದಲ್ಲಿ ಇಷ್ಟು ‘ಕೇಸರಿ-ಶಕ್ತಿ’ ಇದೆ ಅಂತ ಮೊದಲೇ ಗೊತ್ತಾಗಿದ್ರೆ....! ಇರಲಿ, Better late than never!

Mahesh Hegade said...

ಅಮಿತ್ ಬಿರಾದಾರ್ ಅವರೇ, ಬಹಳ ಧನ್ಯವಾದ.

Mahesh Hegade said...

ಸುನಾಥ್ ಸರ್, ನಿಮ್ಮ ಹಾಸ್ಯಪ್ರಜ್ಞೆ ಅದ್ಭುತ! ಹಾಗೇ ಇರಲಿ! ಧನ್ಯವಾದ!